ದರ್ಶನ್ ದೇವಾಲಯ ಭೇಟಿಗೆ ಟ್ವಿಸ್ಟ್, ದರ್ಶನ್ ಜೊತೆಗಿದ್ದ ಮತ್ತೊಬ್ಬ ಕೊಲೆ ಆರೋಪಿ
Darshan Thoogudeepa: ನಟ ದರ್ಶನ್ ತೂಗುದೀಪ ಕೇರಳದ ಕಣ್ಣೂರಿನ ಮಡಾಯಿ ಕಾವು ಭಗವತಿ ದೇವಾಲಯ ಅಥವಾ ಭದ್ರಕಾಳಿ ದೇವಾಲಯಕ್ಕೆ ತೆರಳಿದ್ದು ಸುದ್ದಿಯಾಗಿತ್ತು. ದರ್ಶನ್, ಪುತ್ರ ವಿನೇಶ್, ಧನ್ವೀರ್ ಗೌಡ ಅವರುಗಳ ಜೊತೆಗೆ ದೇವಾಲಯಕ್ಕೆ ತೆರಳಿದ್ದಾರೆ ಎನ್ನಲಾಗಿತ್ತು. ಇದೀಗ ಬಂದಿರುವ ಸುದ್ದಿಯಂತೆ ದರ್ಶನ್ ಜೊತೆಗೆ ಮತ್ತೊಬ್ಬ ಕೊಲೆ ಆರೋಪಿಯೂ ಇದ್ದರಂತೆ. ಅದೂ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಯಲ್ಲ, ಮತ್ತೊಂದು ಸೆನ್ಸೇಷನ್ ಕೊಲೆ ಪ್ರಕರಣದ ಆರೋಪಿ. ಯಾರಾತ?

ದರ್ಶನ್, ನಿನ್ನೆಯಷ್ಟೆ ಕೇರಳದ ಕಣ್ಣೂರಿನ ಭಗವತಿ ದೇವಾಲಯದಲ್ಲಿ ಕಾಣಿಸಿಕೊಂಡಿದ್ದರು. ಅವರೊಟ್ಟಿಗೆ ಅವರ ಪುತ್ರ ವಿನೇಶ್, ಧನ್ವೀರ್ ಗೌಡ ಸಹ ಇದ್ದರು. ಈ ದೇವಾಲಯವು ಶತ್ರು ವಿನಾಶ ಪೂಜೆಗೆ ಪ್ರಸಿದ್ಧಿ ಪಡೆದಿದ್ದು, ದೇವಾಲಯದಲ್ಲಿ ಶತ್ರು ಸಂಹಾರ ಹೋಮ ಮಾಡಿಸಿದ್ದಾರೆ ದರ್ಶನ್ ಎನ್ನಲಾಗುತ್ತಿದೆ. ಇದೀಗ ಹೊರಬಿದ್ದಿರುವ ಮತ್ತೊಂದು ವಿಷಯವೆಂದರೆ ನಿನ್ನೆ ದರ್ಶನ್ ಜೊತೆಗೆ ಮತ್ತೊಬ್ಬ ಕೊಲೆ ಆರೋಪಿಯೂ ಇದ್ದ. ಆದರೆ ಆತ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಕೊಲೆ ಆರೋಪಿಯಲ್ಲ. ಬೇರೊಂದು ಕೊಲೆ ಪ್ರಕರಣದ ಆರೋಪಿ. ಇಬ್ಬರು ಕೊಲೆ ಆರೋಪಿಗಳು ಒಟ್ಟಿಗೆ ಹೋಗಿ ಶತ್ರು ಸಂಹಾರಕ್ಕಾಗಿ ಪೂಜೆ ಮಾಡಿಸಿದ್ದಾರೆ.
ಕಣ್ಣೂರಿನ ಮಡಾಯಿ ಕಾವು ಭಗವತಿ ದೇವಾಲಯದಲ್ಲಿ ದರ್ಶನ್, ವಿನೀಶ್ ಮತ್ತು ಧನ್ವೀರ್ ಮಾತ್ರವೇ ಇರಲಿಲ್ಲ. ಅವರೊಟ್ಟಿಗೆ ಪ್ರಜ್ವಲ್ ರೈ ಎಂಬಾತನೂ ಇದ್ದ. ಈತನೂ ಸಹ ದರ್ಶನ್ ರೀತಿಯಲ್ಲಿಯೇ ಕುಖ್ಯಾತ ಕೊಲೆ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದಾನೆ. 2017 ರ ಕರೋಪಾಡಿ ಜಲೀಲ್ ಕೊಲೆ ಪ್ರಕರಣದ ಆರೋಪಿಯಾಗಿದ್ದ ಪ್ರಜ್ವಲ್ ರೈ. ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದ ಜಲೀಲ್ ಕೊಲೆ ಪ್ರಕರಣ ಆಗ ಸಂಚಲನ ಸೃಷ್ಟಿಸಿತ್ತು. ಆ ಕೊಲೆ ಪ್ರಕರಣದಲ್ಲಿ ಒಟ್ಟು 11 ಜನರ ಬಂಧನವಾಗಿತ್ತು, ಅದರಲ್ಲಿ ಪ್ರಜ್ವಲ್ ರೈ ಸಹ ಒಬ್ಬ. ಈಗ ಇದೇ ಪ್ರಜ್ವಲ್ ರೈ, ದರ್ಶನ್ ಅವರನ್ನು ಕೇರಳದ ಕಣ್ಣೂರಿನ ಮಡಾಯಿ ಕಾವು ಭಗವತಿ ದೇವಾಲಯಕ್ಕೆ ಕರೆದುಕೊಂಡು ಹೋಗಿದ್ದರು ಎನ್ನಲಾಗುತ್ತಿದೆ.
ಇದನ್ನೂ ಓದಿ:ದರ್ಶನ್ ಪೂಜೆ ಮಾಡಿಸಿದ ಕೇರಳದ ಭಗವತಿ ದೇವಾಲಯದ ಮಹತ್ವವೇನು?
ಪುತ್ತೂರಿನಲ್ಲಿ ಕೆಲ ಗೆಳೆಯರನ್ನು ಹೊಂದಿರುವ ನಟ ದರ್ಶನ್, ಅವರ ಮಾರ್ಗದರ್ಶನದಂತೆಯೇ ಕಣ್ಣೂರಿನ ಮಾಡಾಯಿಕಾವು ಭದ್ರಕಾಳಿ ದೇವಾಲಯಕ್ಕೆ ಭೇಟಿ ನೀಡಿ ಅಲ್ಲಿ ವಿಶೇಷ ಪೂಜೆ ನೆರವೇರಿಸಿದ್ದಾರೆ. ನಿನ್ನೆ ವಿಶೇಷ ದಿನವಾಗಿದ್ದು, ಶತ್ರು ಸಂಹಾರ ಪೂಜೆಗೆ ಸೂಕ್ತ ದಿನವಾದ ಕಾರಣ ದರ್ಶನ್ ಹಾಗೂ ಇತರರು ದೇವಾಲಯಕ್ಕೆ ತೆರಳಿ ಪೂಜೆ ನೆರವೇರಿಸಿದ್ದಾರೆ ಎನ್ನಲಾಗುತ್ತಿದೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಬಳಿಕ ದರ್ಶನ್, ಹಳೆಯ ಗೆಳೆಯರ ಗುಂಪನ್ನು, ಇನ್ನಿತರೆ ಚಾಳಿಗಳನ್ನು ಬಿಟ್ಟು ಕುಟುಂಬದ ಕಡೆಗೆ ಗಮನಕೊಡುತ್ತಿದ್ದಾರೆ ಎಂದುಕೊಳ್ಳಲಾಗಿತ್ತು. ಆದರೆ ದರ್ಶನ್ ಅವರನ್ನು ಅವರ ಕೆಲ ನಟೋರಿಯಸ್ ಗೆಳೆಯರು ಬಿಟ್ಟಿಲ್ಲ ಎಂಬುದಕ್ಕೆ ಭಗವತಿ ದೇವಾಲಯ ಭೇಟಿ ಸಾಕ್ಷಿ. ದರ್ಶನ್, ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗಲೂ ಸಹ ಕೆಲ ಕ್ರಿಮಿನಲ್ಗಳ ಜೊತೆಗೆ ಸಹವಾಸ ಬೆಳೆಸಿದ್ದರು. ಅದರಿಂದಾಗಿ ದರ್ಶನ್ಗೆ ಮಾತ್ರವೇ ಅಲ್ಲದೆ ಅವರ ಜೊತೆಗಿದ್ದ ಇತರೆ ಕೆಲ ಆರೋಪಿಗಳಿಗೂ ಸಾಕಷ್ಟು ಸಮಸ್ಯೆ ಆಯಿತು. ಈಗ ಮತ್ತೆ ಕೊಲೆ ಆರೋಪಿಗಳ ಜೊತೆಗೆ ಓಡಾಡುತ್ತಿದ್ದಾರೆ ದರ್ಶನ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:18 am, Sun, 23 March 25