
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ (Kannada Film Industry) ಒಗ್ಗಟ್ಟಿನ ಕೊರತೆ ಇದೆಯಾ? ಪದೇ ಪದೇ ಈ ವಿಚಾರ ಚರ್ಚೆಗೆ ಕಾರಣ ಆಗುತ್ತಿದೆ. ನಟಿ ರಮ್ಯಾ ಕೂಡ ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟು ಇಲ್ಲ ಅಂತ ಇತ್ತೀಚೆಗೆ ಹೇಳಿದ್ದರು. ಹೊಸಬರ ಸಿನಿಮಾಗಳಿಗೆ ಯಾರೂ ಸಪೋರ್ಟ್ ಮಾಡಲ್ಲ ಎಂದಿದ್ದರು ರಮ್ಯಾ. ಈಗ ನಿರ್ದೇಶಕ ಜೋಗಿ ಪ್ರೇಮ್ (Director Prem) ಕೂಡ ‘ನಮ್ಮಲ್ಲಿ ಒಗ್ಗಟ್ಟಿಲ್ಲ’ ಅಂತ ಆಕ್ರೋಶ ಹೊರ ಹಾಕಿದ್ದಾರೆ. ಇತ್ತೀಚೆಗೆ ‘ಕೆಡಿ: ದಿ ಡೆವಿಲ್’ (KD The Devil) ಸಿನಿಮಾದ ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ಅವರು ಸ್ಯಾಂಡಲ್ವುಡ್ ಪರಿಸ್ಥಿತಿ ಬಗ್ಗೆ ಮಾತನಾಡಿದರು.
‘ಬೇರೆಕಡೆವರು ನಮಗೆ ತುಂಬಾ ಸಪೋರ್ಟ್ ಮಾಡ್ತಾರೆ. ಆದ್ರೆ ಇಲ್ಲಿ ನಮ್ಮವ್ರೇ ನಮ್ಮ ಕಾಲು ಎಳೀತಾರೆ. ಅದು ನಿಲ್ಲಬೇಕು. ನಮ್ಮವರಿಗೆ ನಾವು ಸಪೋರ್ಟ್ ಮಾಡಬೇಕು.
ಇಲ್ಲಿ ಅಣ್ಣ ಇದ್ರೆ ತಮ್ಮ ಕಾಯ್ತಿರ್ತಾನೆ ಕಲ್ಲು ಎತ್ತಿ ಹಾಕೋಕೆ’ ಎಂದು ಜೋಗಿ ಪ್ರೇಮ್ ಹೇಳಿದ್ದಾರೆ. ಇದು ಚರ್ಚೆಗೆ ಕಾರಣ ಆಗಿದೆ.
‘ನಮ್ಮ ಮನೆಯಲ್ಲಿ ನಾವು ನಾವೇ ಹೊಡೆದಾಡಿಕೊಂಡು ಸಾಯೋದಕ್ಕಿಂತ ಎಲ್ಲರೂ ಚೆನ್ನಾಗಿರೋಣ ಅನ್ನೋದು ಒಂದು ಆಸೆ. ಇದು ಬಿಟ್ಟು ಬೇರೆ ಏನೂ ಉದ್ದೇಶ ಇಲ್ಲ. ಸಿನಿಮಾಗಿಂತ ದೊಡ್ಡವರು ಇಲ್ಲಿ ಯಾರೂ ಇಲ್ಲ. ನಾವು ಇರುವುದೇ ಜನರಿಗೆ ಮನರಂಜನೆ ನೀಡೋಕೆ. ಡಾ. ರಾಜ್ಕುಮಾರ್ ಸಮಯದಲ್ಲಿ ಒಗ್ಗಟ್ಟು ಇತ್ತು. ಅಂಬರೀಷ್ ಕರೆದಾಗ ಎಲ್ಲರೂ ಬರುತ್ತಿದ್ದರು. ಈಗ ಯಾರೂ ಬರುತ್ತಿಲ್ಲ’ ಎಂದಿದ್ದಾರೆ ಪ್ರೇಮ್.
‘ನಮಗೆ ಎನೋ ಸಮಸ್ಯೆ ಆಯಿತು ಎಂದಾಗ ನಾವು ಹೇಳಿಕೊಳ್ಳಬೇಕು. ಆಗ ಕರೆಯರೆ ಯಾರು ಬರುತ್ತಾರೆ? ಇದು ಸಮುದ್ರ ಇದ್ದಂಗೆ. ಅವರವರ ಸಾಮರ್ಥ್ಯ ಇದ್ದಷ್ಟು ಈಜುತ್ತಾರೆ ಅಷ್ಟೇ’ ಎಂದು ಪ್ರೇಮ್ ಹೇಳಿದ್ದಾರೆ.
ಇದನ್ನೂ ಓದಿ: ಓಪನ್ ಆಗಿ ಹೇಳ್ತೀನಿ, ಏನು ಬೇಕಾದ್ರೂ ಟ್ರೋಲ್ ಮಾಡಿಕೊಳ್ಳಿ: ಜೋಗಿ ಪ್ರೇಮ್
ಈ ಹಿಂದೆ ಕೂಡ ಕೆಲವು ನಟರು ನಿರ್ದೇಶಕರು, ಸ್ಟಾರ್ಗಳು ಹೊಸಬರಿಗೆ ಸಪೋರ್ಟ್ ಮಾಡಲ್ಲ ಅಂತ ಹೇಳಿದ್ದರು. ಕರವೇ ಅಧ್ಯಕ್ಷ ನಾರಾಯಣ ಗೌಡ ಕೂಡ ‘ಕನ್ನಡ ಚಿತ್ರರಂಗವನ್ನು ರಿಪೇರಿ ಮಾಡಬೇಕಿದೆ, ಹೊಸಬರ ಟೀಸರ್ ರಿಲೀಸ್ಗೆ ಸ್ಟಾರ್ ನಟರಿಗೆ ಆಹ್ವಾನ ನೀಡೋಕೆ ಹೋದ್ರೂ ಯಾರೂ ಸ್ಪಂದಿಸಿಲ್ಲ’ ಅಂತ ಆಕ್ರೋಶ ಹೊರ ಹಾಕಿದ್ದರು.
‘ಹೆಣ್ಮಕ್ಕಳಿಗೆ ಚಿತ್ರರಂಗದಲ್ಲಿ ಹೆಚ್ಚು ಮನ್ನಣೆ ಸಿಗುತ್ತಿಲ್ಲ. ಈಗ ಒಗ್ಗಟ್ಟು ಇಲ್ಲದಂತೆ ಆಗಿದೆ. ಒಂದು ಸಿನಿಮಾ ರಿಲೀಸ್ ಆದರೆ ಯಾರೂ ಅದರ ಪ್ರಚಾರ ಮಾಡೋಕೆ ಹೋಗುತ್ತಿಲ್ಲ. ಬೇರೆಯವರ ಬಗ್ಗೆ ಯಾರೂ ಮಾತನಾಡುತ್ತಿಲ್ಲ’ ಎಂದು ರಮ್ಯಾ ಅವರು ಹೇಳಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.