Fans War: ಅಭಿಮಾನಿಗಳ ನಡತೆ ಬಗ್ಗೆ ರಮ್ಯಾ ಬೇಸರ: ದೀರ್ಘ ಪತ್ರ ಬರೆದು ಆತಂಕ ವ್ಯಕ್ತಪಡಿಸಿದ ನಟಿ

| Updated By: ಮದನ್​ ಕುಮಾರ್​

Updated on: Dec 20, 2022 | 9:56 PM

Ramya Divya Spandana: ‘ಇಂದು ಅಭಿಮಾನಿ ಸಂಘಗಳು, ಅಭಿಮಾನಿ ಬಳಗಗಳು ತೋರುತ್ತಿರುವ ನಡವಳಿಕೆ ಬಹಳ ಚಿಂತಾಜನಕವಾಗಿದೆ’ ಎಂದು ರಮ್ಯಾ ಹೇಳಿದ್ದಾರೆ. ಈ ಬಗ್ಗೆ ಅವರು ದೀರ್ಘವಾದ ಪತ್ರ ಬರೆದಿದ್ದಾರೆ.

Fans War: ಅಭಿಮಾನಿಗಳ ನಡತೆ ಬಗ್ಗೆ ರಮ್ಯಾ ಬೇಸರ: ದೀರ್ಘ ಪತ್ರ ಬರೆದು ಆತಂಕ ವ್ಯಕ್ತಪಡಿಸಿದ ನಟಿ
ರಮ್ಯಾ
Follow us on

ಕನ್ನಡ ಚಿತ್ರರಂಗದಲ್ಲಿ ಸ್ಟಾರ್​ ಕಲಾವಿದರ ಅಭಿಮಾನಿಗಳ ನಡುವಿನ ಕಿತ್ತಾಟ (Fans War) ಮಿತಿ ಮೀರಿದ. ಕೆಲವು ಅಹಿತಕರ ಘಟನೆಗಳು ನಡೆದಿರುವುದಕ್ಕೆ ಚಂದನವನದ (Sandalwood) ಅನೇಕ ಕಲಾವಿದರು ಖಂಡನೆ ವ್ಯಕ್ತಪಡಿಸಿದ್ದಾರೆ. ಈಗ ನಟಿ ರಮ್ಯಾ ಅವರು ಸೋಶಿಯಲ್​ ಮೀಡಿಯಾದಲ್ಲಿ ಈ ಬಗ್ಗೆ ದೀರ್ಘ ಪತ್ರ ಬರೆದಿದ್ದಾರೆ. ಅಭಿಮಾನಿಗಳ ವರ್ತನೆ ಕುರಿತು ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಅವರ ಈ ಪತ್ರ ವೈರಲ್​ ಆಗಿದೆ. ಈ ಪೋಸ್ಟ್​ಗೆ ಕೆಲವರು ಅಸಭ್ಯವಾಗಿ ಕಮೆಂಟ್​ ಹಾಕಿದ್ದಾರೆ. ಬಳಿಕ ಕಮೆಂಟ್​ ಮಾಡುವ ಆಯ್ಕೆಯನ್ನು ರಮ್ಯಾ (Ramya Divya Spandana) ನಿಷ್ಕ್ರಿಯಗೊಳಿಸಿದ್ದಾರೆ. ‘ಸ್ಯಾಂಡಲ್​ವುಡ್​ ಕ್ವೀನ್​’ ಬರೆದ ದೀರ್ಘ ಪತ್ರ ಇಲ್ಲಿದೆ..

‘ಚಿತ್ರರಂಗದಲ್ಲಿ ಇವತ್ತು ತಲುಪಿರುವ ಹಂತಕ್ಕೆ ಬರಲು ಪ್ರತಿಯೊಬ್ಬರೂ ತಮ್ಮದೇ ಆದ ಸವಾಲುಗಳನ್ನು ಎದುರಿಸಿಕೊಂಡು ಬಂದಿರುತ್ತಾರೆ. ಕೇವಲ ನಾಯಕ ನಟರು ಮತ್ತು ನಾಯಕ ನಟಿಯರಷ್ಟೇ ಅಲ್ಲ, ಸಂಗೀತ ನಿರ್ದೇಶಕರು, ಗಾಯಕರು, ನೃತ್ಯ ನಿರ್ದೇಶಕರು, ಬರಹಗಾರರು, ಫೈಟ್ ಮಾಸ್ಟರ್​ಗಳು ಮುಂತಾದ ಪ್ರತಿಯೊಬ್ಬ ತಂತ್ರಜ್ಞರೂ ಅನೇಕ ಕಷ್ಟಕರವಾದ ಪರಿಸ್ಥಿತಿಗಳನ್ನು ಎದುರಿಸಿ ಉನ್ನತ ಸ್ಥಾನಕ್ಕೆ ಬಂದಿರುತ್ತಾರೆ. ಕೆಲವರ ಕಷ್ಟಗಳು ಸಾರ್ವಜನಿಕವಾಗಿ ನಮಗೆ ತಿಳಿದಿರುತ್ತೆ, ಮತ್ತಷ್ಟು ತಿಳಿದಿರುವುದಿಲ್ಲ. ಕೆಲವರು ಉನ್ನತ ಸ್ಥಾನಕ್ಕೆ ಏರಿದ್ದರೆ, ಅನೇಕರಿಗೆ ದೊಡ್ಡ ಯಶಸ್ಸು ಗಳಿಸಲು ಸಾಧ್ಯವಾಗಿಲ್ಲದೆ ಇರಬಹುದು.

ಇದನ್ನೂ ಓದಿ
Ramya: 18ನೇ ಪ್ರಾಯದಲ್ಲಿ ರಮ್ಯಾ ಹೇಗಿದ್ದರು ನೋಡಿ; ವೈರಲ್​ ಆಗಿದೆ ಹಳೇ ಐಡಿ ಕಾರ್ಡ್​​ ಫೋಟೋ
ಕನ್ನಡದ ಪ್ರಸಿದ್ಧ ನಟಿಯರ ಪಟ್ಟಿಯಲ್ಲಿ ರಮ್ಯಾಗೆ 4ನೇ ಸ್ಥಾನ; ರಚಿತಾ, ಆಶಿಕಾ, ರಶ್ಮಿಕಾ, ರಾಧಿಕಾ ನಡುವೆ ನಂ.1 ಯಾರು?
Ramya: ತಮ್ಮನ್ನು ತಾವೇ ‘ಡ್ರಾಮಾ ಕ್ವೀನ್​’ ಎಂದು ಕರೆದುಕೊಂಡ ನಟಿ ರಮ್ಯಾ; ಕಾರಣ ಏನು?
Ramya: ಕಡೆಗೂ ಶೂಟಿಂಗ್​ ಸೆಟ್​ಗೆ ಬಂದ ರಮ್ಯಾ: ಡಾಲಿ ಜತೆ ಇರುವ ವಿಡಿಯೋ ವೈರಲ್​; ಏನಿದು ಸಮಾಚಾರ?

ಚಿತ್ರರಂಗದಲ್ಲಿ ತಮ್ಮ ಅಸೆಯ ಗೋಪುರ ಕಟ್ಟಿಕೊಂಡು ಬರುವವರ ಹಿನ್ನೆಲೆಗಳು ಬೇರೆಯೇ ಇರಬಹುದು. ಹಲವರಿಗೆ ಎರಡು ಹೊತ್ತು ಊಟ ಗಿಟ್ಟಿಸಿಕೊಳ್ಳುವುದು ಕಷ್ಟವಾಗಿದ್ದರೆ ಹಲವರಿಗೆ ಮೈ ತುಂಬಾ ಸಾಲ ಮಾಡಿಕೊಂಡು ಸಾಧನೆ ಮಾಡಬೇಕು ಅಂತ ಬಂದಿರಬಹುದು. ಹಲವರು ಇದ್ದುದ್ದೆಲ್ಲವನ್ನು ಬಿಟ್ಟು ಚಿತ್ರರಂಗದಲ್ಲಿ ಸಾಧಿಸಬೇಕೆಂದು ಬಿಟ್ಟು ಬಂದದ್ದು ಉಂಟು. ಯಶಸ್ಸು ಬಹಳ ಕಡಿಮೆ ಜನರ ಪಾಲಾಗಿದೆ ಅಷ್ಟೇ. ಆದರೆ ಶ್ರಮ ಪಟ್ಟವರ ಸಂಖ್ಯೆ ಎಣಿಸಲಸಾಧ್ಯ.

ಇದನ್ನೂ ಓದಿ: Ramya: ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಟೈಟಲ್​​ ಕಿರಿಕ್​; ರಮ್ಯಾ ಸಿನಿಮಾದ ವಿರುದ್ಧ ರಾಜೇಂದ್ರ ಸಿಂಗ್​ ಬಾಬು ದೂರು

ಎಲ್ಲಕ್ಕಿಂತ ಮುಖ್ಯ ಮನುಷ್ಯ ತನ್ನ ಬೇರುಗಳಿಗೆ ಗಟ್ಟಿಯಾಗಿ ಅಂಟಿಕೊಂಡಿರುವುದು ಮತ್ತು ತಾವು ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿ ಮೇಲೆ ಬಂದ ಬಳಿಕ ತಮ್ಮಂತೆ ಕಷ್ಟ ಪಟ್ಟು ಶ್ರದ್ಧೆಯಿಂದ ಕೆಲಸ ಮಾಡಲು ಹಂಬಲ ಇರುವ ಪ್ರತಿಭೆಗಳನ್ನು ಹುಡುಕಿ ಸಹಾಯ ಮಾಡುವುದು ಉತ್ತಮ ನಡವಳಿಕೆ.

ನಾನು ಯಾವತ್ತಿಗೂ ನಂಬರ್ ಒನ್​ ಮತ್ತು ಈ ಸ್ಥಾನ ನನಗೆ ಮಾತ್ರ ದಕ್ಕಬೇಕು ಅನ್ನುವ ಅಹಂ ಬಿಟ್ಟು ನಮ್ಮಲ್ಲಿ ಯಾರೇ ಮೇಲೆ ಬಂದರೂ ಅದನ್ನು ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಯಶಸ್ಸು, ಅಧಿಕಾರ, ಹಣ ಯಾವುದು ಶಾಶ್ವತವಲ್ಲ ಅನ್ನುವ ಸಾಮಾನ್ಯ ಅರಿವು ಎಲ್ಲರಿಗೂ ಇರಬೇಕು.

ಇದನ್ನೂ ಓದಿ: Ramya: ಕಲಾವಿದನ ಕುಂಚದಲ್ಲಿ ಅರಳಿದ ರಮ್ಯಾ ಭಾವಚಿತ್ರ; 35 ಅಡಿ ಎತ್ತರದ ಚಿತ್ರ ಬರೆದ ಬಾದಲ್​ ನಂಜುಂಡಸ್ವಾಮಿ

ಇಂದು ಅಭಿಮಾನಿ ಸಂಘಗಳು, ಅಭಿಮಾನಿ ಬಳಗಗಳು ತೋರುತ್ತಿರುವ ನಡವಳಿಕೆ ಬಹಳ ಚಿಂತಾಜನಕವಾಗಿದೆ. ತಮ್ಮ ಗುಂಪಿನಲ್ಲಿ ಅಥವಾ ಬಣದಲ್ಲಿ ಕಾಣಿಸಿಕೊಳ್ಳದ ಎಲ್ಲರನ್ನು ಬಹಳ ಅವಾಚ್ಯ ಶಬ್ದಗಳಿಂದ ನಿಂದಿಸುವುದು, ತಾಯಿ, ಹೆಂಡತಿ, ಮಗಳು ಅನ್ನುವ ಎಲ್ಲ ಪವಿತ್ರ ಸಂಬಂಧಗಳಿಗೆ ಮಸಿ ಬಳಿಯುವಂತಹ ಬಹಳ ಕೆಟ್ಟ ಮಾತುಗಳು ಆಡುವುದನ್ನು ಕಂಡಲ್ಲಿ ನೋವಾಗುತ್ತದೆ. ನಮ್ಮ ಪ್ರಜ್ಞಾವಂತ ಸಮಾಜ ಯಾವ ಮಟ್ಟಕ್ಕೆ ಇಳಿಯುತ್ತಿದೆ ಅನ್ನುವುದು ನೋಡಿ ಬೇಜಾರಾಗಿದೆ.

ಮುಂಚಿನಿಂದಲೂ ಅಭಿಮಾನಿ ಸಂಘಗಳು ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವುದು ನಾವು ಕಂಡಿದ್ದೇವೆ, ಕೇಳಿದ್ದೇವೆ. ರಕ್ತದಾನ ಶಿಬಿರ, ಅನ್ನದಾನ, ವೃದ್ಧಾಶ್ರಮ, ಅನಾಥಾಶ್ರಮದಲ್ಲಿ ಸೇವೆ ಮಾಡುವುದು, ಗಿಡ ನೆಡುವುದು, ಪ್ರಕೃತಿ ಕಾಪಾಡುವುದು, ಬಡವರಿಗೆ ಆಹಾರ ಮತ್ತು ಔಷಧಿ ಹಂಚುವುದು ಮುಂತಾದ ಅನೇಕ ಕಾರ್ಯಗಳನ್ನು ಮಾಡಿಕೊಂಡು ಬಂದಿರುವುದು ಅಭಿಮಾನಿ ಸಂಘಗಳಿಗೆ ಇರುವ ಹೆಗ್ಗಳಿಕೆ. ಆದರೆ ಅಭಿಮಾನಿಗಳು ಅನ್ನುವ ಹೆಸರಿನಲ್ಲಿ ಈಗ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ನಿಜ ರೂಪವನ್ನು, ಹೆಸರನ್ನು ಹಾಕಿಕೊಳ್ಳದೆ ಅನಾಮಧೇಯವಾಗಿ ತಮಗೆ ಆಗದವರ ಬಗ್ಗೆ ಅತ್ಯಂತ ಕೆಟ್ಟ ರೀತಿಯಲ್ಲಿ ಮಾತಾಡುವುದು ವಿಷಾದನೀಯ.

ಇದನ್ನೂ ಓದಿ: Ramya Divya Spandana: ಹೂವುಗಳ ಜತೆ ಹುಟ್ಟುಹಬ್ಬ ಆಚರಿಸಿಕೊಂಡ ರಮ್ಯಾ; ಇಲ್ಲಿವೆ ಮೋಹಕ ತಾರೆಯ​ ಮಸ್ತ್​ ಫೋಟೋಸ್​

ಇಂತಹ ವರ್ತನೆಯನ್ನು ನಮ್ಮ ನಟರು ಖಂಡಿಸಿ ತಮ್ಮ ಅಭಿಮಾನಿಗಳಿಗೆ ತಿಳವಳಿಕೆ ಹೇಳಿ ಅವರನ್ನು ಸುಸಂಸ್ಕೃತರಾಗಿ ಮಾಡುವ ಜವಾಬ್ದಾರಿ ಹೊರಬೇಕಿದೆ. ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಅಭಿಮಾನಿಗಳು ಮಾಡುವ ಸಮಾಜ ವಿರೋಧಿ ಚಟವಟಿಕೆಗಳಿಗೆ ಬೆಂಬಲ ಕೊಡಬಾರದು.

ಕನ್ನಡ ಚಿತ್ರರಂಗ ಇವತ್ತು ದೇಶ ವಿದೇಶಗಳಲ್ಲಿ ದೊಡ್ಡ ಖ್ಯಾತಿಪಡೆದಿದೆ. IMDB ಉನ್ನತ 10 ಚಿತ್ರಗಳ ಪಟ್ಟಿಯಲ್ಲಿ 3 ಕನ್ನಡ ಚಿತ್ರಗಳಿವೆ ಅಂತ ಹೇಳಲು ನಮಗೆಲ್ಲ ಬಹಳ ಹೆಮ್ಮೆ ಆಗಬೇಕಿದೆ. ಕನ್ನಡ ಚಿತ್ರಗಳು ಈ ವರ್ಷ ಕಂಡ ಯಶಸ್ಸು ಬೇರಾವುದೇ ಭಾಷೆಯ ಚಿತ್ರಗಳಿಗೂ ಲಭ್ಯವಾಗಿಲ್ಲ. ಇದಕ್ಕಿಂತ ಹೆಮ್ಮೆಯ ವಿಚಾರ ಮತ್ತು ಸ್ಫೂರ್ತಿ ಬೇಕಿದೆಯೇ?

ಕಲಾದೇವಿಯ ಸೇವೆ ಮಾಡಿಕೊಂಡು ಸಮಾಜಕ್ಕೂ, ನಮ್ಮ ಚಿತ್ರರಂಗಕ್ಕೂ ಒಳ್ಳೆಯ ಹೆಸರು ತರುವುದು ನಮ್ಮೆಲ್ಲರ ಗುರಿ ಆಗಿರಬೇಕು. ಇದು ನಮ್ಮೆಲ್ಲರ ಜವಾಬ್ದಾರಿಯೂ ಹೌದು. ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ನಮ್ಮ ಅಭಿಮಾನಿಗಳು ಮತ್ತು ಬೆಂಬಲಿಗರನ್ನು ಉತ್ತೇಜಿಸೋಣ. ಪ್ರೀತಿ ಮತ್ತು ವಿಶ್ವಾಸ ತುಂಬಿದ ಉತ್ತಮ ಸಮಾಜ ನಿರ್ಮಿಸೋಣ. ದ್ವೇಷ ಮತ್ತು ಅಸೂಯೆಗಳನ್ನು ದಮನ ಮಾಡೋಣ. ಎಲ್ಲರಿಗೂ ಒಳಿತಾಗಲಿ.

– ನಟಿ ರಮ್ಯಾ

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:56 pm, Tue, 20 December 22