ಮಗ-ಸೊಸೆಯಿಂದಲೇ ದೌರ್ಜನ್ಯಕ್ಕೊಳಗಾದ ಹಿರಿಯ ನಟಿ ಶ್ಯಾಮಲಾದೇವಿ

Shayamala Devi: ಮೇರು ನಿರ್ದೇಶಕ ಸಿದ್ದಲಿಂಗಯ್ಯ ಅವರ ಮಡದಿ, ಹಿರಿಯ ನಟಿ ಶ್ಯಾಮಲಾ ದೇವಿ ಅವರು ತಮ್ಮ ಪುತ್ರ ಹಾಗೂ ಸೊಸೆಯ ವಿರುದ್ಧ ದೂರು ನೀಡಿದ್ದಾರೆ.

ಮಗ-ಸೊಸೆಯಿಂದಲೇ ದೌರ್ಜನ್ಯಕ್ಕೊಳಗಾದ ಹಿರಿಯ ನಟಿ ಶ್ಯಾಮಲಾದೇವಿ
ಶ್ಯಾಮಲಾದೇವಿ

Updated on: Jun 21, 2023 | 4:44 PM

ಕನ್ನಡದ ಮೇರು ನಿರ್ದೇಶಕ ಸಿದ್ದಲಿಂಗಯ್ಯ (Siddhalingaiah) ಅವರ ಪತ್ನಿ ಹಿರಿಯ ನಟಿ ಶ್ಯಾಮಲಾದೇವಿ (Shyamala Devi) ತಮ್ಮ ಮಗ ಹಾಗೂ ಸೊಸೆಯಿಂದಲೇ ತೀವ್ರ ಕಿರುಕುಳ, ದೈಹಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ನಟಿ ಸ್ವತಃ ಪೊಲೀಸರಿಗೆ ದೂರು ನೀಡಿದ್ದು ಮಗ ಹಾಗೂ ಸೊಸೆಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಮಗ ಹಾಗೂ ಸೊಸೆಯ ವಿರುದ್ಧ ವಿವರವಾದ ದೂರನ್ನು ನಟಿ ಶ್ಯಾಮಲಾದೇವಿ ಸಲ್ಲಿಸಿದ್ದು, ಇಬ್ಬರೂ ತಮ್ಮ ಮೇಲೆ ಎಸಗುತ್ತಿರುವ ದೌರ್ಜನ್ಯವನ್ನು ವಿವರಿಸಿದ್ದಾರೆ.

ಸಿನಿಮಾ ಮ್ಯಾನೇಜರ್ ವಿಶ್ವಕುಮಾರ್ ಎಂಬುವರು ಹಾಗೂ ನನ್ನ ಮಕ್ಕಳೊಟ್ಟಿಗೆ ನಾನು ವಾಸವಾಗಿದ್ದೆ. ನನ್ನ ಮಗ ನಿತಿನ್ ಮದುವೆ ಆಗುವವರೆಗೆ ಎಲ್ಲವೂ ಚೆನ್ನಾಗಿತ್ತು. ಮಗನನ್ನು ಪೊಲೀಸ್ ಅಧಿಕಾರಿಯೊಬ್ಬರ ಮಗಳು ಸುಶ್ಮಿತಾ ಎಂಬುವರಿಗೆ ಮದುವೆ ಮಾಡಿ ಕೊಟ್ಟಿ ಆಗಿನಿಂದಲೂ ಅವರಿಬ್ಬರೂ ಸೇರಿ ನನ್ನ ಮೇಲೆ ದೌರ್ಜನ್ಯ ಪ್ರಾರಂಭ ಮಾಡಿದರು. ಮಗನ ಮದುವೆ ಆದಮೇಲೆ ನಾನು ಮನೆಯೊಂದನ್ನು ಖರೀದಿಸಿ ಮಗ ನಾನೂ ಸೊಸೆ ಒಟ್ಟಿಗೆ ಇದ್ದೆವು. ನನ್ನ ಮನೆಯನ್ನು ಅವರ ಹೆಸರಿಗೆ ಮಾಡುವಂತೆ ಮಗ, ಸೊಸೆ ನನ್ನ ಮೇಲೆ ಒತ್ತಡ ಹೇರಲು ಆರಂಭಿಸಿದರು. ನನ್ನ ಮೇಲೆ ಸತತ ಮಾನಸಿಕ ಹಾಗೂ ದೈಹಿಕ ಹಲ್ಲೆಯನ್ನು ಸಹ ಮಾಡಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ ಹಿರಿಯ ನಟಿ.

ಈ ಬಗ್ಗೆ ಹಿರಿಯ ನಾಗರೀಕರ ವೇದಿಕೆ ದೂರು ನೀಡಿದಾಗ ನನ್ನ ಮಗ ನಿತಿನ್ ನನ್ನ ಕ್ಷಮೆ ಬಳಿ ಕೇಳಿದ, ಪತ್ನಿ ಗರ್ಭಿಣಿ ಆಗಿದ್ದಾಳೆ ನನ್ನನ್ನು ಮನೆಯಿಂದ ಹೊರಗೆ ಹಾಕಬೇಡ ಎಂದ ಅಂತೆಯೇ ನಾನೂ ಸಹ ಒಪ್ಪಿ ಸುಮ್ಮನಾದೆ. ಆದರೆ ಆ ಬಳಿಕ ನನ್ನ ಆರೋಗ್ಯ ಹದಗೆಟ್ಟಾಗ ಅದರ ಲಾಭ ಪಡೆದುಕೊಂಡ ಪುತ್ರ ನಿತಿನ್, ತನ್ನ ಖಾತೆಯಿಂದ ನನ್ನ ಆಸ್ಪತ್ರೆ ಬಿಲ್ ಕಟ್ಟಿ, ನನ್ನಿಂದ ನಗದಿನಲ್ಲಿ ಹಣ ಪಡೆದ. ಆ ಬಳಿಕ ನನ್ನ ಪತ್ನಿಯ ಕೈಯಿಂದ ನಿನ್ನ ಮೇಲೆ ವರದಕ್ಷಿಣೆ ಕೇಸು ಹಾಕಿಸುತ್ತೇನೆ ಎಂದು ಹೆದರಿಸುತ್ತಿದ್ದಾನೆ. ಮಾತ್ರವಲ್ಲದೆ ತನ್ನ ಪತ್ನಿಗೆ ನನ್ನನ್ನು ಹೊಡೆಯುವಂತೆ ನಿರ್ದೇಶನ ಕೊಟ್ಟು ಹೊಡೆಸುತ್ತಾನೆ. ಅಲ್ಲದೆ ತೀರ ಅವಾಚ್ಯ ಶಬ್ದಗಳಿಂದ ನನ್ನನ್ನು ಬೈಯ್ಯುತ್ತಾನೆ ಎಂದು ದೂರು ನೀಡಿದ್ದಾರೆ ಶ್ಯಾಮಲಾ ದೇವಿ.

ಇದನ್ನೂ ಓದಿ:ಲೀಲಾವತಿ ಅವರ ಹಸಿರು ಪ್ರೇಮದ ಬಗ್ಗೆ ಮೆಚ್ಚುಗೆ ಸೂಚಿಸಿದ ಹಿರಿಯ ನಟಿ ಭವ್ಯಾ

ನಾನು ಅವರಿಗೆ ಲಾಯರ್ ನೊಟೀಸ್ ಕಳಿಸಿದ್ದಿಕ್ಕೆ ನನಗೆ ಬೆದರಿಕೆ ಹಾಕಿದ್ದಾರೆ. ನನ್ನ ಇನ್ನೊಬ್ಬಳು ಮಗಳು, ನಿತಿನ್ ಸಹೋದರಿ ಉಮಾಳನ್ನು ಕೊಲ್ಲುವುದಾಗಿಯೂ ಹೇಳಿದ್ದಾರೆ. ನನ್ನ ಮಗಳು ಉಮಾ ಕಳೆದ ಮೂರು ತಿಂಗಳಿನಿಂದ ಕೆಲಸದ ಮೇರೆಗೆ ಬ್ರಿಟನ್​ಗೆ ಹೋಗಿದ್ದಾಳೆ. ಅವರ ಜೀವನವನ್ನು ಹಾಳು ಮಾಡುವುದಾಗಿ ಮಗ ನಿತಿನ್ ನನಗೆ ಬೆದರಿಕೆ ಹಾಕಿದ್ದಾನೆ.

ನನ್ನದೇ ಮನೆಯಲ್ಲಿ ನನಗೆ ಅಡುಗೆ ಮಾಡಲು ಬಿಡುತ್ತಿಲ್ಲ, ಪಾತ್ರೆಗಳನ್ನು ಬಳಸಲು ಬಿಡುತ್ತಿಲ್ಲ, ರೂಂಗಳ ಬಾಗಿಲು ಹಾಕಿಕೊಂಡಿದ್ದಾರೆ. ಗಿಡ ನೆಡಲು ಮಣ್ಣು ತರಿಸಿದ್ದೆ, ಅದರಲ್ಲಿಯೇ ನಿನ್ನನ್ನು ಹೂಳುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಪ್ರತಿದಿನ ನಾನು ಸರಿಯಾಗಿ ಮಲಗಬಾರದೆಂದು ತೊಂದರೆ ಕೊಡುತ್ತಾರೆ. ದೈಹಿಕ, ಮಾನಸಿಕ ಹಲ್ಲೆಗಳನ್ನು ಮಾಡುತ್ತಲೇ ಇರುತ್ತಾರೆ. ನನ್ನನ್ನು ಸುಳ್ಳು ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಸಿಲುಕಿಸುವ ಬೆದರಿಕೆ ಹಾಕಿದ್ದಾರೆ ದಯವಿಟ್ಟು ನನ್ನ ಜೀವ ಕಾಪಾಡಿ, ಸೂಕ್ತ ಭದ್ರತೆ ಒದಗಿಸಿ” ಎಂದು ಶ್ಯಾಮಲಾದೇವಿ ಮನವಿ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us