ನಿವೃತ್ತ ಬಸ್​ ಚಾಲಕರ ಪುತ್ರರಾದ ಯಶ್​ ಅವರೇ.. ನಮ್ಮ ಮುಷ್ಕರವನ್ನು ಬೆಂಬಲಿಸಿ: ಯಶ್​ಗೆ ಪತ್ರ ಬರೆದ ಸಾರಿಗೆ ನೌಕರರು

Rocking Star Yash: ಯಶ್, ಜನಪ್ರಿಯ ನಟರು ಹಾಗೂ ನಿವೃತ್ತ ಬಿಎಂಟಿಸಿ ಚಾಲಕರ ಪುತ್ರ ಎಂಬ ಒಕ್ಕಣೆಯೊಂದಿಗೆ ಆರಂಭಗೊಂಡಿರುವ ಈ ಪತ್ರವು ಯಾವುದೇ ಅಧಿಕೃತ ಮುದ್ರೆಯನ್ನಾಗಲೀ, ಸಹಿಯನ್ನಾಗಲೀ, ದಿನಾಂಕವನ್ನಾಗಲೀ ಹೊಂದಿಲ್ಲ. ಇದನ್ನು ಯಶ್ ಅವರಿಗೆ ರವಾನೆ ಮಾಡಿದ್ದಾರೋ, ಇಲ್ಲವೋ ಎಂಬ ಬಗ್ಗೆಯೂ ಸ್ಪಷ್ಟನೆ ಸಿಕ್ಕಿಲ್ಲ.

  • Updated On - 12:05 pm, Wed, 14 April 21 Edited By: Apurva Kumar
ನಿವೃತ್ತ ಬಸ್​ ಚಾಲಕರ ಪುತ್ರರಾದ ಯಶ್​ ಅವರೇ.. ನಮ್ಮ ಮುಷ್ಕರವನ್ನು ಬೆಂಬಲಿಸಿ: ಯಶ್​ಗೆ ಪತ್ರ ಬರೆದ ಸಾರಿಗೆ ನೌಕರರು
ತಂದೆಯೊಂದಿಗೆ ನಟ ಯಶ್​

ಬೆಂಗಳೂರು: ರಾಜ್ಯ ಸರ್ಕಾರ ಹಾಗೂ ಸಾರಿಗೆ ನೌಕರರ ನಡುವಿನ ಹಗ್ಗಜಗ್ಗಾಟ ತಾರ್ಕಿಕ ಅಂತ್ಯ ಕಾಣದೇ ಮುಷ್ಕರ ಎಂಟನೇ ದಿನಕ್ಕೆ ಕಾಲಿಟ್ಟಿದೆ. ಈ ವೇಳೆಯಲ್ಲಿ ಸಾರಿಗೆ ನೌಕರರು ಸ್ಯಾಂಡಲ್​ವುಡ್​ನ ಬಹುಬೇಡಿಕೆ ನಟ, ರಾಕಿಂಗ್​ ಸ್ಟಾರ್ ಅವರಿಗೆ ತಮ್ಮ ಮುಷ್ಕರಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿರುವ ಪತ್ರವೊಂದು ಹರಿದಾಡಲಾರಂಭಿಸಿದೆ. ಕರ್ನಾಟಕ ರಾಜ್ಯ ಸಾರಿಗೆ ನೌಕರರ ಒಕ್ಕೂಟದ ಹೆಸರಿನಲ್ಲಿ ಪತ್ರ ಬರೆಯಲಾಗಿದ್ದು, ನಿಮ್ಮ ತಂದೆಯವರೂ ಬಿಎಂಟಿಸಿ ನಿವೃತ್ತ ಚಾಲಕರು ಹೀಗಾಗಿ ಸಾರಿಗೆ ನೌಕರರ ಕುಟುಂಬದ ಹಿನ್ನೆಲೆಯುಳ್ಳ ನೀವು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ನೀಡಬೇಕೆಂದು ಮನವಿ ಮಾಡಲಾಗಿದೆ.

ಯಶ್, ಜನಪ್ರಿಯ ನಟರು ಹಾಗೂ ನಿವೃತ್ತ ಬಿಎಂಟಿಸಿ ಚಾಲಕರ ಪುತ್ರ ಎಂಬ ಒಕ್ಕಣೆಯೊಂದಿಗೆ ಆರಂಭಗೊಂಡಿರುವ ಈ ಪತ್ರವು ಯಾವುದೇ ಅಧಿಕೃತ ಮುದ್ರೆಯನ್ನಾಗಲೀ, ಸಹಿಯನ್ನಾಗಲೀ, ದಿನಾಂಕವನ್ನಾಗಲೀ ಹೊಂದಿಲ್ಲ. ಇದನ್ನು ಯಶ್ ಅವರಿಗೆ ರವಾನೆ ಮಾಡಿದ್ದಾರೋ, ಇಲ್ಲವೋ ಎಂಬ ಬಗ್ಗೆಯೂ ಸ್ಪಷ್ಟನೆ ಸಿಕ್ಕಿಲ್ಲ. ಆದರೆ, ಯಶ್ ಅವರ ತಂದೆ ಸಾರಿಗೆ ನೌಕರರಾಗಿದ್ದರು ಎಂಬ ವಿಷಯವನ್ನಿಟ್ಟುಕೊಂಡು ನಿಮ್ಮ ತಂದೆ ಅವರ ಅನುಭವ, ನೋವನ್ನು ನಿಮ್ಮ ಜತೆ ಹಂಚಿಕೊಂಡಿರಬಹುದು. ನೀವು ಸಮಾಜಸೇವೆಯಲ್ಲಿ ಗುರುತಿಸಿಕೊಂಡಿದ್ದೀರಿ. ಈಗ ನಮಗೆ ಬೆಂಬಲಿಸಿ ಎಂಬ ಬೇಡಿಕೆಯನ್ನು ಸಲ್ಲಿಸಲಾಗಿದೆ.

YASH

ನಟ ಯಶ್​ ಮತ್ತು ಅವರಿಗೆ ಬರೆದಿರುವ ಪತ್ರ

ಸದ್ಯ ಈ ಪತ್ರಕ್ಕೆ ರಾಕಿಂಗ್ ಸ್ಟಾರ್ ಯಶ್ ಪ್ರತಿಕ್ರಿಯಿಸುತ್ತಾರಾ? ನೌಕರರ ಮನವಿಗೆ ಸ್ಪಂದಿಸಿ ಮುಷ್ಕರಕ್ಕೆ ಮನವಿ ನೀಡುತ್ತಾರಾ? ಆ ಮೂಲಕ ಎಂಟನೇ ದಿನಕ್ಕೆ ಕಾಲಿಟ್ಟಿರುವ ಸಾರಿಗೆ ಮುಷ್ಕರ ಮತ್ತಷ್ಟು ತೀವ್ರಗೊಳ್ಳಲಿದೆಯಾ? ಎಂಬೆಲ್ಲಾ ಪ್ರಶ್ನೆಗಳು ಹುಟ್ಟಿಕೊಂಡಿವೆ. ಆರನೇ ವೇತನ ಆಯೋಗದ ಶಿಫಾರಸಿಗೆ ಆಗ್ರಹಿಸಿ ಸಾರಿಗೆ ನೌಕರರು ಎಷ್ಟೇ ಬಿಗಿಪಟ್ಟು ಹಿಡಿದರೂ ಸರ್ಕಾರ ಮಾತ್ರ ಕಟ್ಟುನಿಟ್ಟಾಗಿ ಅದು ಸಾಧ್ಯವೇ ಇಲ್ಲ ಎಂದು ತಿಳಿಸಿದೆ.

ಆದರೆ, ಇಟ್ಟ ಹೆಜ್ಜೆಯಿಂದ ಹಿಂದೆ ಸರಿಯಲು ಒಪ್ಪದ ನೌಕರರು ಬೇಡಿಕೆ ಈಡೇರುವ ತನಕವೂ ಮುಷ್ಕರ ಮಾಡುವುದಾಗಿ ಎಚ್ಚರಿಸಿದ್ದಾರೆ. ಏತನ್ಮಧ್ಯೆ ರಾಜ್ಯದ ವಿವಿಧ ಸಾರಿಗೆ ವಿಭಾಗಗಳಲ್ಲಿ ಕೆಲ ನೌಕರರು ಕೆಲಸಕ್ಕೆ ಹಾಜರಾಗಿರುವರಾದರೂ ಬೆರಳೆಣಿಕೆ ಸಂಖ್ಯೆಯಷ್ಟು ಬಸ್​ಗಳು ಮಾತ್ರ ಸಂಚರಿಸುತ್ತಿವೆ.

ಇದನ್ನೂ ಓದಿ:
ಎಂಟನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ; ಇಂದು ಅಂಬೇಡ್ಕರ್​ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬೇಡಿಕೆ ಈಡೇರಿಸಲು ಆಗ್ರಹ 

Yash: ಹೀರೋಯಿಸಂ ಬದಿಗಿಟ್ಟು ರೈತನಾದ ಯಶ್​; ಫೋಟೋ ವೈರಲ್​

(A Letter by KSRTC BMTC Employees requesting Rocking star Yash to support transport strike goes Viral)