AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಟ್ಟೂರಿನ ಚಿತ್ರಮಂದಿರಕ್ಕೆ ಅಚ್ಚರಿ ವಿಸಿಟ್ ಕೊಟ್ಟ ದುನಿಯಾ ವಿಜಿ

‘ಭೀಮ’ ಸಿನಿಮಾ ಪ್ರದರ್ಶನವಾಗುತ್ತಿದ್ದ ಆನೆಕಲ್ ನ ಅನ್ನಪೂರ್ಣೇಶ್ವರ ಚಿತ್ರಮಂದಿರಕ್ಕೆ ನಟ ದುನಿಯಾ ವಿಜಯ್ ಭೇಟಿ ನೀಡಿದ್ದರು. ಆನೆಕಲ್, ದುನಿಯಾ ವಿಜಯ್​ರ ಹುಟ್ಟೂರಾಗಿದ್ದು, ತಮ್ಮ ಊರಿನಲ್ಲಿಯೂ ಕ್ರೈಂ ರೇಟ್ ಹೆಚ್ಚಾಗುತ್ತಿರುವ ಬಗ್ಗೆ ದುನಿಯಾ ವಿಜಿ ಆತಂಕ ಹೊರಹಾಕಿದರು.

ಹುಟ್ಟೂರಿನ ಚಿತ್ರಮಂದಿರಕ್ಕೆ ಅಚ್ಚರಿ ವಿಸಿಟ್ ಕೊಟ್ಟ ದುನಿಯಾ ವಿಜಿ
ಮಂಜುನಾಥ ಸಿ.
|

Updated on: Aug 18, 2024 | 8:25 PM

Share

ದುನಿಯಾ ವಿಜಯ್ ನಟನೆಯ ‘ಭೀಮ’ ಸಿನಿಮಾ ಆಗಸ್ಟ್ 09 ರಂದು ಬಿಡುಗಡೆ ಆಗಿದ್ದು, ಹಿಟ್ ಎನಿಸಿಕೊಂಡಿದೆ. ಮೊದಲ ವಾರ ‘ಭೀಮ’ ಸಿನಿಮಾ ತುಂಬಿದ ಗೃಹಗಳ ಪ್ರದರ್ಶನ ಕಂಡಿದೆ. ಯುವ ಸಮೂಹ ಮಾದಕ ವಸ್ತುವಿನ ಚಟಕ್ಕೆ ಹೇಗೆ ಸಿಲುಕುತ್ತಿದೆ. ಬೆಂಗಳೂರಿನಲ್ಲಿ ಗಾಂಜಾ ಇನ್ನಿತರೆ ಮಾದಕ ವಸ್ತುಗಳ ಸರಬರಾಜು ಹೇಗಾಗುತ್ತಿದೆ. ಮಾದಕ ವಸ್ತುವಿನ ಪ್ರಸಾರಕ್ಕೆ ಬಡ ಕುಟುಂಬಗಳನ್ನು ಹೇಗೆ ಬಳಸಿಕೊಳ್ಳಲಾಗುತ್ತಿದೆ ಎಂಬುದನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಸಿನಿಮಾ ಗೆದ್ದ ಖುಷಿಯಲ್ಲಿರುವ ದುನಿಯಾ ವಿಜಯ್, ಚಿತ್ರಮಂದಿರಗಳಿಗೆ ಭೇಟಿ ನೀಡುತ್ತಾ ಸಿನಿಮಾಕ್ಕೆ ಇನ್ನಷ್ಟು ಪ್ರಚಾರ ನೀಡುವ ಕಾರ್ಯ ಮಾಡುತ್ತಿದ್ದು, ಇಂದು ತಮ್ಮ ಹುಟ್ಟೂರು ಆನೆಕಲ್​ನ ಚಿತ್ರಮಂದಿರಕ್ಕೆ ಭೇಟಿ ನೀಡಿ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದರು.

ಆನೇಕಲ್ ಪಟ್ಟಣದಲ್ಲಿರುವ ಅನ್ನಪೂರ್ಣೇಶ್ವರಿ ಚಿತ್ರಮಂದಿರಕ್ಕೆ ದುನಿಯಾ ವಿಜಯ್ ಇಂದು ಭೇಟಿ ನೀಡಿದ್ದರು. ಸಿನಿಮಾ ಪ್ರದರ್ಶನ ಆಗುತ್ತಿರುವ ವೇಳೆ ತನ್ನ ಮೆಚ್ಚಿನ ನಟ ಚಿತ್ರಮಂದಿರಕ್ಕೆ ಬಂದಿದ್ದು ಕಂಡು ಅಭಿಮಾನಿಗಳು ಖುಷಿಯಾದರು. ಚಿತ್ರಮಂದಿರಕ್ಕೆ ಭೇಟಿ ನೀಡಿದ ದುನಿಯಾ ವಿಜಯ್, ಸಿನಿಮಾ ನೋಡುತ್ತಿದ್ದ ಅಭಿಮಾನಿಗಳಿಂದ ಸಿನಿಮಾದ ಬಗ್ಗೆ ಅಭಿಪ್ರಾಯ ಕೇಳಿ ತಿಳಿದುಕೊಂಡರು. ಬಳಿಕ ಹಲವು ಅಭಿಮಾನಿಗಳು ದುನಿಯಾ ವಿಜಯ್ ಜೊತೆಗೆ ಸೆಲ್ಫಿ ಸಹ ಕ್ಲಿಕ್ಕಿಸಿಕೊಂಡರು.

ಬಳಿಕ ಮಾಧ್ಯಮದ ಬಳಿ ಮಾತನಾಡಿದ ದುನಿಯಾ ವಿಜಿ, ‘ನನ್ನೂರು ಆನೇಕಲ್ ಗೆ ಬಂದರೆ ನನಗೆ ಬಹಳ ಖುಷಿ ಆಗುತ್ತೆ. ನನ್ನೂರಿಗೆ ಬಂದಾಗ ಎಮೋಷನಲ್ ಆಗಿ ಬಿಡ್ತೀನಿ, ಆದರೆ ಇತ್ತೀಚೆಗೆ ಆನೇಕಲ್ ನಲ್ಲಿ ಕೂಡ ಕ್ರೈಮ್ ಜಾಸ್ತಿ ಆಗ್ತಿದೆ. ಇದರ ಬಗ್ಗೆ ನನಗೆ ತುಂಬಾ ನೋವಿದೆ, ಗಾಂಜಾ ಸೆದೋದು ಗಲಾಟೆ ಮಾಡಿಕೊಳ್ಳೊದು ಜಾಸ್ತಿಯಾಗಿದೆ. ಲಾಂಗು ಮಚ್ಚುಗಳಲ್ಲಿ ಹೊಡೆದಾಡೋದು ಹೆಚ್ಚಾಗ್ತಾ ಇದೇ, ಟಿವಿಯಲ್ಲಿ ನೋಡುತ್ತಿರ್ತೀನಿ, ಸುದ್ದಿಗಳನ್ನು ಸಹ ಓದ್ತಾ ಇರ್ತಿನಿ. ಆನೇಕಲ್ ಇಂತಹ ವಿಚಾರಗಳಿಗೆ ಹೆಸರುವಾಸಿ ಆಗಿರಲಿಲ್ಲ. ಇಲ್ಲಿ ಸಾಕಷ್ಟು ಮಹನೀಯರು ಹುಟ್ಟಿ ಸಾಧನೆಗಳನ್ನು ಮಾಡಿದ್ದಾರೆ ಅಂಥಯಾ ಸ್ಥಳ ಕೆಟ್ಟ ಕಾರಣಗಳಗೆ ಹೆಸರಾಗಬಾರದು’ ಎಂದಿದ್ದಾರೆ ವಿಜಿ.

ಇದನ್ನೂ ಓದಿ:ದರ್ಶನ್ ಹೆಸರು ಹೇಳುತ್ತಿದ್ದಂತೆ ಹೇಗಿತ್ತು ನೋಡಿ ದುನಿಯಾ ವಿಜಯ್ ಪ್ರತಿಕ್ರಿಯೆ

‘ಯುವ ಸಮುದಾಯ ಬದಲಾಗಬೇಕು. ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡೋಕೆ ಪೊಲೀಸರು ಕೂಡ ಹರಸಾಹಸ ಪಡುತ್ತಾ ಇದ್ದಾರೆ. ನಮ್ಮ ಪ್ರಯತ್ನವೂ ಇರುತ್ತದೆ’ ಎಂದ ದುನಿಯಾ ವಿಜಯ್, ‘ಸಲಗ 2’ ಬಗ್ಗೆ ಎದುರಾದ ಪ್ರಶ್ನೆಗೆ ಮೊದಲು ‘ಸಲಗ 2’ ಮಾಡಬೇಕೊ ಅಥವಾ ‘ಭೀಮ 2’ ಸಿನಿಮಾ ಮಾಡಬೇಕೋ ಎಂಬುದನ್ನು ನೋಡಬೇಕು. ಆ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ. ಆದರೆ ‘ಸಲಗ’ ಹಾಗೂ ‘ಭೀಮ’ ಅನ್ನು ಒಟ್ಟಿಗೆ ತೆರೆ ಮೇಲೆ ತರುವ ಪ್ರಯತ್ನ ಮಾಡುವ ಆಲೋಚನೆ ಇದೆ’ ಎಂದಿದ್ದಾರೆ.

‘ಭೀಮ’ ಸಿನಿಮಾ ಆಗಸ್ಟ್ 09ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯ್ತು. ದುನಿಯಾ ವಿಜಯ್ ಅವರೇ ನಿರ್ದೇಶನ ಮಾಡಿರುವ ಸಿನಿಮಾ ಇದು. ಕೆಲ ವರದಿಗಳ ಪ್ರಕಾರ ‘ಭೀಮ’ ಸಿನಿಮಾ ಈಗಾಗಲೇ 15 ಕೋಟಿ ಗಳಿಕೆ ಮಾಡಿದೆಯಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ