ಪ್ರವೀಣ್ ತೇಜ್-ಅಂಜಲಿ ಎಸ್​. ಅನೀಶ್​ ಜೋಡಿಯ ‘ಜಂಬೂ ಸರ್ಕಸ್’ ಸಿನಿಮಾದ ಟೀಸರ್ ರಿಲೀಸ್​

ಪ್ರವೀಣ್ ತೇಜ್ ಮತ್ತು ಅಂಜಲಿ ಎಸ್​. ಅನೀಶ್​ ಅವರು ‘ಜಂಬೂ ಸರ್ಕಸ್​’ ಸಿನಿಮಾದಲ್ಲಿ ಜೋಡಿಯಾಗಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಎಂ.ಡಿ. ಶ್ರೀಧರ್​ ಅವರು ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಟೀಸರ್​ ಬಿಡುಗಡೆ ಮಾಡುವ ಮೂಲಕ ಸಿನಿಮಾದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಹೆಚ್.ಸಿ. ಸುರೇಶ್ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

ಪ್ರವೀಣ್ ತೇಜ್-ಅಂಜಲಿ ಎಸ್​. ಅನೀಶ್​ ಜೋಡಿಯ ‘ಜಂಬೂ ಸರ್ಕಸ್’ ಸಿನಿಮಾದ ಟೀಸರ್ ರಿಲೀಸ್​
‘ಜಂಬೂ ಸರ್ಕಸ್​’ ಸಿನಿಮಾ ತಂಡ

Updated on: Aug 04, 2024 | 6:19 PM

‘ಚೆಲ್ಲಾಟ’, ‘ಕೃಷ್ಣ’, ‘ಜಾಲಿಡೇಸ್​’, ‘ಪೊರ್ಕಿ’, ‘ಬುಲ್​ಬುಲ್​’, ‘ಒಡೆಯ’ ಮುಂತಾದ ಸಿನಿಮಾಗಳಿಗೆ ಆ್ಯಕ್ಷನ್​-ಕಟ್​ ಹೇಳಿದ ನಿರ್ದೇಶಕ ಎಂ.ಡಿ. ಶ್ರೀಧರ್​ ಅವರು ಈಗ ಒಂದು ಹೊಸ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ‘ಜಂಬೂ ಸರ್ಕಸ್​’ ಎಂಬುದು ಈ ಸಿನಿಮಾದ ಶೀರ್ಷಿಕೆ. ಫ್ರೆಂಡ್​ಶಿಪ್​ ಮಹತ್ವ ಮತ್ತು ಲವ್​ ಸುತ್ತ ಹೆಣೆದ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಿದ್ದಾರೆ ನಿರ್ದೇಶಕರು. ಈ ಸಿನಿಮಾದಲ್ಲಿ ಫ್ಯಾಮಿಲಿ ಪ್ರೇಕ್ಷಕರನ್ನು ಸೆಳೆಯುವಂತಹ ಕಹಾನಿ ಇರಲಿದೆ. ಜೊತೆಗೆ ಕಾಮಿಡಿ ಕೂಡ ಭರ್ಜರಿಯಾಗಿಯೇ ಇರಲಿದೆ. ಅದರ ಝಲಕ್​ ತೋರಿಸಲು ‘ಜಂಬೂ ಸರ್ಕಸ್​’ ಸಿನಿಮಾದ ಟೀಸರ್​ ಬಿಡುಗಡೆ ಮಾಡಲಾಗಿದೆ.

ನಿರ್ದೇಶಕ ಎಂ.ಡಿ. ಶ್ರೀಧರ್ ಅವರು ದರ್ಶನ್​ ನಟನೆಯ ‘ಒಡೆಯ’ ಸಿನಿಮಾದ ಬಳಿಕ ಒಂದು ಗ್ಯಾಪ್​ ತೆಗೆದುಕೊಂಡು ‘ಜಂಬೂ ಸರ್ಕಸ್​’ ಸಿನಿಮಾವನ್ನು ಮಾಡಿದ್ದಾರೆ. 3 ದಶಕಗಳಿಂದ ಚಿತ್ರರಂಗದಲ್ಲಿ ಅನುಭವ ಪಡೆದಿರುವ ಹೆಚ್.ಸಿ. ಸುರೇಶ್ ಅವರು ‘ಮಹತಿ ಕಂಬೈನ್ಸ್’ ಮೂಲಕ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ‘ಜಿಗರ್’ ಖ್ಯಾತಿಯ ಪ್ರವೀಣ್ ತೇಜ್ ಹಾಗೂ ಅಂಜಲಿ ಎಸ್. ಅನೀಶ್ ಅವರು ಜೋಡಿಯಾಗಿ ಅಭಿನಯಿಸಿದ್ದಾರೆ. ಅಂಜಲಿ ಅವರಿಗೆ ‘ಪದವಿ ಪೂರ್ವ’ ಬಳಿಕ ಇದು 2ನೇ ಸಿನಿಮಾ.

‘ಜಂಬೂ ಸರ್ಕಸ್​’ ಟೀಸರ್ ರಿಲೀಸ್​ ಬಳಿಕ ಡೈರೆಕ್ಟರ್​ ಎಂ.ಡಿ. ಶ್ರೀಧರ್ ಅವರು ಸಿನಿಮಾ ಬಗ್ಗೆ ಮಾಹಿತಿ ನೀಡಿದರು. ‘ನಿರ್ಮಾಪಕ ಹೆಚ್.ಸಿ. ಸುರೇಶ್ ಅವರಿಗೆ ಒನ್​ ಲೈನ್ ಕಥೆ ಹೇಳಿದ್ದೆ. ಅವರು ಕೆಲ ವರ್ಷಗಳ ಹಿಂದೆ ನನಗೆ ಬೇರೆ ಸಿನಿಮಾಗಾಗಿ ಅಡ್ವಾನ್ಸ್ ನೀಡಿದ್ದರು. ಆ ಸಿನಿಮಾ ಸೆಟ್ಟೇರಿರಲಿಲ್ಲ. ಆ ಕಮಿಟ್‌ಮೆಂಟ್ ಸಲುವಾಗಿ ಈಗ ಈ ಸಿನಿಮಾವನ್ನು ಮಾಡಿದ್ದೇವೆ. ಪ್ರಾರಂಭದಲ್ಲಿ ಬೇರೊಬ್ಬರು ಪಾರ್ಟ್ನರ್ ಇದ್ದರು. ಸಿನಿಮಾ ಶುರುವಾದಾಗ ಅವರು ಹೊರನಡೆದರು. ಆದ್ದರಿಂದ ಸುರೇಶ್ ಅವರು ಕಷ್ಟಪಟ್ಟು ಸಿನಿಮಾ ಮುಗಿಸಿದ್ದಾರೆ’ ಎಂದು ಎಂ.ಡಿ. ಶ್ರೀಧರ್​ ಹೇಳಿದ್ದಾರೆ.

Jumboo Circus Official Teaser | Praveen Tej, Anjali Anish | Vasuki Vaibhav |M D Shridhar |H C Suresh

‘ಫ್ಯಾಮಿಲಿ ಎಂಟರ್​ಟೇನರ್​ ಸಿನಿಮಾ ಮಾಡ್ಬೇಕು ಎಂದುಕೊಂಡಾಗ ಈ‌ ಸಿನಿಮಾದ ಕಥೆ ರೆಡಿ ಆಯಿತು. ಒಂದು ತಂಡವಾಗಿ ಮಾಡಿದ ಸಿನಿಮಾ ಇದು. ನಿರ್ದೇಶಕರು ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡು ಒಳ್ಳೆಯ ಸಿನಿಮಾ ಮಾಡಿಕೊಟ್ಟಿದ್ದಾರೆ’ ಎಂದು ನಿರ್ಮಾಪಕ ಹೆಚ್.ಸಿ. ಸುರೇಶ್ ಹೇಳಿದರು. ಛಾಯಾಗ್ರಾಹಕ ಕೃಷ್ಣ ಕುಮಾರ್ (ಕೆ.ಕೆ), ಸಂಭಾಷಣೆ ಬರೆದ ರಘು ನೀಡುವಳ್ಳಿ, ಸಂಕಲನಕಾರ ಜ್ಞಾನೇಶ್ ಕೂಡ ಸುದ್ದಿಗೋಷ್ಠಿಯಲ್ಲಿ ಸಿನಿಮಾ ಕುರಿತು ಮಾತನಾಡಿದರು.

ಇದನ್ನೂ ಓದಿ: ‘ದಿ ಕೇರಳ ಸ್ಟೋರಿ’ ನಾನು ನೋಡಿದ ಬೆಸ್ಟ್​ ಸಿನಿಮಾ: ಕಾರಣ ನೀಡಿದ ರಾಮ್​ ಗೋಪಾಲ್​ ವರ್ಮಾ

ಈ ಸಿನಿಮಾದಲ್ಲಿ ಪ್ರವೀಣ್​ ತೇಜ್​, ಅಂಜಲಿ ಜೊತೆ ಸ್ವಾತಿ, ಲಕ್ಷ್ಮೀ ಸಿದ್ದಯ್ಯ, ರವಿಶಂಕರ್ ಗೌಡ, ಅಚ್ಚುತ್ ಕುಮಾರ್, ಅವಿನಾಶ್ ಮುಂತಾದ ಕಲಾವಿದರು ನಟಿಸಿದ್ದಾರೆ. ಸುಪ್ರೀತ ಶೆಟ್ಟಿ ಸಹ-ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಜಯಂತ್ ಕಾಯ್ಕಿಣಿ, ಕವಿರಾಜ್, ಡಾ. ನಾಗೇಂದ್ರ ಪ್ರಸಾದ್ ಅವರು ಸಾಹಿತ್ಯ ಬರೆದಿದ್ದಾರೆ. ವಾಸುಕಿ ವೈಭವ್ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us