Puneeth Rajkumar: ಪುನೀತ್ ಅಗಲಿ 3 ತಿಂಗಳು; 500 ಸಸಿಗಳನ್ನು ಅಭಿಮಾನಿಗಳಿಗೆ ವಿತರಣೆ ಮಾಡಲಿರುವ ಕುಟುಂಬಸ್ಥರು

| Updated By: shivaprasad.hs

Updated on: Jan 29, 2022 | 10:57 AM

ನಟ ಪುನೀತ್ ರಾಜ್​ಕುಮಾರ್ ನಮ್ಮನ್ನಗಲಿ 3 ತಿಂಗಳು ಸಂದಿವೆ. ಇಂದು ಕುಟುಂಬಸ್ಥರು ಸಮಾಜಮುಖಿ ಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ. ಈ ಕುರಿತು ರಾಘವೇಂದ್ರ ರಾಜ್​​ಕುಮಾರ್ ಮಾಹಿತಿ ನೀಡಿದ್ದಾರೆ.

Puneeth Rajkumar: ಪುನೀತ್ ಅಗಲಿ 3 ತಿಂಗಳು; 500 ಸಸಿಗಳನ್ನು ಅಭಿಮಾನಿಗಳಿಗೆ ವಿತರಣೆ ಮಾಡಲಿರುವ ಕುಟುಂಬಸ್ಥರು
ಪುನೀತ್ ರಾಜ್​ಕುಮಾರ್
Follow us on

ಬೆಂಗಳೂರು: ನಟ ಪುನೀತ್ ರಾಜ್‍ಕುಮಾರ್ (Puneeth Rajkumar) ಅಕ್ಟೋಬರ್ 29 ರಂದು ನಮ್ಮನ್ನಗಲಿದ್ದರು. ಅವರಿಲ್ಲದೇ ಮೂರು ತಿಂಗಳು ಸಂದಿದೆ. ಕುಟುಂಬಸ್ಥರು ಇಂದು (ಶನಿವಾರ) ಮೂರನೇ ತಿಂಗಳ ಪುಣ್ಯ ತಿಥಿ ಕಾರ್ಯ ನೆರವೇರಿಸಲಿದ್ದಾರೆ. ಅಲ್ಲದೇ ಹಲವು ಸಮಾಜಮುಖಿ ಕಾರ್ಯಗಳನ್ನೂ ನಡೆಸಲಿದ್ದಾರೆ. ಇದರಂತೆ, 500 ಸಸಿಗಳನ್ನು ಅಭಿಮಾನಿಗಳಿಗೆ ನೀಡಲಾಗುತ್ತದೆ. ಹಾಗೆಯೇ ಅನ್ನದಾನ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಅಪ್ಪು ಸಮಾದಿ ಎದುರು ಸ್ಕಿಲ್ ಡಿಪಾರ್ಟ್​ಮೆಂಟ್ ವತಿಯಿಂದ ಸಂಜೆ 6 ಘಂಟೆಗೆ ದೀಪೋತ್ಸವ ನಡೆಯಲಿದೆ. ಈ ಕಾರ್ಯದಲ್ಲಿ ಪುನೀತ್ ಅವರ ಪತ್ನಿ ಅಶ್ವಿನಿ, ಸಹೋದರ ರಾಘವೇಂದ್ರ ರಾಜ್​ಕುಮಾರ್ (Raghavendra Rajkumar) ಸೇರಿದಂತೆ‌ ಕುಟುಂಬಸ್ಥರು ಭಾಗಿಯಾಗಲಿದ್ದಾರೆ. ನಟ ಶಿವರಾಜ್​ಕುಮಾರ್ (Shiva Rajkumar) ಪ್ರಸ್ತುತ ಮೈಸೂರಿನಲ್ಲಿ ಚಿತ್ರದ ಕೆಲಸಗಳಲ್ಲಿದ್ದಾರೆ.

ಸಸಿ ವಿತರಣೆ ಕುರಿತು ರಾಘವೇಂದ್ರ ರಾಜ್​ಕುಮಾರ್ ಹೇಳಿದ್ದೇನು?

ಅಭಿಮಾನಿಗಳ ದಂಡು ಪುನೀತ್​ ಅವರನ್ನು ನೋಡಲು ಹರಿದು ಬರುತ್ತಿದೆ. ಅಭಿಮಾನಿಗಳ ಮೂಲಕ ಏನು ವಾಪಸ್ ಕೊಡಬಹುದು ಎಂದು ಯೋಚಿಸುತ್ತಿದ್ದೆವು. ಪುನೀತ್ ರಾಜ್ ಕುಮಾರ್​ಗೆ ಕಾಡಿನ ಬಗ್ಗೆ ಕಾಳಜಿ ಇತ್ತು.  ಆದ್ದರಿಂದ ಅಭಿಮಾನಿಗಳೆಲ್ಲರಿಗೂ ಗಿಡ ನೀಡಿ, ಕಾಡು ಬೆಳೆಸೋದಕ್ಕೆ ಸಹಕಾರ ನೀಡುವಂತೆ ಮನವಿ ಮಾಡುತ್ತಿದ್ದೇವೆ. ಗಿಡಗಳಲ್ಲಿ ಆತ್ಮ ವಾಸಿಸುತ್ತದೆ ಅನ್ನೋ ಮಾತಿದೆ. ಇಡೀ ಕುಟುಂಬ ಸೇರಿ ಆತ್ಮಕ್ಕೆ ಗೌರವ ಸಲ್ಲಿಸುವ ಕೆಲಸ ಮಾಡುತ್ತಿದ್ದೇವೆ ಎಂದು ರಾಘವೇಂದ್ರ ರಾಜ್​ಕುಮಾರ್ ನುಡಿದಿದ್ದಾರೆ. ಅಲ್ಲದೇ ಈ ಕಾರ್ಯವನ್ನು ಮುಂದುವರೆಸುತ್ತೇವೆ ಎಂದು ಅವರು ಹೇಳಿದ್ದಾರೆ.

 

ಪುನೀತ್ ಪ್ರೇರಣೆ, ರಾಜ್ಯದಲ್ಲಿ ಹೆಚ್ಚಾದ ನೇತ್ರದಾನ:

ನಟ ಪುನೀತ್ ರಾಜ್​ಕುಮಾರ್ ನಿಧನದ ನಂತರ ನೇತ್ರದಾನ ಮಾಡಿದ್ದರು. ಇದು ಅವರ ಅಪಾರ ಅಭಿಮಾನಿ ಬಳಗವನ್ನು ಪ್ರಭಾವಿಸಿತ್ತು. ಇದರಿಂದ ರಾಜ್ಯದಲ್ಲಿ ನೇತ್ರದಾನಕ್ಕೆ ನೋಂದಣಿಯೂ ಹೆಚ್ಚಾಯಿತು. ಡಿಸೆಂಬರ್ ಅಂತ್ಯದ ಲೆಕ್ಕಾಚಾರದ ಪ್ರಕಾರ ಪುನೀತ್ ನಿಧನಾನಂತರ ಸುಮಾರು 440 ಜನರು ನೇತ್ರದಾನ ಮಾಡಿದ್ದರು. ಅಲ್ಲದೇ 12,000ಕ್ಕೂ ಹೆಚ್ಚು ಜನರು ನೇತ್ರದಾನಕ್ಕೆ ನೋಂದಾಯಿಸಿದ್ದಾರೆ ಎಂದು ನಾರಾಯಣ ನೇತ್ರಾಲಯದ ಡಾ.ಭುಜಂಗ ಶೆಟ್ಟಿ ಮಾಹಿತಿ ನೀಡಿದ್ದರು. ಈ ಅಂಕಿಅಂಶ ದೊರೆತು ಒಂದು ತಿಂಗಳಾಗಿದ್ದು, ಇದೀಗ ಈ ಸಂಖ್ಯೆ ಮತ್ತಷ್ಟು ಏರಿಕೆಯಾಗಿದೆ.

ಅಲ್ಲದೇ ನೇತ್ರದಾನ ಮಾಡುವ ಪ್ರೇರಣೆಯಿಂದ ಹಲವು ಜನರು ಈ ಕುರಿತು ಪ್ರಶ್ನಿಸಿದ್ದರು. ಆದ್ದರಿಂದ ನೋಂದಣಿ ಸುಲಭವಾಗಲೆಂದು ವಿಶೇಷ ಫೋನ್ ನಂಬರ್​ಅನ್ನು ಸ್ಥಾಪಿಸಲಾಗಿತ್ತು. 8884018800 ಈ ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿದರೆ, ನೇತ್ರದಾನಕ್ಕೆ ನೋಂದಾಯಿಸಲು ಅಗತ್ಯವಾದ ಅರ್ಜಿಯ ಲಿಂಕ್ ಸಿಗಲಿದೆ ಎಂದು ರಾಘವೇಂದ್ರ ರಾಜ್​ಕುಮಾರ್ ಮಾಹಿತಿ ಹಂಚಿಕೊಂಡಿದ್ದರು. ಪುನೀತ್ ನಿಧನದ ಬಳಿಕ ನೇತ್ರದಾನದ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದೆ. ಇದೀಗ ಹೆಸರು ನೋಂದಾಯಿಸುವುದು ಮತ್ತಷ್ಟು ಸುಲಭವಾಗಿದೆ ಎಂದು ಅವರು ಹೇಳಿದ್ದರು. ಅಲ್ಲದೇ ಕಳೆದ ತಿಂಗಳು ರಾಘವೇಂದ್ರ ರಾಜ್​ಕುಮಾರ್ ಹಾಗೂ ಶಿವರಾಜ್​ಕುಮಾರ್ ದೇಹದಾನಕ್ಕೆ ನೋಂದಣಿ ಮಾಡಿಸಿದ್ದನ್ನೂ ಇಲ್ಲಿ ಸ್ಮರಿಸಬಹುದು.

ಇದನ್ನೂ ಓದಿ:

ಪುನೀತ್ ಪ್ರೇರಣೆ, ನೇತ್ರದಾನಕ್ಕೆ ಮುಂದಾದ 12,000ಕ್ಕೂ ಹೆಚ್ಚು ಜನ; ನೀವೂ ಹೆಸರು ನೋಂದಾಯಿಸಬೇಕೆ? ಇಲ್ಲಿದೆ ಮಾಹಿತಿ

ಮದುವೆ ಆಗ್ತೀನಿ ಎಂದಾಗ ದಾನಿಶ್​ಗೆ ಪುನೀತ್​ ಕಡೆಯಿಂದ ಸಿಕ್ಕಿತ್ತು ವಿಶೇಷ ಟಿಪ್ಸ್

ಕಡು ಬಡತನದಲ್ಲೂ ಅಪ್ಪುಗಾಗಿ ಅದ್ದೂರಿ ಕಾರ್ಯಕ್ರಮ; ಮಗನಿಗೆ ಪುನೀತ್​ ಎಂದು ನಾಮಕರಣ

Published On - 10:00 am, Sat, 29 January 22