AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್ಲ ಆರೋಪ ನಿರಾಕರಿಸಿದ ದರ್ಶನ್: ನ.10ಕ್ಕೆ ಸಾಕ್ಷಿಗಳ ವಿಚಾರಣೆಗೆ ದಿನಾಂಕ ನಿಗದಿ

ರೇಣುಕಾಸ್ವಾಮಿಯನ್ನು ಅಪಹರಿಸಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಷಾರೋಪಣೆ ನಿಗದಿ ಆಗಿದೆ. ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲ ಆರೋಪಿಗಳು ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ. ಹಾಗಾಗಿ ಮುಂದಿನ ವಿಚಾರಣೆಗೆ ದಿನಾಂಕ ನಿಗದಿ ಆಗಿದೆ. ವಿಚಾರಣೆಯನ್ನು ನ.10ಕ್ಕೆ ಕೋರ್ಟ್ ಮುಂದೂಡಿದೆ.

ಎಲ್ಲ ಆರೋಪ ನಿರಾಕರಿಸಿದ ದರ್ಶನ್: ನ.10ಕ್ಕೆ ಸಾಕ್ಷಿಗಳ ವಿಚಾರಣೆಗೆ ದಿನಾಂಕ ನಿಗದಿ
Darshan Thoogudeepa
ಮದನ್​ ಕುಮಾರ್​
|

Updated on:Nov 03, 2025 | 4:04 PM

Share

ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Case Case) ಎಲ್ಲ ಆರೋಪಿಗಳ ದೋಷಾರೋಪಣೆ ನಿಗದಿ ಪ್ರಕ್ರಿಯೆ ನಡೆದಿದೆ. ಬೆಂಗಳೂರಿನ 64ನೇ ಸಿಸಿಹೆಚ್​ ನ್ಯಾಯಾಲಯಕ್ಕೆ ಎಲ್ಲ ಆರೋಪಿಗಳು ಇಂದು (ನವೆಂಬರ್ 3) ಹಾಜರಾದರು. ದರ್ಶನ್ (Darshan), ಪವಿತ್ರಾ ಗೌಡ ಸೇರಿದಂತೆ ಎಲ್ಲ ಆರೋಪಿಗಳು ಕೂಡ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ. ಹಾಗಾಗಿ ಮುಂದಿನ ಹಂತದ ಸಾಕ್ಷಿಗಳ ವಿಚಾರಣೆಗೆ ನ್ಯಾಯಾಲಯ ದಿನಾಂಕ ನಿಗದಿ ಮಾಡಿದೆ. ನವೆಂಬರ್ 10ರಂದು ವಿಚಾರಣೆಗೆ ದಿನಾಂಕ ನಿಗದಿ ಆಗಿದೆ.

ಇದು ಹೈಪ್ರೊಫೈಲ್ ಕೇಸ್ ಆದ್ದರಿಂದ ಕೋರ್ಟ್ ಹಾಲ್​​ನಲ್ಲಿ ಅನೇಕ ವಕೀಲರು ಕಿಕ್ಕಿರಿದಿದ್ದರು. ಜನದಟ್ಟಣೆಯನ್ನು ನೋಡಿ ನ್ಯಾಯಾಧೀಶರು ನಕ್ಕರು. ಕೇಸ್​​ಗೆ ಸಂಬಂಧ ಇರದ ಎಲ್ಲರೂ ಹೊರಗೆ ಹೋಗುವಂತೆ ಸೂಚಿಸಲಾಯಿತು. ಆದರೂ ಕೂಡ ಗದ್ದಲ ನಿಲ್ಲಲಿಲ್ಲ. ಬಳಿಕ ಮುಚ್ಚಿದ ಕೊಠಡಿಯಲ್ಲಿ ವಿಚಾರಣೆ ನಡೆಸಲು ಜಡ್​ಜ್ ನಿರ್ಧರಿಸಿದರು. ಜನರನ್ನು ಕದಲಿಸಿದ ನಂತರ ದೋಷಾರೋಷಣೆ ನಿಗದಿ ಪ್ರಕ್ರಿಯೆ ಆರಂಭ ಮಾಡಲಾಯಿತು.

ಇದನ್ನೂ ಓದಿ: ಹಣೆಗೆ ಕುಂಕುಮ ಇಟ್ಟುಕೊಂಡು ಕೋರ್ಟ್ ವಿಚಾರಣೆಗೆ ದರ್ಶನ್ ಹಾಜರು; ಕಿಕ್ಕಿರಿದ ವಕೀಲರು

ಜಡ್ಜ್ ಸಮ್ಮುಖದಲ್ಲಿ ಆರೋಪಿಗಳನ್ನು ಪೊಲೀಸರು ನಿಲ್ಲಿಸಿದರು. ಪವಿತ್ರಾ ಗೌಡ, ದರ್ಶನ್ ಸೇರಿದಂತೆ ಒಬ್ಬೊಬ್ಬರ ಹೆಸರನ್ನೇ ಬೆಂಚ್ ಕ್ಲರ್ಕ್ ಕರೆದರು. ಪ್ರಮುಖ ಆರೋಪಿ ಪವಿತ್ರಾ ಗೌಡಗೆ ಒಂದಷ್ಟು ಪ್ರಶ್ನೆಗಳನ್ನು ಜಡ್ಜ್ ಕೇಳಿದರು. ಕೊಲೆ, ಅಪಹರಣ, ಸಾಕ್ಷಿನಾಶ, ಅಕ್ರಮ ಕೂಟ, ಕ್ರಿಮಿನಲ್ ಒಳಸಂಚು ಸೇರಿದಂತೆ ಹಲವು ಆರೋಪಗಳನ್ನು ದರ್ಶನ್ ಮೇಲೆ ಹೊರಿಸಲಾಗಿದೆ. ಎಲ್ಲ ಆರೋಪಿಗಳ ಎದುರು ದೋಷಾರೋಪಗಳನ್ನು ಓದಿ ಹೇಳಲಾಯಿತು. ಆರೋಪ ಒಪ್ಪಿಕೊಂಡರೆ ಶಿಕ್ಷೆ ಪ್ರಕಟ ಆಗುತ್ತಿತ್ತು. ಆರೋಪಗಳನ್ನು ಒಪ್ಪಿಕೊಳ್ಳದ ಕಾರಣ ಸಾಕ್ಷ್ಯಗಳ ವಿಚಾರಣೆಗೆ ದಿನಾಂಕ ನಿಗದಿ ಆಗಿದೆ.

ಹಲವು ದಿನಗಳಿಂದ ದರ್ಶನ್ ಮತ್ತು ಪವಿತ್ರಾ ಗೌಡ ಅವರು ಭೇಟಿ ಆಗಿರಲಿಲ್ಲ. ಇಬ್ಬರೂ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಬೇರೆ ಬೇರೆ ಬ್ಯಾರಕ್​​ನಲ್ಲಿ ಇರುವ ಕಾರಣ ಅವರಿಗೆ ಭೇಟಿ ಸಾಧ್ಯವಾಗಿರಲಿಲ್ಲ. ಇಂದು ಕೋರ್ಟ್​​ನಲ್ಲಿ ವಿಚಾರಣೆಗೆ ಹಾಜರಾಗಿದ್ದಾಗ ಅವರಿಬ್ಬರು ಮುಖಾಮುಖಿ ಆದರು. ಜಡ್ಜ್ ಮುಂದೆ ಹಾಜರಾಗಿದ್ದಾಗ ಪವಿತ್ರಾ ಹಿಂದೆ ದರ್ಶನ್ ನಿಂತಿದ್ದರು. ಆ ವೇಳೆ ಮುಂದೆ ಬರುವಂತೆ ಪವಿತ್ರಾ ಗೌಡ ಕರೆದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:53 pm, Mon, 3 November 25