‘ಶಾಂತಿ ಕ್ರಾಂತಿ’ ಮರುಬಿಡುಗಡೆಗೆ ಹಲವು ಸವಾಲು; ಅಂದುಕೊಂಡಷ್ಟು ಸುಲಭವಿಲ್ಲ ರೀ-ರಿಲೀಸ್
ರವಿಚಂದ್ರನ್ ಅಭಿನಯದ ಬಿಗ್ ಬಜೆಟ್ ಸಿನಿಮಾ 'ಶಾಂತಿ ಕ್ರಾಂತಿ' ಮರುಬಿಡುಗಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಒತ್ತಾಯ ಕೇಳಿಬಂದಿದೆ. ಆದರೆ ಯುಟ್ಯೂಬ್ ಮತ್ತು ಟಿವಿಯಲ್ಲಿ ಉಚಿತ ಲಭ್ಯತೆ ಇರುವ ಈ ಸಿನಿಮಾನ ಚಿತ್ರಮಂದಿರಗಳಲ್ಲಿ ಮರುಬಿಡುಗಡೆ ಮಾಡುವುದು ಸುಲಭದ ಮಾತಲ್ಲ. ಆ ಬಗ್ಗೆ ಇಲ್ಲಿದೆ ವಿವರ.

ಮುಖ್ಯಾಂಶಗಳು
- 'ಶಾಂತಿ ಕ್ರಾಂತಿ' ರೀ-ರಿಲೀಸ್ಗೆ ಭಾರಿ ಟ್ರೆಂಡ್
- ಥಿಯೇಟರ್ಗೆ ಬರ್ತಾರಾ ಪ್ರೇಕ್ಷಕರು?
- ಬಾಕ್ಸ್ ಆಫೀಸ್ನಲ್ಲಿ ಮರುಬಿಡುಗಡೆ ಚಿತ್ರಗಳಲ್ಲಿ ಸೋಲೇ ಹೆಚ್ಚು
‘ಶಾಂತಿ ಕ್ರಾಂತಿ’ ಇದು 1991ರಲ್ಲಿ ರಿಲೀಸ್ ಆದ ಅಸಲಿ ಪ್ಯಾನ್ ಇಂಡಿಯಾ ಸಿನಿಮಾ. ಕೇವಲ ಡಬ್ ಮಾಡದೆ ಹಲವು ಭಾಷೆಗಳಲ್ಲಿ ಬೇರೆ ಬೇರೆ ಕಲಾವಿದರನ್ನೇ ಇಟ್ಟುಕೊಂಡು ಶೂಟ್ ಮಾಡಲಾಗಿತ್ತು. ಆ ಸಮಯದಲ್ಲೇ ಇದರ ಬಜೆಟ್ 10 ಕೋಟಿ ರೂಪಾಯಿ ಮೀರಿತ್ತು. ಈಗ ‘ಶಾಂತಿ ಕ್ರಾಂತಿ’ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ರೀ-ರಿಲೀಸ್ ಮಾಡಬೇಕೆಂಬ ಒತ್ತಾಯ ಸೋಶಿಯಲ್ ಮೀಡಿಯಾದಲ್ಲಿ ಜೋರಾ್ಉದೆ. ಆದರೆ, ಸೋಶಿಯಲ್ ಮೀಡಿಯಾ ಟ್ರೆಂಡ್ಗೂ ಮತ್ತು ವಾಸ್ತವದ ಪರಿಸ್ಥಿತಿಗೂ ಸಾಕಷ್ಟು ವ್ಯತ್ಯಾಸವಿದೆ ಎಂಬ ವಿಶ್ಲೇಷಣೆ ವ್ಯಕ್ತವಾಗಿದೆ.
ಸೋಶಿಯಲ್ ಮೀಡಿಯಾ ಕ್ರೇಜ್ vs ವಾಸ್ತವ
ಸಾಮಾಜಿಕ ಜಾಲತಾಣಗಳಲ್ಲಿ ‘ಶಾಂತಿ ಕ್ರಾಂತಿ’ ರೀ-ರಿಲೀಸ್ಗೆ ಭಾರಿ ಬೆಂಬಲ ಸಿಗುತ್ತಿದೆ. ರೀ-ರಿಲೀಸ್ ಮಾಡಿ ಎಂಬ ರೀಲ್ಸ್ಗೆ ಲಕ್ಷಾಂತರ ವೀಕ್ಷಣೆ ಹಾಗೂ ಲೈಕ್ಸ್ ಬರುತ್ತಿದೆ. ಆದರೆ, ಈ ಪೈಕಿ ಎಷ್ಟು ಜನರು ಥಿಯೇಟರ್ಗೆ ಬರುತ್ತಾರೆ ಎಂಬುದು ಪ್ರಶ್ನೆ.
ಉಚಿತ ವೀಕ್ಷಣೆ
‘ಶಾಂತಿ ಕ್ರಾಂತಿ’ ಸಿನಿಮಾ ಈಗಾಗಲೇ ಯುಟ್ಯೂಬ್ನಲ್ಲಿ ಉಚಿತವಾಗಿ ಲಭ್ಯವಿದೆ ಹಾಗೂ ಉದಯ ಟಿವಿಯಲ್ಲಿ ವಾರಕ್ಕೆ ಎರಡೆರಡು ಬಾರಿ ಪ್ರಸಾರವಾಗುತ್ತಿದೆ. ಹೀಗಿರುವಾಗ ಜನರು ಥಿಯೇಟರ್ಗೆ ಹೋಗಿ ವೀಕ್ಷಿಸುತ್ತಾರೆ ಎಂಬುದನ್ನು ಹೇಗೆ ನಿರೀಕ್ಷಿಸಬಹುದು? ಇಂದಿನ ಕಾಲದಲ್ಲಿ ಪ್ರೇಕ್ಷಕರು ಅರ್ಧ ದಿನದ ಸಮಯ ಮೀಸಲಿಟ್ಟು, ಸಾವಿರಾರು ರೂಪಾಯಿಗಳನ್ನು ಟಿಕೆಟ್, ಪಾಪ್ಕಾರ್ನ್ ಹಾಗೂ ಪಾರ್ಕಿಂಗ್ಗೆ ಖರ್ಚು ಮಾಡಿ ಚಿತ್ರಮಂದಿರಕ್ಕೆ ಬರುವುದು ವಿರಳ.
ಹಳೆಯ ಸಿನಿಮಾವನ್ನು ಈಗಿನ ಕಾಲಕ್ಕೆ ತಕ್ಕಂತೆ 4K ನೆಗೆಟಿವ್ ಕ್ಲೀನಿಂಗ್, ಸೌಂಡ್ ಮಿಕ್ಸಿಂಗ್ ಸೇರಿದಂತೆ ತಾಂತ್ರಿಕವಾಗಿ ಸಿದ್ಧಪಡಿಸಿ ರೀ-ರಿಲೀಸ್ ಮಾಡಲು ಲಕ್ಷಾಂತರ ರೂಪಾಯಿ ಹೂಡಿಕೆ ಬೇಕಾಗುತ್ತದೆ. ಹೂಡಿಕೆ ಮಾಡಿದ ಹಣ ವಾಪಸ್ ಬರುವುದು ಅನುಮಾನ.
ಶೇ. 95 ರೀ-ರಿಲೀಸ್ ಸಿನಿಮಾಗಳು ವಿಫಲ
ಕನ್ನಡ ಚಿತ್ರರಂಗದಲ್ಲಿ ರೀ-ರಿಲೀಸ್ ಆದ ಶೇ. 95ರಷ್ಟು ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಸೋತಿವೆ. ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಥಿಯೇಟರ್ ಮುಂದೆ ಸಂಭ್ರಮಿಸಿ ಹಾಕುವ ವಿಡಿಯೋಗಳು ಕೇವಲ ಶೇ. 2ರಷ್ಟು ಮಾತ್ರ ವಾಸ್ತವ. ಉಳಿದ ಶೇ. 98ರಷ್ಟು ಶೋಗಳು ಹಾಗೂ ಥಿಯೇಟರ್ಗಳು ಖಾಲಿ ಉಳಿಯುತ್ತವೆ ಮತ್ತು ಥಿಯೇಟರ್ ಬಾಡಿಗೆಯೂ ವಾಪಸ್ ಬರುವುದಿಲ್ಲ.
ಇದನ್ನೂ ಓದಿ: ‘ಶಾಂತಿ ಕ್ರಾಂತಿ’ ರೀ-ರಿಲೀಸ್ ಬಗ್ಗೆ ರವಿಚಂದ್ರನ್ ಮಗನಿಂದ ಸಿಕ್ತು ಅಪ್ಡೇಟ್
ರವಿಚಂದ್ರನ್ಗೆ ಇತ್ತು ಅನುಮಾನ
ರವಿಚಂದ್ರನ್ ಅವರಿಗೆ ಈ ಸಿನಿಮಾ ಮಾಡುವಾಗಲೇ ಇದರ ಫಲಿತಾಂಶದ ಅರಿವಿತ್ತು. ಆದರೆ ತಂದೆಯ ಸೂಚನೆಯಂತೆ ರಜನಿಕಾಂತ್, ನಾಗಾರ್ಜುನ ಅವರಂತಹ ಸೂಪರ್ ಸ್ಟಾರ್ಗಳ ಕಾಲ್ಶೀಟ್ ವೃಥಾ ಹೋಗಬಾರದೆಂದು ಕಷ್ಟಪಟ್ಟು ಸಿನಿಮಾವನ್ನು ಪೂರ್ಣಗೊಳಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:02 am, Fri, 7 August 26




