AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಊಟ ಸರಿ ಇಲ್ದಿದ್ಮೇಲೂ ಹೋಟೆಲ್​​ಗೆ ಏಕೆ ಬರ್ಬೇಕು?’; ರವಿಚಂದ್ರನ್ ಹೇಳಿಕೆ ಪ್ರಶ್ನೆ ಮಾಡಿದ ನೆಟ್ಟಿಗರು

ನಟ ರವಿಚಂದ್ರನ್ ಅವರು ಕನ್ನಡ ಚಿತ್ರರಂಗ ಬೆಂಬಲಿಸಲು 100 ರೂಪಾಯಿ ಖರ್ಚು ಮಾಡಿ ಎಂದಿದ್ದರು. ಆದರೆ, ನೆಟ್ಟಿಗರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, 'ಹೋಟೆಲ್ ಊಟ ಸರಿ ಇಲ್ಲದಿದ್ದಾಗ ಏಕೆ ಹೋಗಬೇಕು?' ಎಂದು ಪ್ರಶ್ನಿಸಿದ್ದಾರೆ. ಕಳಪೆ ಗುಣಮಟ್ಟದ ಸಿನಿಮಾಗಳಿಗೆ ದುಬಾರಿ ಟಿಕೆಟ್ ದರ ನೀಡಿ ಕುಟುಂಬ ಸಮೇತ ತೆರಳಿದರೆ ನಷ್ಟವಾಗುತ್ತದೆ ಎಂಬುದು ಅನೇಕರ ವಾದ.

‘ಊಟ ಸರಿ ಇಲ್ದಿದ್ಮೇಲೂ ಹೋಟೆಲ್​​ಗೆ ಏಕೆ ಬರ್ಬೇಕು?’; ರವಿಚಂದ್ರನ್ ಹೇಳಿಕೆ ಪ್ರಶ್ನೆ ಮಾಡಿದ ನೆಟ್ಟಿಗರು
ರವಿಚಂದ್ರನ್
ರಾಜೇಶ್ ದುಗ್ಗುಮನೆ
|

Updated on: Feb 20, 2026 | 6:58 AM

Share

ನಟ, ನಿರ್ಮಾಪಕ ರವಿಚಂದ್ರನ (Ravichandran) ಅವರು ಚಿತ್ರರಂಗದ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ. ಚಿತ್ರರಂಗ ಮೇಲಕ್ಕೆ ಬರಬೇಕು ಎಂಬುದು ಅವರ ಆಸೆ. ಈ ಕಾರಣಕ್ಕೆ ಇತ್ತೀಚೆಗೆ ಅವರು ಮಾತನಾಡಿದ್ದರು. 100 ರೂಪಾಯಿ ಕೊಟ್ಟು ಕನ್ನಡ ಸಿನಿಮಾ ನೋಡಿ ಏನಾಗಲ್ಲಎಂದು ಅವರು ಹೇಳಿದ್ದರು. ಈ ಹೇಳಿಕೆ ಬಗ್ಗೆ ಚರ್ಚೆ ಶುರುವಾಗಿದೆ. ‘ಹೋಟೆಲ್​​ನಲ್ಲಿ ಊಟ ಸರಿ ಇಲ್ಲ ಎಂದು ಗೊತ್ತಿದ್ದ ಮೇಲೂ ಜನರು ಏಕೆ ಅಲ್ಲಿಗೆ ಹೋಗಬೇಕು’ ಎಂಬ ಪ್ರಶ್ನೆಯನ್ನು ಕೆಲವರು ಎತ್ತಿದ್ದಾರೆ.

ಸತೀಶ್ ನೀನಾಸಂ ನಟನೆಯ ‘ದಿ ರೈಸ್ ಆಫ್ ಅಶೋಕ’ ಸಿನಿಮಾದ ಟ್ರೇಲರ್ ಲಾಂಚ್ ಈವೆಂಟ್ ಇತ್ತೀಚೆಗೆ ನಡೆದಿದೆ. ಇದರಲ್ಲಿ ಮಾತನಾಡಿದ ರವಿಚಂದ್ರನ್ ಅವರು, ‘ಜನರು ಹೆಚ್ಚೆಚ್ಚು ಥಿಯೇಟರ್​​ಗೆ ಹೋಗಬೇಕು. 100 ರೂಪಾಯಿ ಕೊಟ್ಟು ಸಿನಿಮಾ ನೋಡಲ್ವಾ? ಸಿನಿಮಾ ಚೆನ್ನಾಗಿಲ್ಲ ಎಂದರೂ 100 ರೂಪಾಯಿ ಕಳೆಯಿರಿ ತೊಂದರೆ ಇಲ್ಲ. ಒಂದಷ್ಟು ಸಿನಿಮಾ ಗೆಲ್ಲಿಸಿ, ಗಂಟೇನು ಹೋಗಲ್ಲ’ ಎಂದು ಅವರು ಹೇಳಿದ್ದರು.

ರವಿಚಂದ್ರನ್ ಹೇಳಿಕೆ ಬಗ್ಗೆ ಚರ್ಚೆ ಶುರುವಾಗಿದೆ. ಯಾವುದೇ ಥಿಯೇಟರ್​​ನಲ್ಲಿ ಈಗ 100 ರೂಪಾಯಿಗೆ ಸಿನಿಮಾ ಟಿಕೆಟ್ ಸಿಗೋದಿಲ್ಲ. 150-200 ರೂಪಾಯಿ ಟಿಕೆಟ್ ದರ ನಿಗದಿ ಮಾಡಲಾಗುತ್ತಿದೆ. ಕುಟುಂಬ ಇದ್ದಾಗ ಒಬ್ಬನೇ ಸಿನಿಮಾಗೆ ತೆರಳೋಕೆ ಸಾಧ್ಯವಿಲ್ಲ. ಇಡೀ ಕುಟುಂಬ ತೆರಳಿತು ಎಂದರೆ ಏನಿಲ್ಲ ಎಂದರೂ ಸಾವಿರ ರೂಪಾಯಿ ಖರ್ಚಾಗುತ್ತದೆ. ಜೊತೆಗೆ ಒಂದಷ್ಟು ಸಮಯ ವ್ಯರ್ಥವಾಗುತ್ತದೆ. ಇಷ್ಟೆಲ್ಲ ಮಾಡಿ ಮನರಂಜನೆ ಸಿಕ್ಕರೆ ಓಕೆ. ಸಿನಿಮಾ ಚೆನ್ನಾಗಿಲ್ಲದೆ, ಮತ್ತಷ್ಟು ಫ್ರಸ್ಟ್ರೇಟ್ ಆದರೆ ಕೊಟ್ಟ ಹಣ ವ್ಯರ್ಥ.

ಇದನ್ನೂ ಓದಿ: ‘ಯಾವನು ಕೇಳಿದ ನಿಮ್ಮ ಕಮೆಂಟ್?’; ರವಿಚಂದ್ರನ್ ಗರಂ ಆಗಿದ್ದು ಯಾರ ಬಗ್ಗೆ?

ಇನ್ನು, ಕನ್ನಡದಲ್ಲಿ ವರ್ಷಕ್ಕೆ 200 ಸಿನಿಮಾಗಳು ಬರುತ್ತವೆ. 200 ಚಿತ್ರಗಳ ಪೈಕಿ 100 ಸಿನಿಮಾ ಗೆಲ್ಲಿಸ್ತೀನಿ ಎಂದು ಹೋದರು, 1 ಲಕ್ಷ ರೂಪಾಯಿ ಅದಕ್ಕೆ ಖರ್ಚಾಗುತ್ತದೆ. ಮಧ್ಯಮ ವರ್ಗದವರ ದುಡಿಮೆಯೇ ಕಡಿಮೆ. ಹೀಗಿರುವಾಗ ಒಂದು ಲಕ್ಷ ರೂಪಾಯಿ ಹಣವನ್ನು ಸಿನಿಮಾಗೆ ಸುರಿಯೋಕೆ ಸಾಧ್ಯವೇ ಎಂಬುದು ಜನಸಾಮಾನ್ಯರ ಪ್ರಶ್ನೆ. ಬರುವ ಬಹುತೇಕ ಸಿನಿಮಾಗಳ ಕಥೆ, ನಿರೂಪಣೆ, ನಿರ್ದೇಶನ ಚೆನ್ನಾಗಿರೋದಿಲ್ಲ. ಎಲ್ಲೋ ಅಲ್ಲೋ, ಇಲ್ಲೋ ಒಂದು ಒಳ್ಳೆಯ ಸಿನಿಮಾ ಬಂದಾಗ ಜನರು ಅದನ್ನು ಗೆಲ್ಲಿಸಿದ್ದಾರೆ. ‘ಸು ಫ್ರಮ್ ಸೋ’, ‘ಶಾಖಾಹಾರಿ’ ಸಿನಿಮಾಗಳು ಇದಕ್ಕೆ ಉತ್ತಮ ಉದಾಹರಣೆ.

‘ಹೋಟೆಲಿನಲ್ಲಿ ಊಟ ಚೆನ್ನಾಗಿಲ್ಲ, ಹೋಟೆಲ್ ಮಾಲೀಕರ ಧೋರಣೆ ಸರಿಯಿಲ್ಲ ಎಂದರೆ ಎಷ್ಟೇ ಹೊಟ್ಟೆ ಹಸಿಸಿದಿದ್ದರೂ ಜನ ಅಲ್ಲಿಗೆ ಹೋಗುವುದಿಲ್ಲ. ನಮ್ಮ ಅಡುಗೆ ಇರುವುದೇ ಹೀಗೆ ಸುಮ್ಮನೆ ಬಂದು ತಿಂದು ನಮ್ಮನ್ನು ಬೆಂಬಲಿಸಿ ಅಂದರೆ ಯಾರು ತಾನೇ ಬೆಂಬಲಿಸಲು ಸಾಧ್ಯ’ ಎಂದು ಅಮರನಾಥ್ ಶಿವಶಂಕರ್ ಎಂಬುವವರು ಪ್ರಶ್ನೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us