
ಕರಾವಳಿಯ ಸಂಸ್ಕೃತಿ, ಆಚಾರ-ವಿಚಾರ ಹಾಗೂ ‘ಕಂಬಳ’ ಜಾನಪದ ಕ್ರೀಡೆಯ ಹಿನ್ನೆಲೆಯಲ್ಲಿ ಮೂಡಿಬಂದಿರುವ ‘ಕರಾವಳಿ’ ಸಿನಿಮಾ (Karavali Movie) ಥಿಯೇಟರ್ಗಳಲ್ಲಿ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಪಡೆದುಕೊಂಡಿತ್ತು. ಕರಾವಳಿ ಭಾಗದ ಮಣ್ಣಿನ ಕಥೆ, ಪ್ರಾಣಿ ಮತ್ತು ಮಾನವನ ನಡುವಿನ ಅವಿನಾಭಾವ ಸಂಬಂಧ ಹಾಗೂ ಪ್ರತಿಷ್ಠೆಯ ಜಿದ್ದಾಜಿದ್ದಿನ ಕಥಾಹಂದರ ಹೊಂದಿದ್ದ ಈ ಚಿತ್ರ ಈಗ ಒಟಿಟಿ ಅಂಗಳಕ್ಕೆ ಧುಮುಕಲು ಸಂಪೂರ್ಣವಾಗಿ ಸಜ್ಜಾಗಿದೆ. ಆಗಸ್ಟ್ 28ರಿಂದ ಪ್ರಸಿದ್ಧ ಒಟಿಟಿ ಸಂಸ್ಥೆ ‘ಕನ್ನಡ Zee5’ನಲ್ಲಿ ಈ ಸಿನಿಮಾ ಡಿಜಿಟಲ್ ಪ್ರಸಾರ ಆರಂಭಿಸಲಿದೆ.
‘ಕರಾವಳಿ’ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ನಟ ಹಾಗೂ ನಿರ್ದೇಶಕ ರಾಜ್ ಬಿ. ಶೆಟ್ಟಿ ತಮ್ಮ ವಿಶಿಷ್ಟ ಅಭಿನಯದ ಮೂಲಕ ಕಥೆಗೆ ಜೀವ ತುಂಬಿದ್ದಾರೆ. ಹಾಸ್ಯ ನಟ ಮಿತ್ರ ಅವರು ಈ ಚಿತ್ರದಲ್ಲಿ ಗಂಭೀರ ಪಾತ್ರ ಮಾಡಿದ್ದಾರೆ. ಗುರುದತ್ ಗಾಣಿಗ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾ ಗಮನ ಸೆಳೆಯಿತು.
‘ಕರಾವಳಿ’ ಸಿನಿಮಾ ತೆರೆಕಾಣುವ ಸಮಯದಲ್ಲೇ ದೊಡ್ಡ ಮಟ್ಟದ ವಿವಾದಕ್ಕೆ ಸಿಲುಕಿತ್ತು. ನಟ ಪ್ರಜ್ವಲ್ ದೇವರಾಜ್ ಹಾಗೂ ನಿರ್ದೇಶಕರ ನಡುವೆ ಸಂಭಾವನೆಯ ವಿಚಾರವಾಗಿ ಭಿನ್ನಾಭಿಪ್ರಾಯ ತಲೆದೂರಿತ್ತು. ಹಣದ ಕಿರಿಕ್ನಿಂದಾಗಿ ಪ್ರಜ್ವಲ್ ಡಬ್ಬಿಂಗ್ ಪೂರ್ಣಗೊಳಿಸಿಲ್ಲ ಎಂದು ಚಿತ್ರತಂಡ ಗಂಭೀರ ಆರೋಪ ಮಾಡಿತ್ತು.
ಇದನ್ನೂ ಓದಿ: ಭಾನುವಾರ ಭರ್ಜರಿ ಗಳಿಕೆ ಮಾಡಿದ ‘ಕರಾವಳಿ’ ಸಿನಿಮಾ; ಒಟ್ಟೂ ಕಲೆಕ್ಷನ್ ಎಷ್ಟು?
ಈ ನಡುವೆ ಸಿನಿಮಾ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಜ್ವಲ್ ಅಭಿಮಾನಿಗಳು ಗಲಾಟೆ ನಡೆಸಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಕಾವೇರುವಂತೆ ಮಾಡಿತ್ತು. ಪ್ರಸ್ತುತ ನಿರ್ದೇಶಕ ಗುರುದತ್ ಗಾಣಿಗ ಹಾಗೂ ನಟ ಪ್ರಜ್ವಲ್ ದೇವರಾಜ್ ನಡುವೆ ಪರಸ್ಪರ ಆರೋಪ-ಪ್ರತ್ಯಾರೋಪಗಳ ಸರಣಿಯೇ ನಡೆದಿತ್ತು. ಈ ವಿವಾದದಿಂದ ಸಿನಿಮಾ ತಂಡ ಸಾಕಷ್ಟು ತೊಂದರೆ ಅನುಭವಿಸಿತ್ತು. ಇದರ ಜೊತೆಗೆ ಸಿನಿಮಾಗೆ ಸ್ವಲ್ಪ ಪ್ರಚಾರ ಕೂಡ ಸಿಕ್ಕಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:27 am, Sat, 22 August 26