ಕಿಚ್ಚ-ದಚ್ಚು ಸ್ನೇಹದ ನೆನಪು, ವಿರಸದಲ್ಲೂ ಇಣುಕುವ ಘನತೆ

| Updated By: Digi Tech Desk

Updated on: Aug 02, 2024 | 3:10 PM

ಸ್ನೇಹಿತರ ದಿನ ಹತ್ತಿರದಲ್ಲಿದೆ. ಈ ಸಮಯದಲ್ಲಿ ಗಾಢ ಸ್ನೇಹಿತರಾಗಿದ್ದು ಆ ಬಳಿಕ ಸಣ್ಣ ಮುನಿಸಿನಿಂದ ದೂರಾದ ಕಿಚ್ಚ ಸುದೀಪ್ ಹಾಗೂ ದರ್ಶನ್ ತೂಗುದೀಪ ಅವರ ಗೆಳೆತನದ ಬಗ್ಗೆ ವಿಶ್ಲೇಷಣೆ ಇಲ್ಲಿದೆ.

ಕಿಚ್ಚ-ದಚ್ಚು ಸ್ನೇಹದ ನೆನಪು, ವಿರಸದಲ್ಲೂ ಇಣುಕುವ ಘನತೆ
Follow us on

ಸಿನಿಮಾಗಳಲ್ಲಿ ಆಗಿರಬಹುದು ಅಥವಾ ಸಿನಿಮಾದ ಹೊರಗೆ ಆಗಿರಬಹುದು, ಕನ್ನಡ ಚಿತ್ರರಂಗದಲ್ಲಿ ಸ್ನೇಹಕ್ಕೆ ವಿಶೇಷ ಸ್ಥಾನವಿದೆ. ಚಿತ್ರರಂಗವನ್ನು ಗಟ್ಟಿಯಾಗಿ ಹಿಡಿದು ನಿಲ್ಲಿಸಿರುವ ಅಂಶಗಳಲ್ಲಿ ಸ್ನೇಹವೂ ಒಂದು. ಡಾ ರಾಜ್​ಕುಮಾರ್-ಚಿ ಉದಯ್ ಶಂಕರ್, ವಿಷ್ಣುವರ್ಧನ್-ಅಂಬರೀಶ್ ಸ್ನೇಹಕ್ಕೆ ಮಾದರಿ ಹಾಕಿಕೊಟ್ಟ ಮಹನೀಯರಾದರೆ, ಯೋಗರಾಜ್ ಭಟ್-ಸೂರಿ, ದಿಗಂತ್-ಯೋಗಿ, ರಕ್ಷಿತ್ ಶೆಟ್ಟಿ-ರಿಷಬ್ ಶೆಟ್ಟಿ-ರಾಜ್ ಶೆಟ್ಟಿ-ಪ್ರಮೋದ್ ಶೆಟ್ಟಿ, ದುನಿಯಾ ವಿಜಿ-ಗಣೇಶ್ ಇನ್ನೂ ಹಲವರು ಈ ಗೆಳೆತನವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಚಿತ್ರರಂಗದ ಗೆಳೆಯರ ಬಗ್ಗೆ ಮಾತನಾಡುವಾಗ ದರ್ಶನ್-ಸುದೀಪ್ ಗೆಳೆತನ ಮತ್ತು ಅವರ ಮಧ್ಯೆ ಮೂಡಿದ ಬಿರುಕಿನ ಬಗ್ಗೆ ಚರ್ಚಿಸದೆ ಇರಲಾಗದು. ಸ್ನೇಹಿತರ ದಿನದ ಸಂದರ್ಭದಲ್ಲಿ ದರ್ಶನ್ ಹಾಗೂ ಸುದೀಪ್​ರ ಗೆಳೆತನ ಮತ್ತು ವಿರಸದ ಬಗ್ಗೆ ಒಂದು ಇಣುಕು ನೋಟ ಇಲ್ಲಿದೆ.

ದರ್ಶನ್ ಹಾಗೂ ಸುದೀಪ್ ಇಬ್ಬರೂ ಚಿತ್ರರಂಗದ ಬಹು ಎತ್ತರದ ಸ್ಟಾರ್ ನಟರು. ಇಬ್ಬರಿಗೂ ದೊಡ್ಡ ಅಭಿಮಾನಿ ವರ್ಗವಿದೆ. ಇಬ್ಬರೂ ಬಹುಕಾಲ ಒಳ್ಳೆಯ ಸ್ನೇಹಿತರಾಗಿದ್ದರು. ಇವರ ಸ್ನೇಹವನ್ನು ರಜನೀಕಾಂತ್-ಕಮಲ್ ಹಾಸನ್ ಗೆಳೆತನಕ್ಕೆ ಹೋಲಿಸಲಾಗುತ್ತಿತ್ತು. ಇಬ್ಬರೂ ಪರಸ್ಪರ ಆತ್ಮೀಯರಾಗಿದ್ದರು, ಪರಸ್ಪರರ ಸಿನಿಮಾಗಳಿಗೆ ಬೆಂಬಲ ನೀಡುತ್ತಾ, ಪರಸ್ಪರರ ಕಷ್ಟ ಸುಖಗಳಲ್ಲಿ ಪಾಲುದಾರರಾಗುತ್ತ ಇದ್ದರು. ಉತ್ತಮ ಸ್ನೇಹತರಿಗೆ ಮಾದರಿಯಾಗಿದ್ದರು. ಆದರೆ ಸುದೀಪ್ ಆಡಿದ ಮಾತೊಂದರಿಂದ ಹಾಗೂ ದರ್ಶನ್​ರ ಮುಂಗೋಪಿತನದಿಂದ ಇಬ್ಬರ ಸ್ನೇಹ ಮುರಿದು ಬಿತ್ತು.

ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸುದೀಪ್, ‘ದರ್ಶನ್ ಅವರನ್ನು ಮೊದಲು ನೋಡಿದ ದಿನ ನೆನಪಿಸಿಕೊಂಡಿದ್ದರು, ಅಲ್ಲದೆ ದರ್ಶನ್​ರ ಮೊದಲ ಸಿನಿಮಾ ‘ಮೆಜೆಸ್ಟಿಕ್’ ಅವಕಾಶ ತಮಗೆ ಬಂದಿತ್ತು, ಆ ಅವಕಾಶವನ್ನು ತಾವೇ ದರ್ಶನ್​ಗೆ ಕೊಡಿಸಿದ್ದಾಗಿ ಹೇಳಿದ್ದರು. ಇದು ದರ್ಶನ್​ರ ಈಗೋಗೆ ಪೆಟ್ಟು ಕೊಟ್ಟಿತು. ಕೂಡಲೇ ಟ್ವೀಟ್ ಮಾಡಿದ ದರ್ಶನ್, ‘ನಾನು ಹಾಗೂ ಸುದೀಪ್ ಇನ್ನು ಮುಂದೆ ಗೆಳೆಯರಲ್ಲ’ ಎಂದುಬಿಟ್ಟರು. ಸುದೀಪ್ ಸತ್ಯವನ್ನೇ ಹೇಳಿದ್ದಾರೆ ಎಂದು ಆ ಬಳಿಕ ‘ಮೆಜೆಸ್ಟಿಕ್’ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾದ ಭಾಮಾ ಹರೀಶ್ ಹೇಳಿದರಾದರೂ. ಅಷ್ಟರಲ್ಲೇ ಇಬ್ಬರ ಸ್ನೇಹ ಮುರಿದು ಬಿದ್ದು ಬಹು ಸಮಯವಾಗಿತ್ತು.

ಇದನ್ನೂ ಓದಿ:ದರ್ಶನ್​ಗೆ ಸಿಗಲ್ಲ ಮನೆಯೂಟ? ಎದುರಾಗಿದೆ ಮತ್ತೊಂದು ಕಂಟಕ

ಅದೇ ಸುದೀಪ್ ಅವರು ಅಂಥಹುದೇ ಒಂದು ಸಂದರ್ಶನದಲ್ಲಿ ದರ್ಶನ್ ಅವರನ್ನು ವಹಿಸಿಕೊಂಡು ಮಾತನಾಡಿದ್ದರು, ನಟ ಗಣೇಶ್ ಹೊಸದಾಗಿ ಚಿತ್ರರಂಗಕ್ಕೆ ಬಂದ ಸಮಯದಲ್ಲಿ, ಗಣೇಶ್ ಅವರನ್ನು ದರ್ಶನ್ ಜೊತೆ ಹೋಲಿಸಿದಾಗ, ಸಿಟ್ಟಾಗಿದ್ದ ಸುದೀಪ್, ಗೆಳೆಯನನ್ನು ವಹಿಸಿಕೊಂಡು ಆಕ್ರೋಶದಿಂದಲೇ ಮಾತನಾಡಿದ್ದರು. ಆದರೆ ಅದನ್ನು ದರ್ಶನ್ ಮರೆತರು ಎನಿಸುತ್ತದೆ. ಇನ್ನು ಸುದೀಪ್, ‘ಸತ್ಯ ಕಹಿ, ಅದನ್ನು ಜೇನಿನಲ್ಲಿ ಅದ್ದಿಯೇ ಹೇಳಬೇಕು’ ಎಂಬುದನ್ನು ತಿಳಿದುಕೊಂಡಿದ್ದಿದ್ದರೆ ಇಂದು ಇಬ್ಬರ ಗೆಳೆತನ ಉಳಿದಿರುತ್ತಿತ್ತೇನೋ.

ಆದರೆ ಗಮನಿಸಬೇಕಾದ ಅಂಶವೆಂದರೆ ದರ್ಶನ್ ಹಾಗೂ ಸುದೀಪ್ ದೂರಾದ ಮೇಲೆ ಪರಸ್ಪರರ ಬಗ್ಗೆ ಘನತೆಯಿಂದಲೇ ವರ್ತಿಸಿದ್ದಾರೆ. ಹೌದು, ಅವರ ಅಭಿಮಾನಿಗಳು ಪರಸ್ಪರ ಕಿತ್ತಾಡಿಕೊಳ್ಳುತ್ತಾರೆ, ತೀರ ಕೆಟ್ಟ ಭಾಷೆಗಳನ್ನು ಬಳಸುತ್ತಾರೆ. ಕೈ-ಕೈ ಮಿಲಾಯಿಸಿದ್ದೂ ಇದೆ. ಆದರೆ ಸುದೀಪ್ ಮತ್ತು ದರ್ಶನ್ ಪರಸ್ಪರರ ಮೇಲೆ ಜಿದ್ದಿಗೆ ಬೀಳದೆ ಘನತೆಯಿಂದಲೇ ವರ್ತಿಸಿದ್ದಾರೆ ಎನ್ನಬಹುದು. ಇಬ್ಬರಿಗೂ ಆಪ್ತರಾಗಿರುವ ಮಂದಿ ಹಲವರು ಚಿತ್ರರಂಗದಲ್ಲಿ ಇದ್ದಾರೆ. ಸುದೀಪ್​ಗೆ ಆಪ್ತ ಎಂಬ ಕಾರಣಕ್ಕೆ, ದರ್ಶನ್ ಯಾರನ್ನೂ ದೂರ ಮಾಡಿದ್ದು ಕಾಣುವುದಿಲ್ಲ, ಇನ್ನು ದರ್ಶನ್​ಗೆ ಆಪ್ತ ಎಂಬ ಕಾರಣಕ್ಕೆ ಸುದೀಪ್ ಯಾರನ್ನೂ ದೂರ ಮಾಡಿದ್ದು ಕಾಣುವುದಿಲ್ಲ. ಇಬ್ಬರೂ ಮಾಧ್ಯಮಗಳ ಮುಂದೆ ಹೇಳಿರುವಂತೆ, ತಮ್ಮ ಬಳಿ ಬೇರೊಬ್ಬ ನಟನ ಬಗ್ಗೆ ಕೆಟ್ಟದಾಗಿ ಮಾತನಾಡುವಂತಿಲ್ಲ, ಅಂಥಹವರನ್ನು ಕೂಡಲೇ ಹೊರಗಟ್ಟುತ್ತಾರಂತೆ.

ಇದನ್ನೂ ಓದಿ:‘ದರ್ಶನ್​ಗೂ ಇತರೆ ವಿಚಾರಣಾಧೀನ ಖೈದಿಗಳಿಗೂ ವ್ಯತ್ಯಾಸವಿಲ್ಲ’; ಮನೆ ಊಟ ಕೇಳಿದ ನಟನಿಗೆ ಕೋರ್ಟ್ ಚಾಟಿ

ಈ ಹಿಂದೆ ‘ಕ್ರಾಂತಿ’ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ನಟ ದರ್ಶನ್ ಮೇಲೆ ಚಪ್ಪಲಿ ತೂರಲಾಗಿತ್ತು. ಇದು ದರ್ಶನ್​ಗೆ ಮತ್ತು ಅವರ ಅಭಿಮಾನಿಗಳಿಗೆ ತೀವ್ರ ಬೇಸರ ಮೂಡಿಸಿತ್ತು. ಆ ಸಮಯದಲ್ಲಿ ಕಿಚ್ಚ ಸುದೀಪ್ ಸುದೀರ್ಘವಾದ ಪತ್ರ ಬರೆದು ದರ್ಶನ್​ಗೆ ಬೆಂಬಲ ವ್ಯಕ್ತಪಡಿಸಿದ್ದರು. ದರ್ಶನ್​ಗೆ ಮೇಲೆ ಆದ ಹಲ್ಲೆಯನ್ನು ತೀವ್ರವಾಗಿ ಖಂಡಿಸಿದ್ದರು. ಬಳಿಕ ದರ್ಶನ್ ಸಹ, ಸುದೀಪ್​ಗೆ ಟ್ವೀಟ್ ಮಾಡಿ ಧನ್ಯವಾದ ಹೇಳಿದ್ದರು.

ಈಗ ದರ್ಶನ್ ದುಸ್ಥಿತಿಯಲ್ಲಿದ್ದಾರೆ. ಸುದೀಪ್ ಈ ಬಗ್ಗೆ ಯಾವುದೇ ದೂಷನಾತ್ಮಕ ಅಥವಾ ನಿಂದನಾತ್ಮಕ ಪ್ರತಿಕ್ರಿಯೆ ಈವರೆಗೆ ನೀಡಿಲ್ಲ. ಬದಲಿಗೆ ಅಂತರ ಕಾಯ್ದುಕೊಂಡಿದ್ದಾರೆ. ‘ನಿನ್ನ ಗೆಳೆಯರು ಎಂಥಹವರು ಹೇಳು, ನೀನು ಎಂಥವನು ಹೇಳುತ್ತೀನಿ’ ಎಂಬ ಮಾತೊಂದಿದೆ. ನಿಮ್ಮ ಗೆಳೆಯರ ವ್ಯಕ್ತಿತ್ವ ನಿಮ್ಮ ವ್ಯಕ್ತಿತ್ವ ಮೇಲೆ ಗಾಢ ಪ್ರಭಾವ ಬೀರುತ್ತದೆ. ಈಗ ದರ್ಶನ್​ಗೆ ಒದಗಿರುವ ದುಸ್ತಿತಿ ನೋಡಿದರೆ ಅದರಲ್ಲಿ ಅವರ ಗೆಳೆಯರ ಕೊಡುಗೆಯೂ ಇದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ದರ್ಶನ್​ಗೆ ಹೋಲಿಸಿದರೆ ಸುದೀಪ್, ಜೀವನದಲ್ಲಿ ಶಿಸ್ತು ಇರುವ ವ್ಯಕ್ತಿ, ಒಂದೊಮ್ಮೆ ದರ್ಶನ್ ಹಾಗೂ ಸುದೀಪ್ ಇಂದಿಗೂ ಗೆಳೆಯರಾಗೇ ಉಳಿದಿದ್ದರೆ ದರ್ಶನ್​ಗೆ ಇಂದಿನ ಸ್ಥಿತಿ ಬರುತ್ತಿರಲಿಲ್ಲವೋ ಏನೋ?

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:36 pm, Thu, 1 August 24