ಜಾನ್ವಿ ಕಪೂರ್ ಮೈಮೇಲೆ ಬೀಳಲು ಬಂದ ರಾಮ್ ಚರಣ್ ಅಭಿಮಾನಿ; ವಿಡಿಯೋ ವೈರಲ್

ಬುಚ್ಚಿ ಬಾಬು ಸನಾ ನಿರ್ದೇಶನದ ‘ಪೆದ್ದಿ’ ಚಿತ್ರ ಜೂನ್ 4ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಅದಕ್ಕಾಗಿ ಭರ್ಜರಿ ಪ್ರಚಾರ ಮಾಡಲಾಗುತ್ತಿದೆ. ಪ್ರಚಾರ ಕಾರ್ಯಕ್ರಮದ ವೇಳೆ ಕೆಲವು ಅಭಿಮಾನಿಗಳು ಅತಿಯಾಗಿ ವರ್ತಿಸುತ್ತಿದ್ದಾರೆ. ಅಭಿಮಾನಿಯೊಬ್ಬನ ನಡೆಯಿಂದಾಗಿ ಸಿನಿಮಾದ ನಟಿ ಜಾನ್ವಿ ಕಪೂರ್ ಅವರು ಗಾಬರಿ ಆಗಿದ್ದಾರೆ.

ಜಾನ್ವಿ ಕಪೂರ್ ಮೈಮೇಲೆ ಬೀಳಲು ಬಂದ ರಾಮ್ ಚರಣ್ ಅಭಿಮಾನಿ; ವಿಡಿಯೋ ವೈರಲ್
Janhvi Kapoor

Updated on: Jun 02, 2026 | 3:11 PM

ಮೆಗಾ ಪವರ್ ಸ್ಟಾರ್ ರಾಮ್ ಚರಣ್ (Ram Charan) ಮತ್ತು ಬಾಲಿವುಡ್ ನಟಿ ಜಾನ್ವಿ ಕಪೂರ್ (Janhvi Kapoor) ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ತೆಲುಗು ಚಿತ್ರ ‘ಪೆದ್ದಿ’ (Peddi) ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಈ ಕ್ರೀಡಾ ಆಧಾರಿತ ಆ್ಯಕ್ಷನ್ ಡ್ರಾಮಾ ಸಿನಿಮಾದ ಪ್ರಚಾರಕ್ಕಾಗಿ ಚಿತ್ರತಂಡ ಸೋಮವಾರ (ಜೂನ್ 1) ಆಂಧ್ರಪ್ರದೇಶದ ವಿಜಯವಾಡದಲ್ಲಿ ಭರ್ಜರಿ ಪ್ರಚಾರ ಕಾರ್ಯಕ್ರಮವನ್ನು ಆಯೋಜಿಸಿತ್ತು. ಆದರೆ, ಈ ಈವೆಂಟ್‌ನಲ್ಲಿ ನಡೆದ ಒಂದು ಅನಿರೀಕ್ಷಿತ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಕಾರ್ಯಕ್ರಮದಲ್ಲಿ ರಾಮ್ ಚರಣ್, ಜಾನ್ವಿ ಕಪೂರ್ ಮತ್ತು ನಿರ್ದೇಶಕ ಬುಚ್ಚಿ ಬಾಬು ಸನಾ ವೇದಿಕೆಯ ಮೇಲಿದ್ದಾಗ, ಅಭಿಮಾನಿಯೊಬ್ಬ ಭದ್ರತಾ ವಲಯವನ್ನು ದಾಟಿ ಒಮ್ಮೆಗೆ ವೇದಿಕೆಯತ್ತ ನುಗ್ಗಿದ್ದಾನೆ. ರಾಮ್ ಚರಣ್ ಅವರಂತೆಯೇ ಹೇರ್‌ಸ್ಟೈಲ್ ಮಾಡಿಕೊಂಡಿದ್ದ ಈ ಅಭಿಮಾನಿ, ನೇರವಾಗಿ ನಟನ ಬಳಿಗೆ ಓಡಿ ಬಂದಿದ್ದಾನೆ. ಅವನು ವೇದಿಕೆಗೆ ನುಗ್ಗಿದ ರಭಸಕ್ಕೆ ರಾಮ್ ಚರಣ್ ಪಕ್ಕದಲ್ಲೇ ಕುಳಿತಿದ್ದ ಜಾನ್ವಿ ಕಪೂರ್ ಒಂದು ಕ್ಷಣ ತೀವ್ರವಾಗಿ ಬೆಚ್ಚಿಬಿದ್ದಿದ್ದಾರೆ.

ಜಾನ್ವಿ ಕಪೂರ್ ಅವರ ಮುಖದಲ್ಲಿ ಅಸಹಜತೆ ಎದ್ದು ಕಾಣುತ್ತಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿ ಹಾಗೂ ರಾಮ್ ಚರಣ್ ಅವರ ವೈಯಕ್ತಿಕ ಬಾಡಿಗಾರ್ಡ್, ಅಂತಾರಾಷ್ಟ್ರೀಯ ಎಂಎಂಎ ಫೈಟರ್ ಆಗಿರುವ ಕೆವಿನ್ ಕುಂಟ, ಆ ಅಭಿಮಾನಿಯನ್ನು ಹಿಡಿದು ಹಿಂದಕ್ಕೆ ಎಳೆದಿದ್ದಾರೆ. ಈ ವೇಳೆ ವೇದಿಕೆಯ ಮೇಲೆ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಆದಾಗ್ಯೂ, ಪರಿಸ್ಥಿತಿ ತಿಳಿಯಾದ ನಂತರ ಆ ಅಭಿಮಾನಿಗೆ ರಾಮ್ ಚರಣ್ ಅವರನ್ನು ಭೇಟಿ ಮಾಡಲು ಅವಕಾಶ ನೀಡಲಾಯಿತು. ಮತ್ತೊಂದು ವಿಡಿಯೋದಲ್ಲಿ, ಆತ ರಾಮ್ ಚರಣ್ ಕಾಲಿಗೆ ಬಿದ್ದು ಕೃತಜ್ಞತೆ ಸಲ್ಲಿಸುತ್ತಿರುವುದು ಕಂಡುಬಂದಿದೆ. ಇಷ್ಟು ದೊಡ್ಡ ಜನಸಂದಣಿಯ ನಡುವೆಯೂ ಪರಿಸ್ಥಿತಿಯನ್ನು ಅತ್ಯಂತ ಜಾಣ್ಮೆಯಿಂದ ನಿಭಾಯಿಸಿದ ಬಾಡಿಗಾರ್ಡ್ ಕೆವಿನ್ ಕುಂಟ ಅವರ ಸಮಯಪ್ರಜ್ಞೆಯನ್ನು ನೆಟ್ಟಿಗರು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ.

ಇದನ್ನೂ ಓದಿ: ‘ಪೆದ್ದಿ’ ಸಿನಿಮಾ ಐಟಂ ಹಾಡಿಗೆ ಶ್ರುತಿ ಹಾಸನ್ ಪಡೆದ ಸಂಭಾವನೆ ಎಷ್ಟು?

ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ತಮ್ಮ ಬಾಡಿಗಾರ್ಡ್ ಕೆವಿನ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸ್ಟಾರ್ ಆಗುತ್ತಿರುವ ಬಗ್ಗೆ ರಾಮ್ ಚರಣ್ ತಮಾಷೆಯಾಗಿ ಮಾತನಾಡಿದ್ದರು. ‘ನೀವೆಲ್ಲರೂ ಸೇರಿ ಅವನನ್ನು ತುಂಬಾ ಫೇಮಸ್ ಮಾಡಿಬಿಟ್ಟಿದ್ದೀರಿ. ಅದಕ್ಕೇ ನಾನು ಈಗ ಅವನನ್ನು ಜಾಸ್ತಿ ಹೊರಗಡೆ ಬಿಡುತ್ತಿಲ್ಲ. ಯಾರಾದರೂ ಅವನಿಗೆ ಚಾಕೊಲೇಟ್ ಅಥವಾ ಬಿಸ್ಕೆಟ್ ಆಮಿಷ ಒಡ್ಡಿ ನನ್ನ ಬಗ್ಗೆ ಸೀಕ್ರೆಟ್ಸ್ ತಿಳಿದುಕೊಳ್ಳಬಹುದು’ ಎಂದು ಹಾಸ್ಯ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:09 pm, Tue, 2 June 26

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us