Rocketry Trailer: ದೇಶದ್ರೋಹ ಆರೋಪ ಹೊತ್ತಿದ್ದ ನಂಬಿ ನಾರಾಯಣ್​ ಬಗ್ಗೆ ಮಾಧವನ್​ ಸಿನಿಮಾ! ‘ರಾಕೆಟ್ರಿ’ ಚಿತ್ರದ ರಿಯಲ್​ ಕಥೆ ಏನು?

R Madhavan: ‘ರಾಕೆಟ್ರಿ: ದಿ ನಂಬಿ ಎಫೆಕ್ಟ್​’ ಸಿನಿಮಾದ ಟ್ರೇಲರ್​ ಬಿಡುಗಡೆ ಆಗಿದೆ. ಮಾಧವನ್​ ಅವರ ಕೆಲಸ ಕಂಡು ಎಲ್ಲರೂ ಶಹಭಾಷ್​ ಎನ್ನುತ್ತಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೆ ಸೆಲೆಬ್ರಿಟಿಗಳಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Rocketry Trailer: ದೇಶದ್ರೋಹ ಆರೋಪ ಹೊತ್ತಿದ್ದ ನಂಬಿ ನಾರಾಯಣ್​ ಬಗ್ಗೆ ಮಾಧವನ್​ ಸಿನಿಮಾ! ‘ರಾಕೆಟ್ರಿ’ ಚಿತ್ರದ ರಿಯಲ್​ ಕಥೆ ಏನು?
ಆರ್​. ಮಾಧವನ್​ - ನಂಬಿ ನಾರಾಯಣ್​
Edited By:

Updated on: Apr 03, 2021 | 8:26 AM

ಬಹುಭಾಷಾ ನಟ ಆರ್​. ಮಾಧವನ್​ ಅವರು ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಇಷ್ಟು ವರ್ಷಗಳ ಅನುಭವವನ್ನು ಇಟ್ಟುಕೊಂಡು ಈಗ ಅವರು ‘ರಾಕೆಟ್ರಿ: ದಿ ನಂಬಿ ಎಫೆಕ್ಟ್​’ ಸಿನಿಮಾ ನಿರ್ದೇಶಿಸಿದ್ದಾರೆ. ಈಗ ಈ ಚಿತ್ರದ ಟ್ರೇಲರ್​ ಬಿಡುಗಡೆ ಆಗಿದೆ. ಮಾಧವನ್​ ಅವರ ಕೆಲಸ ಕಂಡು ಎಲ್ಲರೂ ಶಹಭಾಷ್​ ಎನ್ನುತ್ತಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೆ ಸೆಲೆಬ್ರಿಟಿಗಳಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಟ್ರೇಲರ್ ನೋಡಿರುವ ಅಮಿತಾಬ್​ ಬಚ್ಚನ್​, ಪ್ರಿಯಾಂಕಾ ಚೋಪ್ರಾ, ಹೃತಿಕ್​ ರೋಷನ್​, ಅಭಿಷೇಕ್​ ಬಚ್ಚನ್​ ಮುಂತಾದವರು ಫಿದಾ ಆಗಿದ್ದಾರೆ.

ತಮ್ಮ ಚೊಚ್ಚಲ ನಿರ್ದೇಶನದ ಸಿನಿಮಾಗೆ ಮಾಧವನ್​ ಯಾವುದೋ ಕಾಲ್ಪನಿಕ ಕಥೆಯನ್ನು ಆಯ್ಕೆ ಮಾಡಿಕೊಂಡಿಲ್ಲ. ಬದಲಿಗೆ, ಜಾಗತಿಕ ಮಟ್ಟದಲ್ಲಿ ಗಮನ ಸೆಳೆದ ಒಂದು ನೈಜ ಘಟನೆಯನ್ನೇ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಇಸ್ರೋದ ಮಾಜಿ ರಾಕೆಟ್​ ಸೈನ್ಸ್​ ವಿಜ್ಞಾನಿ ನಂಬಿ ನಾರಾಯಣ್​ ಅವರ ಬಯೋಪಿಕ್​ ಆಗಿ ಈ ಸಿನಿಮಾ ಮೂಡಿಬಂದಿದೆ. ಕಮರ್ಷಿಯಲ್​ ಸ್ಯಾಟಲೈಟ್​ ಮಾರುಕಟ್ಟೆಯಲ್ಲಿ ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತೆ ಮಾಡಲು ಪ್ರಯತ್ನಿಸಿದ ವ್ಯಕ್ತಿಯೇ ನಂಬಿ ನಾರಾಯಣ್​. ಆದರೆ ಅಂಥ ವಿಜ್ಞಾನಿ ಜೈಲು ಸೇರಬೇಕಾಗಿ ಬಂದದ್ದು ಮಾತ್ರ ವಿಪರ್ಯಾಸ!

ನಂಬಿ ನಾರಾಯಣ್​ ಒಬ್ಬ ಅಪ್ರತಿಮ ದೇಶಭಕ್ತರಾಗಿದ್ದರು. ಆದರೆ ಅವರ ಮೇಲೆ ದೇಶದ್ರೋಹದ ಆರೋಪ ಹೊರಿಸಲಾಯಿತು. ಇಸ್ರೋದ ಕೆಲವು ಮಾಹಿತಿಗಳನ್ನು ಬೇರೆ ದೇಶಗಳಿಗೆ, ಅದರಲ್ಲೂ ಮುಖ್ಯವಾಗಿ ಪಾಕಿಸ್ತಾನಕ್ಕೆ ಸೋರಿಕೆ ಮಾಡಿದ ಆರೋಪ ನಂಬಿ ನಾರಾಯಣ್​ ಮೇಲೆ ಕೇಳಿಬಂತು.

1994ರಲ್ಲಿ ಕೇರಳ ಪೊಲೀಸರು ವಿದೇಶಿ ಮಹಿಳೆಯೊಬ್ಬರನ್ನು ಬಂಧಿಸಿದರು. ಆಕೆಯ ಮೂಲಕ ಇಸ್ರೋ ವಿಜ್ಞಾನಿಗಳು ಕೆಲವು ಗುಪ್ತ ಮಾಹಿತಿಯನ್ನು ಪಾಕಿಸ್ತಾನಕ್ಕೆ ನೀಡಿದ್ದಾರೆ ಎಂಬುದು ತನಿಖೆ ವೇಳೆ ಗೊತ್ತಾಯಿತು. ಅದೇ ತನಿಖೆಯ ಮುಂದುವರಿದ ಭಾಗವಾಗಿ ನಂಬಿ ನಾರಾಯಣ್​ ಜೊತೆಗೆ ಇಸ್ರೋದ ಮತ್ತೋರ್ವ ವಿಜ್ಞಾನಿ ಡಿ. ಶಶಿಕುಮಾರನ್​ ಅವರನ್ನು ಬಂಧಿಸಿದರು.

ಈ ಘಟನೆ ನಡೆದ 20 ದಿನಗಳ ಒಳಗೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಯಿತು. 1996ರಲ್ಲಿ ನ್ಯಾಯಾಲಯಕ್ಕೆ ಸಿಬಿಐ ತನ್ನ ವರದಿ ಒಪ್ಪಿಸಿತು. ನಂಬಿ ನಾರಾಯಣ್​ ಮೇಲೆ ಹೊರಿಸಿದ್ದ ಎಲ್ಲ ಆರೋಪಗಳು ಸುಳ್ಳು ಎಂದು ಈ ವರದಿಯಲ್ಲಿ ತಿಳಿಸಲಾಗಿತ್ತು. ನಂತರ ಆ ಪ್ರಕರಣದ ಮರುತನಿಖೆ ಮಾಡಿಸುವ ಪ್ರಯತ್ನವನ್ನು ಮಾಡಲಾಯಿತಾದರೂ ಅದನ್ನು ಸುಪ್ರೀಂ ಕೋರ್ಟ್​ ನಿರಾಕರಿಸಿತು.

ಒಟ್ಟಾರೆ ಘಟನೆಗಳಿಂದಾಗಿ ನಂಬಿ ನಾರಾಯಣ್​ ಅವರ ಬದುಕಿಗೆ ಬಹುದೊಡ್ಡ ನಷ್ಟವಾಯಿತು. ಈ ಎಲ್ಲ ವಿವರಗಳನ್ನು ಇಟ್ಟುಕೊಂಡು ಮಾಧವನ್​ ಈ ಸಿನಿಮಾ ಮಾಡಿದ್ದಾರೆ. ನಂಬಿ ನಾರಾಯಣ್​ ಅವರ ಪಾತ್ರದಲ್ಲಿ ಸ್ವತಃ ಮಾಧವನ್​ ನಟಿಸಿದ್ದಾರೆ. ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಅವರೇ ನಿಭಾಯಿಸಿದ್ದಾರೆ. ಹಲವು ಭಾಷೆಗಳಿಗೆ ಡಬ್​ ಆಗಿ ಈ ಚಿತ್ರ ಮೂಡಿಬರುತ್ತಿದೆ. ಸೂರ್ಯ, ಶಾರುಖ್​ ಖಾನ್​ ಅಥಿತಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ನಿಮ್ಮ ಮೇಲೆ ಕ್ರಶ್ ಆಗಿದೆ ಎಂದ ಅಭಿಮಾನಿಗಳಿಗೆ ಮಾಧವನ್‌ ಕೊಟ್ಟ ಉತ್ತರವೇನು ಗೊತ್ತಾ?

(Rocketry The Nambi effect Trailer: Here is the real story of R Madhavan directorial film)

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us