‘ಕಲ್ಕಿ 2898 ಎಡಿ’ ಶೋ ವೇಳೆ ಪಿವಿಆರ್ ಒಳಗೆ ಸುರಿಯಿತು ಮಳೆ ನೀರು; ವಿಡಿಯೋ ವೈರಲ್​

ಗುಣಮಟ್ಟ ಚೆನ್ನಾಗಿ ಇರುತ್ತದೆ ಎಂಬ ಕಾರಣಕ್ಕೆ ಪ್ರೇಕ್ಷಕರು ಮಲ್ಟಿಪ್ಲೆಕ್ಸ್​ಗೆ ಹೋಗುತ್ತಾರೆ. ಆದರೆ ಹೈದರಾಬಾದ್​ನ ಪಿವಿಆರ್​ ಒಳಗೆ ಮಳೆ ಸುರಿದಿದೆ! ‘ಕಲ್ಕಿ 2898 ಎಡಿ’ ಸಿನಿಮಾ ಪ್ರದರ್ಶನ ಆಗುವಾಗಲೇ ಮಲ್ಟಿಪ್ಲೆಕ್ಸ್​ ಒಳಗೆ ಮಳೆ ನೀರು ಬೀಳಲು ಆರಂಭಿಸಿದೆ. ಇದರಿಂದ ಪ್ರೇಕ್ಷಕರಿಗೆ ಕಿರಿಕಿರಿ ಆಗಿದೆ. ಅಲ್ಲದೇ, ಶಾರ್ಟ್​ ಸರ್ಕ್ಯೂಟ್​ ಆಗಬಹುದು ಎಂಬ ಆತಂಕ ಕಾಡಿದೆ.

‘ಕಲ್ಕಿ 2898 ಎಡಿ’ ಶೋ ವೇಳೆ ಪಿವಿಆರ್ ಒಳಗೆ ಸುರಿಯಿತು ಮಳೆ ನೀರು; ವಿಡಿಯೋ ವೈರಲ್​
ಪಿವಿಆರ್​ ಒಳಗೆ ಸುರಿದ ಮಳೆ ನೀರು

Updated on: Jul 15, 2024 | 10:30 PM

ಹಲವು ಕಡೆಗಳಲ್ಲಿ ಧಾರಾಕಾರ ಮಳೆ ಆಗುತ್ತಿದೆ. ಅಚ್ಚರಿ ಏನೆಂದರೆ, ಹೈದರಾಬಾದ್​ನಲ್ಲಿ ಚಿತ್ರಮಂದಿರದ ಒಳಗೆ ಮಳೆ ನೀರು ಸುರಿದಿದೆ. ಅದು ಕೂಡ ಮಲ್ಟಿಪ್ಲೆಕ್ಸ್​ನಲ್ಲಿ! ಪ್ರಭಾಸ್​ ನಟನೆ ‘ಕಲ್ಕಿ 2898 ಎಡಿ’ ಸಿನಿಮಾ ಎಲ್ಲ ಕಡೆಗಳಲ್ಲಿ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಹೈದರಾಬಾದ್​ನ ಪಿವಿಆರ್​ ಮಲ್ಟಿಪ್ಲೆಕ್ಸ್​ನಲ್ಲಿ ಈ ಸಿನಿಮಾವನ್ನು ನೋಡುತ್ತಿದ್ದ ಪ್ರೇಕ್ಷಕರಿಗೆ ಶಾಕ್​ ಆಗಿದೆ. ಅದಕ್ಕೆ ಕಾರಣ ಆಗಿದ್ದು ಮಳೆ ನೀರು. ಹೌದು, ಮಲ್ಟಿಪ್ಲೆಕ್ಸ್​ನಲ್ಲಿ ಸಿನಿಮಾ ಪ್ರದರ್ಶನ ಆಗುತ್ತಿರುವಾಗಲೇ ಛಾವಣಿಯಿಂದ ಮಳೆ ನೀರು ಸುರಿದಿದೆ. ಈ ಸಂದರ್ಭದ ವಿಡಿಯೋ ವೈರಲ್​ ಆಗಿದೆ.

ಸಿನಿಮಾ ಹಾಲ್​ ಒಳಗೆ ಮಳೆ ನೀರು ಬೀಳಲು ಆರಂಭಿಸಿದ ನಂತರವೂ ಪಿವಿಆರ್​ನವರು ‘ಕಲ್ಕಿ 2898 ಎಡಿ’ ಸಿನಿಮಾದ ಪ್ರದರ್ಶನವನ್ನು ಮುಂದುವರಿಸಿದ್ದಾರೆ ಎನ್ನಲಾಗಿದೆ. ಇದರಿಂದ ಪ್ರೇಕ್ಷಕರಿಗೆ ಸಖತ್​ ಕಿರಿಕಿರಿ ಆಗಿದೆ. ಈ ಬಗ್ಗೆ ಮ್ಯಾನೇಜ್​ಮೆಂಟ್ ಬಳಿ ಪ್ರೇಕ್ಷಕರು ಪ್ರಶ್ನೆ ಮಾಡಿದ್ದಾರೆ. ಆಗ ಅವರಿಂದ ಉಡಾಫೆಯ ಉತ್ತರ ಬಂದಿದೆ. ಬೇಕಿದ್ದರೆ ಪೊಲೀಸರಿಗೆ ದೂರು ನೀಡಿ ಎಂದು ಪಿವಿಆರ್​ನವರು ಹೇಳಿದ್ದನ್ನು ಕೇಳಿ ಪ್ರೇಕ್ಷಕರು ಗರಂ ಆಗಿದ್ದಾರೆ.

ಇದನ್ನೂ ಓದಿ: ಅಶ್ಲೀಲತೆ, ರಕ್ತಪಾತ ಇಲ್ಲದೇ ಸಾವಿರ ಕೋಟಿ ರೂ. ಗಳಿಕೆ: ‘ಅನಿಮಲ್​’ ಚಿತ್ರಕ್ಕೆ ತಿವಿದ ‘ಕಲ್ಕಿ 2898 ಎಡಿ’ ನಿರ್ದೇಶಕ

ಏಕಪರದೆ ಚಿತ್ರಮಂದಿರಗಳಿಗೆ ಹೋಲಿಸಿದರೆ ಪಿವಿಆರ್​ ರೀತಿಯ ಮಲ್ಟಿಪ್ಲೆಕ್ಸ್​ಗಳಲ್ಲಿ ಸಿನಿಮಾ ಟಿಕೆಟ್​ ದರ ದುಬಾರಿ ಆಗಿರುತ್ತದೆ. ಅಲ್ಲದೇ ತಿಂಡಿ-ತಿನಿಸು ಹಾಗೂ ಪಾನಿಯಗಳ ಬೆಲೆ ಕೂಡ ಹೆಚ್ಚಿರುತ್ತದೆ. ಪಾರ್ಕಿಂಗ್​ಗೂ ಅಧಿಕ ಹಣ ತೆರಬೇಕು. ಇಷ್ಟೆಲ್ಲ ಹಣ ನೀಡಿದ ನಂತರವೂ ಮಳೆ ನೀರು ಸೋರುವ ರೀತಿಯಲ್ಲಿ ಮಲ್ಟಿಪ್ಲೆಕ್ಸ್​ ಚಾವಣಿ ಇರುವುದು ಕಂಡು ಪ್ರೇಕ್ಷಕರಿಗೆ ಸಖತ್​ ಕೋಪ ಬಂದಿದೆ.

ಮಲ್ಟಿಪ್ಲೆಕ್ಸ್​ ಒಳಗೆ ನೂರಾರು ಬಗೆಯ ವಿದ್ಯುತ್​ ವೈರ್​ ಇರುತ್ತವೆ. ಅನೇಕ ಎಲೆಕ್ಟ್ರಾನಿಕ್​ ಉಪಕರಣಗಳು ಕಾರ್ಯನಿರ್ವಹಿಸುತ್ತ ಇರುತ್ತವೆ. ಇಂಥ ಸಂದರ್ಭದಲ್ಲಿ ಮಳೆ ನೀರು ಸೋರಿಕೆ ಆದರೆ ಶಾರ್ಟ್​ ಸರ್ಕ್ಯೂಟ್​ ಆಗುವ ಸಂಭವ ಹೆಚ್ಚಿರುತ್ತದೆ. ಆ ಕಾರಣದಿಂದ, ‘ಕಲ್ಕಿ 2898 ಎಡಿ’ ಸಿನಿಮಾ ಪ್ರದರ್ಶನದ ವೇಳೆ ಮಳೆ ನೀರು ಸುರಿದಾಗ ಪ್ರೇಕ್ಷಕರಿಗೆ ಆತಂಕ ಆಗಿದೆ. ಮಲ್ಟಿಪ್ಲೆಕ್ಸ್​ನವರ ನಿರ್ಲಕ್ಷ್ಯಕ್ಕೆ ನೆಟ್ಟಿಗರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us