ಚಂದ್ರಯಾನದ ಬಗ್ಗೆ ಕುಚೇಷ್ಟೆ ಮಾಡಿದವರು ಅನಾಗರಿಕರು: ನಟ ಜಗ್ಗೇಶ್

|

Updated on: Aug 23, 2023 | 9:23 PM

Jaggesh: ಚಂದ್ರಯಾನ 3 ಯಶಸ್ವಿಯಾದ ಬಗ್ಗೆ ಸಂತಸ ವ್ಯಕ್ತಪಡಿಸಿರುವ ರಾಜ್ಯಸಭೆ ಸದಸ್ಯ ಜಗ್ಗೇಶ್, ಚಂದ್ರಯಾನ 3 ಬಗ್ಗೆ ವ್ಯಂಗ್ಯ ಮಾಡಿದವರು ಅನಾಗರಿಕರು ಎಂದು ಟೀಕಿಸಿದ್ದಾರೆ.

ಚಂದ್ರಯಾನದ ಬಗ್ಗೆ ಕುಚೇಷ್ಟೆ ಮಾಡಿದವರು ಅನಾಗರಿಕರು: ನಟ ಜಗ್ಗೇಶ್
ಜಗ್ಗೇಶ್
Follow us on

ಚಂದ್ರಯಾನ 3 (Chandrayan 3) ಯಶಸ್ವಿಯಾಗಿದೆ. ಇಸ್ರೋದ ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ತುದಿಯ ಸಮೀಪ ಲ್ಯಾಂಡ್ ಆಗಿದೆ. ಇಸ್ರೋದ ಈ ಅಭೂತಪೂರ್ವ ಅಂತರಿಕ್ಷ ಸಾಹಸವನ್ನು ದೇಶವೇ ಕೊಂಡಾಡುತ್ತಿದೆ. ಪ್ರಧಾನಿ ಮೋದಿ ಸೇರಿದಂತೆ ಹಲವು ರಾಜಕೀಯ ಗಣ್ಯರು, ವಿಜ್ಞಾನಿಗಳು, ಸಿನಿಮಾ ಸೆಲೆಬ್ರಿಟಿಗಳು ಇಸ್ರೋದ ಸಾಧನೆಯನ್ನು ಕೊಂಡಾಡುತ್ತಿದ್ದಾರೆ. ದೇಶದ ಹಲವೆಡೆ ಸಂಭ್ರಮಾಚರಣೆಗಳು ನಡೆದಿವೆ. ಚಂದ್ರಯಾನ 3 ಯಶಸ್ವಿಯಾದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ನಟ, ರಾಜ್ಯಸಭೆ ಸದಸ್ಯ ಜಗ್ಗೇಶ್ (Jaggesh), ಚಂದ್ರಯಾನ ಯಶಸ್ವಿಯಾದ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಜೊತೆಗೆ ಚಂದ್ರಯಾನವನ್ನು ಟೀಕಿಸಿದರ ಬಗ್ಗೆ ವಾಗ್ದಾಳಿ ಸಹ ನಡೆಸಿದ್ದಾರೆ.

”ಭಾರತ ತಾನು ಅಗ್ರಗಣ್ಯ ಸ್ಥಾನದಲ್ಲಿದ್ದೀನಿ ಎಂದು ಸಾರಿದಂಥಹಾ ಶ್ರೇಷ್ಠವಾದ ದಿನವಿದು. ಮೋದಿಯವರು ತಮ್ಮ ಸಂಸದರನ್ನುದ್ದೇಶಿಸಿ ಮಾತನಾಡುತ್ತಾ, ಸ್ವಾತಂತ್ರ್ಯ ಬಂದು 75 ವರ್ಷಗಳಾಗಿ ಅಮೃತಕಾಲದತ್ತ ಹೊರಟಿದ್ದೇವೆ, ಇನ್ನು ಮುಂದೆ ರಣಭೇಟೆಗಾರರಂತೆ ಕೆಲಸ ಮಾಡಬೇಕು ಎಂದು ಹುರಿದುಂಬಿಸುವ ಕೆಲಸ ಮಾಡಿದ್ದರು, ವಿಶ್ವ ನಮ್ಮನ್ನು ಕ್ಷುಲ್ಲಕವಾಗಿ ಕಂಡ ದಿನವಿತ್ತು, ನಾವು ಅಗ್ರಗಣ್ಯರಾಗಿ ನಿಲ್ಲುವಂಥಹಾ ಕಾರ್ಯವನ್ನು ಎಲ್ಲ ಕ್ಷೇತ್ರಗಳಲ್ಲಿಯೂ ಮಾಡಬೇಕು ಎನ್ನುವ ಮಾತುಗಳನ್ನಾಡಿದ್ದಾರೆ. ಕಳೆದ ಬಾರಿ ಮಾಡಿದ ಪ್ರಯತ್ನ ವಿಫಲವಾಗಿ ವಿಜ್ಞಾನಿ ಅತ್ತಾಗ ತಂದೆ ಸ್ಥಾನದಲ್ಲಿ ನಿಂತು, ಭುಜ ತಟ್ಟಿ ಟ್ರೈ ಅಗೇನ್ ಎಂದಿದ್ದರು” ಎಂದು ಜಗ್ಗೇಶ್ ಮೋದಿಯ ಗುಣಗಾನ ಮಾಡಿದರು.

”ನಮ್ಮನ್ನು ಮೀರಿಸಿ, ಕೆಲವೇ ದಿನಗಳಲ್ಲಿ ಚಂದ್ರನಲ್ಲಿಗೆ ಹೋಗಬೇಕು ಎಂದು ರಷ್ಯಾ ಪ್ರಯತ್ನ ಪಟ್ಟಿತು, ಆದರೆ ದೈವ ಪ್ರೇರಣೆ ಎಂಬುದು ಇದ್ದಾಗ ವಾಮಮಾರ್ಗಗಳು ಫಲಿಸುವುದಿಲ್ಲ. ಅದಕ್ಕೆ ‘ಇನ್ನೊಬ್ಬರ’ ಚಂದ್ರಯಾನ ಹಾಗೂ ನಮ್ಮ ಚಂದ್ರಯಾನವೇ ಸಾಕ್ಷಿ. ಚಂದ್ರಲೋಕ ಮಾತ್ರವಲ್ಲ, ಸೂರ್ಯಲೋಕಕ್ಕೂ ಹೋಗುವಂಥಹಾ ಅದ್ಭುತವಾದ ಬುದ್ಧಿವಂತರನ್ನು ಮೋದಿ ತಯಾರು ಮಾಡುತ್ತಿದ್ದಾರೆ” ಎಂದರು ಜಗ್ಗೇಶ್.

ಇದನ್ನೂ ಓದಿ:Chandrayaan 3: ನಟ ಪ್ರಕಾಶ್ ರೈ ಒಬ್ಬ ವಿಕೃತ ಮನುಷ್ಯ -ಗುಡುಗಿದ ಮಾಜಿ ಸಚಿವ ಆರ್ ಅಶೋಕ್

”ಚಂದ್ರಯಾನದ ಬಗ್ಗೆ ಕೆಲವರು ಕುಚೇಷ್ಟೆ ಮಾಡಿದರು ಎಂದು ಕೇಳ್ಪಟ್ಟೆ. ಅವರು ಓದಿದ್ದಾರೋ ಅನಾಗರಿಕರೋ ಗೊತ್ತಿಲ್ಲ. ಇಂಥಹಾ ಚಂದ್ರಯಾನಗಳನ್ನು ಮಾಡಿರುವುದರಿಂದಲೇ ಅಂಥಹವೆರೆಲ್ಲ ತಂತ್ರಜ್ಞಾನ ಬಳಸುತ್ತಿರುವುದು ಮೊಬೈಲ್ ಬಳಸಿ ಮಾತನಾಡುತ್ತಿರುವುದು. ಆ ಅರಿವು ಅವರಿಗೆ ಮೂಡಬೇಕು. ತುಂಬಾ ಜನ ಓದಿದ್ದಾರೆ ಆದರೆ ದಡ್ಡರು. ಆದರೆ ತುಂಬಾ ಜನ ಈ ದೇಶದ ಪರವಾಗಿ, ಇಸ್ರೋದ ಪರವಾಗಿ ಹಳ್ಳಿಗಾಡಿನಲ್ಲಿ ಸಹ ದೇವರಿಗೆ ನಮಸ್ಕಾರ ಮಾಡಿ, ಚಂದ್ರಯಾನ ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿದ್ದಾರೆ” ಎಂದಿದ್ದಾರೆ.

ಚಂದ್ರಯಾನ 3 ಬಗ್ಗೆ ನಟ ಪ್ರಕಾಶ್ ರೈ ಮಾಡಿದ್ದ ಟ್ವೀಟ್ ಬಗ್ಗೆ ಇತ್ತೀಚೆಗೆ ಟೀಕೆಗೆ ಗುರಿಯಾಗಿತ್ತು. ಟೀ ಮಾರುತ್ತಿರುವ ವ್ಯಕ್ತಿಯ ಕಾರ್ಟೂನ್ ಚಿತ್ರವೊಂದನ್ನು ಹಂಚಿಕೊಂಡಿದ್ದ ಪ್ರಕಾಶ್ ರೈ ವಿಕ್ರಮ್ ಲ್ಯಾಂಡರ್​ನಿಂದ ಬಂದ ಮೊದಲ ಚಿತ್ರವಿದು ಎಂದು ಕ್ಯಾಪ್ಷನ್ ಬರೆದಿದ್ದರು. ಈ ಟ್ವೀಟ್​ಗೆ ವಿರೋಧ ವ್ಯಕ್ತವಾಗಿತ್ತು. ಇಸ್ರೋ ವಿಜ್ಞಾನಿಗಳಿಗೆ ಪ್ರಕಾಶ್ ರೈ ಅಪಮಾನ ಮಾಡಿದ್ದಾರೆ ಎಂದು ಹಲವರು ಟೀಕಿಸಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ