ಎಲ್ಲಿಗೆ ಪಯಣ ಯಾವುದೋ ದಾರಿ: ಸುದೀಪ್​ಗೆ ಇಷ್ಟವಾಯ್ತು ಕಾಶಿನಾಥ್ ಮಗನ ಸಿನಿಮಾ ಟ್ರೇಲರ್

|

Updated on: Oct 15, 2024 | 5:38 PM

ಬಿಗ್​ ಬಾಸ್ ನಿರೂಪಣೆ ಮತ್ತು ಸಿನಿಮಾ ಕೆಲಸಗಳ ಬ್ಯುಸಿ ನಡುವೆಯೂ ಕಿಚ್ಚ ಸುದೀಪ್ ಅವರು ಬಿಡುವು ಮಾಡಿಕೊಂಡು ‘ಎಲ್ಲಿಗೆ ಪಯಣ ಯಾವುದೋ ದಾರಿ’ ಚಿತ್ರದ ಟ್ರೇಲರ್​ ರಿಲೀಸ್​ ಮಾಡಿದ್ದಾರೆ. ಇದು ಕಾಶಿನಾಥ್ ಪುತ್ರ ಅಭಿಮನ್ಯು ಕಾಶಿನಾಥ್​ ನಟನೆಯ ಸಿನಿಮಾ. ಕಿರಣ್ ಎಸ್. ಸೂರ್ಯ ಅವರ ನಿರ್ದೇಶನ ಈ ಚಿತ್ರಕ್ಕಿದೆ. ಅ.25ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ.

ಎಲ್ಲಿಗೆ ಪಯಣ ಯಾವುದೋ ದಾರಿ: ಸುದೀಪ್​ಗೆ ಇಷ್ಟವಾಯ್ತು ಕಾಶಿನಾಥ್ ಮಗನ ಸಿನಿಮಾ ಟ್ರೇಲರ್
ಚಿತ್ರತಂಡದ ಜೊತೆ ಕಿಚ್ಚ ಸುದೀಪ್​, ಸ್ಫೂರ್ತಿ ಉಡಿಮನೆ, ಅಭಿಮನ್ಯು ಕಾಶಿನಾಥ್
Follow us on

ನಟ ಕಿಚ್ಚ ಸುದೀಪ್​ ಅವರು ಯಾವಾಗಲೂ ಹೊಸಬರ ಬೆನ್ನು ತಟ್ಟುತ್ತಾರೆ. ಈಗ ಅವರು ಕಾಶಿನಾಥ್ ಪುತ್ರನ ಹೊಸ ಸಿನಿಮಾಗೆ ಸಾಥ್ ನೀಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಕಾಶಿನಾಥ್​ ಅವರು ಈಗ ನಮ್ಮೊಂದಿಗೆ ಇಲ್ಲ. ಅವರ ಪುತ್ರ ಅಭಿಮನ್ಯು ಕಾಶಿನಾಥ್ ಹೀರೋ ಆಗಿ ನಟಿಸಿರುವ ‘ಎಲ್ಲಿಗೆ ಪಯಣ ಯಾವುದೋ ದಾರಿ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗೆ ಈ ಸಿನಿಮಾದ ಟ್ರೇಲರ್​ ಬಿಡುಗಡೆ ಸಮಾರಂಭ ನಡೆಯಿತು. ಕಿಚ್ಚ ಸುದೀಪ್​ ಅವರು ಮುಖ್ಯ ಅತಿಥಿಯಾಗಿ ಬಂದು ಟ್ರೇಲರ್​ ಬಿಡುಗಡೆ ಮಾಡಿಕೊಟ್ಟಿದ್ದಾರೆ. ಜೊತೆಗೆ ಸಿನಿಮಾ ತಂಡದ ಬಗ್ಗೆ ಮಾತನಾಡಿದ್ದಾರೆ.

ಸುದೀಪ್​ ಅವರು ಸಖತ್ ಬ್ಯುಸಿ. ಒಂದೆಡೆ ಸಿನಿಮಾ ಕೆಲಸಗಳು, ಇನ್ನೊಂದೆಡೆ ಬಿಗ್​ ಬಾಸ್​ ನಿರೂಪಣೆ. ಈ ಎಲ್ಲ ಒತ್ತಡಗಳ ನಡುವೆ ಬಿಡುವು ಮಾಡಿಕೊಂಡು ಅವರು ‘ಎಲ್ಲಿಗೆ ಪಯಣ ಯಾವುದೋ ದಾರಿ’ ಚಿತ್ರದ ಟ್ರೇಲರ್​ ಅನಾವರಣ ಮಾಡಿಕೊಟ್ಟಿದ್ದಾರೆ. ಟ್ರೇಲರ್ ನೋಡಿ ಅವರು ಮೆಚ್ಚುಗೆ ಸೂಚಿಸಿದ್ದಾರೆ. ಈ ವೇಳೆ ಕನ್ನಡ ಚಿತ್ರರಂಗಕ್ಕೆ ಕಾಶಿನಾಥ್ ನೀಡಿದ್ದ ಕೊಡುಗೆಗಳನ್ನು ಸುದೀಪ್​ ಸ್ಮರಿಸಿದರು.

‘ಕಾಶಿನಾಥ್ ಅವರ ಕೊಡುಗೆಗಳನ್ನು ಹಾಗೂ ಅವರಿಂದ ಆದ ಒಳಿತುಗಳನ್ನು ಸ್ಯಾಂಡಲ್​ವುಡ್​ ಎಂದಿಗೂ ಮರೆಯಲು ಸಾಧ್ಯವಿಲ್ಲ. ಅದರ ಮುಂದೆ ನಾವು ಅಭಿಮನ್ಯುಗೆ ನೀಡುತ್ತಿರುವ ಬೆಂಬಲ ತುಂಬಾ ಚಿಕ್ಕದು’ ಎಂದರು ಸುದೀಪ್. ಈ ಸಿನಿಮಾದ ಟ್ರೇಲರ್​ನಲ್ಲಿ ಅಭಿಮನ್ಯು ಕಾಣಿಸಿಕೊಂಡ ರೀತಿಗೆ ಸುದೀಪ್​ ಮೆಚ್ಚುಗೆ ವ್ಯಕ್ತಪಡಿಸಿದರು.

‘ಎಲ್ಲಿಗೆ ಪಯಣ ಯಾವುದೋ ದಾರಿ’ ಸಿನಿಮಾ ಟ್ರೇಲರ್:​

ಈ ಸಿನಿಮಾಗೆ ಕಿರಣ್ ಎಸ್. ಸೂರ್ಯ ಅವರು ನಿರ್ದೇಶನ ಮಾಡಿದ್ದಾರೆ. ಅವರ ತಂಡದ ಕೆಲಸವನ್ನು ಸುದೀಪ್​ ಹೊಗಳಿದ್ದಾರೆ. ಈ ಸಿನಿಮಾದಲ್ಲಿ ಸುದೀಪ್​ ಕೂಡ ಒಂದು ಹಾಡಿಗೆ ಧ್ವನಿ ನೀಡಿದ್ದಾರೆ. ಟ್ರೇಲರ್​ ಬಿಡುಗಡೆ ಮಾಡಿದ ಸುದೀಪ್​ ಅವರು ಈ ಟೀಮ್​ಗೆ ಆಲ್​ ದಿ ಬೆಸ್ಟ್​ ತಿಳಿಸಿದ್ದಾರೆ. ‘ಸುದರ್ಶನ್ ಆರ್ಟ್ಸ್’ ಮೂಲಕ ಜತಿನ್ ಪಟೇಲ್ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ತೊರೆಯಲು ಸುದೀಪ್ ನಿರ್ಧಾರ: ಇದೇ ಕೊನೆಯ ಸೀಸನ್; ಅಧಿಕೃತ ಘೋಷಣೆ

‘ಎಲ್ಲಿಗೆ ಪಯಣ ಯಾವುದೋ ದಾರಿ’ ಸಿನಿಮಾದಲ್ಲಿ ಅಭಿಮನ್ಯು ಕಾಶಿನಾಥ್ ಜೊತೆ ಸ್ಫೂರ್ತಿ ಉಡಿಮನೆ, ವಿಜಯಶ್ರೀ ಕಲಬುರ್ಗಿ, ಬಲರಾಜ್ ವಾಡಿ, ಅಯಾಂಕ್, ಶೋಭನ್, ರಿನಿ ಬೋಪಣ್ಣ, ರವಿತೇಜ, ಪ್ರದೀಪ್, ಕಿಶೋರ್, ಪ್ರಿಯಾ, ಅಶ್ವಿನಿ ರಾವ್ ಮುಂತಾದವರು ನಟಿಸಿದ್ದಾರೆ. ನಿರ್ದೇಶಕ ಕಿರಣ್​ ಎಸ್​. ಸೂರ್ಯ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಪ್ರಮೋದ್ ಮರವಂತೆ ಸಾಹಿತ್ಯ ರಚಿಸಿದ್ದಾರೆ. ಪ್ರಣವ್ ರಾವ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಸತ್ಯ ರಾಮ್ ಛಾಯಾಗ್ರಹಣ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.