ತಮ್ಮದೇ ಸಿನಿಮಾ ಪ್ರಚಾರಕ್ಕೆ ಗಿಲ್ಲಿ ನಟ ಯಾಕೆ ಹೋಗಿಲ್ಲ? ಕೊನೆಗೂ ಸಿಕ್ತು ಉತ್ತರ

‘ಸರ್ಕಾರಿ ಶಾಲೆ ಹೆಚ್8’ ಸಿನಿಮಾದಲ್ಲಿ ಗಿಲ್ಲಿ ನಟ ಅಭಿನಯಿಸಿದ್ದಾರೆ. ಆದರೆ ಅದರ ಪ್ರಚಾರದಲ್ಲಿ ಅವರು ಭಾಗಿಯಾಗಿಲ್ಲ. ಹಾಗಾಗಿ ಗಿಲ್ಲಿ ವಿರುದ್ಧ ಚಿತ್ರತಂಡದವರು ಗರಂ ಆಗಿ, ವಾಣಿಜ್ಯ ಮಂಡಳಿಗೆ ದೂರು ನೀಡಿದ್ದರು. ಅದಕ್ಕೆ ಗಿಲ್ಲಿ ಪ್ರತಿಕ್ರಿಯಿಸಿದ್ದಾರೆ. ‘ನನ್ನ ಜಾಗದಲ್ಲಿ ಇದ್ದವರಿಗೆ ಮಾತ್ರ ನನ್ನ ಪರಿಸ್ಥಿತಿ ಏನು ಎಂಬುದು ಗೊತ್ತಾಗುತ್ತದೆ’ ಎಂದು ಗಿಲ್ಲಿ ನಟ ಹೇಳಿದ್ದಾರೆ.

ತಮ್ಮದೇ ಸಿನಿಮಾ ಪ್ರಚಾರಕ್ಕೆ ಗಿಲ್ಲಿ ನಟ ಯಾಕೆ ಹೋಗಿಲ್ಲ? ಕೊನೆಗೂ ಸಿಕ್ತು ಉತ್ತರ
Gilli Nata

Updated on: Feb 09, 2026 | 6:52 PM

‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಶೋನಿಂದ ಗಿಲ್ಲಿ ನಟ ಪಡೆದ ಜನಪ್ರಿಯತೆ ಅಪಾರ. ಆ ರಿಯಾಲಿಟಿ ಶೋಗೆ ಹೋಗುವುದಕ್ಕೂ ಮುನ್ನವೇ ಗಿಲ್ಲಿ ಅವರು ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಈಗ ಆ ಸಿನಿಮಾಗಳ ಬಗ್ಗೆ ಟಾಕ್ ಶುರು ಆಗಿದೆ. ಗಿಲ್ಲಿ ನಟ (Gilli Nata) ಅಭಿನಯದ ‘ಸರ್ಕಾರಿ ಶಾಲೆ ಹೆಚ್​8’ ಸಿನಿಮಾ ಇತ್ತೀಚೆಗೆ ರಿಲೀಸ್ ಆಯಿತು. ಆ ಚಿತ್ರದಲ್ಲಿ ಗಿಲ್ಲಿ ಅವರಿಗೆ ಒಂದು ಪಾತ್ರವಿದೆ. ಆದರೆ ಸಿನಿಮಾದ ಪ್ರಚಾರಕ್ಕೆ ಗಿಲ್ಲಿ ನಟ ಬಂದಿಲ್ಲ ಎಂದು ಚಿತ್ರತಂಡ ಗರಂ ಆಗಿದೆ. ಕರ್ನಾಟಕ ಚಲನಚಿತ್​ರ ವಾಣಿಜ್ಯ ಮಂಡಳಿಗೆ ದೂರು ಕೂಡ ನೀಡಲಾಗಿದೆ. ಆ ಬಗ್ಗೆ ಗಿಲ್ಲಿ ನಟ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಗಿಲ್ಲಿ ನಟ ಪ್ರಮುಖ ಪಾತ್ರ ಮಾಡಿರುವ ‘ಸೂಪರ್ ಹಿಟ್’ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ಆ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಗಿಲ್ಲಿ ಅವರಿಗೆ ಹಲವು ಪ್ರಶ್ನೆ ಎದುರಾಯಿತು. ‘ಸರ್ಕಾರಿ ಶಾಲೆ ಹೆಚ್​8’ ಚಿತ್ರದ ಪ್ರಚಾರಕ್ಕೆ ಯಾಕೆ ಹೋಗಿಲ್ಲ ಎಂಬ ಪ್ರಶ್ನೆಗೆ ಅವರು ಉತ್ತರ ನೀಡಿದರು.

‘ಸರ್ಕಾರಿ ಶಾಲೆ ಹೆಚ್​8 ಸಿನಿಮಾ ಮಾಡಿ ನನ್ನ ಪ್ರಕಾರ 2ರಿಂದ ಎರಡೂವರೆ ವರ್ಷ ಆಗಿರಬಹುದು. ಅದರಲ್ಲಿ ನಟನೆ ಮಾಡಿದ್ದೇನೆ. ನಾನು ನನ್ನ ಬೈಟ್ಸ್ ಕಳಿಸಿದ್ದೇನೆ. ಹಾಗಿದ್ದರೂ ಕೂಡ ಅವರು ಯಾಕೆ ದೂರು ನೀಡಿದರೋ ಗೊತ್ತಿಲ್ಲ. ನನಗೂ ಒಂದಷ್ಟು ಕೆಲಸಗಳ ಒತ್ತಡ ಇತ್ತು. ನಾನು ಫೋನ್ ಎತ್ತಿಲ್ಲ ಎಂಬ ಕಾರಣಕ್ಕೆ ಪಾಪ ಅವರಿಗೆ ಆ ರೀತಿ ಆಗಿರಬಹುದು. ಅವರದ್ದು ತಪ್ಪಿಲ್ಲ’ ಎಂದು ಗಿಲ್ಲಿ ನಟ ಹೇಳಿದ್ದಾರೆ.’

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ತಮ್ಮ ವಿರುದ್ಧ ದೂರು ದಾಖಲಾಗಿದ್ದರೂ ಕೂಡ ಗಿಲ್ಲಿ ನಟ ಅವರು ‘ಸರ್ಕಾರಿ ಶಾಲೆ ಹೆಚ್8’ ಚಿತ್ರತಂಡವನ್ನು ಸಂಪರ್ಕಿಸಲಿಲ್ಲ. ‘ಬೇರೆ ಕೆಲಸಗಳಲ್ಲಿ ನಾನು ಒಂದಷ್ಟು ಬ್ಯುಸಿ ಆದೆ. ವಾಣಿಜ್ಯ ಮಂಡಳಿಗೆ ನಾನು ಉತ್ತರ ಕೊಡಬೇಕಿತ್ತು. ಅದನ್ನು ನೀಡಿದ್ದೇನೆ’ ಎಂದು ಗಿಲ್ಲಿ ನಟ ಅವರು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಮುಗಿದು ಇಷ್ಟು ದಿನವಾದ್ರೂ ಕಡಿಮೆ ಆಗಿಲ್ಲ ಗಿಲ್ಲಿ ನಟ ಹವಾ

ಗಿಲ್ಲಿ ನಟ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಅನೇಕರು ಫಿದಾ ಆಗಿದ್ದರು. ಹಲವು ಅಭಿಮಾನಿಗಳು ಗಿಲ್ಲಿಯ ಭಾವಚಿತ್ರವನ್ನು ಟ್ಯಾಟೂ ಹಾಕಿಸಿಕೊಂಡಿದ್ದರು. ಆ ಪೈಕಿ ಒಬ್ಬ ಅಭಿಮಾನಿಯನ್ನು ಭೇಟಿ ಆಗುವುದಾಗಿ ಗಿಲ್ಲಿ ಹೇಳಿದ್ದರು. ಆದರೆ ಬಿಗ್ ಬಾಸ್ ಮುಗಿದು ಇಷ್ಟು ದಿನ ಕಳೆದರೂ ಆ ಅಭಿಮಾನಿಯನ್ನು ಗಿಲ್ಲಿ ಭೇಟಿ ಆಗಿಲ್ಲ. ಅದಕ್ಕೂ ಅವರು ಸ್ಪಷ್ಟನೆ ನೀಡಿದ್ದಾರೆ. ‘ವಾಹಿನಿ ಕಡೆಯಿಂದ ಅವರೆಲ್ಲರನ್ನೂ ಕರೆಸಲು ಪ್ಲ್ಯಾನ್ ಆಗಿತ್ತು. ಆ ಅಭಿಮಾನಿಗೂ ಕರೆ ಮಾಡಲಾಗಿತ್ತು. ಆದರೆ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ. ಎಲ್ಲರನ್ನೂ ಭೇಟಿ ಆಗುತ್ತೇನೆ. ತಕ್ಷಣಕ್ಕೆ ಏನು ಮಾಡಬೇಕು ಎಂಬುದು ಗೊತ್ತಾಗುತ್ತಿಲ್ಲ’ ಎಂದಿದ್ದಾರೆ ಗಿಲ್ಲಿ ನಟ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:46 pm, Mon, 9 February 26

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us