‘ಪುನೀತ್​ ನಮನ’ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗಿಲ್ಲ ಅವಕಾಶ; ಕಾಲಿವುಡ್​, ಟಾಲಿವುಡ್​ ಸ್ಟಾರ್​ಗಳ ಹಾಜರಿ  

| Updated By: ರಾಜೇಶ್ ದುಗ್ಗುಮನೆ

Updated on: Nov 12, 2021 | 7:38 PM

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅದ್ಯಕ್ಷ ಸಾರಾ ಗೋವಿಂದ್ ‘ಪುನೀತ್ ನಮನ’ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ಹಂಚಿಕೊಂಡರು. ‘ಕಾಲಿವುಡ್, ಟಾಲಿವುಡ್ ಸ್ಟಾರ್​​ಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

‘ಪುನೀತ್​ ನಮನ’ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗಿಲ್ಲ ಅವಕಾಶ; ಕಾಲಿವುಡ್​, ಟಾಲಿವುಡ್​ ಸ್ಟಾರ್​ಗಳ ಹಾಜರಿ  
ಪುನೀತ್​ ರಾಜ್​ಕುಮಾರ್
Follow us on

ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಬಡವಾಗಿದೆ. ಎಲ್ಲ ಕಡೆಗಳಲ್ಲಿ ಪುನೀತ್​ ಅವರನ್ನು ನೆನಪಿಸಿಕೊಳ್ಳುವ ಕಾರ್ಯ ನಡೆಯುತ್ತಿದೆ. ನವೆಂಬರ್​ 16ರಂದು ಕನ್ನಡ ಚಿತ್ರೋದ್ಯಮದ ಪರವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ‘ಪುನೀತ್ ನಮನ’ ಕಾರ್ಯಕ್ರಮವನ್ನು ಆಯೋಜಿಸಿದೆ. ಆ ಬಗ್ಗೆ ಇಂದು ಮಾಹಿತಿ ನೀಡಲು ಇಂದು ಸುದ್ದಿಗೋಷ್ಠಿ ಕರೆಯಲಾಯಿತು. ಈ ವೇಳೆ ಕಾರ್ಯಕ್ರಮದ ಸಂಪೂರ್ಣ ರೂಪುರೇಷೆ ನೀಡಲಾಯಿತು.  

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅದ್ಯಕ್ಷ ಸಾರಾ ಗೋವಿಂದ್ ‘ಪುನೀತ್ ನಮನ’ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ಹಂಚಿಕೊಂಡರು. ‘ಕಾಲಿವುಡ್, ಟಾಲಿವುಡ್ ಸ್ಟಾರ್​​ಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ನಮನ ಕಾರ್ಯಕ್ರಮ ಸಿನಿಮಾ ರಂಗಕ್ಕೆ ಮಾತ್ರ ಸೀಮಿತವಾಗಿರಲಿದೆ. 1500 ಜನ ಸೇರಿ ನಮನ ಕಾರ್ಯಕ್ರಮ ಮಾಡೋ ಪ್ಲಾನ್ ಇದೆ. ಸಾರ್ವಜನಿಕರಿಗೆ ಈ ಕಾರ್ಯಕ್ರಮಕ್ಕೆ ಅವಕಾಶ ಇಲ್ಲ’ ಎಂದರು ಅವರು.

‘ವೇದಿಕೆ ಮೇಲೆ ಯಾವುದೇ ಮನರಂಜನೆ ಕಾರ್ಯಕ್ರಮಕ್ಕೆ ಅವಕಾಶ ಇರುವುದಿಲ್ಲ. ನಾಗೇಂದ್ರ ಪ್ರಸಾದ್ ಅವರ ವಿಶೇಷ ಗೀತೆ ಮೂಲಕ ಕಾರ್ಯಕ್ರಮ ಆರಂಭ ಆಗಲಿದೆ. ಪುನೀತ್ ನಡೆದು ಬಂದ ದಾರಿ ಬಗ್ಗೆ ಒಂದು ವಿಡಿಯೋ ಪ್ರಸಾರ ಮಾಡಲಾಗುತ್ತದೆ. ‘ಪುನೀತ್ ನಮನ’ ಕಾರ್ಯಕ್ರಮದ ದಿನ ಕರ್ನಾಟಕದಲ್ಲಿ ಚಿತ್ರೋದ್ಯಮ‌ ಬಂದ್ ಮಾಡಲಾಗುತ್ತೆ. ಮಧ್ಯಾಹ್ನ 3 ಘಂಟೆ ನಂತರ ಕಾರ್ಯಕ್ರಮ ಆರಂಭ ಆಗಲಿದೆ. ಮೈಸೂರು ರಾಜ ಮನೆತನದ ಯದುವೀರ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ’ ಎಂದರು ಸಾರಾ ಗೋವಿಂದ್.

‘ಮಧ್ಯಾಹ್ನ 3 ಘಂಟೆಯಿಂದ ಸಂಜೆ 6 ಘಂಟೆವರೆಗೂ ಕಾರ್ಯಕ್ರಮ ನಡೆಯುತ್ತದೆ. ಗಾಯಕರಾದ ಗುರುಕಿರಣ್, ವಿಜಯ್ ಪ್ರಕಾಶ್ ಅವರಿಂದ ಪುನೀತ್ ರಾಜ್​ಕುಮಾರ್​ ಹಾಡುಗಳನ್ನ ಹಾಡಿಸಲಾಗುತ್ತದೆ’ ಎಂದು ಸಾರಾ ಗೋವಿಂದ್​ ಮಾಹಿತಿ ನೀಡಿದರು.

ಇದನ್ನೂ ಓದಿ: ಹಲವು ಕಂಪನಿ, ಯೋಜನೆಗಳ ರಾಯಭಾರಿಯಾಗಿದ್ದರು ಪುನೀತ್: ಇಲ್ಲಿದೆ ಅವುಗಳ ಸಂಪೂರ್ಣ ಮಾಹಿತಿ

‘ಪುನೀತ್​ ನಮನ’ ಕಾರ್ಯಕ್ರಮದಲ್ಲಿ ಏನೆಲ್ಲ ಇರಲಿದೆ? ಇಲ್ಲಿದೆ ಸುದ್ದಿಗೋಷ್ಠಿ ಮಾಹಿತಿ

Published On - 7:38 pm, Fri, 12 November 21