
ರಾಕಿಂಗ್ ಸ್ಟಾರ್ ಯಶ್ (Yash) ಭಾರತದ ಅತ್ಯಧಿಕ ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿದ್ದಾರೆ. ಅವರು ಪ್ರತಿ ಸಿನಿಮಾಗೆ 50 ಕೋಟಿ ರೂಪಾಯಿಗಿಂತ ಹೆಚ್ಚು ಹಣ ಪಡೆಯುತ್ತಾರೆ ಎಂಬ ಮಾತಿದೆ. ಆದರೆ ಅವರು ಕೇವಲ ನಿಗದಿತ ಸಂಭಾವನೆಗೆ ಸೀಮಿತವಾಗಿಲ್ಲ. ಲಾಭ ಹಂಚಿಕೆ ಮಾದರಿಯ ಮೂಲಕ ಅವರು ಇನ್ನಷ್ಟು ಹೆಚ್ಚು ಗಳಿಕೆ ಮಾಡುತ್ತಿದ್ದಾರೆ. ಈ ಕುರಿತು ಯಶ್ ಇತ್ತೀಚೆಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
‘ಆಪ್ ಕಿ ಅದಾಲತ್’ ಶೋನಲ್ಲಿ ಮಾತನಾಡಿದ್ದಾರೆ ಯಶ್. ತಾವು ಎಂದಿಗೂ ಕೇವಲ ನಟನಾಗಿ ಕೆಲಸ ಮಾಡಿಲ್ಲ ಎಂದಿದ್ದಾರೆ. ಕೆಜಿಎಫ್ಗಿಂತ ಮುಂಚಿನಿಂದಲೂ ಅವರು ನಿರ್ಮಾಪಕರ ಜೊತೆ ಪಾಲುದಾರಿಕೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅಡ್ವಾನ್ಸ್ ಹಣ ಪಡೆದು ನಿರ್ಮಾಪಕರನ್ನು ಸಂಕಷ್ಟಕ್ಕೆ ತಳ್ಳುವುದು ಅವರ ಶೈಲಿಯಲ್ಲ. ನಾವು ಒಟ್ಟಿಗೆ ಗಳಿಸಬೇಕು ಮತ್ತು ಒಟ್ಟಿಗೆ ನಷ್ಟ ಭರಿಸಬೇಕು ಎಂಬುದು ಅವರ ತತ್ವವಾಗಿದೆ. ಸಿನಿಮಾ ಗೆದ್ದರೆ ಮಾತ್ರ ತಮಗೆ ಅದಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಎಂದು ಅವರು ನಂಬಿದ್ದಾರೆ.
ತಮ್ಮ ಚಿತ್ರಜೀವನದ ಆರಂಭಿಕ ದಿನಗಳನ್ನು ಯಶ್ ನೆನಪಿಸಿಕೊಂಡಿದ್ದಾರೆ. ಟಿವಿ ಧಾರಾವಾಹಿಗಳ ಮೂಲಕ ಬಣ್ಣದ ಲೋಕಕ್ಕೆ ಬಂದ ಅವರು ನಂತರ ಸಿನಿಮಾರಂಗ ಪ್ರವೇಶಿಸಿದರು. ಆರಂಭದಲ್ಲಿ ಸ್ಕ್ರಿಪ್ಟ್ ನೀಡದ ಕಾರಣಕ್ಕೆ ಅವರು ಬರೋಬ್ಬರಿ ಹಲವು ಸಿನಿಮಾಗಳನ್ನು ನಿರಾಕರಿಸಿದ್ದರು. ಪಾತ್ರ ಮತ್ತು ಕಥೆ ಇಷ್ಟವಾಗದಿದ್ದರೆ ನಟಿಸಲು ಸಾಧ್ಯವಿಲ್ಲ ಎಂಬುದು ಅವರ ಖಡಕ್ ನಿಲುವಾಗಿತ್ತು. ತಾವು ನಂಬಿದ ಹಾದಿಯಲ್ಲಿ ಮುನ್ನಡೆದು ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
ಇದನ್ನೂ ಓದಿ:ಕೆಜಿಎಫ್ ಮಾಡದೆ ಹೊಸ ರಿಸ್ಕ್ ತಗೊಂಡಿದ್ದೇಕೆ? ಕೊನೆಗೂ ಮೌನ ಮುರಿದ ನಟ ಯಶ್
‘ಕೆಜಿಎಫ್’ ಸಿನಿಮಾ ಜಾಗತಿಕವಾಗಿ ನೂರಾರು ಕೋಟಿ ರೂಪಾಯಿ ಗಳಿಸಿ ಸಾಧನೆ ಮಾಡಿದೆ. 80 ಕೋಟಿ ಬಜೆಟ್ನಲ್ಲಿ ತಯಾರಾಗಿದ್ದ ಕೆಜಿಎಫ್ ದೊಡ್ಡ ಲಾಭ ತಂದುಕೊಟ್ಟಿತ್ತು. ಈಗ ಅವರ ಮುಂದಿನ ಚಿತ್ರ ಟಾಕ್ಸಿಕ್ 500 ಕೋಟಿಗೂ ಅಧಿಕ ಬಜೆಟ್ನಲ್ಲಿ ಮೂಡಿಬರುತ್ತಿದೆ. ಇದರ ಜೊತೆಗೆ ರಾಮಾಯಣ ಚಿತ್ರಕ್ಕೂ ಅವರು ಸಹ ನಿರ್ಮಾಪಕರಾಗಿದ್ದಾರೆ. ಅಭಿಮಾನಿಗಳ ಪ್ರೀತಿಗೆ ಧಕ್ಕೆ ಬಾರದಂತೆ ಕೆಲಸ ಮಾಡುವುದೇ ತಮ್ಮ ಗುರಿ ಎಂದು ಯಶ್ ಸ್ಪಷ್ಟಪಡಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.