ಟೆರರಿಸ್ಟ್ ಪಾತ್ರಕ್ಕೆ ಭೋಲಾ, ಶಂಕರ್​ ಹೆಸರು; ನೆಟ್​ಫ್ಲಿಕ್ಸ್​ ಮುಖ್ಯಸ್ಥರನ್ನು ವಿಚಾರಣೆಗೆ ಕರೆದ ಸರ್ಕಾರ

ನೈಜ ಘಟನೆ ಆಧರಿಸಿ ‘ಐಸಿ 814: ದಿ ಕಂದಹಾರ್​ ಹೈಜಾಕ್​’ ವೆಬ್ ಸಿರೀಸ್​ ನಿರ್ಮಾಣ ಆಗಿದೆ. ಆದರೆ ಇದರಲ್ಲಿ ಭಯೋತ್ಪಾದಕರ ಹೆಸರನ್ನು ಬದಲಾಯಿಸಲಾಗಿದೆ ಎಂಬ ಆರೋಪ ಇದೆ. ಪಾಕಿಸ್ತಾನದ ಭಯೋತ್ಪಾದಕರಿಗೆ ಭೋಲಾ ಮತ್ತು ಶಂಕರ್ ಎಂದು ಹೆಸರು ಇಡಲಾಗಿದೆ. ಇದರಿಂದ ವಿವಾದ ಹುಟ್ಟಿಕೊಂಡಿದೆ. ನೆಟ್​ಫ್ಲಿಕ್ಸ್​ನಲ್ಲಿ ಈ ವೆಬ್​ ಸಿರೀಸ್​ ನೋಡಿದ ಪ್ರೇಕ್ಷಕರು ಸೋಶಿಯಲ್​ ಮೀಡಿಯಾ ಮೂಲಕ ಆಕ್ಷೇಪ ಎತ್ತಿದ್ದಾರೆ.

ಟೆರರಿಸ್ಟ್ ಪಾತ್ರಕ್ಕೆ ಭೋಲಾ, ಶಂಕರ್​ ಹೆಸರು; ನೆಟ್​ಫ್ಲಿಕ್ಸ್​ ಮುಖ್ಯಸ್ಥರನ್ನು ವಿಚಾರಣೆಗೆ ಕರೆದ ಸರ್ಕಾರ
ಐಸಿ 814: ದಿ ಕಂದಹಾರ್​ ಹೈಜಾಕ್​

Updated on: Sep 02, 2024 | 8:25 PM

ನೆಟ್​ಫ್ಲಿಕ್ಸ್​ ಒಟಿಟಿ ಮೂಲಕ ಬಿಡುಗಡೆ ಆಗಿರುವ ‘ಐಸಿ 814: ದಿ ಕಂದಹಾರ್​ ಹೈಜಾಕ್​’ ವೆಬ್​ ಸರಣಿ ವಿವಾದಕ್ಕೆ ಕಾರಣ ಆಗಿದೆ. ರಿಯಲ್​ ಘಟನೆಯನ್ನು ಆಧರಿಸಿದ ಈ ವೆಬ್​ ಸಿರೀಸ್​ನಲ್ಲಿ ಕೆಲವು ಮಾಹಿತಿಯನ್ನು ತಿರುಚಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಮುಸ್ಲಿಂ ಭಯೋತ್ಪಾದಕರ ಪಾತ್ರಗಳಿಗೆ ಹಿಂದೂಗಳ ಹೆಸರನ್ನು ಇಡಲಾಗಿದೆ ಎಂದು ಆಕ್ಷೇಪ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ನೆಟ್​ಫ್ಲಿಕ್ಸ್​ ಮುಖ್ಯಸ್ಥರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್​ ಜಾರಿ ಮಾಡಿದೆ.

1999ರ ಡಿಸೆಂಬರ್​ 24ರಂದು ನೇಪಾಳದ ಕಠ್ಮಂಡು ಇಂದ ದೆಹಲಿಗೆ ಹೊರಟಿದ್ದ ವಿಮಾನವನ್ನು ಪಾಕಿಸ್ತಾನದ ಭಯೋತ್ಪಾದಕರು ಹೈಜಾಕ್​ ಮಾಡಿದ್ದರು. ಆ ವಿಮಾನದಲ್ಲಿ 190 ಪ್ರಯಾಣಿಕರು ಇದ್ದರು. ಅಮೃತಸರ, ಲಹೋರ್​, ದುಬೈ ಮುಂತಾದ ಕಡೆಗಳಲ್ಲಿ ಸುತ್ತಾಡಿದ ಬಳಿಕ ಮರುದಿನ ಅಂದರೆ, ಡಿಸೆಂಬರ್​ 25ರಂದು ಅಫ್ಘಾನಿಸ್ತಾನದ ಕಂದಹಾರ್​ನಲ್ಲಿ ‘ಐಸಿ 814’ ವಿಮಾನವನ್ನು ಲ್ಯಾಂಡ್​ ಮಾಡಲಾಯಿತು. ಭಾರತದ ಜೈಲಿನಲ್ಲಿ ಇರುವ ಪಾಕಿಸ್ತಾನದ ಭಯೋತ್ಪಾದಕರ ಬಿಡುಗಡೆಗೆ ಒತ್ತಾಯಿಸಿ ಈ ಹೈಜಾಕ್​ ಮಾಡಲಾಗಿತ್ತು.

ಈ ರೋಚಕ ಘಟನೆಯನ್ನು ಇಟ್ಟುಕೊಂಡು ‘ಐಸಿ 814: ದಿ ಕಂದಹಾರ್​ ಹೈಜಾಕ್​’ ವೆಬ್​ ಸಿರೀಸ್​ ಮೂಡಿಬಂದಿದೆ. ವಿಮಾನ ಹೈಜಾಕ್​ ಮಾಡಿದ್ದ ಭಯೋತ್ಪಾದಕರ ಹೆಸರು ಇಬ್ರಾಹಿಂ ಅಥರ್​, ಶಾಹಿದ್​ ಅಖ್ತರ್​ ಸಯೀದ್​, ಸನ್ನಿ ಅಹ್ಮದ್​ ಖಾಜಿ, ಝಹೂರ್​ ಮಿಸ್ತ್ರೀ ಮತ್ತು ಶಾಖಿರ್​. ಆದರೆ ಈ ವೆಬ್​ ಸರಣಿಯಲ್ಲಿ ಭಯೋತ್ಪಾಕರ ಹೆಸರನ್ನು ಭೋಲಾ ಮತ್ತು ಶಂಕರ್​ ಎಂದು ತೋರಿಸಲಾಗಿದೆ. ಇದರಿಂದ ಹಿಂದೂಗಳ ಭಾವನೆಗೆ ಧಕ್ಕೆ ಆಗಿದೆ ಎಂದು ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ವಿಮಾನ ಹೈಜಾಕ್ ಆಗಿದೆ ಎಂದು ಟ್ವೀಟ್ ಮಾಡಿದ ಪ್ರಯಾಣಿಕನ ಬಂಧನ, ಹೀಗೆ ಮಾಡಲು ಕಾರಣವೇನು?

‘ಐಸಿ 814: ದಿ ಕಂದಹಾರ್​ ಹೈಜಾಕ್​’ ವೆಬ್​ ಸರಣಿಯಲ್ಲಿ ಭಯೋತ್ಪಾದಕರ ಹೆಸರು ಬದಲಾಗಿದ್ದು ಯಾಕೆ ಎಂದು ವಿವರಣೆ ನೀಡುವಂತೆ ನೆಟ್​ಫ್ಲಿಕ್ಸ್​ನ ಕಾಂಟೆಂಟ್​ ಮುಖ್ಯಸ್ಥರಿಗೆ ಪ್ರಶ್ನೆ ಮಾಡಲಾಗಿದೆ. ಈ ವಿಚಾರವಾಗಿ ಸೆಪ್ಟೆಂಬರ್​ 3ರಂದು ವಿಚಾರಣೆಗೆ ಬರುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸಮನ್ಸ್​ ನೀಡಿದೆ. ‘ಭೋಲಾ ಮತ್ತು ಶಂಕರ್​ ಎಂಬುದು ಭಯೋತ್ಪಾದಕರ ಕೋಡ್​ನೇಮ್​ ಆಗಿತ್ತು’ ಎಂದು ಕೆಲವರು ವಾದಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಸ್ಪಷ್ಟನೆ ನೀಡಬೇಕು ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us