ಇಪ್ಪತ್ತೈದು ನಿಮಿಷಗಳಲ್ಲೊಂದು ಪ್ರೇಮ ಕತೆ ‘ಲವ್ ರೀಸೆಟ್’

Love Reset: ಹಿರಿತೆರೆಗೆ ಹೋಲಿಸಿದರೆ ಸಾಕಷ್ಟು ಭಿನ್ನ ಪ್ರಯತ್ನಗಳು ಕಿರುಚಿತ್ರಗಳ ಮೂಲಕ ಮಾಡಲಾಗುತ್ತಿದೆ. ಅಂಥಹುದೇ ಒಂದು ಪ್ರಯತ್ನ ‘ಲವ್ ರೀಸೆಟ್’ ಇದೀಗ ಬಿಡುಗಡೆ ಆಗಿದೆ.

ಇಪ್ಪತ್ತೈದು ನಿಮಿಷಗಳಲ್ಲೊಂದು ಪ್ರೇಮ ಕತೆ ‘ಲವ್ ರೀಸೆಟ್’

Updated on: Jan 24, 2024 | 9:22 PM

ಸ್ಯಾಂಡಲ್​ವುಡ್​ನಲ್ಲಿ (Sandalwood) ಈಗ ಸಖತ್ ಸದ್ದು ಮಾಡುತ್ತಿರುವ ಸಿನಿಮಾ ನಿರ್ದೇಶಕರು ಮೊದಲು ಕಿರುಚಿತ್ರ ಮಾಡಿದವರೇ. ಕೆಲವು ಅದ್ಭುತ ಕಿರುಚಿತ್ರಗಳು ಕನ್ನಡದಲ್ಲಿ ಈಗಾಗಲೇ ನಿರ್ಮಾಣವಾಗಿವೆ. ಕೆಲವಂತೂ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಗಮನ ಸೆಳೆದಿವೆ. ಹಿರಿತೆರೆಯ ಭವಿಷ್ಯದ ಅತ್ಯುತ್ತಮ ನಿರ್ದೇಶಕರು ತಯಾರಾಗುತ್ತಿರುವುದು ಕಿರುಚಿತ್ರಗಳ ಕಾರ್ಯಾಗಾರದಲ್ಲಿಯೇ. ಹಿರಿತೆರೆಗೆ ಹೋಲಿಸಿದರೆ ಸಾಕಷ್ಟು ಭಿನ್ನ ಪ್ರಯತ್ನಗಳು ಕಿರುಚಿತ್ರಗಳ ಮೂಲಕ ಮಾಡಲಾಗುತ್ತಿದೆ. ಅಂಥಹುದೇ ಒಂದು ಪ್ರಯತ್ನ ‘ಲವ್ ರೀಸೆಟ್’.

‘ಲವ್ ರೀಸೆಟ್’ ಕಿರುಚಿತ್ರ ಇತ್ತೀಚೆಗೆ ಬಿಡುಗಡೆಯಾಗಿದೆ. ಶ್ರೀಗಣೇಶ್ ನಿರ್ದೇಶಿಸಿ, ‘ಪುಟ್ಟಕ್ಕನ ಮಕ್ಕಳು’ ಖ್ಯಾತಿಯ ಪವನ್ ಕುಮಾರ್ ಹಾಗೂ ಸಂಜನಾ ಬುರ್ಲಿ ಪ್ರಧಾನ ಪಾತ್ರಗಳಲ್ಲಿ ನಟಿಸಿರುವ ಈ ಕಿರುಚಿತ್ರದ ಪ್ರೀಮಿಯರ್ ಇತ್ತೀಚಿಗೆ ನಡೆಯಿತು. ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ತಂಡದವರು, ಬಿಗ್ ಬಾಸ್ ಖ್ಯಾತಿಯ ಸ್ನೇಹಿತ್, ಭೂಮಿ ಶೆಟ್ಟಿ, ರಮೇಶ್ ಪಂಡಿತ್, ಕಲಾಗಂಗೋತ್ರಿ ಮಂಜು, ಪದ್ಮಕಲಾ ಸೇರಿದಂತೆ ಅನೇಕ ಗಣ್ಯರು ಪ್ರೀಮಿಯರ್​ಗೆ ಆಗಮಿಸಿ ತಂಡಕ್ಕೆ ಶುಭ ಕೋರಿದರು.

ಪ್ರದರ್ಶನದ ನಂತರ ಮಾತನಾಡಿದ ನಿರ್ದೇಶಕ ಶ್ರೀಗಣೇಶ್, ‘ನಾನು ಮೂಲತಃ ಐಟಿ ಉದ್ಯೋಗಿ. ಸಿನಿಮಾ ಮಾಡಬೇಕೆಂಬ ಆಸೆಯಿದೆ. ಅದರ ಪೂರ್ವಭಾವಿಯಾಗಿ ಈ ಕಿರುಚಿತ್ರ ಮಾಡಿದ್ದೇನೆ. ಇದೊಂದು ಪ್ರೇಮ ಕಥಾನಕ. ಈಗಿನ ಪ್ರೇಮಿಗಳ ಮನಸ್ಥಿತಿಯನ್ನು 25 ನಿಮಿಷಗಳಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇನೆ. ಈ ಕಿರುಚಿತ್ರದಲ್ಲಿ ವಿ. ನಾಗೇಂದ್ರ ಪ್ರಸಾದ್ ಬರೆದಿರುವ “ಅನುರಾಗದ ನೆನಪೀಗ ಕೊನೆಯಾಗಲಿ’ ಎಂಬ ಸುಂದರವಾದ ಹಾಡೊಂದಿದೆ. ಸರಿಗಮಪ ಖ್ಯಾತಿಯ ಸುನೀಲ್, ಅನನ್ಯ ಪ್ರಕಾಶ್ ದನಿಯಾಗಿರುವ ಈ ಹಾಡಿಗೆ ಜೋಯಲ್ ಹಾಗೂ ಅಭಿಲಾಶ್ ಸಂಗೀತ ನೀಡಿದ್ದಾರೆ. ಈ ಹಾಡನ್ನು A2 music ಮೂಲಕ ಮೊದಲೆ ಬಿಡುಗಡೆಯಾಗಿತ್ತು. 7 ಶೇಡ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಕಿರುಚಿತ್ರ ಬಿಡುಗಡೆ ಮಾಡಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ:‘ಪಿಆರ್​ಕೆ ಆಡಿಯೋ’ದಲ್ಲಿ ‘ನೀನೊಂದು ಶಾಯರಿ’; ಕಾಡುವ ಕಿರುಚಿತ್ರಕ್ಕೆ ಸಿಕ್ತು ಮೆಚ್ಚುಗೆ

‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಮುರಳಿ ಪಾತ್ರವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಸಿನಿಮಾದಲ್ಲೂ ನಟಿಸುವ ಆಸಯಿದೆ. ಈ ಕಿರುಚಿತ್ರದಲ್ಲಿ ‘ಅಮರ್’ ನನ್ನ ಪಾತ್ರದ ಹೆಸರು. ಪ್ರೀತಿ ಹಾಗೂ ಕೆರಿಯರ್ ವಿಷಯ ಬಂದಾಗ ಹುಡುಗ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾನೆ ಎಂಬುದನ್ನು ನಿರ್ದೇಶಕರು ಇದರಲ್ಲಿ ತೋರಿಸಿದ್ದಾರೆ ಎಂದು ನಾಯಕ ಪವನ್ ಕುಮಾರ್ ತಿಳಿಸಿದರು.

ಕಥೆ ಬಹಳ ಡಿಫರೆಂಟ್ ಆಗಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ ನೋಡಿ ಹಾರೈಸಿ ಎಂದರು ನಾಯಕಿ ಸಂಜನ ಬುರ್ಲಿ. ಛಾಯಾಗ್ರಾಹಕ ಪ್ರಜ್ವಲ್ ಭಾರದ್ವಾಜ್ ಸೇರಿದಂತೆ ಅನೇಕ ತಂತ್ರಜ್ಞರು ಕಿರುಚಿತ್ರದ ಬಗ್ಗೆ ಮಾತನಾಡಿದರು. ರಂಜಿತ್ ಶಂಕರೇಗೌಡ ಸಹ ನಿರ್ದೇಶಕರ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us