‘ಕಾಂತಾರ: ಚಾಪ್ಟರ್ 1’ ಚಿತ್ರಕ್ಕೆ ಪೈಪೋಟಿ ನೀಡುತ್ತಾ ಅಕ್ಷಯ್ ಕುಮಾರ್ ಸಿನಿಮಾ?

ಅಕ್ಟೋಬರ್ 2ರಂದು ಬಹಳ ಅದ್ದೂರಿಯಾಗಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆ ಆಗಲಿದೆ. ಅದೇ ದಿನ ‘ಜಾಲಿ ಎಲ್​ಎಲ್​ಬಿ 3’ ಸಿನಿಮಾ ಕೂಡ ಬಿಡುಗಡೆ ಆಗುವ ಸಾಧ್ಯತೆ ದಟ್ಟವಾಗಿದೆ. ಈ ಸಿನಿಮಾದಲ್ಲಿ ಅರ್ಷದ್ ವಾರ್ಸಿ, ಅಕ್ಷಯ್ ಕುಮಾರ್ ಮುಂತಾದವರು ನಟಿಸಿದ್ದಾರೆ. ಎರಡೂ ಸಿನಿಮಾಗಳ ಮೇಲೆ ನಿರೀಕ್ಷೆ ಜಾಸ್ತಿ ಇದೆ.

‘ಕಾಂತಾರ: ಚಾಪ್ಟರ್ 1’ ಚಿತ್ರಕ್ಕೆ ಪೈಪೋಟಿ ನೀಡುತ್ತಾ ಅಕ್ಷಯ್ ಕುಮಾರ್ ಸಿನಿಮಾ?
Arshad Warsi, Akshay Kumar, Rishab Shetty

Updated on: Jul 09, 2025 | 7:57 PM

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ‘ಕಾಂತಾರ’ ಸಿನಿಮಾ ದೇಶವ್ಯಾಪಿ ಜನಮೆಚ್ಚುಗೆ ಗಳಿಸಿತ್ತು. ಈಗ ಆ ಸಿನಿಮಾದ ಪ್ರೀಕ್ವೆಲ್ ಸಿದ್ಧವಾಗುತ್ತಿದೆ. ಅದಕ್ಕೆ ‘ಕಾಂತಾರ: ಚಾಪ್ಟರ್ 1’ (Kantara Chapter 1) ಎಂದು ಹೆಸರು ಇಡಲಾಗಿದೆ. ಈ ಸಿನಿಮಾ ಅಕ್ಟೋಬರ್ 2ರಂದು ಬಿಡುಗಡೆ ಆಗಲಿದೆ. ಅದಕ್ಕಾಗಿ ಸಕಲ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಅಕ್ಟೋಬರ್ 2ರಂದು ‘ಕಾಂತಾರ: ಚಾಪ್ಟರ್ 1’ ತೆರೆಕಂಡರೆ ಈ ಸಿನಿಮಾದ ಎದುರು ಬೇರೆ ಸಿನಿಮಾಗಳು ಬಿಡುಗಡೆ ಆಗಲು ಹಿಂದೇಟು ಹಾಕುತ್ತವೆ. ಯಾಕೆಂದರೆ, ‘ಕಾಂತಾರ: ಚಾಪ್ಟರ್ 1’ ಹವಾ ಆ ರೀತಿ ಇದೆ. ಹಾಗಿದ್ದರೂ ಕೂಡ ಅಕ್ಷಯ್ ಕುಮಾರ್ ನಟನೆಯ ‘ಜಾಲಿ ಎಲ್​ಎಲ್​ಬಿ 3’ (Jolly LLB 3) ಸಿನಿಮಾ ಅದೇ ದಿನ ರಿಲೀಸ್ ಆಗುವ ಸಾಧ್ಯತೆ ಇದೆ.

ಈಗಾಗಲೇ ‘ಜಾಲಿ ಎಲ್​ಎಲ್​ಬಿ’ ಮತ್ತು ‘ಜಾಲಿ ಎಲ್​ಎಲ್​ಬಿ 2’ ಸಿನಿಮಾಗಳು ಹಿಟ್ ಆಗಿವೆ. ಈಗ ಅದರ ಮೂರನೇ ಪಾರ್ಟ್ ‘ಜಾಲಿ ಎಲ್​ಎಲ್​ಬಿ 3’ ನಿರ್ಮಾಣ ಆಗುತ್ತಿದೆ. ಈ ಮೊದಲು ಈ ಚಿತ್ರವನ್ನು ಸೆಪ್ಟೆಂಬರ್ 19ರಂದು ತೆರೆಕಾಣಿಸುವ ಪ್ಲ್ಯಾನ್ ಇತ್ತು. ಆದರೆ ಈಗ ಚಿತ್ರತಂಡದವರು ನಿರ್ಧಾರ ಬದಲಿಸಿದಂತಿದೆ. ಸೆಪ್ಟೆಂಬರ್ 19ರ ಬದಲು ಅಕ್ಟೋಬರ್ 2ರಂದು ಬಿಡುಗಡೆ ಮಾಡುವುದು ಸೂಕ್ತ ಎಂದು ಚಿತ್ರತಂಡದ ಒಳಗೆ ಚರ್ಚೆ ನಡೆದಿದೆ ಎನ್ನಲಾಗಿದೆ.

‘ಜಾಲಿ ಎಲ್​ಎಲ್​ಬಿ 3’ ಸಿನಿಮಾಗೆ ಸುಭಾಷ್ ಕಪೂರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಅಕ್ಷಯ್ ಕುಮಾರ್ ಮತ್ತು ಅರ್ಷದ್ ವಾರ್ಸಿ ಅವರು ಪ್ರಮುಖ ಪಾತ್ರಗಳನ್ನು ಮಾಡುತ್ತಿದ್ದಾರೆ. ಹಾಗಾಗಿ ಅಭಿಮಾನಿಗಳಿಗೆ ನಿರೀಕ್ಷೆ ಜಾಸ್ತಿ ಇದೆ. ಗಾಂಧಿ ಜಯಂತಿ ದಿನ (ಅಕ್ಟೋಬರ್ 2) ಸರ್ಕಾರಿ ರಜೆ ಇರುತ್ತದೆ. ಹಾಗಾಗಿ ಆ ದಿನವೇ ಸಿನಿಮಾ ತೆರೆಕಂಡರೆ ಹೆಚ್ಚು ಕಲೆಕ್ಷನ್ ಆಗುತ್ತದೆ ಎಂಬುದು ಚಿತ್ರತಂಡದ ಲೆಕ್ಕಾಚಾರ.

ಇತ್ತ, ‘ಕಾಂತಾರ: ಚಾಪ್ಟರ್ 1’ ತಂಡದವರು ಬಹಳ ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಇತ್ತೀಚೆಗೆ ರಿಷಬ್ ಶೆಟ್ಟಿ ಅವರ ಜನ್ಮದಿನದ ಪ್ರಯುಕ್ತ ಹೊಸ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಅದನ್ನು ನೋಡಿದ ಅಭಿಮಾನಿಗಳಿಗೆ ಕೌತುಕ ಹೆಚ್ಚಾಗಿದೆ. ಈ ಸಿನಿಮಾವನ್ನು ‘ಹೊಂಬಾಳೆ ಫಿಲ್ಮ್ಸ್’ ನಿರ್ಮಾಣ ಮಾಡುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ಬಿಡುಗಡೆ ಆಗಲಿದೆ.

ಇದನ್ನೂ ಓದಿ: ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ; ಇಲ್ಲಿದೆ ಸೆಲೆಬ್ರೇಷನ್ ವಿಡಿಯೋ

ರಿಷಬ್ ಶೆಟ್ಟಿ ಅವರು ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಹೊಂದಿದ್ದಾರೆ. ‘ಕಾಂತಾರ’ ಸಿನಿಮಾದ ಯಶಸ್ಸಿನಿಂದ ಅವರಿಗೆ ಈ ಪರಿ ಜನಪ್ರಿಯತೆ ಸಿಕ್ಕಿತು. ಬಾಲಿವುಡ್ ಹೀರೋಗಳಿಗೆ ಪೈಪೋಟಿ ನೀಡುವ ಮಟ್ಟಕ್ಕೆ ಅವರು ಬೆಳೆದಿದ್ದಾರೆ. ಬಾಲಿವುಡ್​ನಿಂದಲೂ ಅವರಿಗೆ ಅವಕಾಶಗಳು ಬರುತ್ತಿವೆ. ನಟನಾಗಿ, ನಿರ್ದೇಶಕನಾಗಿ ಅವರಿಗೆ ಸಖತ್ ಬೇಡಿಕೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us