ಹಾಸ್ಯ ನಟ ದ್ವಾರಕೀಶ್​ ನಿಧನ: ದರ್ಶನ್​, ಸುದೀಪ್​ ಮೊದಲ ಪ್ರತಿಕ್ರಿಯೆ ಏನು?

ಚಂದನವನದ ಬೆಳವಣಿಗೆಯಲ್ಲಿ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್​ ಅವರು ಕೊಡುಗೆ ದೊಡ್ಡದು. ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗಕ್ಕೆ ನೋವಾಗಿದೆ. ನಟರಾದ ಕಿಚ್ಚ ಸುದೀಪ್​, ದರ್ಶನ್​, ಸತೀಶ್​ ನೀನಾಸಂ ಮುಂತಾದವರು ದ್ವಾರಕೀಶ್​ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಹಲವು ಸೆಲೆಬ್ರಿಟಿಗಳು ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.

ಹಾಸ್ಯ ನಟ ದ್ವಾರಕೀಶ್​ ನಿಧನ: ದರ್ಶನ್​, ಸುದೀಪ್​ ಮೊದಲ ಪ್ರತಿಕ್ರಿಯೆ ಏನು?
ಸುದೀಪ್​, ದ್ವಾರಕೀಶ್​, ದರ್ಶನ್​

Updated on: Apr 16, 2024 | 5:02 PM

ಬಣ್ಣದ ಲೋಕದಲ್ಲಿ ಸ್ಟಾರ್​ ಕಲಾವಿದನಾಗಿ ಮಿಂಚಿದ್ದ ಹಾಸ್ಯ ನಟ ದ್ವಾರಕೀಶ್​ (Dwarakish) ಅವರು 81ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಇಂದು (ಏಪ್ರಿಲ್​ 16) ಹೃದಯಾಘಾತದಿಂದ ಅವರು ಕೊನೆಯುಸಿರು ಎಳೆದರು. ದ್ವಾರಕೀಶ್​ ಅವರ ಅಗಲಿಕೆಯ ಸುದ್ದಿ ತಿಳಿದು ಚಿತ್ರರಂಗದ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಸ್ಟಾರ್​ ಕಲಾವಿದರಾದ ದರ್ಶನ್​, ಕಿಚ್ಚ ಸುದೀಪ್​ (Kichcha Sudeep) ಮುಂತಾದವರು ದ್ವಾರಕೀಶ್​ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಹಿರಿಯ ನಟನ ಆತ್ಮಕ್ಕೆ ಶಾಂತಿ ಕೋರಲಾಗಿದೆ. ದರ್ಶನ್​ (Darshan) ಅವರು ಬಂದು ಅಂತಿಮ ದರ್ಶನ ಪಡೆದಿದ್ದಾರೆ. ಅನೇಕ ಸೆಲೆಬ್ರಿಟಿಗಳು ಅಂತಿಮ ದರ್ಶನ ಪಡೆಯುತ್ತಿದ್ದಾರೆ.

‘ದ್ವಾರಕೀಶ್​ ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ಅದನ್ನು ಯಾವಾಗಲೂ ಸ್ಮರಿಸಲಾಗುವುದು. ಅವರ ಅಗಲಿಕೆಯಿಂದ ತೀವ್ರ ನೋವಾಗಿದೆ. ನೀವು ಸದಾ ನಮ್ಮ ಹೃದಯದಲ್ಲಿರುತ್ತೀರಿ ಸರ್​’ ಎಂದು ‘ಹೊಂಬಾಳೆ ಫಿಲ್ಸ್​’ ಸಂಸ್ಥೆಯ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಪೋಸ್ಟ್​ ಮಾಡಲಾಗಿದೆ.

‘ಕನ್ನಡ ಚಿತ್ರರಂಗದ ಮತ್ತೊಂದು ಅಮೂಲ್ಯ ಜೀವ ದ್ವಾರಕೀಶ್ ಅವರು ನಮ್ಮನ್ನೆಲ್ಲ ಅಗಲಿದ್ದಾರೆ. ಕನ್ನಡ ಚಲನಚಿತ್ರ ರಂಗವನ್ನು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಅವರ ಮಹಾನ್ ಕೊಡುಗೆಗಳನ್ನು ಮರೆಯಲಾಗದು, ಮರೆಯಕೂಡದು. ಅವರ ಕುಟುಂಬಕ್ಕೆ ತೀವ್ರವಾದ ಸಂತಾಪಗಳು. ಹಿರಿಯ ಚೇತನದ ಆತ್ಮಕ್ಕೆ ಶಾಂತಿ ಕೋರುತ್ತಾ’ ಎಂದು ನಟ ಕಿಚ್ಚ ಸುದೀಪ್​ ಅವರು ಪೋಸ್ಟ್ ಮಾಡಿದ್ದಾರೆ. ದ್ವಾರಕೀಶ್​ ಅವರ ಅಪರೂಪದ ಫೋಟೋಗಳನ್ನು ಸುದೀಪ್​ ಹಂಚಿಕೊಂಡಿದ್ದಾರೆ.

‘ಎಕ್ಸ್​’ (ಟ್ವಿಟರ್​) ಮೂಲಕ ನಟ ದರ್ಶನ್​ ಅವರು ಕೂಡ ದ್ವಾರಕೀಶ್​ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ‘ಕನ್ನಡ ಚಿತ್ರರಂಗದ ಧೀಮಂತ ನಿರ್ಮಾಪಕರಾಗಿ, ನಿರ್ದೇಶಕರಾಗಿ, ಜನಮೆಚ್ಚಿದ ಹಾಸ್ಯನಟ ‘ಪ್ರಚಂಡ ಕುಳ್ಳ’ನಾಗಿ 5 ದಶಕಗಳು ಸೇವೆ ಸಲ್ಲಿಸಿದ ನಮ್ಮೆಲ್ಲರ ಪ್ರೀತಿಯ ದ್ವಾರಕೀಶ್ ಸರ್ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ಭರಿಸುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ’ ಎಂದು ದರ್ಶನ್​ ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Dwarakish: ‘ದ್ವಾರಕೀಶ್​ ನಿಧನದಿಂದ ತೀವ್ರ ನೋವಾಗಿದೆ’: ಕಂಬನಿ ಮಿಡಿದ ರಜನಿಕಾಂತ್​

‘ಕನ್ನಡಕ್ಕೆ, ಕನ್ನಡ ಚಿತ್ರರಂಗಕ್ಕೆ ನಿಮ್ಮ ಸೇವೆ ಅಪಾರ. ನಮ್ಮ ಬಾಲ್ಯ, ಸಿನಿ ಬದುಕು ಚೆಂದವಾಗಿರಲು ನಿಮ್ಮ ಸಿನಿಮಾಗಳು ಕಾರಣ. ಕನ್ನಡ ಚಿತ್ರರಂಗದ ಶ್ರೀಮಂತಿಕೆಗೆ ನೀವು ಬಹು ಕಾರಣ. ಅಂತಿಮ ನಮನಗಳು ಸರ್. ಹೋಗಿ ಬನ್ನಿ.. ನಿಮ್ಮ ಹೆಜ್ಜೆ ಗುರುತುಗಳು ಸದಾ ಚಿರಾಯು’ ಎಂದು ನಟ ಸತೀಶ್​ ನೀನಾಸಂ ಅವರು ದ್ವಾರಕೀಶ್​ಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us