ತೆಲುಗು ಚಿತ್ರರಂಗದಲ್ಲಿ ‘ಮಾಫಿಯಾ’, ಸಿನಿಮಾಗಳ ಗುಣಮಟ್ಟಕ್ಕೆ ಹೊಡೆತ
Telugu movie Industry: ತೆಲುಗು ಚಿತ್ರರಂಗ ಭಾರತದ ಅತ್ಯಂತ ಶ್ರೀಮಂತ ಚಿತ್ರರಂಗ. ಭಾರತದಲ್ಲಿ ಅತಿ ಹೆಚ್ಚು ಹಣ ಗಳಿಸುವ ಚಿತ್ರರಂಗವೂ ಹೌದು. ಹಲವು ಟಾಪ್ ಸ್ಟಾರ್ ನಟರು, ನಿರ್ದೇಶಕರನ್ನು ತೆಲುಗು ಚಿತ್ರರಂಗ ಹೊಂದಿದೆ. ಆದರೆ ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಸಮಸ್ಯೆಗಳು ಸಹ ಇವೆ. ಇದೀಗ ನಿರ್ಮಾಪಕರೊಬ್ಬರು ತೆಲುಗು ಚಿತ್ರರಂಗದ ಮಾಫಿಯಾ ಬಗ್ಗೆ ಮಾತನಾಡಿದ್ದಾರೆ.

ತೆಲುಗು ಚಿತ್ರರಂಗ (Tollywood) ಭಾರತದ ಅತ್ಯಂತ ಯಶಸ್ವಿ ಮತ್ತು ಶ್ರೀಮಂತ ಚಿತ್ರರಂಗ ಎನಿಸಿಕೊಂಡಿದೆ. ಬಾಲಿವುಡ್ಗಿಂತಲೂ ಹೆಚ್ಚಿನ ಆದಾಯವನ್ನು ತೆಲುಗು ಚಿತ್ರರಂಗ ಮಾಡುತ್ತಿದೆ. ಇತ್ತೀಚೆಗಿನ ವರ್ಷಗಳಲ್ಲಿ ವಿಶ್ವ ಭೂಪಟದಲ್ಲಿ ಭಾರತೀಯ ಚಿತ್ರರಂಗದೆಡೆ ಗೌರವ ಹೆಚ್ಚುವಂತೆ ಮಾಡುವಲ್ಲಿ ತೆಲುಗು ಚಿತ್ರರಂಗದ ಪಾತ್ರ ಬಲು ದೊಡ್ಡದಿದೆ. ಆದರೆ ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಆಂತರಿಕ ಸಮಸ್ಯೆಗಳು ಸಹ ಇವೆ. ಇತ್ತೀಚೆಗೆ ಅವು ಬಹಿರಂಗವಾಗುತ್ತಿವೆ.
ಕೆಲ ತಿಂಗಳುಗಳ ಹಿಂದಷ್ಟೆ ತೆಲುಗು ಚಿತ್ರರಂಗದಲ್ಲಿ ಸಮಸ್ಯೆಯೊಂದು ಎದುರಾಗಿತ್ತು. ಪವನ್ ಕಲ್ಯಾಣ್ ‘ಹರಿ ಹರ ವೀರ ಮಲ್ಲು’ ಸಿನಿಮಾ ಬಿಡುಗಡೆಗೆ ಮುಂಚೆ ಚಿತ್ರಮಂದಿರಗಳು ಬಂದ್ ಮಾಡುವುದಾಗಿ ಘೋಷಣೆ ಮಾಡಿದ್ದವು. ಆದರೆ ಆ ಬಂದ್ ಹಿಂದೆ ಕೆಲ ದೊಡ್ಡ ನಿರ್ಮಾಪಕರುಗಳ ಪಿತೂರಿ ಕೆಲಸ ಮಾಡಿದೆ ಎನ್ನಲಾಗಿತ್ತು. ಪವನ್ ಕಲ್ಯಾಣ್ ಸ್ವತಃ ಬಹಿರಂಗ ಪತ್ರ ಬರೆದು ಆ ನಾಲ್ವರು ನಿರ್ಮಾಪಕರಿಗೆ ಎಚ್ಚರಿಕೆ ನೀಡಿದ್ದರು. ಅದು ಭಾರಿ ದೊಡ್ಡ ಸುದ್ದಿಯಾಗಿತ್ತು.
ಇದೀಗ ನಿರ್ಮಾಪಕರೊಬ್ಬರು ತೆಲುಗು ಚಿತ್ರರಂಗದ ಒಳಗಿರುವ ಮಾಫಿಯಾ ಬಗ್ಗೆ ಮಾತನಾಡಿದ್ದಾರೆ. ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾ ನಿರ್ಮಿಸುತ್ತಿರುವ ಹಾಗೂ ಈ ಹಿಂದೆ ಸಹ ಕೆಲವು ದೊಡ್ಡ ಸ್ಟಾರ್ ನಟರುಗಳ ಸಿನಿಮಾ ನಿರ್ಮಾಣ ಮಾಡಿರುವ ಟಿಜಿ ವಿಶ್ವ ಪ್ರಸಾದ್ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ‘ತೆಲುಗು ಚಿತ್ರರಂಗದಲ್ಲಿ ಹಲವು ವಿಭಾಗಗಳಲ್ಲಿಯೂ, ಹಲವು ವಿಧದ ಮಾಫಿಯಾ ಕೆಲಸ ಮಾಡುತ್ತಿದೆ’ ಎಂದಿದ್ದಾರೆ.
ಇದನ್ನೂ ಓದಿ:‘ಕಾಂತಾರ’ ಚಿತ್ರಕ್ಕೆ ಬರಲಿದೆ ಮತ್ತೊಂದು ಪಾರ್ಟ್? ಟಾಲಿವುಡ್ ಖ್ಯಾತ ಹೀರೋಗೆ ಮಣೆ?
ಟಿಜಿ ವಿಶ್ವ ಪ್ರಸಾದ್ ಈ ಹಿಂದೆ ಪವನ್ ಕಲ್ಯಾಣ್, ಸಾಯಿ ಧರಮ್ ತೇಜ್ ನಟಿಸಿದ್ದ ‘ಬ್ರೋ’ ಸಿನಿಮಾ ನಿರ್ಮಾಣ ಮಾಡಿದ್ದರು. ಆ ಸಿನಿಮಾದ ವಿಎಫ್ಎಕ್ಸ್ ಮತ್ತು ಸೌಂಡ್ ವಿಷಯದಲ್ಲಿ ಅವರಿಗೆ ಭಾರಿ ಮೋಸ ಮಾಡಲಾಯ್ತತಂತೆ. ಸಿನಿಮಾದ ವಿಎಫ್ಎಕ್ಸ್ ಕುರಿತಾಗಿ ನಿರ್ದೇಶಕರಿಗೆ ಸ್ಪಷ್ಟತೆ ಇತ್ತು, ಆದರೆ ವಿಎಫ್ಎಕ್ಸ್ ಸ್ಟುಡಿಯೋಗಳನ್ನು ಹೊಂದಿರುವವರು ನಿರ್ದೇಶಕರ ಮೇಲೆ ಪ್ರಭಾವ ಬೀರಿ ತಮಗೆ ಬೇಕಾದಂತೆ, ತಮಗೆ ಲಾಭವಾಗುವಂತೆ, ಶ್ರಮ ಕಡಿಮೆ ಆಗುವಂತೆ ವಿಎಫ್ಎಕ್ಸ್ ಮಾಡಿದರು. ನನಗೆ ತಾಂತ್ರಿಕ ಅಂಶಗಳು ಸಾಕಷ್ಟು ತಿಳಿದಿದೆ. ನಾನೂ ಸಹ ಅದೇ ಲೈನ್ನಲ್ಲಿ ಕೆಲಸ ಮಾಡಿದವನು ಆದರೆ ನನಗೂ ಸಹ ಏನೂ ಮಾಡಲಾಗದ ಸ್ಥಿತಿಗೆ ತಲುಪಿಸಿಬಿಟ್ಟರು’ ಎಂದಿದ್ದಾರೆ.
ಇನ್ನು ಡ್ಯಾನ್ಸರ್ಗಳ ವಿಭಾಗದಲ್ಲಿಯೂ ಇದೇ ರೀತಿ ಇದ್ದು, ಕೆಲವು ದೊಡ್ಡ ಕೊರಿಯೋಗ್ರಾಫರ್ಗಳು ಹೊಸ ಕಲಾವಿದರನ್ನು ಬೆಳೆಯಲು ಬಿಡುವುದಿಲ್ಲ. ಉದ್ದೇಶಪೂರ್ವಕವಾಗಿ ಅವರನ್ನು ಥುಳಿಯುವ ಪ್ರಯತ್ನ ಮಾಡುತ್ತಾರೆ. ಅವರ ಡಿಮ್ಯಾಂಡುಗಳು, ಒತ್ತಡಗಳಿಂದ ಬೇಸತ್ತು ನಾನು ಮುಂಬೈನಿಂದ ಡ್ಯಾನ್ಸರ್ ಮತ್ತು ಕೊರಿಯೋಗ್ರಾಫರ್ಗಳನ್ನು ಕರೆಸಿ ಚಿತ್ರೀಕರಣ ಮಾಡಿಸಿದ್ದೆ’ ಎಂದು ಬೇಸರದಿಂದ ಹೇಳಿಕೊಂಡಿದ್ದಾರೆ ವಿಶ್ವ ಪ್ರಸಾದ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




