ಸ್ವಾತಂತ್ರ್ಯ ದಿನಾಚರಣೆ ಸಮಯಕ್ಕೆ ಬರಲಿದೆ ‘ಓ ಮೈ ಇಂಡಿಯಾ’ ಸಿನಿಮಾ

‘ಓ ಮೈ ಇಂಡಿಯಾ’ ಸಿನಿಮಾದಲ್ಲಿ ರತನ್‌ ದೇವ್, ಧರಣಿಶ್ರೀ ಮುಂತಾದವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಅವಿನಾಶ್, ಚಿತ್ರಾ ಶಣೈ, ಸುಚೇಂದ್ರ ಪ್ರಸಾದ್, ಇರ್ಷಾದ್ ಅಹ್ಮದ್ ಮುಂತಾದ ಕಲಾವಿದರು ಈ ಚಿತ್ರದ ನಟಿಸಿದ್ದಾರೆ. ರಮ್ಯಾ ಲೋಕೇಶ್ ಅವರು ನಿರ್ಮಾಣ ಮಾಡಿದ್ದು, ಜಿ.ಎನ್. ಕೃಷ್ಣಮೂರ್ತಿ ಅವರು ನಿರ್ದೇಶನ ಮಾಡಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ ಸಮಯಕ್ಕೆ ಬರಲಿದೆ ‘ಓ ಮೈ ಇಂಡಿಯಾ’ ಸಿನಿಮಾ
Oh My India Movie Team

Updated on: Jul 08, 2025 | 9:58 PM

ಭಾರತದ ಹಿರಿಮೆ ಸಾರಲು ‘ಓ ಮೈ ಇಂಡಿಯಾ’ (Oh My India) ಸಿನಿಮಾ ಮಾಡಿರುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಬಹುತೇಕ ಹೊಸಬರು ಸೇರಿಕೊಂಡು ಈ ಸಿನಿಮಾ ಮಾಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ಹಾಡು ಮತ್ತು ಟ್ರೇಲರ್ (Trailer) ಬಿಡುಗಡೆ ಮಾಡಲಾಯಿತು. ಹಿರಿಯ ನಟ ಎಂ.ಎಸ್. ಉಮೇಶ್, ಸಮಾಜ ಸೇವಕ ಮಹೇಂದ್ರ ಮುನ್ನೋತ್, ನಿರ್ಮಾಪಕ ಡಾ. ಲಯನ್ ಎಸ್. ವೆಂಕಟೇಶ್ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗಿಯಾದರು. ‘ಸಾನ್ವಿಶ್ರೀಯಾ ಪ್ರೊಡಕ್ಷನ್ಸ್’ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಹಾಸನದ ರಮ್ಯಾ ಲೋಕೇಶ್ (Ramya Lokesh) ಅವರು ನಿರ್ಮಾಣ ಮಾಡಿದ್ದಾರೆ. ಹಿರಿಯ ಪತ್ರಕರ್ತ ಜಿ.ಎನ್. ಕೃಷ್ಣಮೂರ್ತಿ ಅವರು ನಿರ್ದೇಶನ ಮಾಡಿದ್ದಾರೆ.

ಜಿ.ಎನ್. ಕೃಷ್ಣಮೂರ್ತಿ ಅವರು ನಿರ್ದೇಶನದ ಜೊತೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯದ ಜವಾಬ್ದಾರಿಯನ್ನೂ ನಿಭಾಯಿಸಿದ್ದಾರೆ. ‘ಓ ಮೈ ಇಂಡಿಯಾ’ ಸಿನಿಮಾಗೆ ಬೆಂಗಳೂರು, ಹಾಸನ, ಸಕಲೇಶಪುರ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಸ್ವಾತಂತ್ರ್ಯ ದಿನಾಚರಣೆ ಸಮಯದಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಲು ನಿರ್ಮಾಪಕರು ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಈ ಸಿನಿಮಾದಲ್ಲಿ ರತನ್‌ ದೇವ್ ಅವರು ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಶಿಕ್ಷಕಿಯ ಪಾತ್ರದಲ್ಲಿ ಧರಣಿಶ್ರೀ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಸಾಯಿಕುಮಾರ್ ಅಭಿನಯಿಸಿದ್ದಾರೆ. ಅವಿನಾಶ್, ಚಿತ್ರಾ ಶಣೈ, ಸುಚೇಂದ್ರ ಪ್ರಸಾದ್, ಇರ್ಷಾದ್ ಅಹ್ಮದ್ ಮುಂತಾದ ಕಲಾವಿದರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. 3 ಹಾಡುಗಳಿಗೆ ಜಿ. ಭಟ್ ಸಂಗೀತ ನೀಡಿದ್ದಾರೆ. ಅಭಿನಂದನ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಕೌರವ ವೆಂಕಟೇಶ್ ಅವರ ಸಾಹಸ ನಿರ್ದೇಶನ, ವಿನಯ್ ಜಿ. ಆಲೂರು ಅವರ ಸಂಕಲನ, ಎಂ.ಆರ್. ಕಪಿಲ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

‘ಓ ಮೈ ಇಂಡಿಯಾ’ ಚಿತ್ರದಲ್ಲಿ ರತನ್‌ದೇವ್ ಅವರು ಜಿಲ್ಲಾಧಿಕಾರಿಯಾಗಿ ನಟಿಸಿದ್ದು, ‘ಸರ್ಕಾರಿ ಅಧಿಕಾರಿ ಮನಸ್ಸು ಮಾಡಿದರೆ ಸಮಾಜವನ್ನು ಹೇಗೆ ಸರಿಪಡಿಸಬಹುದು ಎಂಬುದನ್ನು ಈ ಪಾತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇವೆ’ ಎಂದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಕೃಷ್ಣಮೂರ್ತಿ ಅವರು ಸಿನಿಮಾದ ಕಥೆ ಬಗ್ಗೆ ಇನ್ನಷ್ಟು ಮಾಹಿತಿ ನೀಡಿದರು.

ಇದನ್ನೂ ಓದಿ: ಗುರುತೇ ಸಿಗದಂತೆ ಬದಲಾದ ರಶ್ಮಿಕಾ ಮಂದಣ್ಣ; ಯಾಕೆ ಈ ಗೆಟಪ್?

‘ನಮ್ಮ ಹೆಮ್ಮೆಯ ಭಾರತವನ್ನು ಬೇರೆ ದೇಶದವರು ಹೊಗಳುತ್ತಿದ್ದಾರೆ. ಆದರೆ ನಮ್ಮವರು ಇಲ್ಲಿಯ ಗಾಳಿ, ಶಿಕ್ಷಣ ಪಡೆದು ನಂತರ ಬದುಕು ಕಟ್ಟಿಕೊಳ್ಳಲು ಬೇರೆ ದೇಶಕ್ಕೆ ಹೋಗುತ್ತಿದ್ದಾರೆ. ದೇಶದ ಭ್ರಷ್ಟ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳಬೇಕು. ಪ್ರಜೆಗಳು ಇಂದು ಚುನಾಯಿತ ಪ್ರತಿನಿಧಿಗಳ ಹತ್ತಿರ ಗುಲಾಮರಾಗುತ್ತಿದ್ದೇವೆ. ಇಂತಹ ಕೆಟ್ಟ ವ್ಯವಸ್ಥೆ ತೊಲಗಬೇಕು. ಈ ರೀತಿಯ ಅರ್ಥಪೂರ್ಣ ಅಂಶಗಳು ನಮ್ಮ ಸಿನಿಮಾದಲ್ಲಿವೆ. ಇದರಿಂದ ಪ್ರೇಕ್ಷಕರ ದೃಷ್ಟಿಕೋನ ಬದಲಾಗುತ್ತದೆ’ ಎಂದಿದ್ದಾರೆ ನಿರ್ದೇಶಕ ಜಿ.ಎನ್. ಕೃಷ್ಣಮೂರ್ತಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.