ಪುನೀತ್ ಪ್ರೇರಣೆ, ನೇತ್ರದಾನಕ್ಕೆ ಮುಂದಾದ 12,000ಕ್ಕೂ ಹೆಚ್ಚು ಜನ; ನೀವೂ ಹೆಸರು ನೋಂದಾಯಿಸಬೇಕೆ? ಇಲ್ಲಿದೆ ಮಾಹಿತಿ

Puneeth Rajkumar: ಪುನೀತ್ ರಾಜ್​ಕುಮಾರ್ ಪ್ರೇರಣೆಯಿಂದ ರಾಜ್ಯದಲ್ಲಿ ನೇತ್ರದಾನ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಇದೀಗ ನೇತ್ರದಾನ ಮತ್ತಷ್ಟು ಸುಲಭವಾಗಲಿದೆ. ಹೇಗೆ? ಇಲ್ಲಿದೆ ಮಾಹಿತಿ.

ಪುನೀತ್ ಪ್ರೇರಣೆ, ನೇತ್ರದಾನಕ್ಕೆ ಮುಂದಾದ 12,000ಕ್ಕೂ ಹೆಚ್ಚು ಜನ; ನೀವೂ ಹೆಸರು ನೋಂದಾಯಿಸಬೇಕೆ? ಇಲ್ಲಿದೆ ಮಾಹಿತಿ
ಡಾ.ಭುಜಂಗ ಶೆಟ್ಟಿ, ಪುನೀತ್ ರಾಜ್​ಕುಮಾರ್
Edited By:

Updated on: Dec 29, 2021 | 1:25 PM

ಬೆಂಗಳೂರು: ನಟ ಪುನೀತ್ ರಾಜ್​ಕುಮಾರ್ (Puneeth Rajkumar) ಸಾವಿನಲ್ಲೂ ಹಲವರ ಕಣ್ಣಿಗೆ ಬೆಳಕಾಗಿ ಸಾರ್ಥಕತೆ ಮೆರೆದರು. ಅವರು ನೇತ್ರದಾನ ಮಾಡಿದ್ದು ರಾಜ್ಯಾದ್ಯಂತ ಅಸಂಖ್ಯಾತ ಅಭಿಮಾನಿಗಳಿಗೆ ಪ್ರೇರಣೆ ಆಗಿದೆ. ಇದರಿಂದಲೇ ರಾಜ್ಯದಲ್ಲಿ ನೇತ್ರದಾನ (Eye Donation) ದಾಖಲೆ ಪ್ರಮಾಣದಲ್ಲಿ ನಡೆಯುತ್ತಿದೆ. ಪುನೀತ್ ನಿಧನರಾದ ನಂತರ ರಾಜ್ಯದಲ್ಲಿ ನೇತ್ರದಾನ ಪ್ರಮಾಣ ಹೆಚ್ಚಾಗಿರುವುದನ್ನು ಅಂಕಿಅಂಶದ ಸಮೇತ ನಾರಾಯಣ ನೇತ್ರಾಲಯದ ಡಾ.ಭುಜಂಗ ಶೆಟ್ಟಿ (Dr Bhujang Shetty) ವಿವರಿಸಿದ್ದಾರೆ. ‘‘ಪುನೀತ್ ಕಣ್ಣು ನೀಡಿದ ನಂತರ ಸುಮಾರು 440ಕ್ಕೂ ಹೆಚ್ಚು ಜನರು ನೇತ್ರದಾನ ಮಾಡಿದ್ದಾರೆ. ಇದು ದೊಡ್ಡ ದಾಖಲೆ. ಯಾವತ್ತೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಜನರು ನೇತ್ರದಾನಕ್ಕೆ ಮುಂದಾಗಿರಲಿಲ್ಲ. ಅಪ್ಪು ನೇತ್ರದಾನದಲ್ಲಿ ಬ್ರಾಂಡ್ ಅಂಬಾಸಿಡರ್ ಆದರು’’ ಎಂದಿದ್ದಾರೆ ಡಾ.ಭುಜಂಗ ಶೆಟ್ಟಿ.

ರಾಜ್ಯದಲ್ಲಿ ನೇತ್ರದಾನಕ್ಕೆ ಹೆಸರು ನೋಂದಾಯಿಸಿದವರ ಪಟ್ಟಿಯೂ ದೊಡ್ಡದಿದೆ. ಇದುವರೆಗೆ ಸುಮಾರು 12,000ಕ್ಕೂ ಅಧಿಕ ಜನರು ನೇತ್ರದಾನಕ್ಕೆ ಹೆಸರು ನೋಂದಾಯಿಸಿದ್ದಾರೆ. ಜತೆಗೆ ಕರೆ ಮಾಡಿ ನೇತ್ರದಾನ ಮಅಡಬೇಕು. ಹೆಸರು ನೋಂದಾಯಿಸುವುದು ಹೇಗೆ ಎಂಬ ಪ್ರಶ್ನೆಯನ್ನೂ ಕೇಳುತ್ತಿದ್ದಾರೆ. ಇದಕ್ಕೆಲ್ಲಾ ಉತ್ತರವೆಂಬಂತೆ ನೇತ್ರದಾನಕ್ಕೆ ನೋಂದಣಿ ಮಾಡಿಕೊಳ್ಳಲು ಸುಲಭದ ಮಾರ್ಗವನ್ನು ಇಂದು ಉದ್ಘಾಟಿಸಲಾಗಿದೆ.

YouTube video player

ನೇತ್ರದಾನಕ್ಕೆ ನೋಂದಣಿ ಮಾಡಲು ಹೊಸ ಮಾರ್ಗ, ನೋಂದಾಯಿಸೋದು ಹೇಗೆ?
ನೇತ್ರದಾನದ ನೋಂದಣಿಗೆಂದೇ ವಿಶೇಷ ಫೋನ್ ನಂಬರ್ ಸ್ಥಾಪಿಸಲಾಗಿದೆ. 8884018800 ಈ ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿದರೆ, ನೇತ್ರದಾನಕ್ಕೆ ನೋಂದಾಯಿಸಲು ಅಗತ್ಯವಾದ ಅರ್ಜಿಯ ಲಿಂಕ್ ಸಿಗಲಿದೆ. ಈ ಕುರಿತು ರಾಘವೇಂದ್ರ ರಾಜ್​ಕುಮಾರ್ ಮಾಹಿತಿ ಹಂಚಿಕೊಂಡಿದ್ದು, ಪುನೀತ್ ನಿಧನದ ಬಳಿಕ ನೇತ್ರದಾನದ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದೆ. ಇದೀಗ ಹೆಸರು ನೋಂದಾಯಿಸುವುದು ಮತ್ತಷ್ಟು ಸುಲಭವಾಗಿದೆ ಎಂದಿದ್ದಾರೆ.

ದೇಹದಾನಕ್ಕೆ ಹೆಸರು ನೋಂದಾಯಿಸಿದ ರಾಘಣ್ಣ- ಶಿವಣ್ಣ:
ನೇತ್ರದಾನದಿಂದ ಒಂದು ಹೆಜ್ಜೆ ಮುಂದೆ ಹೋಗಿರುವ ರಾಘವೇಂದ್ರ ರಾಜ್​ಕುಮಾರ್ ಹಾಗೂ ಶಿವರಾಜ್​ಕುಮಾರ್ ದೇಹದಾನಕ್ಕೆ ನೋಂದಾಯಿಸಿದ್ದರ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಈ ಕುರಿತು ಮಾತನಾಡಿದ ರಾಘಣ್ಣ, ‘‘ಅಪ್ಪಾಜಿ ಹುಟ್ಟುಹಬ್ಬದ ದಿನ ನಾನು ಮತ್ತು ಶಿವಣ್ಣ ದೇಹದಾನ ಮಾಡಿದ್ದೇವೆ. ನಮ್ಮ ದೇಹ ಬೆಂಕಿಯಲ್ಲಿ ಅಥವಾ ಮಣ್ಣಲ್ಲಿ ಅಂತ್ಯವಾಗಿ ಹೋಗುವ ಬದಲು, ನಮ್ಮಿಂದ ನಾಲ್ಕು ಜನಕ್ಕೆ ಸಹಾಯ ಆಗುತ್ತೆ ಅನ್ನೋದಾದರೆ ನಾವೇಕೆ ದೇಹದಾನ ಮಾಡಬಾರದು? ನಮ್ಮ ತಂದೆಯವರ ಪ್ರೇರಣೆಯಿಂದ ನಾವು ಇದನ್ನು ಮಾಡಿದ್ದೇವೆ. ಈ ಬಗ್ಗೆ ನೀವು ವಿಚಾರ ಮಾಡಿ. ನಿಮ್ಮ ಮನಸ್ಸಿಗೆ ಸರಿ ಎನಿಸಿ, ನೀವೇ ದೇಹದಾನ ಮಾಡುತ್ತೀರಿ. ಆ ಬಗ್ಗೆ ಯಾರಿಗೂ ನಾವು ಬಲವಂತ ಮಾಡುವುದಿಲ್ಲ’’ ಎಂದಿದ್ದಾರೆ.

YouTube video player

ರಾಜ್ಯದಲ್ಲಿ ಪುನೀತ್ ನಿಧನದ ನಂತರ ಅಭಿಮಾನಿಗಳು ಅಪಾರ ಪ್ರಮಾಣದಲ್ಲಿ ನೇತ್ರದಾನ ಹಾಗೂ ದೇಹದಾನಕ್ಕೆ ಮುಂದಾಗಿದ್ದಾರೆ. ಪುನೀತ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಭೆಗಳಲ್ಲಿ ಸಾಮೂಹಿಕವಾಗಿ ಹೆಸರು ನೋಂದಾಯಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಇದೀಗ ಆಸಕ್ತರು ಹೆಸರು ನೋಂದಾಯಿಸಲು ಸುಲಭವಾಗುವಂತೆ ಮಿಸ್ಡ್​​ ಕಾಲ್ ಸೇವೆಯನ್ನು ಆರಂಭಿಸಲಾಗಿದೆ.

ಇದನ್ನೂ ಓದಿ:

‘ಶಿವಣ್ಣ, ನಾನು ದೇಹದಾನ ಮಾಡಿದ್ದೇವೆ’: ಅಪ್ಪು ನೆನಪಲ್ಲಿ ರಾಘಣ್ಣ ಹೇಳಿದ ಮಹತ್ವದ ವಿಚಾರಗಳು ಇಲ್ಲಿವೆ

Puneeth Rajkumar: ಪುನೀತ್ ನಿವಾಸಕ್ಕೆ ಪ್ರಭಾಸ್ ಭೇಟಿ; ಕುಟುಂಬದವರಿಗೆ ಸಾಂತ್ವನ ಹೇಳಿದ ನಟ

Follow Us