‘ಡಂಕಿ’ ಜೊತೆ ‘ಸಲಾರ್​’ ಕ್ಲ್ಯಾಷ್: ಪ್ರಶಾಂತ್ ನೀಲ್ ಹೇಳಿದ್ದು ಹೀಗೆ

Salaar: ‘ಸಲಾರ್’ ಸಿನಿಮಾವು ಶಾರುಖ್ ಖಾನ್​ರ ‘ಡಂಕಿ’ ಸಿನಿಮಾದ ಜೊತೆ ಬಾಕ್ಸ್ ಆಫೀಸ್​ನಲ್ಲಿ ಎದುರಾಗಿತ್ತಿರುವ ಕುರಿತು ನಿರ್ದೇಶಕ ಪ್ರಶಾಂತ್ ನೀಲ್ ಮಾತನಾಡಿದ್ದಾರೆ.

‘ಡಂಕಿ’ ಜೊತೆ ‘ಸಲಾರ್​’ ಕ್ಲ್ಯಾಷ್: ಪ್ರಶಾಂತ್ ನೀಲ್ ಹೇಳಿದ್ದು ಹೀಗೆ
Follow us
|

Updated on: Nov 29, 2023 | 8:05 PM

ಪ್ರಭಾಸ್ (Prabhas) ನಟನೆಯ ಬಹು ನಿರೀಕ್ಷಿತ ಸಿನಿಮಾ ‘ಸಲಾರ್’ ಡಿಸೆಂಬರ್ 22ಕ್ಕೆ ತೆರೆಗೆ ಬರುತ್ತಿದೆ. ಅದೇ ಸಮಯಕ್ಕೆ ಶಾರುಖ್ ಖಾನ್ ನಟನೆಯ ‘ಡಂಕಿ’ ಸಿನಿಮಾ ಸಹ ಬಿಡುಗಡೆ ಆಗುತ್ತಿದೆ. ಎರಡೂ ದೊಡ್ಡ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಎದುರು-ಬದುರಾಗುತ್ತಿರುವುದು ಯಾವುದಾದರೂ ಒಂದು ಸಿನಿಮಾಕ್ಕೆ ಸಣ್ಣ ಹೊಡೆತ ಪಕ್ಕಾ ಎನ್ನಲಾಗುತ್ತಿದೆ. ಸಿನಿಮಾದ ನಿರ್ದೇಶಕ, ’ಕೆಜಿಎಫ್’ ಖ್ಯಾತಿಯ ಪ್ರಶಾಂತ್ ನೀಲ್ ಸಹ ಈ ಬಗ್ಗೆ ಸಣ್ಣ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗಿನ ಸಂದರ್ಶನವೊಂದರಲ್ಲಿ ‘ಡಂಕಿ’-‘ಸಲಾರ್’ ಕ್ಲ್ಯಾಷ್ ಬಗ್ಗೆ ಮಾತನಾಡಿರುವ ಪ್ರಶಾಂತ್ ನೀಲ್, ‘‘ಹೊಸ ನಟನೊಟ್ಟಿಗೆ ಇರಲಿ ಅಥವಾ ಭಾರತದ ಸೂಪರ್ ಸ್ಟಾರ್ ಎದುರೇ ಆಗಿರಲಿ, ಈ ರೀತಿಯ ಬಾಕ್ಸ್ ಆಫೀಸ್ ಕ್ಲ್ಯಾಷ್ ಅನ್ನು ಯಾರೂ ಸಹ ಬಯಸುವುದಿಲ್ಲ. ಏನೇ ಆಗಲಿ, ರಾಜ್​ಕುಮಾರ್ ಹಿರಾನಿ ನನ್ನ ಅತ್ಯಂತ ಮೆಚ್ಚಿನ ನಿರ್ದೇಶಕರಲ್ಲಿ ಒಬ್ಬರು. ‘ಡಂಕಿ’ ಸಿನಿಮಾವನ್ನು ನಾನು ನೋಡಿಯೇ ನೋಡುತ್ತೇನೆ. ಅದೊಂದು ಬಹಳ ಒಳ್ಳೆಯ ಸಿನಿಮಾ ಆಗಿರುವ ವಿಶ್ವಾಸವಿದೆ’’ ಎಂದಿದ್ದಾರೆ.

‘ಸಲಾರ್’ ಸಿನಿಮಾದ ಕತೆಯ ಬಗ್ಗೆಯೂ ಮಾತನಾಡಿರುವ ಪ್ರಶಾಂತ್ ನೀಲ್, ‘‘ಸಲಾರ್’ ಸಿನಿಮಾ ಗೆಳೆತನದ ಕತೆಯನ್ನು ಒಳಗೊಂಡಿದೆ. ಇಬ್ಬರು ಆತ್ಮೀಯ ಗೆಳೆಯರು ಹೇಗೆ ಬದ್ಧ ವೈರಿಗಳಾಗುತ್ತಾರೆ ಎಂಬುದೇ ಸಿನಿಮಾದ ಕತೆ. ಸಿನಿಮಾದ ಮೊದಲ ಭಾಗದಲ್ಲಿ ನಾವು ಅರ್ಧ ಕತೆ ಹೇಳುತ್ತೇವೆ, ಉಳಿದ ಕತೆ ಎರಡನೇ ಭಾಗದಲ್ಲಿ ಇರಲಿದೆ’’ ಎಂದಿದ್ದಾರೆ. ಮುಂದುವರೆದು, ‘‘ಇಬ್ಬರು ಸ್ನೇಹಿತರ ಜರ್ನಿಯನ್ನು ಪ್ರೇಕ್ಷಕರು ನಮ್ಮ ಸಿನಿಮಾದಲ್ಲಿ ನೋಡಲಿದ್ದಾರೆ. ‘ಸಲಾರ್’ ಸಿನಿಮಾದ ಟ್ರೈಲರ್ ಬಿಡುಗಡೆ ಆದಾಗ ನಾವು ಸೃಷ್ಠಿ ಮಾಡಿರುವ ಜಗತ್ತಿನ ಪರಿಚಯ ಪ್ರೇಕ್ಷಕರಿಗೆ ಆಗಲಿದೆ’’ ಎಂದಿದ್ದಾರೆ ನೀಲ್.

ಇದನ್ನೂ ಓದಿ:‘ಸಲಾರ್’ ಕತೆಯ ಎಳೆ ಬಿಟ್ಟುಕೊಟ್ಟ ಪ್ರಶಾಂತ್ ನೀಲ್: ಆ ಸಿನಿಮಾದ ಛಾಯೆ ಇದೆ

‘ಸಲಾರ್’ ಸಿನಿಮಾ ಭಾರತದ ಈ ವರ್ಷದ ಅತ್ಯಂತ ಹೆಚ್ಚು ನಿರೀಕ್ಷೆಯ ಸಿನಿಮಾಗಳಲ್ಲಿ ಒಂದು. ಎರಡು ಬಾರಿ ಬಿಡುಗಡೆ ದಿನಾಂಕ ಮುಂದೂಡಿಕೆಯಾಗಿ ಅಂತಿಮವಾಗಿ ಡಿಸೆಂಬರ್ 22ಕ್ಕೆ ತೆರೆಗೆ ಬರುತ್ತಿದೆ. ಈ ಸಿನಿಮಾ ಕನ್ನಡದ ‘ಉಗ್ರಂ’ ರೀಮೇಕ್ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿಲ್ಲ. ಸಿನಿಮಾದಲ್ಲಿ ಪ್ರಭಾಸ್ ನಾಯಕರಾಗಿದ್ದರೆ, ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಸಹ ಇದ್ದಾರೆ. ಇವರಿಬ್ಬರ ನಡುವಿನ ಸ್ನೇಹ-ವೈರತ್ವವೇ ಸಿನಿಮಾದ ಕತೆ.

ಪ್ರಶಾಂತ್ ನೀಲ್ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ಶೃತಿ ಹಾಸನ್ ನಾಯಕಿ. ಕನ್ನಡಿಗರಾದ ಮಧು ಗುರುಸ್ವಾಮಿ, ಗರುಡ ಖ್ಯಾತಿಯ ರಾಮಚಂದ್ರ, ‘ರತ್ನನ್ ಪ್ರಪಂಚ’ ಸಿನಿಮಾದ ನಟ ಪಂಜು, ಭಜರಂಗಿ ಲೋಕಿ ಅವರುಗಳು ಸಹ ನಟಿಸಿದ್ದಾರೆ. ಇವರ ಜೊತೆಗೆ ಜಗಪತಿ ಬಾಬು, ಬಾಲಿವುಡ್ ನಟ ಟೀನು ಆನಂದ್, ಜಾಕಿ ಮಿಶ್ರಾ ಇನ್ನೂ ಹಲವು ನಟರಿದ್ದಾರೆ. ಸಿನಿಮಾಕ್ಕೆ ರವಿ ಬಸ್ರೂರು ಸಂಗೀತ ನೀಡಿದ್ದು, ನಿರ್ಮಾಣ ಮಾಡಿರುವುದು ಹೊಂಬಾಳೆ ಫಿಲಮ್ಸ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ