ಆರ್.ಪಿ. ಪಟ್ನಾಯಕ್ ಸಂಗೀತದಲ್ಲಿ ‘ನಾನು ಮತ್ತು ಗುಂಡ 2’ ಸಿನಿಮಾದ ಹಾಡು

ಶ್ವಾನಗಳ ಕಥೆ ಇರುವ ಸಿನಿಮಾಗಳೆಂದರೆ ಪ್ರಾಣಿಪ್ರಿಯರಿಗೆ ತುಂಬ ಇಷ್ಟ. ಅಂಥ ಸಿನಿಮಾಗಳಿಗೆ ಪ್ರೇಕ್ಷಕರು ಫಿದಾ ಆದ ಉದಾಹರಣೆಗಳು ಸಾಕಷ್ಟಿವೆ. ಈಗ ‘ನಾನು ಮತ್ತು ಗುಂಡ 2’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದ ಹೊಸ ಹಾಡನ್ನು ಬಿಡುಗಡೆ ಮಾಡಲಾಗಿದೆ. ಚಿತ್ರಕ್ಕೆ ಆರ್.ಪಿ. ಪಟ್ನಾಯಕ್ ಸಂಗೀತ ನೀಡಿದ್ದಾರೆ.

ಆರ್.ಪಿ. ಪಟ್ನಾಯಕ್ ಸಂಗೀತದಲ್ಲಿ ‘ನಾನು ಮತ್ತು ಗುಂಡ 2’ ಸಿನಿಮಾದ ಹಾಡು
Naanu Matthu Gunda 2 Movie Team

Updated on: Aug 25, 2025 | 8:32 AM

2020ರಲ್ಲಿ ಬಂದ ‘ನಾನು ಮತ್ತು ಗುಂಡ’ (Naanu Matthu Gunda) ಸಿನಿಮಾ ಜನರ ಮೆಚ್ಚುಗೆ ಪಡೆದಿತ್ತು. ನಾಯಿ ಮತ್ತು ಅದರ ಮಾಲೀಕ ಶಂಕರನ ನಡುವಿನ ಅವಿನಾಭಾವ ಸಂಬಂಧದ ಕಥೆಯನ್ನು ಆ ಸಿನಿಮಾ ವಿವರಿಸಿತ್ತು. ನಟ ಶಿವರಾಜ್ ಕೆ.ಆರ್. ಪೇಟೆ ನಾಯಕನಾಗಿ ನಟಿಸಿದ ಆ ಸಿನಿಮಾಗೆ ರಘು ಹಾಸನ್ ಅವರು ನಿರ್ದೇಶನ ಮಾಡಿದ್ದರು. ಈಗ ಆ ಕಥೆಯ ಮುಂದುವರಿದ ಭಾಗವಾಗಿ ‘ನಾನು ಮತ್ತು ಗುಂಡ 2’  (Naanu Matthu Gunda 2) ಸಿನಿಮಾ ಸಿದ್ಧವಾಗಿದೆ. ರಘು ಹಾಸನ್ ಅವರೇ ಈ ಸಿನಿಮಾವನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. ರಾಕೇಶ್ ಅಡಿಗ ಮತ್ತು ರಚನಾ ಇಂದರ್ ಅವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ.

ಸೆಪ್ಟೆಂಬರ್ 5ರಂದು ‘ನಾನು ಮತ್ತು ಗುಂಡ 2’ ಚಿತ್ರ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಡಾ. ವಿ. ನಾಗೇಂದ್ರಪ್ರಸಾದ್ ಅವರು ಶಿವನ ಮೇಲೆ ರಚಿಸಿರುವ ಗೀತೆ ಇದೆ. ಅದಕ್ಕೆ ವಿಜಯ್ ಪ್ರಕಾಶ್ ಅವರು ಧ್ವನಿ ನೀಡಿದ್ದಾರೆ. ‘ಓಂ ಶಿವಾಯ, ನಮೋ ಶಿವಾಯ..’ ಎಂಬ ಈ ಹಾಡಿಗೆ ಆರ್.ಪಿ. ಪಟ್ನಾಯಕ್ ಅವರು ಸಂಗೀತ ನೀಡಿದ್ದಾರೆ. ಇತ್ತೀಚೆಗೆ ಈ ಹಾಡಿನ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಈ ವೇಳೆ ನಾಗೇಂದ್ರ ಪ್ರಸಾದ್ ಮಾತನಾಡಿದರು. ‘ರಘು ಹಾಸನ್ ಈ ಹಾಡಿನ ಬಗ್ಗೆ ಹೇಳಿದಾಗ ತುಂಬಾ ವಿಷಯಗಳು ಇದರಲ್ಲಿವೆ ಎನಿಸಿತು. ಮನಸಿಗೆ ಇಳಿಯುವಂತಹ ಕಂಟೆಂಟ್ ಈ ಹಾಡಲ್ಲಿ ಇದೆ. ಇದು ಪಕ್ಕಾ ಚಿತ್ರಗೀತೆ. ಸಿನಿಮಾದಲ್ಲಿ ನೋಡಿದಾಗ ಬಹಳ ಇಂಪ್ಯಾಕ್ಟ್ ಆಗುತ್ತದೆ. ಟ್ರೇಲರ್​​ನಲ್ಲಿ ಎಲ್ಲ ಎಮೋಷನ್ ಹೇಳುವ ಪ್ರಯತ್ನ ಮಾಡಿದ್ದಾರೆ’ ಎಂದು ಅವರು ಹೇಳಿದರು.

ನಿರ್ದೇಶಕ ರಘು ಹಾಸನ್ ಅವರು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು. ‘ನಮ್ಮ ಸಿನಿಮಾ ಕೆಲಸ 2022ರಲ್ಲಿ ಪ್ರಾರಂಭವಾಗಿತ್ತು. ಈಗ ಬಿಡುಗಡೆ ಆಗುತ್ತಿದೆ. ಸಂಗೀತ ನಿರ್ದೇಶಕ ಪಟ್ನಾಯಕ್ ಅವರು ಈ ಹಾಡಿನ ಟ್ಯೂನ್ ಕೊಟ್ಟಾಗ ತಕ್ಷಣ ನೆನಪಾಗಿದ್ದೇ ನಾಗೇಂದ್ರ ಪ್ರಸಾದ್. ಹೊಡಿಬಡಿ ಕಥೆಗಳನ್ನು ಬಿಟ್ಟು ಭಾವನಾತ್ಮಕವಾಗಿ ಏನಾದರೂ ಮಾಡಬೇಕು ಎಂದಾಗ ಹುಟ್ಟಿದ್ದೇ ಗುಂಡನ ಕಥೆ. ಸೆನ್ಸಾರ್‌ ಮಂಡಳಿ ಈ ಸಿನಿಮಾಗೆ ಯಾವುದೇ ಕಟ್ ಇಲ್ಲದೇ ಯು/ಎ ಪ್ರಮಾಣಪತ್ರ ಕೊಟ್ಟಿದೆ’ ನಿರ್ದೇಶಕರು ಹೇಳಿದರು.

ಇದನ್ನೂ ಓದಿ: ರಿಯಲ್​ ಲೈಫ್​ನಲ್ಲೂ ಇದ್ದಾರೆ ‘ನಾನು ಮತ್ತು ಗುಂಡ’; ಆಟೋ ಚಾಲಕನ ನೆಚ್ಚಿನ ಬಂಟ ರೋನಿ

‘ಶಂಕರ ನಿಧನನಾದ ಮೇಲೆ ಆತನ ಮಗನಿಂದ ಕಥೆ ಮುಂದುವರಿಯುತ್ತದೆ. ರಾಕೇಶ್ ಅಡಿಗ ಅವರು ಶಂಕರನ ಮಗನಾಗಿ ನಟಿಸಿದ್ದಾರೆ. ಆತನಿಗೆ ನಾಯಿಯೇ ಪ್ರಪಂಚ. ಸಾಮಾಜಿಕ ಕಾಳಜಿ ಜೊತೆಗೆ ಡಿವೈನ್ ಕಂಟೆಂಟ್ ಕೂಡ ಈ ಸಿನಿಮಾದಲ್ಲಿದೆ. ಶಿವಮೊಗ್ಗ, ತೀರ್ಥಹಳ್ಳಿ, ಬಾಳೆಹೊನ್ನೂರು, ಊಟಿ, ಬೆಂಗಳೂರು ಮುಂತಾದ ಕಡೆಗಳಲ್ಲಿ ಶೂಟಿಂಗ್ ಮಾಡಲಾಗಿದೆ. ಸಿನಿಮಾದಲ್ಲಿ 6 ಹಾಡುಗಳಿವೆ. ಆರ್.ಪಿ. ಪಟ್ನಾಯಕ್ ಉತ್ತಮವಾಗಿ ಸಂಗೀತ ನೀಡಿದ್ದಾರೆ’ ಎಂದರು ರಘು ಹಾಸನ್. ಶ್ವಾನಗಳಾದ ಸಿಂಬಾ, ಬಂಟಿ ಈ ಸಿನಿಮಾದಲ್ಲಿ ನಟಿಸಿವೆ.‘ಪೊಯೆಮ್ ಪಿಕ್ಚರ್ಸ್’ ಬ್ಯಾನರ್​​ನಲ್ಲಿ ಸಿನಿಮಾ ನಿರ್ಮಾಣ ಆಗಿದೆ. ರುತ್ವಿಕ್ ಮುರಳೀಧರ್ ಅವರ ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ. ತನ್ವಿಕ್ ಅವರು ಛಾಯಾಗ್ರಹಣ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.