ಒಟಿಟಿಗೆ ಬಂತು ಶಿವರಾಜ್​ಕುಮಾರ್​ ನಟನೆಯ ‘ಭೈರತಿ ರಣಗಲ್’ ಸಿನಿಮಾ

‘ಅಮೇಜಾನ್​ ಪ್ರೈಂ ವಿಡಿಯೋ’ ಒಟಿಟಿಯಲ್ಲಿ ‘ಭೈರತಿ ರಣಗಲ್’ ಸಿನಿಮಾ ಪ್ರಸಾರ ಆಗುತ್ತಿದೆ. ಶಿವರಾಜ್​ಕುಮಾರ್​, ರುಕ್ಮಿಣಿ ವಸಂತ್, ಛಾಯಾ ಸಿಂಗ್, ಮಧು ಗುರುಸ್ವಾಮಿ, ಅವಿನಾಶ್, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ನಟಿಸಿದ ಈ ಸಿನಿಮಾ ಸೂಪರ್​ ಹಿಟ್ ಆಗಿದೆ. ನರ್ತನ್​ ನಿರ್ದೇಶನ ಈ ಸಿನಿಮಾಗೆ ಒಟಿಟಿಯಲ್ಲೂ ಜನರು ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಒಟಿಟಿಗೆ ಬಂತು ಶಿವರಾಜ್​ಕುಮಾರ್​ ನಟನೆಯ ‘ಭೈರತಿ ರಣಗಲ್’ ಸಿನಿಮಾ
Shiva Rajkumar

Updated on: Dec 25, 2024 | 5:42 PM

2024ರ ಸೂಪರ್​ ಹಿಟ್​ ಸಿನಿಮಾಗಳಲ್ಲಿ ‘ಭೈರತಿ ರಣಗಲ್’ ಕೂಡ ಇದೆ. ನವೆಂಬರ್​ 15ರಂದು ಚಿತ್ರಮಂದಿರದಲ್ಲಿ ಈ ಸಿನಿಮಾ ತೆರೆಕಂಡಿತ್ತು. ಬಾಕ್ಸ್ ಆಫೀಸ್​ನಲ್ಲಿ ಉತ್ತಮ ಕಮಾಯಿ ಮಾಡುವ ಮೂಲಕ ಶಿವರಾಜ್​ಕುಮಾರ್ ಅವರ ಹಿಟ್ ಸಿನಿಮಾಗಳ ಸಾಲಿಗೆ ‘ಭೈರತಿ ರಣಗಲ್’ ಸೇರ್ಪಡೆ ಆಯಿತು. ದೊಡ್ಡ ಪರದೆಯಲ್ಲಿ ಈ ಸಿನಿಮಾವನ್ನು ಮಿಸ್​ ಮಾಡಿಕೊಂಡವರು ಈಗ ಮನೆಯಲ್ಲೇ ನೋಡಿ ಎಂಜಾಯ್ ಮಾಡುವ ಸಮಯ ಬಂದಿದೆ. ಹೌದು, ‘ಭೈರತಿ ರಣಗಲ್’ ಸಿನಿಮಾ ಒಟಿಟಿಗೆ ಎಂಟ್ರಿ ನೀಡಿದೆ. ‘ಅಮೇಜಾನ್​ ಪ್ರೈಂ ವಿಡಿಯೋ’ ಮೂಲಕ ಇಂದಿನಿಂದ (ಡಿಸೆಂಬರ್​ 25) ಪ್ರಸಾರ ಆರಂಭಿಸಿದೆ.

‘ಭೈರತಿ ರಣಗಲ್’ ಸಿನಿಮಾಗೆ ನರ್ತನ್​ ಅವರು ನಿರ್ದೇಶನ ಮಾಡಿದ್ದಾರೆ. 2017ರಲ್ಲಿ ಬಂದಿದ್ದ ‘ಮಫ್ತಿ’ ಸಿನಿಮಾದ ಪ್ರೀಕ್ವೆಲ್​ ಆಗಿ ‘ಭೈರತಿ ರಣಗಲ್’ ಮೂಡಿಬಂದಿದೆ. ನರ್ತನ್​ ಮತ್ತು ಶಿವರಾಜ್​ಕುಮಾರ್​ ಅವರ ಕಾಂಬಿನೇಷನ್​ ಆದ್ದರಿಂದ ಅಭಿಮಾನಿಗಳು ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ನಿರೀಕ್ಷೆಗೆ ತಕ್ಕಂತೆಯೇ ಅಭಿಮಾನಿಗಳನ್ನು ಈ ಸಿನಿಮಾ ರಂಜಿಸಿದೆ.

ಇದನ್ನೂ ಓದಿ: ಶಿವರಾಜ್​ಕುಮಾರ್​ಗೆ ಕ್ಯಾನ್ಸರ್ ತಗುಲಿದ್ದು ದೇಹದ ಈ ಭಾಗಕ್ಕೆ; ವೈದ್ಯರು ಮಾಡಿದ ಪ್ರಕ್ರಿಯೆ ಏನು? ಇಲ್ಲಿದೆ ವಿವರ

‘ಗೀತಾ ಪಿಕ್ಚರ್ಸ್​’ ಮೂಲಕ ಗೀತಾ ಶಿವರಾಜ್​ಕುಮಾರ್​ ಅವರು ‘ಭೈರತಿ ರಣಗಲ್’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಅವರಿಗೆ ಈ ಸಿನಿಮಾದಿಂದ ಲಾಭ ಆಗಿದೆ. ನಿರ್ದೇಶಕ ನರ್ತನ್​ ಅವರ ಖ್ಯಾತಿ ಕೂಡ ಹೆಚ್ಚಾಗಿದೆ. ಈ ಚಿತ್ರದಲ್ಲಿ ಶಿವರಾಜ್​ಕುಮಾರ್​ ಅವರಿಗೆ ಜೋಡಿಯಾಗಿ ರುಕ್ಮಿಣಿ ವಸಂತ್ ನಟಿಸಿದ್ದಾರೆ. ಅವರ ಅಭಿನಯಕ್ಕೆ ಪ್ರೇಕ್ಷಕರು ಮೆಚ್ಚಗೆ ಸೂಚಿಸಿದ್ದಾರೆ. ಒಟಿಟಿಯಲ್ಲಿ ನೋಡುವ ಪ್ರೇಕ್ಷಕರಿಂದ ಸಹ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

ಇದನ್ನೂ ಓದಿ: ಅಮೆರಿಕದಲ್ಲಿ ಶಿವರಾಜ್​ಕುಮಾರ್​ಗೆ ಶಸ್ತ್ರ ಚಿಕಿತ್ಸೆ; ದೂರವಾಣಿ ಮೂಲಕ ಮಾತಾಡಿದ ಸಿಎಂ

ಶಿವರಾಜ್​ಕುಮಾರ್​ ಅವರು ‘ಭೈರತಿ ರಣಗಲ್’ ಸಿನಿಮಾದ ಕೆಲಸಗಳನ್ನು ಮುಗಿಸಿದ ಬಳಿಕ ವಿದೇಶಕ್ಕೆ ತೆರಳುವ ನಿರ್ಧಾರ ಮಾಡಿದರು. ಅನಾರೋಗ್ಯದ ಕಾರಣ ಅವರು ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತೀಚೆಗೆ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಸದ್ಯ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ. ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂದು ವೈದ್ಯರು ಮತ್ತು ಕುಟುಂಬದವರು ಮಾಹಿತಿ ನೀಡಿದ್ದಾರೆ. ಶಿವಣ್ಣ ಆದಷ್ಟು ಬೇಗ ಗುಣಮುಖರಾಗಿ ಕರುನಾಡಿಗೆ ವಾಪಸ್ ಬರಲಿ ಎಂದು ಎಲ್ಲರೂ ಪ್ರಾರ್ಥಿಸಿದ್ದಾರೆ. ಅವರಿಗಾಗಿ ಅನೇಕ ಕಡೆಗಳಲ್ಲಿ ಪೂಜೆ, ಹೋಮ ಮಾಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 5:40 pm, Wed, 25 December 24