
ನಟ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ (Chakravarthy Chandrachud) ಅವರು ಇತ್ತೀಚೆಗೆ ನಿರ್ಮಾಪಕರ ಬಗ್ಗೆ ಮಾತನಾಡಿದ್ದು ವಿವಾದಕ್ಕೆ ಕಾರಣ ಆಗಿದೆ. ನಿರ್ಮಾಪಕರು ಹೀರೋಗಳಿಗೆ ಕಾಂಡೋಮ್ ಕೊಡುತ್ತಾರೆ ಅಂತ ಚಂದ್ರಚೂಡ್ ಹೇಳಿದ್ದಾರೆ. ಅದನ್ನು ‘ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ’ ಖಂಡಿಸಿದೆ. ಅಲ್ಲದೇ, ಚಂದ್ರಚೂಡ್ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಈ ಬಗ್ಗೆ ಹಿರಿಯ ನಿರ್ಮಾಪಕ ಕೆ. ಮಂಜು ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ಚಂದ್ರಚೂಡ್ ಹೇಳಿಕೆಗೆ ಕೆ. ಮಂಜು (Producer K Manju) ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
‘ನಿನ್ನೆ ಸಂಜೆ ನಿರ್ಮಾಪಕರ ಸಂಘದಿಂದ ತುಂಬಾ ನಿರ್ಮಾಪಕರು ಕರೆ ಮಾಡಿದರು. ಈ ವಿಡಿಯೋ ನೋಡಿದ್ರಾ ಅಂತ ಕೇಳಿದರು. ಪೂರ್ತಿ ವಿಡಿಯೋ ನೋಡಿದೆ. ಕೆವಿಎನ್ ಸಂಸ್ಥೆ ಬಗ್ಗೆ ಚಂದ್ರಚೂಡ್ ಮಾತನಾಡಿದ್ದಾರೆ. ಅದನ್ನೆಲ್ಲ ಮಾತನಾಡೋಕೆ ಚಂದ್ರಚೂಡ್ ಯಾರು? ಸೆನ್ಸಾರ್ ಮಂಡಳಿ ಬಗ್ಗೆ, ನ್ಯಾಯಾಲಯದ ಬಗ್ಗೆ ಕೂಡ ಚಂದ್ರಚೂಡ್ ಮಾತನಾಡಿದ್ದಾರೆ. ಗೊತ್ತಿಲ್ಲದೇ ಏನೇನೋ ಮಾತನಾಡಬಾರದು. ಹೀರೋಗೆ ನಿರ್ಮಾಪಕರು ಕಾಂಡೋಮ್ ಕೊಟ್ಟಿದ್ದಾರೆ ಅಂತ ಚಂದ್ರಚೂಡ್ ಹೇಳಿದ್ದಾರೆ. ಅದನ್ನು ಇವರು ನೋಡಿದ್ದಾರಾ? ಅಂಥ ನಿರ್ಮಾಪಕ ಯಾರು ಅನ್ನೋದು ಹೇಳಿದರೆ ಅಂಥವರನ್ನು ನಾವು ದೂರ ಇಡುತ್ತೇವೆ’ ಎಂದಿದ್ದಾರೆ ಕೆ. ಮಂಜು.
‘ಇದು ಚಂದ್ರಚೂಡ್ ಅವರ ದುರಹಂಕಾರದ ಪರಮಾವಧಿ. ತಮ್ಮ ಯೂಟ್ಯೂಬ್ನಲ್ಲಿ ನೋಡುಗರ ಸಂಖ್ಯೆ ಜಾಸ್ತಿ ಮಾಡಿಕೊಳ್ಳಲು ಹೇಳಿರಬಹುದು. ಆ ರೀತಿ ಆಗಬಾರದು. ನಿರ್ಮಾಪಕರ ಕಷ್ಟ ಏನು ಎಂಬುದು ನಿರ್ಮಾಪಕರಿಗೆ ಮಾತ್ರ ಗೊತ್ತು. ಕಳೆದ 3 ತಿಂಗಳಿಂದ ಸುಮಾರು 200 ಕೋಟಿ ರೂಪಾಯಿ ನಷ್ಟ ಆಗಿದೆ. ಇನ್ನು 9 ತಿಂಗಳು ಲೆಕ್ಕ ಹಾಕಿಕೊಳ್ಳಿ. ನಿರ್ಮಾಪಕರು ಸಂಕಷ್ಟದಲ್ಲಿ ಇದ್ದಾರೆ. ನೀವು ಯಾಕೆ ಈ ರೀತಿ ಮಾತನಾಡುತ್ತೀರಿ’ ಎಂದು ಕೆ. ಮಂಜು ಪ್ರಶ್ನಿಸಿದ್ದಾರೆ.
‘ಚಿತ್ರರಂಗಕ್ಕೆ ಏನು ಒಳ್ಳೆಯದು ಮಾಡಬೇಕು ಎಂಬ ಬಗ್ಗೆ ಆಲೋಚನೆ ಮಾಡೋಣ. ಒಳ್ಳೆಯ ಕಥೆ ಕ್ರಿಯೇಟ್ ಮಾಡೋಣ. ಬಂದ ತಕ್ಷಣ ದುಡ್ಡು ಬೇಕು ಎಂದರೆ ನಿರ್ಮಾಪಕ ಎಲ್ಲಿಂದ ತರುತ್ತಾನೆ. ಅಲ್ಲದೇ ಈ ರೀತಿ ನಿಂದನೆ ಯಾಕೆ ಮಾಡಬೇಕು? ಚಿತ್ರರಂಗಕ್ಕೆ ಚಂದ್ರಚೂಡ್ ಕೊಡುಗೆ ಏನು? ಯಾರೂ ಕೂಡ ಇನ್ಮುಂದೆ ಈ ರೀತಿ ಮಾತನಾಡಬಾರದು ಎಂಬ ಉದ್ದೇಶದಿಂದ ಕ್ರಿಮಿನಲ್ ಕೇಸ್ ದಾಖಲಿಸಿದ್ದೇವೆ’ ಎಂದು ಕೆ. ಮಂಜು ಅವರು ಹೇಳಿದ್ದಾರೆ.
ಇದನ್ನೂ ಓದಿ: ಚಕ್ರವರ್ತಿ ಚಂದ್ರಚೂಡ್ ವಿರುದ್ಧ ದೂರು ನೀಡಿದ ನಿರ್ಮಾಪಕರ ಸಂಘ
ಸುದೀಪ್ ಜೊತೆ ಚಂದ್ರಚೂಡ್ ಇದ್ದಾರೆ. ಆ ಬಗ್ಗೆ ಕೂಡ ಕೆ. ಮಂಜು ಮಾತನಾಡಿದ್ದಾರೆ. ‘ಸುದೀಪ್ ಅವರಿಗೆ ಇಂಥದ್ದೆಲ್ಲ ಗೊತ್ತಿರಲ್ಲ. ಈ ರೀತಿ ಆದರೆ ಇಂಥವರನ್ನು ಅವರು ಹತ್ತಿರಕ್ಕೆ ಸೇರಿಸಿಕೊಳ್ಳಲ್ಲ. ಯಾಕೆಂದರೆ ಸುದೀಪ್ ಅವರು ಕ್ಲೀನ್ ವ್ಯಕ್ತಿ’ ಎಂದು ಕೆ. ಮಂಜು ಅವರು ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.