ಸಾಯಿ ಧರಂ ತೇಜ್​ ಸಿನಿಮಾದಿಂದ ಪೂಜಾ ಹೆಗ್ಡೆ ಔಟ್​; ಕಾರಣ ಕೇಳಿ ಚಿತ್ರತಂಡಕ್ಕೆ ಶಾಕ್​

ಪೂಜಾ ಹೆಗ್ಡೆ ಅವರು ಒಪ್ಪಿಕೊಂಡ ಸಿನಿಮಾದಿಂದ ಹೊರಬಂದಿರುವುದು ಇದೇ ಮೊದಲೇನೂ ಅಲ್ಲ. ಈ ಮೊದಲು ಕೂಡ ಅವರು ಕೆಲವು ಬಹುನಿರೀಕ್ಷಿತ ಸಿನಿಮಾಗಳಿಂದ ಅರ್ಧಕ್ಕೆ ಹೊರಬಂದಿದ್ದರು. ಈಗ ಸಾಯಿ ಧರಂ ತೇಜ್​ ನಟನೆಯ ಹೊಸ ಸಿನಿಮಾದಲ್ಲಿನ ಪಾತ್ರ ಪೂಜಾ ಹೆಗ್ಡೆ ಅವರಿಗೆ ಇಷ್ಟ ಆಗಿಲ್ಲ ಎನ್ನಲಾಗಿದೆ. ಬಿಳಿ ಸೀರೆ ಧರಿಸಿ, ಹೆಚ್ಚು ಸಮಯ ಜೈಲಿನಲ್ಲಿ ಇರುವಂತಹ ಪಾತ್ರ ಮಾಡಲು ಅವರು ಸಿದ್ಧರಿಲ್ಲ ಎಂದು ಹೇಳಲಾಗುತ್ತಿದೆ.

ಸಾಯಿ ಧರಂ ತೇಜ್​ ಸಿನಿಮಾದಿಂದ ಪೂಜಾ ಹೆಗ್ಡೆ ಔಟ್​; ಕಾರಣ ಕೇಳಿ ಚಿತ್ರತಂಡಕ್ಕೆ ಶಾಕ್​
ಪೂಜಾ ಹೆಗ್ಡೆ, ಸಾಯಿ ಧರಂ ತೇಜ್​

Updated on: Feb 01, 2024 | 4:08 PM

ಚಿತ್ರರಂಗದಲ್ಲಿ ನಟಿ ಪೂಜಾ ಹೆಗ್ಡೆ (Pooja Hegde) ಅವರು ಅನೇಕ ಏಳು-ಬೀಳುಗಳನ್ನು ಕಂಡಿದ್ದಾರೆ. ಕೆಲವು ಸಿನಿಮಾ ತಂಡಗಳಿಂದ ಅವರು ಹೊರನಡೆದಿರುವುದು ಗೊತ್ತೇ ಇದೆ. ಈಗ ಅವರು ಮತ್ತೊಂದು ಸಿನಿಮಾದಿಂದ ಹೊರಬಂದಿದ್ದಾರೆ. ಟಾಲಿವುಡ್​ ನಟ ಸಾಯಿ ಧರಂ ತೇಜ್​ (Sai Dharam Tej) ಅಭಿನಯಿಸುತ್ತಿರುವ ಹೊಸ ಚಿತ್ರಕ್ಕೆ ಪೂಜಾ ಹೆಗ್ಡೆ ಅವರು ನಾಯಕಿ ಆಗಿದ್ದರು. ಆದರೆ ಈಗ ಅವರು ಆ ಸಿನಿಮಾ ತಂಡದಿಂದ ಹೊರಗೆ ಬಂದಿದ್ದಾರೆ ಎಂದು ಸುದ್ದಿ ಹರಡಿದೆ. ಈ ರೀತಿ ನಟ-ನಟಿಯರ ಬದಲಾವಣೆ ಆಗುವುದು ದೊಡ್ಡ ವಿಚಾರ ಏನಲ್ಲ. ಆದರೆ ಆ ಬದಲಾವಣೆಯ ಹಿಂದಿರುವ ಕಾರಣ ಕೇಳಿ ಎಲ್ಲರಿಗೂ ಅಚ್ಚರಿ ಆಗಿದೆ.

ಪೂಜಾ ಹೆಗ್ಡೆ ಅವರು ಎಲ್ಲ ಬಗೆಯ ಪಾತ್ರಗಳಿಗೂ ಜೀವ ತುಂಬಬಲ್ಲರು. ಒಂದಷ್ಟು ಹಿಟ್​ ಸಿನಿಮಾಗಳು ಅವರ ಖಾತೆಯಲ್ಲಿ ಇವೆ. ಬೇರೆ ಬೇರೆ ರೀತಿಯ ಪಾತ್ರಗಳನ್ನು ಮಾಡಬೇಕು ಎಂಬುದು ಪೂಜಾ ಹೆಗ್ಡೆ ಅವರ ಆಸೆ. ಅದಕ್ಕೆ ತಕ್ಕಂತೆಯೇ ಅವರು ಪಾತ್ರಗಳ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಸಾಯಿ ಧರಂ ತೇಜ್​ ನಟನೆಯ ಸಿನಿಮಾದಲ್ಲಿ ನಾಯಕಿ ಪಾತ್ರಕ್ಕೆ ಜಾಸ್ತಿ ಗ್ಲಾಮರ್​ ಇಲ್ಲ ಎಂಬ ಕಾರಣಕ್ಕೆ ಪೂಜಾ ಹೆಗ್ಡೆ ಅವರು ಚಿತ್ರತಂಡದಿಂದ ಹೊರಗೆ ಬಂದಿದ್ದಾರೆ ಎಂಬುದು ಅಚ್ಚರಿಯ ವಿಚಾರ.

ಇದನ್ನೂ ಓದಿ: ಹಸಿರು ಸೀರೆ ಧರಿಸಿ ಕಂಗೊಳಿಸಿದ ಕರಾವಳಿ ಚೆಲುವೆ ಪೂಜಾ ಹೆಗ್ಡೆ

ಗ್ಲಾಮರ್​ ಅತಿಯಾಗಿರುವ ಪಾತ್ರವನ್ನು ಕೆಲವು ನಟಿಯರು ಒಪ್ಪಿಕೊಳ್ಳುವುದಿಲ್ಲ. ಆದರೆ ಪೂಜಾ ಹೆಗ್ಡೆ ಅವರು ತುಂಬ ಗ್ಲಾಮರಸ್​ ಆದಂತಹ ಪಾತ್ರವನ್ನು ಬಯಸುತ್ತಿದ್ದಾರೆ. ಗ್ಲಾಮರ್​ ಇಲ್ಲದ ಪಾತ್ರ ಮಾಡಿದರೆ ಅದು ತಮ್ಮ ಅಭಿಮಾನಿಗಳಿಗೆ ಇಷ್ಟ ಆಗುವುದಿಲ್ಲ ಎಂಬುದು ಅವರ ನಂಬಿಕೆ. ಸದ್ಯ ಸಾಯಿ ಧರಂ ತೇಜ್​ ನಾಯಕತ್ವದ ಸಿನಿಮಾದಲ್ಲಿ ಹೀರೋಯಿನ್​ ಪಾತ್ರಕ್ಕೆ ಜಾಸ್ತಿ ಗ್ಲಾಮರ್​ ಇಲ್ಲವಂತೆ. ಹೆಚ್ಚುನ ದೃಶ್ಯಗಳಲ್ಲಿ ಬಿಳಿ ಸೀರೆ ಧರಿಸಿ, ಜೈಲಿನಲ್ಲಿ ಕುಳಿತಿರುವಂತ ಪಾತ್ರ ಅದು. ಹಾಗಾಗಿ ಅಂಥ ಪಾತ್ರ ಬೇಡ ಎಂದು ಪೂಜಾ ಹೆಗ್ಡೆ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಆದರೆ ಚಿತ್ರತಂಡದಿಂದ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.

ಇದನ್ನೂ ಓದಿ: ದುಬೈನಲ್ಲಿ ಜಗಳ ಆದ ಬಳಿಕ ನಟಿ ಪೂಜಾ ಹೆಗ್ಡೆಗೆ ಕೊಲೆ ಬೆದರಿಕೆ? ಅಸಲಿ ವಿಷಯ ಏನು?

ಈ ರೀತಿ ಪೂಜಾ ಹೆಗ್ಡೆ ಅವರು ಸಿನಿಮಾ ತಂಡಗಳಿಂದ ಹೊರಬಂದಿರುವುದು ಇದೇ ಮೊದಲೇನೂ ಅಲ್ಲ. ಮಹೇಶ್​ ಬಾಬು ನಟನೆಯ ‘ಗುಂಟೂರು ಖಾರಂ’ ಸಿನಿಮಾಗೂ ಪೂಜಾ ಹೆಗ್ಡೆ ಅವರು ನಾಯಕಿ ಆಗಿದ್ದರು. ಆದರೆ ಅವರು ಕಾರಣಾಂತರಗಳಿಂದ ಆ ಸಿನಿಮಾದಲ್ಲಿ ಮುಂದುವರಿಯಲಿಲ್ಲ. ಏಳು-ಬೀಳು ಏನೇ ಇದ್ದರೂ ಕೂಡ ಪೂಜಾ ಹೆಗ್ಡೆ ಅವರಿಗೆ ಇರುವ ಡಿಮ್ಯಾಂಡ್​ ಕಡಿಮೆ ಆಗಿಲ್ಲ. ಅವರಿಗೆ ಹೊಸ ಹೊಸ ಸಿನಿಮಾದ ಅವಕಾಶಗಳು ಸಿಗುತ್ತಲೇ ಇವೆ. ಬಹುಭಾಷೆಯಲ್ಲಿ ಅವರು ಫೇಮಸ್​ ಆಗಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿದ್ದು, ಆಭಿಮಾನಿಗಳಿದಾಗಿ ಅವರು ಅನೇಕ ಫೋಟೋಗಳನ್ನು ಆಗಾಗ ಹಂಚಿಕೊಳ್ಳುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us