
ಒಂದು ಹಿಟ್ ಹಾಡು ಬಂತು ಎಂದರೆ, ಅದಕ್ಕೆ ಚಿತ್ರಸಾಹಿತಿಯ ಶ್ರಮ ಸಾಕಷ್ಟಿರುತ್ತದೆ. ಮೆಲೋಡಿ ಹಾಡು ಕೇಳುಗನಿಗೆ ಇಂಪೆನಿಸಬೇಕು. ಪೊಣಿಸುವ ಶಬ್ದಗಳು ಕೇಳುಗನ ಮನಮುಟ್ಟಬೇಕು. ಅದರಲ್ಲೂ ರೊಮ್ಯಾಂಟಿಕ್ ಹಾಡುಗಳಾದರೆ ಶೃಂಗಾರಭರಿತವಾಗಿರಬೇಕು. ಈ ಪ್ರಯತ್ನದಲ್ಲಿ ಗೀತಸಾಹಿತಿ ಪ್ರಮೋದ್ ಮರವಂತೆ ಪ್ರತಿ ಬಾರಿಯೂ ವಿಜಯ ಸಾಧಿಸುತ್ತಾರೆ. ಹೊಸ ಹೊಸ ರೀತಿಯ ಗೀತೆ ನೀಡಿ ಮನಗೆಲ್ಲುತ್ತಾರೆ. ಈಗ ‘ಟಾಕ್ಸಿಕ್’ ಚಿತ್ರದ ‘ಮನಮೋಹಕ’ ಹಾಡಿನ (Manamohaka Song) ಮೂಲಕ ಅವರು ಪ್ರೇಕ್ಷಕರ ಮನಗೆದ್ದಿದ್ದಾರೆ.
‘ಟಾಕ್ಸಿಕ್’ ಸಿನಿಮಾದ ಎರಡನೇ ಹಾಡು ‘ಮನಮೋಹಕ’ ಸದ್ಯ ಐದು ಭಾಷೆಗಳಲ್ಲಿ ಬಿಡುಗಡೆಯಾಗಿ ಇಂಟರ್ನೆಟ್ನಲ್ಲಿ ಧೂಳೆಬ್ಬಿಸುತ್ತಿದೆ. ಈ ಅದ್ಭುತ ಮೆಲೋಡಿ ಪ್ರಣಯಗೀತೆಗೆ ಕನ್ನಡದಲ್ಲಿ ಅದ್ಭುತವಾಗಿ ಸಾಹಿತ್ಯ ಪೊಣಿಸಿದ್ದು ಸ್ಯಾಂಡಲ್ವುಡ್ನ ಪ್ರತಿಭಾವಂತ ಸಾಹಿತ್ಯಗಾರ ಪ್ರಮೋದ್ ಮರವಂತೆ. ಯಶ್ ಮತ್ತು ತಾರಾ ಸುತಾರಿಯಾ ಜೋಡಿಯ ಕೆಮಿಸ್ಟ್ರಿಗೆ ಇವರ ಸಾಹಿತ್ಯದ ಸಾಲುಗಳು ಮತ್ತಷ್ಟು ಕಳೆ ಕಟ್ಟಿರುವುದು ಈಗ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಮರವಂತೆ ಮೂಲದ ಪ್ರಮೋದ್, ಕನ್ನಡ ಚಿತ್ರರಂಗದಲ್ಲಿ ಇಂದು ಮೋಸ್ಟ್ ವಾಂಟೆಡ್ ಲಿರಿಸಿಸ್ಟ್ ಆಗಿ ಹೊರಹೊಮ್ಮಿದ್ದಾರೆ. ಆರಂಭದ ದಿನಗಳಲ್ಲಿ ಸಾಕಷ್ಟು ಕಷ್ಟಪಟ್ಟು ಚಿತ್ರರಂಗದಲ್ಲಿ ನೆಲೆ ಕಂಡುಕೊಂಡ ಇವರು, ತಮ್ಮ ವಿಭಿನ್ನ ಶಬ್ದಗಳ ಬಳಕೆ ಮತ್ತು ಭಾವನಾತ್ಮಕ ಸಾಲುಗಳ ಮೂಲಕವೇ ಪ್ರೇಕ್ಷಕರ ಹೃದಯ ಗೆದ್ದವರು. ಕರಾವಳಿಯ ಸೊಗಡನ್ನು ತಮ್ಮ ಹೆಸರಿನಲ್ಲೇ ಇಟ್ಟುಕೊಂಡು ಗಾಂಧಿನಗರದ ದೊಡ್ಡ ದೊಡ್ಡ ಸ್ಟಾರ್ ಸಿನಿಮಾಗಳಿಗೆ ಸಾಹಿತ್ಯ ಬರೆಯುವ ಹಂತಕ್ಕೆ ಬೆಳೆದು ನಿಂತಿದ್ದಾರೆ.
ಕೇವಲ ‘ಟಾಕ್ಸಿಕ್’ ಮಾತ್ರವಲ್ಲದೆ, ಕನ್ನಡದ ಹಲವು ಬ್ಲಾಕ್ಬಸ್ಟರ್ ಸಿನಿಮಾಗಳಿಗೆ ಪ್ರಮೋದ್ ಮರವಂತೆ ಹಿಟ್ ಗೀತೆಗಳನ್ನು ನೀಡಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ ಜಾಗತಿಕ ಮಟ್ಟದ ಯಶಸ್ಸು ಕಂಡ ‘ಕಾಂತಾರ’ ಚಿತ್ರದ ‘ಸಿಂಗಾರ ಸಿರಿಯೇ’ ಹಾಡಿಗೆ ಸಾಹಿತ್ಯ ಬರೆದಿದ್ದು ಇದೇ ಪ್ರಮೋದ್ ಮರವಂತೆ. ಈ ಹಾಡು ಇವರ ವೃತ್ತಿಜೀವನಕ್ಕೆ ದೊಡ್ಡ ಬ್ರೇಕ್ ನೀಡಿತ್ತು. ಸ್ಯಾಂಡಲ್ವುಡ್ನ ಪ್ರಮುಖ ತಾರೆಗಳಾದ ರಕ್ಷಿತ್ ಶೆಟ್ಟಿ, ರಾಜ್ ಬಿ. ಶೆಟ್ಟಿ ಸೇರಿದಂತೆ ಹಲವು ಸ್ಟಾರ್ ನಟ ಹಾಗೂ ನಿರ್ದೇಶಕರ ಸಿನಿಮಾಗಳಿಗೆ ಸಾಹಿತ್ಯ ಬರೆದು ಭರವಸೆಯ ಸಾಹಿತಿಯಾಗಿ ಗುರುತಿಸಿಕೊಂಡಿದ್ದಾರೆ.
ಪ್ರಮೋದ್ ಮರವಂತೆ ಅವರ ಸಾಹಿತ್ಯದ ವಿಶೇಷತೆಯೆಂದರೆ ಅವರು ಕೇವಲ ಮೆಲೋಡಿ ಹಾಡುಗಳಿಗೆ ಮಾತ್ರ ಸೀಮಿತವಾಗಿಲ್ಲ. ಒಂದು ಕಡೆ ‘ಸಿಂಗಾರ ಸಿರಿಯೇ’ ಅಥವಾ ಈಗ ಬಂದಿರುವ ‘ಮನಮೋಹಕ’ದಂತಹ ಮಧುರ ಪ್ರಣಯಗೀತೆಗಳನ್ನು ಬರೆಯುವ ಇವರು, ಇನ್ನೊಂದೆಡೆ ಹಳ್ಳಿ ಸೊಗಡಿನ ಹಾಗೂ ಮಾಸ್ ಆಡಿಯನ್ಸ್ ಇಷ್ಟಪಡುವ ಹಾಡುಗಳನ್ನೂ ಬರೆದು ಸೈ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ: ‘ಟಾಕ್ಸಿಕ್’ ಚಿತ್ರದ ‘ಮನಮೋಹಕ..’ ಸಾಂಗ್; ಯಶ್-ತಾರಾ ಸುತಾರಿಯಾ ಕೆಮಿಸ್ಟ್ರಿಗೆ ಫ್ಯಾನ್ಸ್ ಫಿದಾ
ಈಗ ‘ಟಾಕ್ಸಿಕ್’ ಸಿನಿಮಾದ ದೊಡ್ಡ ಕ್ಯಾನ್ವಾಸ್ನಲ್ಲಿ ಇವರ ಸಾಹಿತ್ಯ ಮೂಡಿಬಂದಿರುವುದು ಅವರ ಯಶಸ್ಸಿನ ಕಿರೀಟಕ್ಕೆ ಮತ್ತೊಂದು ಗರಿ ಇಟ್ಟಂತಾಗಿದೆ. ಮುಂಬರುವ ದಿನಗಳಲ್ಲಿ ಇವರಿಂದ ಮತ್ತಷ್ಟು ಅದ್ಭುತ ಕನ್ನಡ ಗೀತೆಗಳು ಮೂಡಿಬರಲಿ ಎಂಬುದು ಅಭಿಮಾನಿಗಳ ಆಶಯ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.