ಅಯೋಧ್ಯೆ ಶ್ರೀರಾಮನ ಪ್ರಾಣ ಪ್ರತಿಷ್ಠೆ: ಬಿಡುಗಡೆಯಾಯ್ತು ‘ಜಾನಕಿ ರಾಮ’ ಹಾಡು

|

Updated on: Jan 21, 2024 | 4:28 PM

Janaki Rama Song: ಸಿರಿ ಮ್ಯೂಸಿಕ್ ಅವರು ‘ಜಾನಕಿ ರಾಮ’ ಆಲ್ಬಂ ಹಾಡು ಬಿಡುಗಡೆ ಮಾಡಿದ್ದಾರೆ. ನಟಿ ರೂಪಿಕಾ ಅವರ ಗೆಜ್ಜೆ ಡ್ಯಾನ್ಸ್ ಸ್ಟುಡಿಯೋ ಸಾರಥ್ಯದಲ್ಲಿ ಈ ಹಾಡು ಬಿಡುಗಡೆ ಆಗಿದೆ.

ಅಯೋಧ್ಯೆ ಶ್ರೀರಾಮನ ಪ್ರಾಣ ಪ್ರತಿಷ್ಠೆ: ಬಿಡುಗಡೆಯಾಯ್ತು ‘ಜಾನಕಿ ರಾಮ’ ಹಾಡು
ಜಾನಕಿ ರಾಮ್
Follow us on

ನಾಳೆ (ಜನವರಿ 22) ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ (Sri Ram) ಪ್ರಾಣ ಪ್ರತಿಷ್ಠಾಪನೆ ಆಗಲಿದೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಕೋಟ್ಯಂತರ ಮಂದಿ ಕಾಯುತ್ತಿದ್ದಾರೆ. ಕರ್ನಾಟಕ ಸೇರಿದಂತೆ ಹಲವೆಡೆ ದೇವಾಲಯಗಳಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಲೈವ್ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ವಿಶೇಷ ಪೂಜೆಗಳು, ಪ್ರಸಾದ ವಿನಿಯೋಗಗಳು ನಡೆಯುತ್ತಿವೆ. ಈ ಸುಸಂದರ್ಭದಲ್ಲಿ ಸಿರಿ ಮ್ಯೂಸಿಕ್ ಅವರು ‘ಜಾನಕಿ ರಾಮ’ ಆಲ್ಬಂ ಹಾಡು ಬಿಡುಗಡೆ ಮಾಡಿದ್ದಾರೆ. ನಟಿ ರೂಪಿಕಾ ಅವರ ಗೆಜ್ಜೆ ಡ್ಯಾನ್ಸ್ ಸ್ಟುಡಿಯೋ ಸಾರಥ್ಯದಲ್ಲಿ ಈ ಹಾಡು ಬಿಡುಗಡೆ ಆಗಿದೆ.

‘ನಮ್ಮ ಗೆಜ್ಜೆ ಡ್ಯಾನ್ಸ್ ಸ್ಟುಡಿಯೋಸ್​ನ ಎಲ್ಲರ ಸಹಕಾರದಿಂದ ಈ ಹಾಡು ಮೂಡಿಬಂದಿದೆ. ನಮ್ಮ ಕನಸಿಗೆ ಸಿರಿ ಮ್ಯೂಸಿಕ್​ನ ಸುರೇಶ್ ಚಿಕ್ಕಣ್ಣ ಅವರು ಆಸರೆಯಾದರು. ಬೆಂಗಳೂರು ಸ್ಟುಡಿಯೋಸ್​ನಲ್ಲಿ ನಿರ್ಮಿಸಲಾಗಿದ್ದ ಅದ್ದೂರಿ ಸೆಟ್​ನಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿದೆ. ಅನಿರುದ್ದ್ ಜತಕರ್, ನಿರಂಜನ ದೇಶಪಾಂಡೆ ಈ ಹಾಡನಲ್ಲಿ ಅಭಿನಯಿಸಿ ನಮ್ಮ ಪ್ರಯತ್ನಕ್ಕೆ ಸಾಥ್ ನೀಡಿದ್ದಾರೆ. ಅದ್ವೈತ್ ಶೆಟ್ಟಿ ನಿರ್ದೇಶಿಸಿರುವ ಈ ಹಾಡನ್ನು ಮನೋಜ್ ಸೌಗಂಧ್ ಬರೆದಿದ್ದಾರೆ. ನೀತು ನಿನಾದ್ ತಾವೇ ಹಾಡಿ, ಸಂಗೀತವನ್ನೂ ನೀಡಿದ್ದಾರೆ. ನಾನು ಕ್ರಿಯೇಟಿವ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸುವುದರ ಜೊತೆಗೆ, ಲಿಖಿತ್ ಆಚಾರ್ ಅವರ ಜೊತೆಗೂಡಿ ನೃತ್ಯ ನಿರ್ದೇಶನ ಕೂಡ ಮಾಡಿದ್ದೇನೆ ಎಂದು ನಟಿ ರೂಪಿಕಾ ತಿಳಿಸಿದರು.

ಇದನ್ನೂ ಓದಿ:ರಾಮಸೇತು ನಿರ್ಮಾಣವಾದ ರಾಮೇಶ್ವರಂನಲ್ಲಿ ಶ್ರೀರಾಮನ ಪಾದದ ಗುರುತುಗಳಿಗೆ ಮೋದಿ ಪೂಜೆ

ಸಿರಿ ಮ್ಯೂಸಿಕ್ ನ ಸುರೇಶ್ ಚಿಕ್ಕಣ್ಣ ಮಾತನಾಡಿ, ‘ಜಾನಕಿರಾಮ’ ಆಲ್ಬಂ ಸಾಂಗ್ ಬಿಡುಗಡೆ ಮಾಡುತ್ತಿರುವುದಕ್ಕೆ ಸಂತೋಷವಾಗಿದೆ. ಎಲ್ಲರ ಸಹಕಾರದಿಂದ ಹತ್ತು ದಿನಗಳಲ್ಲಿ ಮುಗಿಯುವ ಚಿತ್ರೀಕರಣ ಒಂದೇ ದಿನದಲ್ಲಿ ಮುಗಿಸಿದ್ದೇವೆ. ಮುಂದೆ ಕೂಡ ನಮ್ಮ ಸಂಸ್ಥೆಯಿಂದ ಇಂತಹ ಅದ್ಭುತ ಗೀತೆಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದರು. ಸಂಗೀತ ನಿರ್ದೇಶಕ ನೀತು ನಿನಾದ್, ನಿರ್ದೇಶಕ ಅದ್ವೈತ ಶೆಟ್ಟಿ, ನಟ ನಿರಂಜನ್ ದೇಶಪಾಂಡೆ “ಜಾನಕಿರಾಮ”ನ ಹಾಡಿನ ಬಗ್ಗೆ ಮಾಹಿತಿ ನೀಡಿದರು.

ಮಾಜಿ ಶಾಸಕ ರಾಜುಗೌಡ, ಡಿ ಎಸ್ ಮ್ಯಾಕ್ಸ್​ನ ಎಂಡಿ ದಯಾನಂದ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್ ಎಂ ಸುರೇಶ್, ನಟಿ ಪ್ರಿಯಾಂಕ ಉಪೇಂದ್ರ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ ಭಾ.ಮ.ಹರೀಶ್, ಕರ್ನಾಟಕ ಚಲನಚಿತ್ರ ನಿರ್ಮಾಪಕ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್, ಪೊಲೀಸ್ ಅಧಿಕಾರಿ ಶಂಕರ್ ಸೇರಿದಂತೆ ಅನೇಕ ಗಣ್ಯರು ಸೇರಿ ಅದ್ದೂರಿಯಾಗಿ ಮೂಡಿಬಂದಿರುವ ‘ಜಾನಕಿ ರಾಮ’ ಆಲ್ಭಂ ಹಾಡು ಬಿಡುಗಡೆ ಮಾಡಿದರು. ಹಾಡನ್ನು ವೀಕ್ಷಿಸಿದ ಗಣ್ಯರು, ‘ಈ ಹಾಡು ನೋಡಿದಾಗ ಮೈ ರೋಮಾಂಚನವಾಯಿತು. ಇಂದು ಇಲ್ಲೇ ರಾಮನ ಪ್ರತಿಷ್ಠಾ ವೈಭವ ನೋಡಿದ ಹಾಗಾಯಿತು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ