ಹಿರಿಯ ನಿರ್ಮಾಪಕ ಆರ್‌.ಬಿ. ಚೌಧರಿ ನಿಧನ: ರಜನಿಕಾಂತ್, ಪವನ್ ಕಲ್ಯಾಣ್, ಚಿರಂಜೀವಿ ಕಂಬನಿ

ಭೀಕರ ರಸ್ತೆ ಅಪಘಾತದಲ್ಲಿ ಹಿರಿಯ ನಿರ್ಮಾಪಕ ಆರ್​.ಬಿ. ಚೌಧರಿ ಅವರು ನಿಧನರಾಗಿದ್ದಾರೆ. ಅವರ ಅಗಲಿಕೆಗೆ ಅನೇಕ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ. ಮೆಗಾ ಸ್ಟಾರ್ ಚಿರಂಜೀವಿ, ರಜನಿಕಾಂತ್, ಪವನ್ ಕಲ್ಯಾಣ್, ಖುಷ್ಬೂ ಸುಂದರ್ ಸೇರಿದಂತೆ ಹಲವರು ಆರ್.ಬಿ. ಚೌಧರಿ ಜೊತೆಗಿನ ತಮ್ಮ ಒಡನಾಟವನ್ನು ಸ್ಮರಿಸಿದ್ದಾರೆ.

ಹಿರಿಯ ನಿರ್ಮಾಪಕ ಆರ್‌.ಬಿ. ಚೌಧರಿ ನಿಧನ: ರಜನಿಕಾಂತ್, ಪವನ್ ಕಲ್ಯಾಣ್, ಚಿರಂಜೀವಿ ಕಂಬನಿ
Rb Choudary, Chiranjeevi, Rajinikanth

Updated on: May 06, 2026 | 7:20 AM

ದಕ್ಷಿಣ ಭಾರತದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ‘ಸೂಪರ್ ಗುಡ್ ಫಿಲ್ಮ್ಸ್’ ಸಂಸ್ಥಾಪಕ ಹಾಗೂ ಹಿರಿಯ ನಿರ್ಮಾಪಕ ಆರ್‌.ಬಿ. ಚೌಧರಿ (RB Choudary) ಅವರು ಮಂಗಳವಾರ (ಮೇ 5) ರಾಜಸ್ಥಾನದ ಉದಯಪುರ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಅವರ ಪಾರ್ಥಿವ ಶರೀರವನ್ನು ಇಂದು (ಮೇ 6) ಚೆನ್ನೈಗೆ ತರಲಾಗುವುದು ಎಂದು ತಿಳಿದುಬಂದಿದೆ. ಅನೇಕ ಯುವ ಪ್ರತಿಭೆಗಳಿಗೆ ಹಾಗೂ ಖ್ಯಾತ ನಟರಿಗೆ ಬ್ರೇಕ್ ನೀಡಿದ್ದ ಚೌಧರಿ ಅವರ ಹಠಾತ್ ನಿಧನ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಆಘಾತ ಮೂಡಿಸಿದೆ. ಚಿತ್ರರಂಗದ ದಿಗ್ಗಜರಾದ ರಜನಿಕಾಂತ್, ಚಿರಂಜೀವಿ (Chiranjeevi), ಪವನ್ ಕಲ್ಯಾಣ್ ಸೇರಿದಂತೆ ಹಲವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

1. ರಾಜಸ್ಥಾನದ ಉದಯಪುರ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತ.

2. ದಕ್ಷಿಣ ಭಾರತದ ಹಿರಿಯ ನಿರ್ಮಾಪಕ ಆರ್​.ಬಿ. ಚೌಧರಿ ನಿಧನ.

3. ಚೌಧರಿ ನಿಧನಕ್ಕೆ ಚಿತ್ರರಂಗದ ಹಲವರು ಕಂಬನಿ ಮಿಡಿಯುತ್ತಿದ್ದಾರೆ.

ನಟ ಹಾಗೂ ರಾಜಕಾರಣಿ ಪವನ್ ಕಲ್ಯಾಣ್ ಅವರು ಎಕ್ಸ್ (X) ಖಾತೆಯಲ್ಲಿ ಸಂತಾಪ ಸೂಚಿಸಿದ್ದು, ‘ಖ್ಯಾತ ನಿರ್ಮಾಪಕ ಆರ್‌.ಬಿ. ಚೌಧರಿ ಅವರ ಅಗಲಿಕೆ ನನ್ನನ್ನು ಸ್ತಬ್ಧಗೊಳಿಸಿದೆ. ಉದಯಪುರದಲ್ಲಿ ನಡೆದ ಅಪಘಾತದಲ್ಲಿ ಅವರು ಮೃತಪಟ್ಟಿದ್ದಾರೆ ಎಂಬ ಸುದ್ದಿಯನ್ನು ನಂಬಲು ಸಾಧ್ಯವಾಗುತ್ತಿಲ್ಲ. ನನ್ನ ಅಭಿನಯದ ‘ಸುಸ್ವಾಗತಂ’ ಚಿತ್ರವನ್ನು ಅವರೇ ನಿರ್ಮಿಸಿದ್ದರು. ಕುಟುಂಬ ಸಮೇತ ನೋಡಬಹುದಾದ ಕಥೆಗಳನ್ನು ಆಯ್ಕೆ ಮಾಡುವಲ್ಲಿ ಅವರು ಎತ್ತಿದ ಕೈ. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಬರೆದುಕೊಂಡಿದ್ದಾರೆ.

ಸೂಪರ್ ಸ್ಟಾರ್ ರಜನಿಕಾಂತ್ ಅವರು ಕೂಡ ಕಂಬನಿ ಮಿಡಿದಿದ್ದಾರೆ. ‘ನನ್ನ ಆತ್ಮೀಯ ಗೆಳೆಯ ಆರ್‌.ಬಿ. ಚೌಧರಿ ಅದ್ಭುತ ಮನುಷ್ಯ ಮತ್ತು ಶ್ರೇಷ್ಠ ನಿರ್ಮಾಪಕ. ಅದೆಷ್ಟೋ ಯುವ ನಿರ್ದೇಶಕರಿಗೆ ಅವರು ಅವಕಾಶ ನೀಡಿದ್ದರು. ಅವರ ಅಕಾಲಿಕ ಮರಣ ನನಗೆ ತೀವ್ರ ದುಃಖ ತಂದಿದೆ’ ಎಂದು ಅವರು ಪೋಸ್ಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.

‘ಲೆಜೆಂಡರಿ ನಿರ್ಮಾಪಕರಾದ ಆರ್.ಬಿ. ಚೌಧರಿ ಅವರ ಹಠಾತ್ ಮತ್ತು ದುರಂತ ನಿಧನದ ಸುದ್ದಿ ಕೇಳಿ ಮನಸ್ಸಿಗೆ ತೀವ್ರ ಆಘಾತವಾಗಿದೆ. ನನಗೆ ಅವರು ಹಲವು ವರ್ಷಗಳಿಂದ ಪರಿಚಯವಿದ್ದರು ಮತ್ತು ಇತ್ತೀಚೆಗೆ ಸೂಪರ್ ಗುಡ್ ಫಿಲ್ಮ್ಸ್ ಸಂಸ್ಥೆಯ ಮೂಲಕ ನನ್ನ ‘ಗಾಡ್ ಫಾದರ್’ ಚಿತ್ರದಲ್ಲಿ ಅವರೊಂದಿಗೆ ಕೆಲಸ ಮಾಡಿದ್ದೆ. ಅವರು ಅದೆಷ್ಟೋ ಪ್ರತಿಭಾವಂತ ನಿರ್ದೇಶಕರು ಮತ್ತು ನಟರ ವೃತ್ತಿಜೀವನವನ್ನು ರೂಪಿಸಿದ್ದಾರೆ ಹಾಗೂ ಅಸಂಖ್ಯಾತ ಕಥೆಗಳಿಗೆ ಜೀವ ತುಂಬಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ಅವರ ಕೊಡುಗೆ ಪದಗಳಿಗೆ ಮೀರಿದ್ದು. ಅವರ ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಸಂತಾಪಗಳು. ಈ ಊಹಿಸಲೂ ಸಾಧ್ಯವಾಗದ ನಷ್ಟವನ್ನು ಭರಿಸುವ ಶಕ್ತಿಯನ್ನು ದೇವರು ಅವರಿಗೆ ನೀಡಲಿ’ ಎಂದು ಚಿರಂಜೀವಿ ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಖ್ಯಾತ ನಿರ್ಮಾಪಕ ಆರ್.ಬಿ. ಚೌಧರಿ ನಿಧನ; ರಾಜಸ್ಥಾನದಲ್ಲಿ ಭೀಕರ ರಸ್ತೆ ಅಪಘಾತ

‘ಆರ್.ಬಿ. ಚೌಧರಿ ಸರ್ ಇನ್ನು ನಮ್ಮೊಂದಿಗಿಲ್ಲ ಎಂದು ತಿಳಿಯಲು ತುಂಬಾ ಬೇಸರವಾಗುತ್ತಿದೆ. ಅವರ ಅಕಾಲಿಕ ನಿಧನವು ಆಘಾತಕಾರಿಯಾಗಿದೆ. ಅವರ ಬ್ಯಾನರ್ ಅಡಿಯಲ್ಲಿ ನಾನು ಸಾಕಷ್ಟು ಸಿನಿಮಾಗಳನ್ನು ಮಾಡಿದ್ದೇನೆ. ಅವರು ಚಿತ್ರರಂಗದ ಅತ್ಯಂತ ಗೌರವಾನ್ವಿತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಯಾವಾಗಲೂ ನಗುಮುಖದ ಮತ್ತು ಆತ್ಮವಿಶ್ವಾಸದ ಹಸ್ತಲಾಘವ ನೀಡುತ್ತಿದ್ದ ವ್ಯಕ್ತಿಯಾಗಿ ನಾನು ಅವರನ್ನು ನೆನಪಿಸಿಕೊಳ್ಳುತ್ತೇನೆ. ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನನ್ನ ಸಂತಾಪಗಳು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಓಂ ಶಾಂತಿ’ ಎಂದು ನಟಿ ಖುಷ್ಬೂ ಸಂತಾಪ ಸೂಚಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us