ಉಮಾಪತಿ ಶ್ರೀನಿವಾಸ್ ಗೌಡ-ದರ್ಶನ್: ಮತ್ತೆ ಒಂದಾಗ್ತಾರಾ ‘ಮಾಜಿ ಗೆಳೆಯರು’?

|

Updated on: Jan 23, 2024 | 11:29 PM

Darshan-Umapathy: ದರ್ಶನ್ ಹಾಗೂ ಉಮಾಪತಿ ಶ್ರೀನಿವಾಸ್ ಗೌಡ ‘ರಾಬರ್ಟ್’ ಎಂಬೊಳ್ಳೆ ಸಿನಿಮಾ ನೀಡಿದ್ದರು. ಆದರೆ ಬಳಿಕ ಈ ಜೋಡಿಯ ನಡುವೆ ಮನಸ್ಥಾಪ ಬೆಳೆದಿತ್ತು. ಇದೀಗ ‘ದರ್ಶನ್​ ಅವರಿಗೆ ನಾನು ಅನ್ಯಾಯ ಮಾಡಿಲ್ಲ, ಅವರಿಂದ ನನಗೂ ಕೆಡುಕಾಗಿಲ್ಲ’ ಎಂದು ಉಮಾಪತಿ ಹೇಳಿದ್ದಾರೆ. ಈ ಜೋಡಿ ಮತ್ತೆ ಒಂದಾಗುತ್ತದೆಯೇ?

ಉಮಾಪತಿ ಶ್ರೀನಿವಾಸ್ ಗೌಡ-ದರ್ಶನ್: ಮತ್ತೆ ಒಂದಾಗ್ತಾರಾ ‘ಮಾಜಿ ಗೆಳೆಯರು’?
Follow us on

ದರ್ಶನ್ (Darshan)​ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ (Umapathy Srinivas Gowda) ಒಟ್ಟಿಗೆ ‘ರಾಬರ್ಟ್’ ಹೆಸರಿನ ಒಂದೊಳ್ಳೆ ಸಿನಿಮಾ ಅಭಿಮಾನಿಗಳಿಗಾಗಿ ನೀಡಿದ್ದರು. ಇಬ್ಬರ ಕಾಂಬಿನೇಷನ್​ನಲ್ಲಿ ಇನ್ನಷ್ಟು ಸಿನಿಮಾಗಳಿಗಾಗಿ ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಒಂದು ತಪ್ಪುತಿಳುವಳಿಕೆ ಅದರಿಂದ ಇಬ್ಬ ನಡುವೆ ಉಂಟಾದ ಮನಸ್ಥಾಪದಿಂದ ಇಬ್ಬರೂ ದೂರಾದರು. ಈ ಇಬ್ಬರೂ ಪರಸ್ಪರ ದೂರಾದರೂ ಸಹ ಸಿನಿಮಾಗಳಿಗೆ ನಿಷ್ಠರಾಗಿಯೇ ಇದ್ದಾರೆ. ಆ ವಿವಾದದ ಬಳಿಕ ಪರಸ್ಪರರ ಬಗ್ಗೆ ಬಹಿರಂಗವಾಗಿ ನೆಗೆಟಿವ್ ಕಮೆಂಟ್ ಮಾಡಿಲ್ಲ. ಇತ್ತೀಚೆಗಷ್ಟೆ ಉಮಾಪತಿ ನಿರ್ಮಾಣದ ‘ಉಪಾಧ್ಯಕ್ಷ’ ಸಿನಿಮಾದ ಪರ ದರ್ಶನ್ ಒಳ್ಳೆ ಮಾತುಗಳನ್ನಾಡಿದರು. ಇದೀಗ ಉಮಾಪತಿ ಸಹ ದರ್ಶನ್ ಬಗ್ಗೆ ಕೆಲವು ಧನಾತ್ಮಕ ಮಾತುಗಳನ್ನಾಡಿದ್ದಾರೆ.

ಮತ್ತೆ ದರ್ಶನ್ ಹಾಗೂ ಉಮಾಪತಿ ಒಟ್ಟಾಗಿ ಸಿನಿಮಾ ಮಾಡುತ್ತಾರಾ? ಎಂಬ ಪ್ರಶ್ನೆಗೆ ಉತ್ತರಿಸಿರುವ ಉಮಾಪತಿ ಶ್ರೀನಿವಾಸ್, ‘ನಾನೇನು ದರ್ಶನ್ ಅವರಿಗೆ ಅನ್ಯಾಯ ಮಾಡಿಲ್ಲ, ಅವರೂ ನನಗೇನು ಅನ್ಯಾಯ ಮಾಡಿಲ್ಲ. ಸಮಯ ಸಂದರ್ಭ ಸರಿ ಇರಲಿಲ್ಲ. ಅಕ್ಕ-ಪಕ್ಕ ಇರುವವರು ನಮ್ಮ ಮಧ್ಯೆ ತಂದಿಟ್ಟರು, ಪರವಾಗಿಲ್ಲ. ಒಟ್ಟಿಗೆ ಸಿನಿಮಾ ಮಾಡುವ ಅವಕಾಶ ಬಂದರೆ ಖಂಡಿತ ತಲೆಬಾಗಿ ನಾನು ಒಪ್ಪಿಕೊಳ್ಳುತ್ತೇನೆ’ ಎಂದು ವಿನಯಪೂರ್ವಕವಾಗಿ ಹೇಳಿದ್ದಾರೆ.

ಇದನ್ನೂ ಓದಿ:ಸಿನಿಮಾದಿಂದ ಬಂದ ಲಾಭವನ್ನು ದುಪ್ಪಟ್ಟು ಹೇಗೆ ಮಾಡುತ್ತಾರೆ ಉಮಾಪತಿ ಶ್ರೀನಿವಾಸ್?

ಜೆಟ್ ಲ್ಯಾಗ್ ಪ್ರಕರಣ ಸಂಬಂಧ ಪೊಲೀಸ್ ಸ್ಟೇಷನ್​ಗೆ ಹೋಗಿದ್ದಾಗಲೂ ಸಹ ಮಾಧ್ಯಮಗಳ ಮುಂದೆ ‘ಉಪಾಧ್ಯಕ್ಷ’ ಸಿನಿಮಾ ನೋಡಿ ಎಂದು ದರ್ಶನ್ ಹೇಳಿದ್ದರು. ಈ ಬಗ್ಗೆಯೂ ಖುಷಿಯಿಂದ ಮಾತನಾಡಿದ ಉಮಾಪತಿ ಶ್ರೀನಿವಾಸ್, ‘ಅಂದು ಅವರು ಬೇರೆ ಏನು ಬೇಕಾದರೂ ಹೇಳಬಹುದಿತ್ತು. ಆದರೆ ಮಾತನಾಡಿದರೆ ತೂಕ ಇರಬೇಕೆಂದು ನಿಶ್ಚಯಿಸಿ, 26ನೇ ತಾರೀಖು ಚಿಕ್ಕಣ್ಣನ ಸಿನಿಮಾ ‘ಉಪಾಧ್ಯಕ್ಷ’ ಬರುತ್ತಿದೆ ಎಲ್ಲರೂ ನೋಡಿ’ ಎಂದರು. ಅದು ನನಗೆ ಬಹಳ ಖುಷಿಯಾಯ್ತು. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರ ಆ ಮಾತು ವೈರಲ್ ಆಯ್ತು. ಜನರ ಮನಸ್ಸಿನಲ್ಲಿ ಬಿಡುಗಡೆ ದಿನಾಂಕ ನಿಗದಿಯಾಯ್ತು’ ಎಂದರು ಉಮಾಪತಿ.

ಬ್ಯಾಂಕ್ ಸಾಲಕ್ಕೆ ಅರ್ಜಿ ಹಾಕಿದ ವಿಷಯಕ್ಕೆ ಸಂಬಂಧಿಸಿದಂತೆ ಉಮಾಪತಿ ಶ್ರೀನಿವಾಸ್ ಹಾಗೂ ದರ್ಶನ್​ ನಡುವೆ ತಪ್ಪು ಅಭಿಪ್ರಾಯವೊಂದು ಮೂಡಿತ್ತು. ಆ ಕೃತ್ಯದಲ್ಲಿ ಉಮಾಪತಿ ಅವರ ತಪ್ಪಿಲ್ಲ ಎಂಬುದು ಬಳಿಕ ಬೆಳಕಿಗೆ ಬಂತು. ಆದರೆ ಅಷ್ಟರಲ್ಲಿಯೇ ಇಬ್ಬರ ಸ್ನೇಹದಲ್ಲಿ ಬಿರುಕು ಮೂಡಿತ್ತು. ಆದರೆ ಆ ಘಟನೆ ಬಳಿಕ ಇಬ್ಬರೂ ಸಹ ಮತ್ತೆಲ್ಲಿಯೂ ಪರಸ್ಪರರ ಬಗ್ಗೆ ಋಣಾತ್ಮಕವಾಗಿ ಮಾತನಾಡಿಲ್ಲ, ಈಗಲೂ ಉಮಾಪತಿ ಅವರು, ದರ್ಶನ್ ಅವರಿಗೆ ಸಿನಿಮಾ ಮಾಡುವ ಅವಕಾಶ ಸಿಕ್ಕರೆ ತಲೆಬಾಗಿ ಸ್ವೀಕರಿಸುವೆ ಎಂದೇ ಹೇಳಿದ್ದಾರೆ. ಮತ್ತೆ ಈ ಜೋಡಿ ಒಂದಾಗುತ್ತದೆಯೇ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ