ಟೆರರಿಸ್ಟ್ ಪಾತ್ರಕ್ಕೆ ಭೋಲಾ, ಶಂಕರ್​ ಹೆಸರು; ನೆಟ್​ಫ್ಲಿಕ್ಸ್​ ಮುಖ್ಯಸ್ಥರನ್ನು ವಿಚಾರಣೆಗೆ ಕರೆದ ಸರ್ಕಾರ

|

Updated on: Sep 02, 2024 | 8:25 PM

ನೈಜ ಘಟನೆ ಆಧರಿಸಿ ‘ಐಸಿ 814: ದಿ ಕಂದಹಾರ್​ ಹೈಜಾಕ್​’ ವೆಬ್ ಸಿರೀಸ್​ ನಿರ್ಮಾಣ ಆಗಿದೆ. ಆದರೆ ಇದರಲ್ಲಿ ಭಯೋತ್ಪಾದಕರ ಹೆಸರನ್ನು ಬದಲಾಯಿಸಲಾಗಿದೆ ಎಂಬ ಆರೋಪ ಇದೆ. ಪಾಕಿಸ್ತಾನದ ಭಯೋತ್ಪಾದಕರಿಗೆ ಭೋಲಾ ಮತ್ತು ಶಂಕರ್ ಎಂದು ಹೆಸರು ಇಡಲಾಗಿದೆ. ಇದರಿಂದ ವಿವಾದ ಹುಟ್ಟಿಕೊಂಡಿದೆ. ನೆಟ್​ಫ್ಲಿಕ್ಸ್​ನಲ್ಲಿ ಈ ವೆಬ್​ ಸಿರೀಸ್​ ನೋಡಿದ ಪ್ರೇಕ್ಷಕರು ಸೋಶಿಯಲ್​ ಮೀಡಿಯಾ ಮೂಲಕ ಆಕ್ಷೇಪ ಎತ್ತಿದ್ದಾರೆ.

ಟೆರರಿಸ್ಟ್ ಪಾತ್ರಕ್ಕೆ ಭೋಲಾ, ಶಂಕರ್​ ಹೆಸರು; ನೆಟ್​ಫ್ಲಿಕ್ಸ್​ ಮುಖ್ಯಸ್ಥರನ್ನು ವಿಚಾರಣೆಗೆ ಕರೆದ ಸರ್ಕಾರ
ಐಸಿ 814: ದಿ ಕಂದಹಾರ್​ ಹೈಜಾಕ್​
Follow us on

ನೆಟ್​ಫ್ಲಿಕ್ಸ್​ ಒಟಿಟಿ ಮೂಲಕ ಬಿಡುಗಡೆ ಆಗಿರುವ ‘ಐಸಿ 814: ದಿ ಕಂದಹಾರ್​ ಹೈಜಾಕ್​’ ವೆಬ್​ ಸರಣಿ ವಿವಾದಕ್ಕೆ ಕಾರಣ ಆಗಿದೆ. ರಿಯಲ್​ ಘಟನೆಯನ್ನು ಆಧರಿಸಿದ ಈ ವೆಬ್​ ಸಿರೀಸ್​ನಲ್ಲಿ ಕೆಲವು ಮಾಹಿತಿಯನ್ನು ತಿರುಚಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಮುಸ್ಲಿಂ ಭಯೋತ್ಪಾದಕರ ಪಾತ್ರಗಳಿಗೆ ಹಿಂದೂಗಳ ಹೆಸರನ್ನು ಇಡಲಾಗಿದೆ ಎಂದು ಆಕ್ಷೇಪ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ನೆಟ್​ಫ್ಲಿಕ್ಸ್​ ಮುಖ್ಯಸ್ಥರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್​ ಜಾರಿ ಮಾಡಿದೆ.

1999ರ ಡಿಸೆಂಬರ್​ 24ರಂದು ನೇಪಾಳದ ಕಠ್ಮಂಡು ಇಂದ ದೆಹಲಿಗೆ ಹೊರಟಿದ್ದ ವಿಮಾನವನ್ನು ಪಾಕಿಸ್ತಾನದ ಭಯೋತ್ಪಾದಕರು ಹೈಜಾಕ್​ ಮಾಡಿದ್ದರು. ಆ ವಿಮಾನದಲ್ಲಿ 190 ಪ್ರಯಾಣಿಕರು ಇದ್ದರು. ಅಮೃತಸರ, ಲಹೋರ್​, ದುಬೈ ಮುಂತಾದ ಕಡೆಗಳಲ್ಲಿ ಸುತ್ತಾಡಿದ ಬಳಿಕ ಮರುದಿನ ಅಂದರೆ, ಡಿಸೆಂಬರ್​ 25ರಂದು ಅಫ್ಘಾನಿಸ್ತಾನದ ಕಂದಹಾರ್​ನಲ್ಲಿ ‘ಐಸಿ 814’ ವಿಮಾನವನ್ನು ಲ್ಯಾಂಡ್​ ಮಾಡಲಾಯಿತು. ಭಾರತದ ಜೈಲಿನಲ್ಲಿ ಇರುವ ಪಾಕಿಸ್ತಾನದ ಭಯೋತ್ಪಾದಕರ ಬಿಡುಗಡೆಗೆ ಒತ್ತಾಯಿಸಿ ಈ ಹೈಜಾಕ್​ ಮಾಡಲಾಗಿತ್ತು.

ಈ ರೋಚಕ ಘಟನೆಯನ್ನು ಇಟ್ಟುಕೊಂಡು ‘ಐಸಿ 814: ದಿ ಕಂದಹಾರ್​ ಹೈಜಾಕ್​’ ವೆಬ್​ ಸಿರೀಸ್​ ಮೂಡಿಬಂದಿದೆ. ವಿಮಾನ ಹೈಜಾಕ್​ ಮಾಡಿದ್ದ ಭಯೋತ್ಪಾದಕರ ಹೆಸರು ಇಬ್ರಾಹಿಂ ಅಥರ್​, ಶಾಹಿದ್​ ಅಖ್ತರ್​ ಸಯೀದ್​, ಸನ್ನಿ ಅಹ್ಮದ್​ ಖಾಜಿ, ಝಹೂರ್​ ಮಿಸ್ತ್ರೀ ಮತ್ತು ಶಾಖಿರ್​. ಆದರೆ ಈ ವೆಬ್​ ಸರಣಿಯಲ್ಲಿ ಭಯೋತ್ಪಾಕರ ಹೆಸರನ್ನು ಭೋಲಾ ಮತ್ತು ಶಂಕರ್​ ಎಂದು ತೋರಿಸಲಾಗಿದೆ. ಇದರಿಂದ ಹಿಂದೂಗಳ ಭಾವನೆಗೆ ಧಕ್ಕೆ ಆಗಿದೆ ಎಂದು ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ವಿಮಾನ ಹೈಜಾಕ್ ಆಗಿದೆ ಎಂದು ಟ್ವೀಟ್ ಮಾಡಿದ ಪ್ರಯಾಣಿಕನ ಬಂಧನ, ಹೀಗೆ ಮಾಡಲು ಕಾರಣವೇನು?

‘ಐಸಿ 814: ದಿ ಕಂದಹಾರ್​ ಹೈಜಾಕ್​’ ವೆಬ್​ ಸರಣಿಯಲ್ಲಿ ಭಯೋತ್ಪಾದಕರ ಹೆಸರು ಬದಲಾಗಿದ್ದು ಯಾಕೆ ಎಂದು ವಿವರಣೆ ನೀಡುವಂತೆ ನೆಟ್​ಫ್ಲಿಕ್ಸ್​ನ ಕಾಂಟೆಂಟ್​ ಮುಖ್ಯಸ್ಥರಿಗೆ ಪ್ರಶ್ನೆ ಮಾಡಲಾಗಿದೆ. ಈ ವಿಚಾರವಾಗಿ ಸೆಪ್ಟೆಂಬರ್​ 3ರಂದು ವಿಚಾರಣೆಗೆ ಬರುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸಮನ್ಸ್​ ನೀಡಿದೆ. ‘ಭೋಲಾ ಮತ್ತು ಶಂಕರ್​ ಎಂಬುದು ಭಯೋತ್ಪಾದಕರ ಕೋಡ್​ನೇಮ್​ ಆಗಿತ್ತು’ ಎಂದು ಕೆಲವರು ವಾದಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಸ್ಪಷ್ಟನೆ ನೀಡಬೇಕು ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.