ಸಂಧಾನ: ‘ವರಾಹ ರೂಪಂ’ ಹಾಡಿನ ಹಕ್ಕುಸ್ವಾಮ್ಯ ಉಲ್ಲಂಘನೆ ಪ್ರಕರಣ ರದ್ದು ಮಾಡಿದ ಕೇರಳ ಹೈಕೋರ್ಟ್

|

Updated on: Nov 01, 2023 | 7:59 PM

Varaha Roopam: 'ಕಾಂತಾರ' ಸಿನಿಮಾದ 'ವರಾಹ ರೂಪಂ' ಸಿನಿಮಾದ ಹಾಡಿನ ಹಕ್ಕು ಸ್ವಾಮ್ಯ ವಿವಾದಕ್ಕೆ ಕೇರಳ ಹೈಕೋರ್ಟ್ ತೆರೆ ಎಳೆದಿದೆ. ದೂರುದಾರರು, ಪ್ರತಿವಾದಿಗಳು ಸಂಧಾನ ಮಾಡಿಕೊಂಡಿರುವ ಕಾರಣ ಪ್ರಕರಣವನ್ನು ನ್ಯಾಯಾಲಯವು ರದ್ದು ಮಾಡಿದೆ.

ಸಂಧಾನ: ವರಾಹ ರೂಪಂ ಹಾಡಿನ ಹಕ್ಕುಸ್ವಾಮ್ಯ ಉಲ್ಲಂಘನೆ ಪ್ರಕರಣ ರದ್ದು ಮಾಡಿದ ಕೇರಳ ಹೈಕೋರ್ಟ್
Follow us on

ಕಾಂತಾರ‘ (Kantara) ಸಿನಿಮಾದ ‘ವರಾಹ ರೂಪಂ‘ (Varaha Roopam) ಹಾಡಿನ ಹಕ್ಕು ಸ್ವಾಮ್ಯ ಉಲ್ಲಂಘನೆ ಪ್ರಕರಣ ವಿಚಾರಣೆ ನಡೆಸುತ್ತಿದ್ದ ಕೇರಳ ಹೈಕೋರ್ಟ್, ಪ್ರಕರಣ ಕುರಿತ ಎಲ್ಲ ಕ್ರಿಮಿನಲ್ ಪ್ರಕ್ರಿಯೆಗಳನ್ನು ರದ್ದು ಮಾಡಿ ಆದೇಶ ಹೊರಡಿಸಿದೆ. ದೂರುದಾರ ಹಾಗೂ ಪ್ರತಿವಾದಿಗಳ ನಡುವೆ ಸಂಧಾನ ಏರ್ಪಟ್ಟಿರುವ ಕಾರಣ ಕೇರಳ ಹೈಕೋರ್ಟ್ ಪ್ರಕರಣ ಕುರಿತಾದ ಎಲ್ಲ ವಿಚಾರಣೆ, ತನಿಖೆಗಳನ್ನು ರದ್ದು ಮಾಡಿದೆ.

‘ವರಾಹ ರೂಪಂ’ ಹಾಡು ಥೈಕ್ಕುಡಂ ಬ್ರಿಡ್ಜ್​ನವರ ‘ನವಸರಂ’ ಹಾಡಿನ ನಕಲು ಎಂದು ಆ ಹಾಡಿನ ಹಕ್ಕು ಹೊಂದಿರುವ ಮಾತೃಭೂಮಿ ಪಬ್ಲಿಷರ್ಸ್​ ದಾವೆ ಹೂಡಿದ್ದರು. ಮೊದಲಿಗೆ ಕೆಳ ಹಂತದ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ‘ವರಾಹ ರೂಪಂ’ ಹಾಡನ್ನು ಚಿತ್ರಮಂದಿರಗಳಲ್ಲಿ ಅಥವಾ ಒಟಿಟಿ ಇನ್ನಿತರೆ ಡಿಜಿಟಲ್ ಮಾಧ್ಯಮಗಳಲ್ಲಿ ಬಳಸದಂತೆ ಆದೇಶ ನೀಡಲಾಗಿತ್ತು. ಪ್ರಕರಣವು ಕೇರಳ ಹೈಕೋರ್ಟ್ ಮೆಟ್ಟಿಲೇರಿ ಕಾಂತಾರ ಚಿತ್ರತಂಡಕ್ಕೆ ಅಲ್ಪ ನೆಮ್ಮದಿ ಸಿಕ್ಕಿತ್ತಾದರೂ ಆ ಬಳಿಕ ಮತ್ತೆ ಚಿತ್ರತಂಡದ ವಿರುದ್ಧ ತಾತ್ಕಾಲಿಕ ಆದೇಶ ಹೊರಬಿದ್ದಿತ್ತು.

ಇದನ್ನೂ ಓದಿ: Rishab Shetty: ‘ಕಾಂತಾರ’ ಥೀಮ್​ನಲ್ಲಿ ದುರ್ಗಾ ಪೂಜೆ ಮಾಡಿದ ಕೋಲ್ಕತ್ತಾ ಜನರು

ಇದೀಗ ‘ಕಾಂತಾರ’ ಸಿನಿಮಾ ತಂಡದ ಪರ ವಾದ ಮಂಡಿಸುತ್ತಿದ್ದ ವಿಜಯ್ ವಿ ಪೌಲ್ ಅವರು, ಕಾಂತಾರ ಚಿತ್ರತಂಡ ಹಾಗೂ ಮಾತೃಭೂಮಿ ಪಬ್ಲಿಷರ್ಸ್​ ನಡುವೆ ಸಂಧಾನ ಏರ್ಪಟ್ಟಿರುವ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತಂದು, ಕ್ರಿಮಿನಲ್ ಪ್ರಕ್ರಿಯೆಗಳನ್ನು ರದ್ದು ಮಾಡುವಂತೆ ಮನವಿಯನ್ನು ಮಾಡಿದ್ದರು. ಮನವಿ ಸ್ವೀಕರಿಸಿದ ಕೇರಳ ಹೈಕೋರ್ಟ್ ಸಿಆರ್​ಪಿಸಿ ಸೆಕ್ಷನ್ 482 ಅಡಿಯಲ್ಲಿ ತನ್ನ ವಿಶೇಷ ಅಧಿಕಾರ ಬಳಸಿ ಪ್ರಕರಣವನ್ನು ರದ್ದು ಮಾಡಿದೆ. ಈ ವಿವಾದವು ಎರಡು ಸಂಸ್ಥೆಗಳ ನಡುವಿನ ಖಾಸಗಿ ವಿವಾದಂತೆ ತೋರುತ್ತದೆ ಎಂದ ಕೇರಳ ಹೈಕೋರ್ಟ್, ಈ ಹಿಂದಿನ ಕೆಲವು ಇಂಥಹುದೇ ಪ್ರಕರಣಗಳನ್ನು ಉಲ್ಲೇಖಿಸಿ ಪ್ರಕರಣವನ್ನು ರದ್ದು ಮಾಡಿದೆ.

ಕೇರಳದ ಮ್ಯೂಸಿಕ್ ಬ್ಯಾಂಡ್ ಆಗಿರುವ ಥೈಕ್ಕುಡ್ಡಂ ಬ್ರಿಡ್ಜ್​ ನವರು ನವಸರಂ ಹೆಸರಿನ ಆಲ್ಬಂ ಅನ್ನು ಆರು ವರ್ಷಗಳ ಹಿಂದೆ ಹೊರ ತಂದಿದ್ದರು. ಅದರಲ್ಲಿ ನವರಸಂ ಎಂಬ ಮುಖ್ಯ ಹಾಡು, ‘ಕಾಂತಾರ’ ಸಿನಿಮಾದ ‘ವರಾಹ ರೂಪಂ’ ಹಾಡಿನ ಸಂಗೀತವನ್ನು ಬಹುತೇಕ ಹೋಲುತ್ತದೆ. ‘ವರಾಹ ರೂಪಂ’ ಹಾಡು ಸೂಪರ್ ಹಿಟ್ ಆದ ಸಂದರ್ಭದಲ್ಲಿ ಥೈಕ್ಕುಡಂ ಬ್ರಿಡ್ಜ್ ಹಾಗೂ ನವರಸಂ ಹಾಡಿನ ಹಕ್ಕು ಹೊಂದಿರುವ ಮಾತೃಭೂಮಿ ಪಬ್ಲಿಕೇಷನ್ಸ್​ನವರು ದಾವೆ ಹೂಡಿದ್ದರು. ಕೋರ್ಟ್ ಆದೇಶದಂತೆ ‘ವರಾಹ ರೂಪಂ’ ಹಾಡನ್ನು ಸಿನಿಮಾದಿಂದ ತೆಗೆಯಲಾಗಿತ್ತು. ಆ ಬಳಿಕ ತಡೆಯನ್ನು ತಾತ್ಕಾಲಿಕವಾಗಿ ತೆಗೆದು ಮತ್ತೆ ಹಾಡಿಗೆ ಅವಕಾಶ ಮಾಡಿಕೊಡಲಾಗಿತ್ತು. ಇದೀಗ ಸಂಧಾನದ ಮೂಲಕ ವಿವಾದವನ್ನು ಬಗೆಹರಿಸಿಕೊಳ್ಳಲಾಗಿದೆ.

‘ಕಾಂತಾರ’ ಸಿನಿಮಾಕ್ಕೆ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡಿದ್ದರು. ಸಿನಿಮಾಕ್ಕೆ ಹೊಂಬಾಳೆ ಫಿಲಮ್ಸ್​ನ ವಿಜಯ್ ಕಿರಗಂದೂರು ಬಂಡವಾಳ ಹೂಡಿದ್ದರು. ನಟಿಸಿ, ನಿರ್ದೇಶನ ಮಾಡಿರುವುದು ರಿಷಬ್ ಶೆಟ್ಟಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:57 pm, Wed, 1 November 23