‘ರೇಣುಕಾಸ್ವಾಮಿ ಕುಟುಂಬದ ಬಗ್ಗೆ ಹೇಳಿಕೆ ನೀಡುವಾಗ ಚೂರು ಯೋಚನೆ ಮಾಡಿ’: ಪ್ರಥಮ್

| Updated By: ಮದನ್​ ಕುಮಾರ್​

Updated on: Aug 15, 2024 | 11:03 PM

ರೇಣುಕಾ ಸ್ವಾಮಿ ಕುಟುಂಬವನ್ನು ಭೇಟಿ ಮಾಡಿದ ಪ್ರಥಮ್​ ಅವರು ಸಾಂತ್ವನ ಹೇಳಿದ್ದಾರೆ. ‘ನನ್ನ ಒಂದು ಮಾತಿನಿಂದ ನಿಮಗೆ ನೋವಾಗಿದೆ ಎಂಬುದಾದರೆ ಸಹನಾ ಅವರಿಗೆ ಆಗಿರುವ ನೋವು ಏನು? ನೂರು, ಸಾವಿರ ಪಟ್ಟು ನೋವು ಅವರಿಗೆ ಆಗಿದೆ. ಈ ಕುಟುಂಬ ಹೇಗೆ ಚೇತರಿಸಿಕೊಳ್ಳಬೇಕು? ಅದರ ಬಗ್ಗೆ ಚೂರು ಯೋಚನೆ ಮಾಡಿ’ ಎಂದು ಜನರಿಗೆ ಪ್ರಥಮ್​ ಅವರು ಹೇಳಿದ್ದಾರೆ.

‘ರೇಣುಕಾಸ್ವಾಮಿ ಕುಟುಂಬದ ಬಗ್ಗೆ ಹೇಳಿಕೆ ನೀಡುವಾಗ ಚೂರು ಯೋಚನೆ ಮಾಡಿ’: ಪ್ರಥಮ್
ಪ್ರಥಮ್​
Follow us on

ನಟ ದರ್ಶನ್, ನಟಿ ಪವಿತ್ರಾ ಗೌಡ ಹಾಗೂ ಸಹಚರರ ಮೇಲೆ ಕೊಲೆ ಆರೋಪ ಇದೆ. ಅಶ್ಲೀಲ ಸಂದೇಶ ಕಳಿಸಿದ ಎಂಬ ಕಾರಣಕ್ಕೆ ರೇಣುಕಾಸ್ವಾಮಿ ಎಂಬಾತನನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದು ಹತ್ಯೆ ಮಾಡಿದ ಆರೋಪದಲ್ಲಿ ಡಿ-ಗ್ಯಾಂಗ್​ನವರು ಜೈಲು ಸೇರಿದ್ದಾರೆ. ಅತ್ತ, ರೇಣುಕಾಸ್ವಾಮಿ ಕುಟುಂಬದವರು ನೋವಿನಲ್ಲಿ ದಿನ ಕಳೆಯುವಂತಾಗಿದೆ. ಅವರ ನಿವಾಸಕ್ಕೆ ಕೆಲವು ಸೆಲೆಬ್ರಿಟಿಗಳು ಭೇಟಿ ನೀಡಿ ಈಗಾಗಲೇ ಸಾಂತ್ವನ ಹೇಳಿದ್ದಾರೆ. ಈಗ ನಟ ಪ್ರಥಮ್​ ಕೂಡ ಚಿತ್ರದುರ್ಗಕ್ಕೆ ತೆರಳಿ ರೇಣುಕಾ ಸ್ವಾಮಿಯ ಮನೆಯವರಿಗೆ ಧೈರ್ಯ ತುಂಬಲು ಪ್ರಯತ್ನಿಸಿದ್ದಾರೆ.

ಕಣ್ಣೀರು ಹಾಕುತ್ತಿರುವ ರೇಣುಕಾಸ್ವಾಮಿ ತಂದೆ-ತಾಯಿ ಜೊತೆ ಮಾತನಾಡಿದ ಬಳಿಕ ಪ್ರಥಮ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ತಳಿ ಉದ್ಘಾಟನೆಗೆ ಬಂದಿದ್ದೆ. ಮನಸ್ಸು ನೋಯಿಸಲು ಅಥವಾ ಯಾರನ್ನೋ ಸಮರ್ಥನೆ ಮಾಡಿಕೊಳ್ಳಲು ನಾನು ಇಲ್ಲಿಗೆ ಬಂದಿಲ್ಲ. ನನ್ನ ಮನಸ್ಸಿನಲ್ಲಿ ಒಂದು ವಿಚಾರ ಕಾಡುತ್ತಿತ್ತು. ತುಂಬಾ ಹೀನಾಯವಾಗಿ ಸಾವಾಗಿತ್ತು. ಸಹನಾ ಅವರನ್ನು ಮಾತನಾಡಿಸಬೇಕು ಎಂಬುದು ನನ್ನ ತಲೆಯಲ್ಲಿತ್ತು’ ಎಂದು ಪ್ರಥಮ್​ ಹೇಳಿದ್ದಾರೆ.

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆಗೆ 699 ರೂ. ಬೆಲೆಯ ವಸ್ತು ಬಳಕೆ; ಡೆಲಿವರಿ ಬಾಯ್​ ಕೂಡ ಮುಖ್ಯ ಸಾಕ್ಷಿ

‘ನನ್ನ ಕೈಯಿಂದ ಏನು ಸಾಧ್ಯವೋ ಅದನ್ನು ಮಾಡಬೇಕು. ಅವರ ನೋವು ನನ್ನನ್ನು ತುಂಬ ಕಾಡುತ್ತಿತ್ತು. ಅವರು ತುಂಬ ಪ್ರಭುದ್ಧರಾಗಿ ಮಾತನಾಡುತ್ತಿದ್ದರು. ಅವರ ಮುಗ್ಧತೆ ನನಗೆ ಹೆಚ್ಚು ನೋವು ನೀಡುತ್ತಿತ್ತು. ಅವರನ್ನು ನೋಡಲೇಬೇಕು ಎಂಬುದು ನನಗಿತ್ತು. ಈಗ ಸತತ ಆರು ವಾರದಿಂದ ಹೊಸ ಶೋ ಮಾಡುತ್ತಿದ್ದೇನೆ. ಅದರಿಂದ ನನಗೆ ವಿಶ್ರಾಂತಿ ಇಲ್ಲದಂತೆ ಆಗಿತ್ತು. ಈ ಕುಟುಂಬದವರನ್ನು ನೋಯಿಸಲು ಅಥವಾ ಇನ್ನಾವುದೋ ಹೇಳಿಕೆ ನೀಡಲು ನಾನು ಬಂದಿಲ್ಲ’ ಎಂದಿದ್ದಾರೆ ಪ್ರಥಮ್​.

‘ಜನರಿಗೆ ಒಂದು ಮಾತು ಹೇಳುತ್ತೇನೆ. ನೀವು ಯಾವುದೇ ಹೇಳಿಕೆ ನೀಡಿದರೆ ಸಹನಾ ಅವರ ಕುಟುಂಬಕ್ಕೆ ಹೆಚ್ಚು ನೋವಾಗುತ್ತದೆ. ನನ್ನ ಮನೆ ಮುಂದೆ ಸೆಕ್ಷನ್​ 144 ಹಾಕಿದ್ದರು. ಆಗ ಮಾಧ್ಯಮದವರು ಮತ್ತು ಪೊಲೀಸರು ಕಷ್ಟಪಟ್ಟು ಕೆಲಸ ಮಾಡಿದ್ದರು. ಆಗ ಸೆಕ್ಷನ್​ 144 ಹಾಕಿದ್ದರು ಎಂಬ ನೋವು ನನಗೆ ಇತ್ತು. ಆ ಸಂದರ್ಭದಲ್ಲಿ ನಾನು ನೀಡಿದ ಹೇಳಿಕೆ ತಿರುಚಿದ್ದಕ್ಕೆ ನನಗೆ ಬಹಳ ನೋವಾಗಿತ್ತು. ನನ್ನ ಹೇಳಿಕೆಯಿಂದ ನಿಮಗೆ ನೋವಾಗಿದೆ ಎಂಬುದಾದರೆ ಈ ಕುಟುಂಬ ಮಗನನ್ನೇ ಕಳೆದುಕೊಂಡ ನೋವಿನಲ್ಲಿದೆ. ಆ ಬಗ್ಗೆ ಸ್ವಲ್ಪ ಯೋಚಿಸಿ’ ಎಂದು ಪ್ರಥಮ್​ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.