ಚಿತ್ರರಂಗಕ್ಕೆ ಕಾಲಿಡುವುದಕ್ಕೂ ಮೊದಲು ಪುನೀತ್​ರನ್ನು ನೆನೆದ ಜನಾರ್ದನ ​ರೆಡ್ಡಿ ಮಗ ಕಿರೀಟಿ

ಚಿಕ್ಕ ವಯಸ್ಸಿನಲ್ಲೇ ಕಿರೀಟಿ ರೆಡ್ಡಿಗೆ ಸಿನಿಮಾರಂಗದ ಮೇಲೆ ಆಸಕ್ತಿ ಬೆಳೆದಿತ್ತು. ‘ಜಾಕಿ' ಚಿತ್ರ ತೆರೆಕಂಡಾಗ ಪುನೀತ್ ರಾಜ್‌ಕುಮಾರ್ ಅವರೊಟ್ಟಿಗೆ ಸಿನಿಮಾ ನೋಡುವ ಅವಕಾಶ ಕಿರೀಟಿಗೆ ಲಭ್ಯವಾಗಿತ್ತು. ಪುನೀತ್ ಕೂಡ ಆಗ ಕಿರೀಟಿಗೆ ಸಾಕಷ್ಟು ಸ್ಫೂರ್ತಿದಾಯಕ ಮಾತುಗಳನ್ನು ಆಡಿದ್ದರು.

ಚಿತ್ರರಂಗಕ್ಕೆ ಕಾಲಿಡುವುದಕ್ಕೂ ಮೊದಲು ಪುನೀತ್​ರನ್ನು ನೆನೆದ ಜನಾರ್ದನ ​ರೆಡ್ಡಿ ಮಗ ಕಿರೀಟಿ
ಕಿರೀಟಿ-ಪುನೀತ್
Follow us
| Updated By: ರಾಜೇಶ್ ದುಗ್ಗುಮನೆ

Updated on:Mar 03, 2022 | 6:55 PM

ಮಾಜಿ ಸಚಿವ ಜನಾರ್ದನ ​ರೆಡ್ಡಿ (Janardhan Reddy) ಮಗ ಕಿರೀಟಿ ರೆಡ್ಡಿ (Kireeti Reddy) ಚಿತ್ರರಂಗಕ್ಕೆ ಕಾಲಿಡೋಕೆ ರೆಡಿ ಆಗಿದ್ದಾರೆ. ಟಾಲಿವುಡ್‌ನ ಜನಪ್ರಿಯ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿರುವ ‘ವಾರಾಹಿ ಫಿಲ್ಮಂ ಪ್ರೊಡಕ್ಷನ್’ ನಿರ್ಮಾಣದ ಸಿನಿಮಾದಲ್ಲಿ ಕಿರೀಟಿ ನಟಿಸುತ್ತಿದ್ದಾರೆ. ರಾಧಾ ಕೃಷ್ಣ ನಿರ್ದೇಶನದಲ್ಲಿ ತೆಲುಗು-ಕನ್ನಡ ಭಾಷೆಯಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದ್ದು, ಈ ಚಿತ್ರದ ಮೂಲಕ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ಅವರನ್ನು ನಾಯಕನಾಗಿ ಪರಿಚಯಿಸಲಾಗುತ್ತಿದೆ. ಈಗ ಕಿರೀಟಿ ಅವರು ಪುನೀತ್​ ರಾಜ್​ಕುಮಾರ್ (Puneeth Rajkumar) ಜತೆಗೆ ಕಳೆದ ನೆನಪನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಚಿಕ್ಕ ವಯಸ್ಸಿನಲ್ಲೇ ಕಿರೀಟಿ ರೆಡ್ಡಿಗೆ ಸಿನಿಮಾರಂಗದ ಮೇಲೆ ಆಸಕ್ತಿ ಬೆಳೆದಿತ್ತು. ‘ಜಾಕಿ’ ಚಿತ್ರ ತೆರೆಕಂಡಾಗ ಪುನೀತ್ ರಾಜ್‌ಕುಮಾರ್ ಅವರೊಟ್ಟಿಗೆ ಸಿನಿಮಾ ನೋಡುವ ಅವಕಾಶ ಕಿರೀಟಿಗೆ ಲಭ್ಯವಾಗಿತ್ತು. ಪುನೀತ್ ಕೂಡ ಆಗ ಕಿರೀಟಿಗೆ ಸಾಕಷ್ಟು ಸ್ಫೂರ್ತಿದಾಯಕ ಮಾತುಗಳನ್ನು ಆಡಿದ್ದರು. ಅಂದು ತೆಗೆದ ಫೋಟೋ ಹಾಗೂ ಪುನೀತ್​ ಜತೆಗಿನ ಇತ್ತೀಚಿನ ಫೋಟೋ ಹಂಚಿಕೊಂಡಿದ್ದಾರೆ ಕಿರೀಟಿ. ಅಲ್ಲದೆ, ವಿಶೇಷ ಸಾಲುಗಳನ್ನು ಕೂಡ ಬರೆದುಕೊಂಡಿದ್ದಾರೆ.

‘ಈ ಎರಡು ಚಿತ್ರಗಳ ನಡುವಿನ ವ್ಯತ್ಯಾಸ 10 ವರ್ಷಗಳದ್ದು. ಆದರೂ, ಆ ನೆನಪುಗಳು ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ. 2010ರಲ್ಲಿ ‘ಜಾಕಿ’ ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ನಾನು ಅಪ್ಪು ಸರ್ ಅವರನ್ನು ಮೊದಲ ಸಲ ಭೇಟಿಯಾದೆ. ಅವರ ಡ್ಯಾನ್ಸ್, ಆ್ಯಕ್ಷನ್, ಸ್ಕ್ರೀನ್ ಪ್ರೆಸೆನ್ಸ್ ನೋಡಿ ಅಚ್ಚರಿಗೊಂಡಿದ್ದೆ. ಆದರೆ, ಅವರು ಆಫ್ ಸ್ಕ್ರೀನ್​ನಲ್ಲಿದ್ದ ರೀತಿ ಮನಸಿಗೆ ಹತ್ತಿರವಾಯಿತು. ನಾವು ಥಿಯೇಟರ್‌ನಿಂದ ನನ್ನ ಮನೆಗೆ ಹೋಗುತ್ತಿದ್ದಾಗ, ಮಳೆ ಬರುತ್ತಿತ್ತು. ಆಗ ಪುನೀತ್ ಸರ್ ಅವರೇ ನಮಗೆ ಕೊಡೆ ಹಿಡಿದರು. ನೃತ್ಯದ ಬಗ್ಗೆ ಮತ್ತು ಅವರ ಆ್ಯಕ್ಷನ್ ಬಗ್ಗೆ ನನ್ನೊಂದಿಗೆ ಮಾತನಾಡುತ್ತಿದ್ದರು. ಚಿಕ್ಕ ಹುಡುಗನಿಗೆ ಕೊಡೆ ಹಿಡಿದ ಸೂಪರ್‌ಸ್ಟಾರ್. ನಮ್ಮ ಕನಸಿನಲ್ಲಿಯೂ ಊಹಿಸಲಾಗದ ಸಂಗತಿ. ಅದು ಪುನೀತ್ ಸರ್ ಅವರಿಂದ ಮಾತ್ರ ಸಾಧ್ಯ. ಆ ದಿನ ನಾನು ಸರಳತೆಯ ಮೌಲ್ಯವನ್ನು ಅರಿತೆ. ಇದು ಅಪ್ಪು ಸರ್ ಅವರಿಂದ ನಾನು ಕಲಿತ ಅತ್ಯಮೂಲ್ಯವಾದ ಪಾಠ’ ಎಂದು ಬರಹ ಆರಂಭಿಸಿದ್ದಾರೆ ಕಿರೀಟಿ.

View this post on Instagram

A post shared by Kireeti (@kireetiofficial)

‘ಜಗತ್ತಿಗೆ ನನ್ನನ್ನು ಪರಿಚಯಿಸಿಕೊಳ್ಳಲು ಕೇವಲ ಒಂದು ದಿನ ಬಾಕಿ ಇದೆ. ಇದೆಲ್ಲಾ ಶುರುವಾಗಿದ್ದು ಪುನೀತ್ ರಾಜ್‌ಕುಮಾರ್ ಸರ್ ಅವರಿಂದ. ಸ್ಫೂರ್ತಿ, ಮಾದರಿ, ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಜೀವನದ ಮಾರ್ಗದರ್ಶಿ ಅವರು. ನಿಮ್ಮ ಮಾತುಗಳನ್ನು ಎಂದಿಗೂ ಮರೆಯುವುದಿಲ್ಲ ಸರ್. ನನ್ನ ಮೇಲಿನ ನಿಮ್ಮ ನಂಬಿಕೆಯೇ ರಕ್ಷಾಕವಚ. ನಾನು ಅದನ್ನು ಜವಾಬ್ದಾರಿಯಿಂದ ನಿಭಾಯಿಸುತ್ತೇನೆ. ನೀವು ಮತ್ತು ನಮ್ಮ ಜನತೆ ಯಾವಾಗಲೂ ಹೆಮ್ಮೆಪಡುವಂತೆ ಮಾಡಲು ಸದಾ ಶ್ರಮಿಸುತ್ತೇನೆ’ ಎಂದು ಕಿರೀಟಿ ಬರಹ ಮುಗಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಚಾಲನೆ; ಪ್ರದರ್ಶನವಾಗಲಿದೆ 55 ದೇಶಗಳ ಸಿನಿಮಾ

ಅದ್ದೂರಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಜನಾರ್ದನ ​ರೆಡ್ಡಿ ಮಗ ಕಿರೀಟಿ; ತಾಂತ್ರಿಕವರ್ಗದಲ್ಲಿ ಹಲವು ಖ್ಯಾತರು

Published On - 6:53 pm, Thu, 3 March 22