‘ರಕ್ಷಿತ್ ಶೆಟ್ಟಿ ಮೇಲೆ ಒತ್ತಡ ಹಾಕೋದು ನ್ಯಾಯವಲ್ಲ’: ‘ಥಗ್ಸ್​ ಆಫ್​ ಮಾಲ್ಗುಡಿ’ ಬಗ್ಗೆ ಸುದೀಪ್​ ಮಾತು

ಸುದೀಪ್​ ಅವರು ಬಹುನಿರೀಕ್ಷಿತ ‘ಮ್ಯಾಕ್ಸ್​’ ಸಿನಿಮಾದ ಶೂಟಿಂಗ್​ನಲ್ಲಿ ಈಗ ಬ್ಯುಸಿ ಆಗಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಆ ಸಿನಿಮಾದ ಶೂಟಿಂಗ್​ ಮುಕ್ತಾಯ ಆಗಲಿದೆ ಎಂದು ಕಿಚ್ಚ ಮಾಹಿತಿ ಹಂಚಿಕೊಂಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಅಭಿಮಾನಿಗಳು ಕೇಳಿದ ಅನೇಕ ಪ್ರಶ್ನೆಗಳಿಗೆ ಅವರು ಉತ್ತರ ನೀಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ..

‘ರಕ್ಷಿತ್ ಶೆಟ್ಟಿ ಮೇಲೆ ಒತ್ತಡ ಹಾಕೋದು ನ್ಯಾಯವಲ್ಲ’: ‘ಥಗ್ಸ್​ ಆಫ್​ ಮಾಲ್ಗುಡಿ’ ಬಗ್ಗೆ ಸುದೀಪ್​ ಮಾತು
ಕಿಚ್ಚ ಸುದೀಪ್​, ರಕ್ಷಿತ್​ ಶೆಟ್ಟಿ

Updated on: Feb 15, 2024 | 11:27 AM

ನಟ ಕಿಚ್ಚ ಸುದೀಪ್​ ಅವರು ರಕ್ಷಿತ್​ ಶೆಟ್ಟಿ (Rakshit Shetty) ಜೊತೆ ಸಿನಿಮಾ ಮಾಡಬೇಕು ಎಂಬುದು ಅಭಿಮಾನಿಗಳ ಆಸೆ ಆಗಿತ್ತು. ಇಬ್ಬರ ಕಾಂಬಿನೇಷನ್​ನಲ್ಲಿ ‘ಥಗ್ಸ್​ ಆಫ್​ ಮಾಲ್ಗುಡಿ’ ಸಿನಿಮಾ ಘೋಷಣೆ ಆಗಿತ್ತು. ಆದರೆ ಕಾರಣಾಂತರಗಳಿಂದ ಆ ಸಿನಿಮಾ ಸೆಟ್ಟೇರಲೇ ಇಲ್ಲ. ಸುದೀಪ್​ ಅವರು ಬೇರೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆದರು. ಹಾಗೆಯೇ ರಕ್ಷಿತ್ ಶೆಟ್ಟಿ ಕೂಡ ತಮ್ಮ ಸಿನಿಮಾಗಳಲ್ಲಿ ತೊಡಗಿಕೊಂಡರು. ‘ಥಗ್ಸ್​ ಆಫ್​ ಮಾಲ್ಗುಡಿ’ (Thugs of Malgudi) ಯಾವಾಗ ಬರಲಿದೆ ಎಂದು ಅಭಿಮಾನಿಗಳು ಕೇಳುತ್ತಲೇ ಇದ್ದಾರೆ. ಆದರೆ ಆ ಸಿನಿಮಾ ಸೆಟ್ಟೇರುವುದು ಬಹುತೇಕ ಅನುಮಾನ ಎಂಬಂತಾಗಿದೆ. ಈ ಕುರಿತು ಸೋಶಿಯಲ್​ ಮೀಡಿಯಾದಲ್ಲಿ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಕಿಚ್ಚ ಸುದೀಪ್​ (Kichcha Sudeep) ಉತ್ತರ ನೀಡಿದ್ದಾರೆ.

‘ಸರ್​.. ರಕ್ಷಿತ್​ ಶೆಟ್ಟಿ ಅವರ ಜೊತೆ ಥಗ್ಸ್​ ಆಫ್​ ಮಾಲ್ಗುಡಿ ಮಾಡ್ತೀರಾ? ನೀವಿಬ್ಬರು ಜೊತೆಯಾದರೆ ಚೆನ್ನಾಗಿರುತ್ತದೆ’ ಎಂದು ‘ಬೀಯಿಂಗ್​ ಸೋಮಾರಿ’ ಎಂಬ ಟ್ವಿಟರ್​ ಖಾತೆಯ ಬಳಕೆದಾರರು ಪ್ರಶ್ನೆ ಕೇಳಿದ್ದಾರೆ. ಆ ಪ್ರಶ್ನೆಗೆ ಸುದೀಪ್​ ಅವರು ಉತ್ತರ ನೀಡಿದ್ದಾರೆ. ‘ಅದು ಚೆನ್ನಾಗಿರುತ್ತದೆ ಎಂಬುದರ ಬಗ್ಗೆ ನನಗೆ ಖಾತರಿ ಇದೆ. ಈಗ ಅವರಿಗೆ ಅವರದ್ದೇ ಆದ ಜೀವನ ಇದೆ. ಅವರ ಮೇಲೆ ಒತ್ತಡ ಹಾಕುವುದು ನ್ಯಾಯವಲ್ಲ’ ಎಂದು ಸುದೀಪ್​ ಪೋಸ್ಟ್​ ಮಾಡಿದ್ದಾರೆ.

ಸುದೀಪ್​ ಎಕ್ಸ್​ (ಟ್ವಿಟರ್​) ಪೋಸ್ಟ್​:

ಬಿಡುವಿನ ಸಮಯದಲ್ಲಿ ಸುದೀಪ್​ ಅವರು ಅಭಿಮಾನಿಗಳ ಜೊತೆ ಪ್ರಶ್ನೋತ್ತರ ನಡೆಸುತ್ತಾರೆ. ಇಂದು (ಫೆಬ್ರವರಿ 15) ಬೆಳಗ್ಗೆ ಕೂಡ ಅವರು ಅಭಿಮಾನಿಗಳಿಂದ ಅನೇಕ ಪ್ರಶ್ನೆಗಳನ್ನು ಸ್ವೀಕರಿಸಿದ್ದಾರೆ. ‘ವರ್ಷಕ್ಕೆ ಎರಡು ಸಿನಿಮಾ ಮಾಡುತ್ತೇನೆ ಅಂತ ಹೇಳಿದ್ರಿ. ಎಲ್ಲಿದೆ ಎರಡು ಸಿನಿಮಾ’ ಎಂದು ಕೆಲವರು ಖಡಕ್​ ಆಗಿ ಪ್ರಶ್ನಿಸಿದ್ದಾರೆ. ‘ಪ್ರಯತ್ನಿಸುತ್ತಿದ್ದೇನೆ. ನನ್ನ ತಂಡದವರು ಇದನ್ನು ಕೇಳಿಸಿಕೊಳ್ಳುತ್ತಿದ್ದಾರೆ ಅಂತ ಭಾವಿಸಿದ್ದೇನೆ’ ಎಂದು ಸುದೀಪ್​ ಅವರು ಉತ್ತರಿಸಿದ್ದಾರೆ.

ಇದನ್ನೂ ಓದಿ: ‘ಮ್ಯಾಕ್ಸ್​ ಸಿನಿಮಾ ಅಪ್​ಡೇಟ್​ ಬಗ್ಗೆ ವ್ಯಂಗ್ಯ ಬೇಡ’: ಸುದೀಪ್​ ಖಡಕ್​ ಎಚ್ಚರಿಕೆ

ಪ್ರಸ್ತುತ ಸುದೀಪ್​ ಅವರು ‘ಮ್ಯಾಕ್ಸ್​’ ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಇದರ ಚಿತ್ರೀಕರಣ ಮುಕ್ತಾಯ ಆಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ನ್ಯೂಸ್​ ಇದ್ದಾಗ ಖಂಡಿತವಾಗಿಯೂ ಅಪ್​ಡೇಟ್ ಕೂಡ ಬರಲಿದೆ ಎಂದು ಅವರು ಭರವಸೆ ನೀಡಿದ್ದಾರೆ. ‘ನೀವು ತೆಲುಗಿನ ‘ಈಗ’ ಸಿನಿಮಾದ ರೀತಿಯ ಪಾತ್ರದಲ್ಲಿ ಮತ್ತೆ ಯಾವಾಗ ಕಾಣಿಸಿಕೊಳ್ಳುತ್ತೀರಿ’ ಎಂದು ಅಭಿಮಾನಿಯೊಬ್ಬರು ಕೇಳಿದ್ದಾರೆ. ‘ಇನ್ನೊಬ್ಬರು ಆ ರೀತಿಯ ಕಥೆ ಬರೆದಾಗ’ ಎಂದು ಉತ್ತರಿಸಿದ್ದಾರೆ ಸುದೀಪ್​.

ಪತ್ರಕರ್ತ ಡಾ. ಶರಣು ಹುಲ್ಲೂರು ಅವರು ಬರೆದ ‘ಕನ್ನಡ ಮಾಣಿಕ್ಯ ಕಿಚ್ಚ’ ಪುಸ್ತಕವನ್ನು ತಾವು ಹಲವು ಬಾರಿ ಓದಿರುವುದಾಗಿ ಅಭಿಮಾನಿಯೊಬ್ಬರು ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಸುದೀಪ್​ ಅವರು, ‘ಈ ಪುಸ್ತಕ ಬರೆದವರಿಗೆ ಧನ್ಯವಾದಗಳು’ ಎಂದು ಪೋಸ್ಟ್​ ಮಾಡಿದ್ದಾರೆ. ಈ ರೀತಿ ಅಭಿಮಾನಿಗಳ ಹಲವು ಪ್ರಶ್ನೆಗಳಿಗೆ ಸುದೀಪ್​ ಉತ್ತರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:26 am, Thu, 15 February 24

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us