Kantara: ‘ಕಾಂತಾರ’ ಚಿತ್ರಕ್ಕೆ ಪುನೀತ್​ ಹೀರೋ ಆಗ್ಬೇಕಿತ್ತು; ಆ ಸ್ಥಾನಕ್ಕೆ ರಿಷಬ್ ಶೆಟ್ಟಿ ಬಂದಿದ್ದು ಹೇಗೆ? ಇಲ್ಲಿದೆ ಉತ್ತರ

| Updated By: ಮದನ್​ ಕುಮಾರ್​

Updated on: Sep 20, 2022 | 7:40 AM

Puneeth Rajkumar: ‘ಕಾಂತಾರ’ ಟ್ರೇಲರ್​ನಲ್ಲಿ ಅನೇಕ ಅಂಶಗಳು ಗಮನ ಸೆಳೆದಿವೆ. ಅಚ್ಚರಿ ಎಂದರೆ, ಈ ಚಿತ್ರದಲ್ಲಿ ಪುನೀತ್​ ರಾಜ್​ಕುಮಾರ್​​ ನಟಿಸಬೇಕು ಎಂದು ಮೊದಲು ಪ್ಲ್ಯಾನ್​ ಆಗಿತ್ತು.

Kantara: ‘ಕಾಂತಾರ’ ಚಿತ್ರಕ್ಕೆ ಪುನೀತ್​ ಹೀರೋ ಆಗ್ಬೇಕಿತ್ತು; ಆ ಸ್ಥಾನಕ್ಕೆ ರಿಷಬ್ ಶೆಟ್ಟಿ ಬಂದಿದ್ದು ಹೇಗೆ? ಇಲ್ಲಿದೆ ಉತ್ತರ
ಕಾಂತಾರ ಸಿನಿಮಾ ಪೋಸ್ಟರ್​, ಪುನೀತ್​ ರಾಜ್​ಕುಮಾರ್​
Follow us on

ಬಹುನಿರೀಕ್ಷಿತ ‘ಕಾಂತಾರ’ (Kantara Kannada Movie) ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭ ಆಗಿದೆ. ಈಗಾಗಲೇ ಈ ಸಿನಿಮಾದ ಟ್ರೇಲರ್​ ನೋಡಿದವರು ವಾವ್​ ಎಂದಿದ್ದಾರೆ. ಹೊಂಬಾಳೆ ಫಿಲ್ಮ್ಸ್​ ಬ್ಯಾನರ್​ ಮೂಲಕ ಮೂಡಿಬಂದಿರುವ ಈ ಸಿನಿಮಾ ಸಖತ್​ ಅದ್ದೂರಿಯಾಗಿದೆ ಎಂಬುದಕ್ಕೆ ಟ್ರೇಲರ್​ ಸಾಕ್ಷಿ ನೀಡುತ್ತಿದೆ. ರಿಷಬ್​ ಶೆಟ್ಟಿ (Rishab Shetty) ನಟನೆ ಮತ್ತು ನಿರ್ದೇಶನದ ‘ಕಾಂತಾರ’ ಚಿತ್ರದ ಮೇಲೆ ಸಿನಿಪ್ರಿಯರಿಗೆ ನಿರೀಕ್ಷೆ ಮೂಡಿದೆ. ಅಚ್ಚರಿ ಏನೆಂದರೆ ಈ ಸಿನಿಮಾದಲ್ಲಿ ಪುನೀತ್ ರಾಜ್​ಕುಮಾರ್​ (Puneeth Rajkumar) ಅವರು ಹೀರೋ ಆಗಿ ನಟಿಸಬೇಕಿತ್ತು! ಆದರೆ ಅದು ಸಾಧ್ಯವಾಗಲಿಲ್ಲ. ಈ ಸುದ್ದಿ ಕೇಳಿ ಅಭಿಮಾನಿಗಳು ಮರುಗುತ್ತಿದ್ದಾರೆ. ಪುನೀತ್​ ರಾಜ್​ಕುಮಾರ್​ ಅವರನ್ನು ಬೇರೆ ಬೇರೆ ಪಾತ್ರಗಳಲ್ಲಿ ನೋಡಿರುವ ಪ್ರೇಕ್ಷಕರಿಗೆ ‘ಕಾಂತಾರ’ ರೀತಿಯ ಚಿತ್ರದಲ್ಲಿ ಅವರನ್ನು ಕಣ್ತುಂಬಿಕೊಳ್ಳುವ ಅವಕಾಶ ಮಿಸ್​ ಆಯ್ತು. ಈ ಬಗ್ಗೆ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್​ ಗೌಡ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ. ಪುನೀತ್​ ಮಾಡಬೇಕಿದ್ದ ಆ ಪಾತ್ರ ನಂತರ ರಿಷಬ್​ ಶೆಟ್ಟಿ ಪಾಲಾಯಿತು ಎಂದು ಕಾರ್ತಿಕ್​ ಗೌಡ ಹೇಳಿದ್ದಾರೆ.

‘ಕಾಂತಾರ’ ಚಿತ್ರಕ್ಕೆ ಸಂಬಂಧಿಸಿದಂತೆ ಕಾರ್ತಿಕ್​ ಗೌಡ ಅವರು ಅಭಿಮಾನಿಗಳೊಂದಿಗೆ ಇನ್​ಸ್ಟಾಗ್ರಾಮ್​ನಲ್ಲಿ ಪ್ರಶ್ನೋತ್ತರ ನಡೆಸಿದ್ದಾರೆ. ಈ ವೇಳೆ ಅವರು ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ‘ಅನೇಕರಿಗೆ ಗೊತ್ತಿರದ ಮಾಹಿತಿ ಏನೆಂದರೆ, ಕಾಂತಾರ ಸಿನಿಮಾದಲ್ಲಿ ಅಪ್ಪು ಸರ್​ ಅವರೇ ಹೀರೋ ಆಗಬೇಕಿತ್ತು. ನಾವು ನಿರ್ದಿಷ್ಟ ಕಾಲಮಾನದಲ್ಲಿ ಈ ಸಿನಿಮಾವನ್ನು ಚಿತ್ರಿಸಬೇಕಿತ್ತು. ಅದರಿಂದಾಗಿ ಅವರ ಡೇಟ್​ ಕ್ಲ್ಯಾಶ್​ ಆಯ್ತು. ಹಾಗಾಗಿ ಸ್ವತಃ ಪುನೀತ್​ ಅವರೇ ರಿಷಬ್​ ಶೆಟ್ಟಿಯ ಹೆಸರು ಸೂಚಿಸಿದರು’ ಎಂದು ಕಾರ್ತಿಕ್​ ಗೌಡ ಹೇಳಿದ್ದಾರೆ.

ಈಗಾಗಲೇ ಬಿಡುಗಡೆ ಆಗಿರುವ ಟ್ರೇಲರ್​ನಲ್ಲಿ ಅನೇಕ ಅಂಶಗಳು ಗಮನ ಸೆಳೆದಿವೆ. ಕರಾವಳಿಯ ಸಂಸ್ಕೃತಿ ಅನಾವರಣಗೊಂಡಿದೆ. ಒಂದು ವೇಳೆ ಪುನೀತ್​ ರಾಜ್​ಕುಮಾರ್​​ ಅವರೇ ಈ ಸಿನಿಮಾ ಮಾಡಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅಂತ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಪುನೀತ್​ ನೀಡಿದ ಸಲಹೆಯಂತೆ ರಿಷಬ್​ ಶೆಟ್ಟಿ ಅವರು ‘ಕಾಂತಾರ’ಕ್ಕೆ ಹೀರೋ ಆದರು. ಅವರು ಈ ಪಾತ್ರಕ್ಕೆ ಖಂಡಿತವಾಗಿಯೂ ನ್ಯಾಯ ಸಲ್ಲಿಸಿದ್ದಾರೆ ಎಂಬುದರ ಝಲಕ್​ ಟ್ರೇಲರ್​ನಲ್ಲಿಯೇ ಕಾಣುತ್ತಿದೆ.

ಇದನ್ನೂ ಓದಿ
Puneeth Rajkumar Twitter: ಮರಳಿ ಬಂತು ಪುನೀತ್​ ರಾಜ್​ಕುಮಾರ್​ ಟ್ವಿಟರ್​ ಖಾತೆಯ ಬ್ಲೂ ಟಿಕ್​; ಸಂಭ್ರಮಿಸಿದ ಅಪ್ಪು ಫ್ಯಾನ್ಸ್​
Puneeth Rajkumar: ‘ಲಕ್ಕಿ ಮ್ಯಾನ್​’ ಚಿತ್ರದಲ್ಲಿನ ಪುನೀತ್​ ಪೋಟೋಗಳು; ‘ನಮ್ಮ ಬಾಸ್​ ಸೂಪರ್​’ ಎಂದ ಫ್ಯಾನ್ಸ್​
Ashwini Puneeth Rajkumar: ಪುನೀತ್​ ರಾಜ್​ಕುಮಾರ್​ ಹಾಡಿದ ‘ಅಪರೂಪ’ದ ಸಾಂಗ್​ ರಿಲೀಸ್​ ಮಾಡಿದ ಪತ್ನಿ ಅಶ್ವಿನಿ
ಪುನೀತ್​ ಪುತ್ಥಳಿ ಅನಾವರಣದ ವೇಳೆ ಬಿಕ್ಕಿ ಬಿಕ್ಕಿ ಅತ್ತ ರಾಘವೇಂದ್ರ ರಾಜ್​ಕುಮಾರ್​ ಪತ್ನಿ ಮಂಗಳಾ

ಸೆಪ್ಟೆಂಬರ್​ 30ರಂದು ‘ಕಾಂತಾರ’ ಸಿನಿಮಾ ಬಿಡುಗಡೆ ಆಗಲಿದೆ. ಈಗಾಗಲೇ ಈ ಚಿತ್ರದ ‘ಸಿಂಗಾರ ಸಿರಿಯೇ..’ ಹಾಡು ಸೂಪರ್​ ಹಿಟ್​ ಆಗಿದೆ. ಇನ್ನೊಂದು ಸಾಂಗ್​ ಕೂಡ ಬರಲಿದೆ ಎಂದು ಕಾರ್ತಿಕ್​ ಗೌಡ ಮಾಹಿತಿ ಹಂಚಿಕೊಂಡಿದ್ದಾರೆ. ಈ ಸಿನಿಮಾ ಕೇವಲ ಕನ್ನಡದಲ್ಲಿ ಮಾತ್ರ ರಿಲೀಸ್​ ಆಗಲಿದೆ ಎಂದು ಅವರು ಹೇಳಿದ್ದಾರೆ. ಅಜನೀಶ್​ ಬಿ. ಲೋಕನಾಥ್​ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ರಿಷಬ್​ ಶೆಟ್ಟಿ ಜೊತೆ ಸಪ್ತಮಿ ಗೌಡ, ಕಿಶೋರ್​ ಮುಂತಾದವರು ನಟಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:20 am, Tue, 20 September 22