ಸಂಗೀತ ನಿರ್ದೇಶಕ ಗುರುಕಿರಣ್ ತಾಯಿ ರತ್ನಕಾಂತಿ ಶೆಟ್ಟಿ ನಿಧನ

ಕನ್ನಡ ಚಿತ್ರರಂಗದ ಪ್ರಸಿದ್ಧ ಸಂಗೀತ ನಿರ್ದೇಶಕ ಗುರುಕಿರಣ್ ಅವರ ತಾಯಿ ರತ್ನಕಾಂತಿ ಶೆಟ್ಟಿ ನಿಧನರಾಗಿದ್ದಾರೆ. ತಾಯಿಯ ಅಗಲಿಕೆಯಿಂದ ಭಾವುಕರಾಗಿರುವ ಗುರುಕಿರಣ್, ಸಾಮಾಜಿಕ ಜಾಲತಾಣದಲ್ಲಿ ಭಾವಪೂರ್ಣ ಪೋಸ್ಟ್ ಹಂಚಿಕೊಂಡಿದ್ದಾರೆ. ಇವರ ಅಗಲಿಕೆಗೆ ಚಿತ್ರರಂಗದ ಗಣ್ಯರು, ಅಭಿಮಾನಿಗಳು ಹಾಗೂ ಆತ್ಮೀಯರು ತೀವ್ರ ಕಂಬನಿ ಮಿಡಿದು, ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.

ಸಂಗೀತ ನಿರ್ದೇಶಕ ಗುರುಕಿರಣ್ ತಾಯಿ ರತ್ನಕಾಂತಿ ಶೆಟ್ಟಿ ನಿಧನ
ಗುರು ಕಿರಣ್ ತಾಯಿ ನಿಧನ

Updated on: Aug 10, 2026 | 2:16 PM

ಮುಖ್ಯಾಂಶಗಳು

  • ಅಮ್ಮನ ಅಗಲಿಕೆಗೆ ಭಾವುಕ ಪೋಸ್ಟ್ ಹಂಚಿಕೊಂಡ ಸಂಗೀತ ನಿರ್ದೇಶಕ
  • ನನ್ನ ಪ್ರತಿ ಸಾಧನೆಗೂ ತಾಯಿಯೇ ಪ್ರೇರಣೆ: ಗುರುಕಿರಣ್ ಕಂಬನಿ
  • ಸ್ಯಾಂಡಲ್‌ವುಡ್ ಗಣ್ಯರು ಹಾಗೂ ಅಭಿಮಾನಿಗಳಿಂದ ಸಂತಾಪ ಸೂಚನೆ

ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅವರ ತಾಯಿ ರತ್ನಕಾಂತಿ ಶೆಟ್ಟಿ ಅವರು ನಿಧನರಾಗಿದ್ದಾರೆ. ತಾಯಿಯ ಅಗಲಿಕೆಯಿಂದ ತೀವ್ರ ದುಃಖಿತರಾಗಿರುವ ಗುರುಕಿರಣ್, ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಮ್ಮ ಮಾತೃವಂದನೆ ಸಲ್ಲಿಸಿದ್ದಾರೆ. ಅವರಿಗೆ ಎಲ್ಲರೂ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಕೆಲವರು ತಾಯಿ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

‘ನನ್ನ ಪ್ರೀತಿಯ ತಾಯಿ ರತ್ನಕಾಂತಿ ಶೆಟ್ಟಿ ಅವರು ನಿಧನರಾಗಿದ್ದಾರೆ ಎಂಬ ಹೃದಯವಿದ್ರಾವಕ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದೇನೆ. ಜೀವನದಲ್ಲಿ ಏನೇ ಆಗಿದ್ದರೂ, ಏನೇ ಸಾಧಿಸಿದ್ದರೂ ಅದಕ್ಕೆಲ್ಲಾ ನನ್ನ ತಾಯಿಯೇ ಕಾರಣ’ ಎಂದು ಗುರುಕಿರಣ್ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಗುರುಕಿರಣ್ ಕುಟುಂಬಕ್ಕೆ ಚಿತ್ರರಂಗದ ಗಣ್ಯರು, ಅಭಿಮಾನಿಗಳು ಹಾಗೂ ಆತ್ಮೀಯರು ಕಂಬನಿ ಮಿಡಿದು, ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಸಂತಾಪ ಸೂಚಿಸುತ್ತಿದ್ದಾರೆ.

ಇದನ್ನೂ ಓದಿ:  ‘ಅಪ್ಪು’ ಸಿನಿಮಾದ ಅವಕಾಶ ನನಗೆ ಸಿಕ್ಕಾಗ ನಂಬೋಕೆ ಆಗಲಿಲ್ಲ: ಗುರುಕಿರಣ್

ಗುರುಕಿರಣ್ ವೃತ್ತಿಜೀವನ

ಸ್ಯಾಂಡಲ್‌ವುಡ್‌ನ ಟ್ರೆಂಡ್ ಸೆಟ್ಟರ್ ಸಂಗೀತ ನಿರ್ದೇಶಕರಲ್ಲಿ ಒಬ್ಬರಾದ ಗುರುಕಿರಣ್, 90ರ ದಶಕದ ಕೊನೆಯಲ್ಲಿ ‘ಎ’ ಚಿತ್ರದ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾಗಿ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು. ‘ಉಪೇಂದ್ರ’, ‘ಆಪ್ತಮಿತ್ರ’, ‘ಅಪ್ಪು’, ‘ಜೋಗಿ’, ಸೇರಿದಂತೆ ಸಾಲು ಸಾಲು ಹಿಟ್ ಸಿನಿಮಾಗಳಿಗೆ ನೀಡಿದ ವಿಭಿನ್ನ ಹಾಗೂ ಎನರ್ಜಿಟಿಕ್ ರಾಗಗಳಿಂದ ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿದರು. ಸಂಗೀತ ನಿರ್ದೇಶನದ ಜೊತೆಗೆ ಗಾಯಕನಾಗಿ, ನಟನಾಗಿಯೂ ಕನ್ನಡಿಗರ ಮನಗೆದ್ದಿರುವ ಇವರು, ರಾಜ್ಯ ಸರ್ಕಾರಿ ಪ್ರಶಸ್ತಿ ಹಾಗೂ ಸಾಲು ಸಾಲು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಅವರ ಸಾಧನೆಯ ಹಾದಿಗೆ ತಾಯಿಯೇ ಶಕ್ತಿಯಾಗಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us