Appu Cup: ಚಂದನವನದ ಬ್ಯಾಡ್ಮಿಂಟನ್ ಲೀಗ್ ‘ಅಪ್ಪು ಕಪ್ ಸೀಸನ್ 2’: ಲೋಗೋ ಬಿಡುಗಡೆ ಮಾಡಿದ ಪ್ರಕಾಶ್ ಪಡುಕೋಣೆ

|

Updated on: Jun 21, 2023 | 5:43 PM

Prakash Padukone: ಲೋಗೋ ಲಾಂಚ್​ ಮಾಡಿದ ಬಳಿಕ ಮಾತನಾಡಿದ ಪ್ರಕಾಶ್ ಪಡುಕೋಣೆ ಅವರು ಪುನೀತ್​ ರಾಜ್​ಕುಮಾರ್​ ಬಗೆಗಿನ ನೆನಪಿನ ಪುಟ ತೆರೆದರು. ಅಪ್ಪು ಜೊತೆಗಿನ ತಮ್ಮ ಒಡನಾಟವನ್ನು ಮೆಲುಕು ಹಾಕಿದರು.

Appu Cup: ಚಂದನವನದ ಬ್ಯಾಡ್ಮಿಂಟನ್ ಲೀಗ್ ‘ಅಪ್ಪು ಕಪ್ ಸೀಸನ್ 2’: ಲೋಗೋ ಬಿಡುಗಡೆ ಮಾಡಿದ ಪ್ರಕಾಶ್ ಪಡುಕೋಣೆ
ಪ್ರಕಾಶ್​ ಪಡುಕೋಣೆ
Follow us on

‘ಪವರ್​ ಸ್ಟಾರ್​’ ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರನ್ನು ಕಳೆದುಕೊಂಡ ನೋವು ಎಂದಿಗೂ ಕಡಿಮೆ ಆಗುವುದಿಲ್ಲ. ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲ ಎಂಬ ನೋವು ಆಪ್ತರಿಗೆ, ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ಸದಾ ಕಾಡುತ್ತಲೇ ಇರುತ್ತದೆ. ಅಪ್ಪು ಅವರನ್ನು ವಿವಿಧ ರೀತಿಯಲ್ಲಿ ನೆನಪಿಸಿಕೊಳ್ಳುವ ಕೆಲಸ ಆಗುತ್ತಿದೆ. ಆ ಮೂಲಕ ಅವರ ಹೆಸರನ್ನು ಅಮರವಾಗಿಸಲು ಪ್ರಯತ್ನ ನಡೆಯುತ್ತಿದೆ. ಅದಕ್ಕೆ ‘ಅಪ್ಪು ಕಪ್’ ಬ್ಯಾಡ್ಮಿಂಟನ್​ ಟೂರ್ನಿ ಒಂದು ಉತ್ತಮ ಉದಾಹರಣೆ. ಪುನೀತ್ ರಾಜ್​ಕುಮಾರ್ ಅವರ ನೆನಪಿನಲ್ಲಿ ಆಯೋಜಿಸಲಾಗಿರುವ ‘ಅಪ್ಪು ಕಪ್ ಸೀಸನ್ 2’ಗೆ (Appu Cup Season 2) ಸಕಲ ಸಿದ್ಧತೆ ನಡೆದಿದೆ. ಸ್ಯಾಂಡಲ್​ವುಡ್ ಬ್ಯಾಡ್ಮಿಂಟನ್ ಲೀಗ್​ನ ಲೋಗೋವನ್ನು ಪ್ರಕಾಶ್ ಪಡುಕೋಣೆ (Prakash Padukone) ಅವರು ಅನಾವರಣ ಮಾಡಿದ್ದಾರೆ.

ಶುಭಾಶಯ ಕೋರಿದ ಪ್ರಕಾಶ್ ಪಡುಕೋಣೆ:

ಸ್ಯಾಂಡಲ್​ವುಡ್ ಬ್ಯಾಡ್ಮಿಂಟನ್ ಲೀಗ್​ನ ಲೋಗೋ ಅನಾವರಣ ಕಾರ್ಯಕ್ರಮವು ಬೆಂಗಳೂರಿನಲ್ಲಿ ಇಂದು (ಜೂನ್​ 21) ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್​ನಲ್ಲಿ ನಡೆಯಿತು. ಭಾರತೀಯ ಬ್ಯಾಡ್ಮಿಂಟನ್ ಲೆಜೆಂಡ್​ ಆದಂತಹ ಪ್ರಕಾಶ್ ಪಡುಕೋಣೆ ಅವರು ಲೋಗೋ ಅನಾವರಣ ಮಾಡಿದ ಬಳಿಕ ಆಟಗಾರರಿಗೆ ಶುಭಾಶಯ ಕೋರಿದರು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮಾ. ಹರೀಶ್, ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಕಾರ್ಯದರ್ಶಿ ಪಿ. ರಾಜೇಶ್ ರೆಡ್ಡಿ, ಹಿರಿಯ ಸಿನಿಮಾ ಪತ್ರಕರ್ತರಾದ ಸದಾಶಿವ ಶೆಣೈ ಉಪಸ್ಥಿತರಿದ್ದರು.

ಪುನೀತ್​ ಬಗ್ಗೆ ಪ್ರಕಾಶ್ ಪಡುಕೋಣೆ ಮಾತು:

ಲೋಗೋ ಲಾಂಚ್​ ಬಳಿಕ ಮಾತನಾಡಿದ ಪ್ರಕಾಶ್ ಪಡುಕೋಣೆ ಅವರು ಪುನೀತ್​ ರಾಜ್​ಕುಮಾರ್​ ಬಗೆಗಿನ ನೆನಪಿನ ಪುಟ ತೆರೆದರು. ‘ಪುನೀತ್ ರಾಜ್​ಕುಮಾರ್ ಅವರು ನನಗೆ ಪರ್ಸನಲ್ ಆಗಿ ಗೊತ್ತಿದ್ದರು. ಅವರು ತುಂಬಾ ಫ್ರೆಂಡ್ಲಿ ಆಗಿದ್ದವರು. ಐದಾರು ವರ್ಷದ ಹಿಂದೆ ನಾವೊಂದು ಇವೆಂಟ್ ಮಾಡಿದ್ದೆವು. ಒಂದೇ ಒಂದು ಫೋನ್ ಕರೆಗೆ ಅವರು ಬಂದು ನಮ್ಮ ಜೊತೆ ಎಕ್ಸಿಬ್ಯೂಷನ್ ಮ್ಯಾಚ್ ಆಡಿದ್ದರು. ಕನ್ನಡ ಚಿತ್ರರಂಗದಲ್ಲಿ ತುಂಬಾ ಜನ ಬ್ಯಾಡ್ಮಿಂಟನ್ ಆಡುತ್ತಾರೆ ಅನ್ನೋದನ್ನು ಕೇಳಿ ಖುಷಿ ಆಯಿತು. ಅಪ್ಪು ಕಪ್ ಸ್ಯಾಂಡಲ್​ವುಡ್ ಬ್ಯಾಡ್ಮಿಂಟನ್ ಟೂರ್ನಿ ಹೀಗೆಯೇ ಯಶಸ್ವಿಯಾಗಿ ಮುಂದುವರಿಯಲಿ’ ಎಂದು ಪ್ರಕಾಶ್ ಪಡುಕೋಣೆ ಹಾರೈಸಿದರು.

ಸ್ಯಾಂಡಲ್​ವುಡ್ ಬ್ಯಾಡ್ಮಿಂಟನ್ ಲೀಗ್​ನ ಲೋಗೋ ಅನಾವರಣ ಕಾರ್ಯಕ್ರಮ

‘ಅಪ್ಪು ಕಪ್ ಸೀಸನ್ 2’ ಬಗ್ಗೆ ಮಾಹಿತಿ:

ಕನ್ನಡ ಚಿತ್ರರಂಗದ ಕಲಾವಿದರು, ತಂತ್ರಜ್ಞರು ಮತ್ತು ಮಾಧ್ಯಮದವರು ಆಡಲಿರುವ ‘ಅಪ್ಪು ಕಪ್ ಸೀಸನ್ 2’ ಪಂದ್ಯಾವಳಿ ಆಗಸ್ಟ್ ತಿಂಗಳ ಅಂತ್ಯದಲ್ಲಿ ಆರಂಭ ಆಗಲಿದೆ. ಕಳೆದ ಬಾರಿ ಒಟ್ಟು 8 ತಂಡಗಳು ಭಾಗಿಯಾಗಿದ್ದವು. ದಿಗಂತ್, ವಸಿಷ್ಠ ಸಿಂಹ, ಸೃಜನ್ ಲೋಕೇಶ್, ಪ್ರಿಯಾಂಕಾ ಉಪೇಂದ್ರ, ಕವಿತಾ ಲಂಕೇಶ್, ರಾಗಿಣಿ ದ್ವಿವೇದಿ, ಶ್ವೇತಾ ಶ್ರೀವಾತ್ಸವ್​, ಮಾಸ್ಟರ್ ಆನಂದ್ ಅವರ ತಂಡಗಳ ಪೈಕಿ ಸೃಜನ್ ಲೋಕೇಶ್ ನೇತೃತ್ವದ ‘ರಾಜಕುಮಾರ ಕಿಂಗ್ಸ್’ ಕಳೆದ ಬಾರಿ ಗೆಲುವು ಸಾಧಿಸಿತ್ತು. ಈ ಬಾರಿ ಇನ್ನೂ ಹೆಚ್ಚಿನ ಸೆಲೆಬ್ರಿಟಿಗಳು ‘ಅಪ್ಪು ಕಪ್ ಸೀಸನ್ 2’ ಸ್ಯಾಂಡಲ್​ವುಡ್ ಬ್ಯಾಡ್ಮಿಂಟನ್ ಲೀಗ್ ಮೆರಗನ್ನು ಹೆಚ್ಚಿಸಲಿದ್ದಾರೆ. ಅಭಿಮಾನಿಗಳಲ್ಲಿ ಈ ಟೂರ್ನಿ ಬಗ್ಗೆ ನಿರೀಕ್ಷೆ ಮೂಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.