ಟವರ್ ಲೊಕೇಶನ್ ಬಗ್ಗೆ ಕೋರ್ಟ್​ನಲ್ಲಿ ಶಾಕಿಂಗ್ ವಿಚಾರ ರಿವೀಲ್ ಮಾಡಿದ ದರ್ಶನ್ ಪರ ವಕೀಲ

| Updated By: ರಾಜೇಶ್ ದುಗ್ಗುಮನೆ

Updated on: Oct 10, 2024 | 12:53 PM

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಬಂಧನಕ್ಕೆ ಒಳಗಾಗಿರೋ ಆರೋಪಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಇಂದು (ಅಕ್ಟೋಬರ್ 10) 57ನೇ ಸಿಸಿಹೆಚ್ ಕೋರ್ಟ್‌ನಲ್ಲಿ ನಡೆದಿದೆ. ದರ್ಶನ್ ಪರ ಅವರ ವಕೀಲ ನಾಗೇಶ್ ಅವರು ವಾದ ಮಂಡನೆ ಮಾಡಿದ್ದಾರೆ.

ಟವರ್ ಲೊಕೇಶನ್ ಬಗ್ಗೆ ಕೋರ್ಟ್​ನಲ್ಲಿ ಶಾಕಿಂಗ್ ವಿಚಾರ ರಿವೀಲ್ ಮಾಡಿದ ದರ್ಶನ್ ಪರ ವಕೀಲ
ದರ್ಶನ್-ನಾಗೇಶ್
Follow us on

ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್‌ನಲ್ಲಿ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆಯ ವಾದ-ಪ್ರತಿವಾದ ನಡೆಯುತ್ತಿದೆ. ದರ್ಶನ್ ಪರ ವಕೀಲ ಸಿವಿ ನಾಗೇಶ್ ಅವರು ವಾದ ಮಾಡಿದ್ದರು. ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಲಾಗಿದೆ ಎಂದು ಅವರು ಈ ಮೊದಲು ಆರೋಪಿಸಿದ್ದರು. ಇದಕ್ಕೆ ಸರ್ಕಾರಿ ವಕೀಲ ಪ್ರಸನ್ನ ಕುಮಾರ್ ಕೌಂಟರ್ ನೀಡಿದ್ದರು. ಇದಕ್ಕೆ ಪ್ರತಿಯಾಗಿ ನಾಗೇಶ್ ಅವರು ವಾದ ಮಂಡನೆ ಮಾಡುತ್ತಿದ್ದಾರೆ. ಅವರ ವಾದಗಳ ಬಗ್ಗೆ ಇಲ್ಲಿದೆ ವಿವರ.

ಎಲ್ಲಾ ಆರೋಪಿಗಳು ಹಾಗೂ ಸಾಕ್ಷಿಗಳ ಟವರ್ ಲೊಕೇಶನ್ ಒಂದೇ ಕಡೆಯಲ್ಲಿ ಇತ್ತು ಎಂದು ಪ್ರಸನ್ನ ಕುಮಾರ್ ವಾದ ಮಂಡಿಸಿದ್ದರು. ಇದಕ್ಕೆ ನಾಗೇಶ್ ಪ್ರತಿಕ್ರಿಯೆ ನೀಡಿದ್ದಾರೆ. ‘ಎಸ್​​ಪಿಪಿ ಪ್ರಸನ್ ಅವರನ್ನು ತನಿಖಾಧಿಕಾರಿ ತಪ್ಪು ದಾರಿಗೆಳೆದಿದ್ದಾರೆ. ಜೂನ್ 9ರಂದು ಗೂಗಲ್ ಅಡ್ರೆಸ್, ಟವರ್ ಲೊಕೇಷನ್, ಗೂಗಲ್ ಮ್ಯಾಪ್ ಆಧರಿಸಿದ ದಾಖಲೆ ಸಲ್ಲಿಕೆ ಆಗಿದೆ. ಇದೇ ತಂತ್ರಜ್ಞಾನ ಆಧರಿಸಿ ಬೇರೆಡೆ ಇದ್ದರೆಂದು ಸಾಬೀತುಮಾಡಬಹುದು. ದರ್ಶನ್ ಕೃತ್ಯದ ಸಮಯದಲ್ಲಿ ಬೇರೆ ಕಡೆ ಇದ್ದರೆಂದು ತೋರಿಸಬಹುದು. ನಾನು ಇಲ್ಲಿ ನಿನ್ನೆ ಕುಳಿತಿದ್ದೆ. ಆದರೆ, ಹೈಕೋರ್ಟ್​ನಲ್ಲಿ ಕುಳಿತಿರುವಂತೆ ತೋರಿಸಬಹುದು. ಟವರ್ ಲೊಕೇಷನ್ ಆಧರಿಸಿ ನಡೆಸಿದ ತನಿಖೆಗೆ ಮಹತ್ವವಿಲ್ಲ’ ಎಂದು ನಾಗೇಶ್ ಹೇಳಿದ್ದಾರೆ.

‘ಆರೋಪಪಟ್ಟಿಯಲ್ಲಿ ಗೂಗಲ್ ಮ್ಯಾಪ್ ಆಧರಿಸಿ ನಕ್ಷೆ ಸಿದ್ಧಪಡಿಸಿದ್ದಾರೆ. ಈ ನಕ್ಷೆಯಲ್ಲಿ ಎಲ್ಲ ಆರೋಪಿಗಳ ಫೋಟೋ ತೋರಿಸಿದ್ದಾರೆ. ಆದರೆ ಇದು ಪೊಲೀಸರು ತಮಗೆ ಬೇಕಾದಂತೆ ಸಿದ್ಧಪಡಿಸಿರುವ ನಕ್ಷೆ. ಇದು ಸ್ಯಾಟ್​​ಲೈಟ್ ಪಿಕ್ಚರ್ ಆಧರಿಸಿದ ಮ್ಯಾಪ್ ಅಲ್ಲ. ದರ್ಶನ್ ಫೋಟೋವನ್ನೂ ಈ ಮ್ಯಾಪ್​ನಲ್ಲಿ ಅಂಟಿಸಿದ್ದು ಪೊಲೀಸ್ ಹೆಡ್​ಕಾನ್ಸ್​ಟೇಬಲ್’ ಎಂದಿದ್ದಾರೆ ನಾಗೇಶ್.

ಇದನ್ನೂ ಓದಿ: ‘ಜಾಮೀನು ಅರ್ಜಿ ವಿಚಾರಣೆಯಷ್ಟೇ, ಕೂದಲು ಸೀಳಿದಂತೆ ಸಾಕ್ಷ್ಯಗಳ ವಿಶ್ಲೇಷಣೆ ಬೇಡ’; ದರ್ಶನ್ ಪರ ವಕೀಲರ ವಾದಕ್ಕೆ ಸರ್ಕಾರಿ ವಕೀಲರ ಕೌಂಟರ್

‘ಲೊಕೇಷನ್ ಆಧಾರದಲ್ಲಿ ಇದನ್ನು ಸಿದ್ಧಪಡಿಸಲಾಗಿದೆ ಎಂದು ಪೊಲೀಸರೇ ಬರೆದಿದ್ದಾರಲ್ಲ’ ಎಂದರು ಜಡ್ಜ್​ ಜೈಶಂಕರ್. ಇದು ನಕಲಿ ಎಂಬ ವಾದವನ್ನು ನಾಗೇಶ್ ಮುಂದಿಟ್ಟಿದ್ದಾರೆ. ‘ಇವರು ಸಿದ್ಧಪಡಿಸಿರುವುದೇ ನಕಲಿ ನಕ್ಷೆ. ಇದನ್ನು ನಾನು ಅವರು ಕೊಟ್ಟಿರುವ ದಾಖಲೆಯಲ್ಲೇ ತೋರಿಸುತ್ತಿದ್ದೇನೆ. ತನಿಖಾಧಿಕಾರಿ ನೀಡಿದ ಮಾಹಿತಿ ಮೇರೆಗೆ ಇದನ್ನು ಸಿದ್ಧಪಡಿಸಲಾಗಿದೆ. ಈ ನಕ್ಷೆಗೆ ಯಾವುದೇ ಮಹತ್ವ ಕೊಡಬಾರದು’ ಎಂದು ನಾಗೇಶ್ ಹೇಳಿದ್ದಾರೆ.

‘ಪಟ್ಟಣಗೆರೆ ಶೆಡ್​ನಲ್ಲಿ ಕೆಲಸ ಮಾಡುತ್ತಿರುವವರ ವಿವರ ಸಾಕ್ಷಿಯ ಹೇಳಿಕೆಯಲ್ಲಿದೆ. ಇದನ್ನು ಆಧರಿಸಿ ಅವರೆಲ್ಲರ ಫೋಟೋ ಬಳಸಿ ನಕ್ಷೆ ತಯಾರಿಸಿದ್ದಾರೆ. ಸಾಮಾನ್ಯವಾಗಿ ಆರೋಪಿಗಳನ್ನು ಬಂಧಿಸಿದಾಗ ಅವರ ಮೊಬೈಲ್ ಸೀಜ್ ಮಾಡಲಾಗುತ್ತದೆ. ಅದರಲ್ಲಿನ ಮಾಹಿತಿ ಆಧರಿಸಿ ಕೃತ್ಯದ ಸಮಯದ ಲೊಕೇಷನ್ ಪಡೆಯಲಾಗುತ್ತದೆ. ಆದರೆ ಸಾಕ್ಷಿಗಳ ಮೊಬೈಲ್ ಸೀಜ್ ಮಾಡದೇ ಅವರ ಲೊಕೇಷನ್ ಹೇಗೆ ಪಡೆದರು? ಹೀಗಾಗಿ ಸೀನ್ ಆಫ್ ಅಫೆನ್ಸ್ ಚಿತ್ರಣವೇ ನಂಬಲಸಾಧ್ಯ’ ಎಂದು ನಾಗೇಶ್ ಹೇಳಿದ್ದಾರೆ.

‘ಗೂಗಲ್ ಅಡ್ರೆಸ್ ಪಡೆದಿಲ್ಲ, ಕಾಲ್ ರೆಕಾರ್ಡ್ಸ್ ಸಂಗ್ರಹಿಸಿಲ್ಲ.. ಅದ್ಯಾವುದೂ ಇಲ್ಲದೇ ಈ ಸಾಕ್ಷಿಗಳು ಕೃತ್ಯದ ಸ್ಥಳದಲ್ಲಿದ್ದರೆಂದು ಹೇಗೆ ಹೇಳುತ್ತಾರೆ? ಕೃತ್ಯ ನಡೆದಾಗ ಇವರೆಲ್ಲರೂ ಇದ್ದರೆಂಬಂತೆ ಬಿಂಬಿಸಲಾಗಿದೆ. ಪೊಲೀಸರು ಸಿದ್ಧಪಡಿಸಿದ ಈ ನಕ್ಷೆ ವಿಶ್ವಾಸಾರ್ಹವಲ್ಲ’ ಎಂದು ವಾದ ಮಾಡಿದ್ದಾರೆ ನಾಗೇಶ್.

‘ಎ1, 2, 5, 10, 13 ಎಲ್ಲರ ನಿವಾಸಗಳೂ ಈ ಪ್ರದೇಶದಲ್ಲಿಯೇ ಇವೆ. ಆ ಪ್ರದೇಶದಲ್ಲಿರುವವರ ನಿವಾಸಿಗಳೆಲ್ಲರ ಲೊಕೇಷನ್ ಕೃತ್ಯದ ಸ್ಥಳದಲ್ಲೇ ದೊರೆಯುತ್ತದೆ. ಹೀಗಾಗಿ ಟವರ್ ಲೊಕೇಷನ್ ಸಿಕ್ಕಿದೆ ಎಂದು ಹೇಳಿದ ಮಾತ್ರಕ್ಕೆ ಅವರು ಕೃತ್ಯದ ಸ್ಥಳದಲ್ಲಿದ್ದರೆನ್ನಲಾಗುವುದಿಲ್ಲ. ಪಟ್ಟಣಗೆರೆ ಶೆಡ್​​ನ 5 ಕಿ.ಮೀ ವ್ಯಾಪ್ತಿಯನ್ನು ಈ ಟವರ್ ಲೊಕೇಷನ್ ತೋರಿಸುತ್ತದೆ’ ಎಂದು ನಾಗೇಶ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.