Dinesh Mangaluru: ‘ಕೆಜಿಎಫ್’ ಸಿನಿಮಾ ಖ್ಯಾತಿಯ ನಟ ದಿನೇಶ್ ಮಂಗಳೂರು ನಿಧನ

Dinesh Mangaluru Death: ರಂಗಭೂಮಿ ಹಿನ್ನೆಲೆಯಿಂದ ಚಿತ್ರರಂಗಕ್ಕೆ ಬಂದಿದ್ದ ನಟ ದಿನೇಶ್ ಮಂಗಳೂರು ಅವರು ಇನ್ನಿಲ್ಲ. ನಟನಾಗಿ, ಕಲಾ ನಿರ್ದೇಶಕನಾಗಿ ಅವರು ಗುರುತಿಸಿಕೊಂಡಿದ್ದರು. ಕನ್ನಡ ಚಿತ್ರರಂಗದಲ್ಲಿ ಅವರಿಗೆ ಬಹಳ ಬೇಡಿಕೆ ಇತ್ತು. ಕುಂದಾಪುರದಲ್ಲಿ ಅವರು ಕೊನೆಯುಸಿರು ಎಳೆದಿದ್ದಾರೆ. ದಿನೇಶ್ ಮಂಗಳೂರು ನಿಧನದಿಂದ ಚಿತ್ರರಂಗಕ್ಕೆ ದೊಡ್ಡ ನಷ್ಟವಾಗಿದೆ.

Dinesh Mangaluru: ‘ಕೆಜಿಎಫ್’ ಸಿನಿಮಾ ಖ್ಯಾತಿಯ ನಟ ದಿನೇಶ್ ಮಂಗಳೂರು ನಿಧನ
Dinesh Mangaluru

Updated on: Aug 25, 2025 | 11:41 AM

ಕನ್ನಡ ಚಿತ್ರರಂಗಕ್ಕೆ ಇದು ನೋವಿನ ಸುದ್ದಿ. ನಟ, ಕಲಾ ನಿರ್ದೇಶಕ ದಿನೇಶ್ ಮಂಗಳೂರು (Dinesh Mangaluru) ಅವರು ನಿಧನರಾಗಿದ್ದಾರೆ. ಇಂದು (ಆಗಸ್ಟ್ 25) ಕುಂದಾಪುರದಲ್ಲಿ ಬೆಳಗಿನ‌ಜಾವ ಅವರು ಕೊನೆಯುಸಿರು ಎಳೆದಿದ್ದಾರೆ. ಮನೆಯಲ್ಲೇ ಅವರು ನಿಧನರಾದರು. ‘ಆ ದಿನಗಳು’, ‘ಕೆಜಿಎಫ್’ (KGF), ‘ಉಳಿದವರು ಕಂಡಂತೆ’, ‘ಕಿಚ್ಚ’, ‘ಕಿರಿಕ್ ಪಾರ್ಟಿ’ ಮುಂತಾದ ಸಿನಿಮಾಗಳಲ್ಲಿ ದಿನೇಶ್ ಮಂಗಳೂರು ಅವರು ನಟಿಸಿದ್ದರು. ಕನ್ನಡ ಚಿತ್ರರಂಗದಲ್ಲಿ ಅವರು ಬಹುಬೇಡಿಕೆಯ ಪೋಷಕ ನಟನಾಗಿ ಅವರು ಗುರುತಿಸಿಕೊಂಡಿದ್ದರು. ದಿನೇಶ್ ಮಂಗಳೂರು ನಿಧನಕ್ಕೆ (Dinesh Mangaluru Death) ಚಿತ್ರರಂಗದ ಅನೇಕರು ಕಂಬನಿ ಮಿಡಿಯುತ್ತಿದ್ದಾರೆ.

ಬಣ್ಣದ ಲೋಕದಲ್ಲಿ ದಿನೇಶ್ ಮಂಗಳೂರು ಅವರು ಅಪಾರ ಅನುಭವ ಹೊಂದಿದ್ದರು. ‘ಕಾಂತಾರ’ ಚಿತ್ರದ ಶೂಟಿಂಗ್​ ವೇಳೆ ಅವರಿಗೆ ಪಾರ್ಶ್ವವಾಯು ಆಗಿತ್ತು. ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಆದರೆ ಒಂದು ವಾರದ ಹಿಂದೆ ಅವರು ಮತ್ತೆ ಅಸ್ವಸ್ಥರಾಗಿದ್ದರು. ಅಂಕದಕಟ್ಟೆ ಸರ್ಜನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಟ ಮಂಗಳೂರು ದಿನೇಶ್​ ಮರಣ ಹೊಂದಿದ್ದಾರೆ.

ಮಂಗಳೂರು ದಿನೇಶ್ ಅವರ ಅಗಲಿಕೆಯಿಂದ ಅಭಿಮಾನಿಗಳಿಗೆ, ಆಪ್ತರಿಗೆ, ಕುಟುಂಬದವರಿಗೆ ತೀವ್ರ ನೋವುಂಟಾಗಿದೆ. ‘ಕಲಾ ನಿರ್ದೇಶಕ, ಕಲಾವಿದ, ನಿರ್ಮಾಪಕ, ಸನ್ಮಿತ್ರ ದಿನೇಶ್ ಮಂಗ್ಳುರ್ ಇನ್ನಿಲ್ಲ. ಹೋಗಿ ಬಾ ಮಿತ್ರಾ’ ಎಂದು ನಿರ್ದೇಶಕ ಪಿ. ಶೇಷಾದ್ರಿ ಅವರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ದಿನೇಶ್ ಅವರು ಜನಿಸಿದ್ದು 1964ರಲ್ಲಿ. ದಿನೇಶ್ ಕಾಲಸಸಿ ವೆಂಕಟೇಶ್ ಪೈ (ದಿನೇಶ್ ಕೆವಿ ಪೈ) ಎಂಬುದು ಅವರ ಮೂಲ ಹೆಸರು. ಚಿತ್ರರಂಗಕ್ಕೆ ಬಂದ ಬಳಿಕ ದಿನೇಶ್ ಮಂಗಳೂರು ಎಂಬ ಹೆಸರಿನಿಂದ ಗುರುತಿಸಿಕೊಂಡರು. ಕಾಲೇಜು ದಿನಗಳಿಂದಲೇ ಅವರು ನಾಟಕದ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. ನಂತರ ಅಭಿನಯ ಕಲಿತು ಚಿತ್ರರಂಗಕ್ಕೆ ಕಾಲಿಟ್ಟರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:51 am, Mon, 25 August 25