
ವರನಟ ಡಾ.ರಾಜ್ಕುಮಾರ್ ಸೃಷ್ಟಿ ಮಾಡಿ ಹೋದ ಲೆಗಸಿ ತುಂಬಾನೇ ದೊಡ್ಡದು. ಅವರ ನಟನೆಗೆ ಮತ್ತೊಬ್ಬರು ಸರಿಸಾಟಿಯಾಗಿ ನಿಲ್ಲಲು ಸಾಧ್ಯವೇ ಇಲ್ಲ. ಪರಭಾಷಾ ನಟರು ಕೂಡ ರಾಜ್ಕುಮಾರ್ ನಟನೆ ಹಾಗೂ ಅವರ ವ್ಯಕ್ತಿತ್ವ ಕೊಂಡಾಡಿದ್ದು ಇದೆ. ಅವರು ನಮ್ಮನ್ನು ಅಗಲಿ ಎರಡು ದಶಕ ಕಳೆಯುತ್ತಾ ಬಂದರೂ ಅವರನ್ನು ಈಗಲೂ ನೆನಪಿಸಿಕೊಳ್ಳಲಾಗುತ್ತಿದೆ. ಇತ್ತೀಚೆಗೆ ಅಮಿತಾಭ್ ಬಚ್ಚನ್ (Amitabh Bachchan) ಅವರು ರಾಜ್ಕುಮಾರ್ ಮಾಡಿದ ಸಾಧನೆ ನೆನೆದರು. ಅವರ ಆಶೀರ್ವಾದ ಪಡೆದ ನಾನೇ ಧನ್ಯ ಎಂದರು.
ರಿಷಬ್ ಶೆಟ್ಟಿ ಅವರು ‘ಕಾಂತಾರ: ಚಾಪ್ಟರ್ 1’ ಯಶಸ್ಸಿನ ಬಳಿಕ ‘ಕೌನ್ ಬನೇಗಾ ಕರೋಡ್ಪತಿ’ ಕಾರ್ಯಕ್ರಮಕ್ಕೆ ತೆರಳಿದರು. ಅಮಿತಾಭ್ ಬಚ್ಚನ್ ಅವರು ಈ ಶೋನ ನಡೆಸಿಕೊಡುತ್ತಿದ್ದಾರೆ. ಅವರು ರಿಷಬ್ ಜೊತೆ ಮಾತನಾಡುವಾಗ ರಾಜ್ಕುಮಾರ್ ಅವರನ್ನು ಹೊಗಳಿದ್ದಾರೆ. ರಾಜ್ಕುಮಾರ್ ಮಾಡಿದ ಸಾಧನೆಯನ್ನು ನೆನದು ಹೆಮ್ಮೆ ವ್ಯಕ್ತಪಡಿಸಿದರು.
‘ಕರ್ನಾಟಕದಲ್ಲಿ ರಾಜ್ಕುಮಾರ್ ದೇವರು ಇದ್ದರಂತೆ. ಅವರು ಸಿಂಪಲ್ ವ್ಯಕ್ತಿ. ಸಾಧಾರಣ ಬಟ್ಟೆ ಧರಿಸುತ್ತಿದ್ದರು. ಸಾಧಾರಣ ಮನೆಯಲ್ಲಿ ವಾಸವಾಗುತ್ತಿದ್ದರು. ಅವರ ಜೀವನ ಶೈಲಿ ನೋಡಿದರು ಅವರು ಇಷ್ಟು ದೊಡ್ಡ ನಟ, ಇಷ್ಟೆಲ್ಲ ಹೆಸರು ಮಾಡಿದ್ದಾರೆ ಎಂದು ಹೇಳಲು ಸಾಧ್ಯವೇ ಇಲ್ಲ. ನಾವು ಬೆಂಗಳೂರಿಗೆ ಹೋದಾಗ ಅವರ ಆಶೀರ್ವಾದ ಪಡೆಯುತ್ತಿದ್ದೆವು. ರಾಜ್ಕುಮಾರ್ ಅಂತಹ ನಟನರಿಂದ ಆಶೀರ್ವಾದ ಪಡೆದ ನಾವೇ ಧನ್ಯ’ ಎಂದು ಅಮಿತಾಭ್ ಹೇಳಿದರು.
ಅಮಿತಾಭ್ ಅವರ ಮಾತನ್ನು ಕೇಳಿ ಅನೇಕರಿಗೆ ಖುಷಿ ಆಗಿದೆ. ಅಮಿತಾಭ್ ಅಂತಹ ಮೇರುನಟರು ರಾಜ್ಕುಮಾರ್ ಬಗ್ಗೆ ಇಟ್ಟ ಗೌರವ ನೋಡಿ ಅನೇಕರ ಖುಷಿಪಟ್ಟಿದ್ದಾರೆ. ಅಮಿತಾಭ್ ಬಚ್ಚನ್ ಅವರು ಕೆಲವು ಬಾರಿ ರಾಜ್ಕುಮಾರ್ನ ಭೇಟಿ ಮಾಡಿದ್ದಾರೆ. ರಾಜ್ಕುಮಾರ್ ಮೇಲೆ ಇರುವಷ್ಟೇ ಗೌರವ ಅವರ ಕುಟುಂಬದ ಮೇಲೂ ಇದೆ.
ಇದನ್ನೂ ಓದಿ: ಕೌನ್ ಬನೇಗಾ ಕರೋಡ್ಪತಿಯಲ್ಲಿ ರಿಷಬ್ ಶೆಟ್ಟಿ ಗೆದ್ದ ಹಣ ಎಷ್ಟು? ಸಿಕ್ಕ ಉಡುಗೊರೆಗಳೇನು?
ರಿಷಬ್ ಶೆಟ್ಟಿ ಅವರು ಕೌನ್ ಬನೇಗಾ ಕರೋಡ್ಪತಿಯಲ್ಲಿ ಬರೋಬ್ಬರಿ 12.5 ಲಕ್ಷ ರೂಪಾಯಿ ಗೆದ್ದಿದ್ದಾರೆ. ರಿಷಬ್ ಅವರು ತಮ್ಮ ‘ರಿಷಬ್ ಫೌಂಡೇಷನ್’ ಮೂಲಕ ಈ ಹಣವನ್ನು ದೈವಾರಾಧಕರು ಹಾಗೂ ಸರ್ಕಾರಿ ಶಾಲಾ ಮಕ್ಕಳ ಏಳ್ಗೆಗೆ ಈ ಹಣ ಬಳಕೆ ಮಾಡೋದಾಗಿ ಹೇಳಿದ್ದಾರೆ. ಇದು ನಿಜಕ್ಕೂ ಹೆಮ್ಮೆಯ ವಿಷಯ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:53 am, Thu, 23 October 25