Radhika Pandit: ಮಳೆ ಬಗ್ಗೆ ಅನಿಸಿಕೆ ಹಂಚಿಕೊಂಡ ರಾಧಿಕಾ ಪಂಡಿತ್​; ಆದರೆ ಅಭಿಮಾನಿಗಳು ಕೇಳಿದ್ದೇ ಬೇರೆ

Yash 19: ‘ಮಳೆಯಲ್ಲಿ ಒಂದು ಹಿತವಾದ ಅನುಭವ ಇದೆ..’ ಎಂಬ ಕ್ಯಾಪ್ಷನ್​ನೊಂದಿಗೆ ರಾಧಿಕಾ ಪಂಡಿತ್​ ಅವರು ಹೊಸ ಫೋಟೋ ಹಂಚಿಕೊಂಡಿದ್ದಾರೆ. ಆದರೆ ಅಭಿಮಾನಿಗಳು ‘ಯಶ್​19’ ಬಗ್ಗೆ ವಿಚಾರಿಸಿದ್ದಾರೆ.

Radhika Pandit: ಮಳೆ ಬಗ್ಗೆ ಅನಿಸಿಕೆ ಹಂಚಿಕೊಂಡ ರಾಧಿಕಾ ಪಂಡಿತ್​; ಆದರೆ ಅಭಿಮಾನಿಗಳು ಕೇಳಿದ್ದೇ ಬೇರೆ
ರಾಧಿಕಾ ಪಂಡಿತ್​ ಫ್ಯಾಮಿಲಿ ಫೋಟೋ

Updated on: Jun 25, 2023 | 8:51 AM

ಸ್ಯಾಂಡಲ್​ವುಡ್​ ನಟಿ ರಾಧಿಕಾ ಪಂಡಿತ್​ (Radhika Pandit) ಅವರು ನಟನೆಯಿಂದ ದೂರ ಉಳಿದುಕೊಂಡಿರದ್ದರೂ ಕೂಡ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರಲು ಅವರು ಸೋಶಿಯಲ್​ ಮೀಡಿಯಾ ಬಳಸುತ್ತಾರೆ. ತಮ್ಮ ದಿನಚರಿ ಬಗ್ಗೆ ಅವರು ಆಗಾಗ ಅಪ್​ಡೇಟ್​ ನೀಡುತ್ತಾರೆ. ಪ್ರತಿ ಭಾನುವಾರ ಅವರು ಫ್ಯಾನ್ಸ್​ಗಾಗಿ ಒಂದು ಫೋಟೋ ಹಂಚಿಕೊಳ್ಳುತ್ತಾರೆ. ಕೆಲವೊಮ್ಮೆ ಫ್ಲ್ಯಾಶ್​ಬ್ಯಾಕ್​ಗೆ ಜಾರುತ್ತಾರೆ. ಇನ್ನೂ ಕೆಲವೊಮ್ಮೆ ಫ್ಯಾಮಿಲಿ ಫೋಟೋ (Yash Family Photo) ಅಪ್​ಲೋಡ್​ ಮಾಡುತ್ತಾರೆ. ಈಗ ಮಳೆಗಾಲ. ಆ ಪ್ರಯುಕ್ತ ಅವರು ಮಳೆ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಆದರೆ ಅಭಿಮಾನಿಗಳು ಕೇಳುತ್ತಿರುವುದೇ ಬೇರೆ. ‘ಯಶ್​ ಅವರ ಮುಂದಿನ ಸಿನಿಮಾ (Yash 19) ಬಗ್ಗೆ ಅಪ್​ಡೇಟ್​ ನೀಡಿ’ ಎಂದು ಅಭಿಮಾನಿಗಳು ಕಮೆಂಟ್​ ಮಾಡುತ್ತಿದ್ದಾರೆ.

‘ಮಳೆಯಲ್ಲಿ ಒಂದು ಹಿತವಾದ ಅನುಭವ ಇದೆ. ಅಲ್ಲವೇ? ಹೆಲೋ ಮಳೆಗಾಲವೇ..’ ಎಂಬ ಕ್ಯಾಪ್ಷನ್​ನೊಂದಿಗೆ ರಾಧಿಕಾ ಪಂಡಿತ್​ ಅವರು ಹೊಸ ಫೋಟೋ ಹಂಚಿಕೊಂಡಿದ್ದಾರೆ. ಇದರಲ್ಲಿ ರಾಧಿಕಾ ಪಂಡಿತ್​ ಮತ್ತು ಯಶ್​ ಜೊತೆ ಮಕ್ಕಳಾದ ಯಥರ್ವ್​ ಹಾಗೂ ಆಯ್ರಾ ಇದ್ದಾರೆ. ಎಲ್ಲರೂ ಆಕಾಶದ ಕಡೆ ನೋಡುತ್ತಿದ್ದಾರೆ. ಆಗಸದಲ್ಲಿ ಕರಿಮೋಡ ಆವರಿಸಿದೆ. ಇನ್ನೇನು ಜೋರಾಗಿ ಮಳೆ ಸುರಿಯಲಿದೆ ಎಂಬ ಸಂದರ್ಭದಲ್ಲಿ ಈ ಫೋಟೋ ಕ್ಲಿಕ್ಕಿಸಿದಂತಿದೆ. ಇದಕ್ಕೆ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ‘ಮಳೆ ಬರುವ ಹಾಗಿದೆ..’ ಹಾಡನ್ನು ಫ್ಯಾನ್ಸ್​ ಮತ್ತೆ ನೆನಪಿಸಿಕೊಂಡಿದ್ದಾರೆ. ಅದಕ್ಕಿಂತಲೂ ಹೆಚ್ಚು ಕಮೆಂಟ್ ಬಂದಿರುವುದು ‘ಯಶ್​19’ ಬಗ್ಗೆ.

‘ಕೆಜಿಎಫ್: ಚಾಪ್ಟರ್​ 2’ ಸಿನಿಮಾ ಬ್ಲಾಕ್​ ಬಸ್ಟರ್​ ಹಿಟ್​ ಆಯಿತು. ಬೇರೆ ಯಾವುದೇ ಹೀರೋ ಆಗಿದ್ದಿದ್ದರೆ ಕೂಡಲೇ ಹೊಸ ಸಿನಿಮಾ ಒಪ್ಪಿಕೊಳ್ಳುತ್ತಿದ್ದರು. ಆದರೆ ಯಶ್​ ಹಾಗೆ ಮಾಡಲಿಲ್ಲ. ‘ಕೆಜಿಎಫ್​ 2’ ತೆರೆಕಂಡು ಒಂದು ವರ್ಷಕ್ಕೂ ಹೆಚ್ಚು ಸಮಯ ಆಗಿದ್ದರೂ ಕೂಡ ಅವರು ಹೊಸ ಚಿತ್ರ ಘೋಷಿಸಿಲ್ಲ. ಆದಷ್ಟು ಬೇಗ ‘ಯಶ್​19’ ಬಗ್ಗೆ ಮಾಹಿತಿ ಹೊರಬೀಳಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಹಾಗಾಗಿ ರಾಧಿಕಾ ಪಂಡಿತ್​ ಮಾಡುವ ಎಲ್ಲ ಪೋಸ್ಟ್​ಗಳಿಗೂ ಕಮೆಂಟ್​ ಮಾಡುವ ಅಭಿಮಾನಿಗಳು ಯಶ್​ ಅವರ ಮುಂದಿನ ಸಿನಿಮಾ ಬಗ್ಗೆ ವಿಚಾರಿಸುತ್ತಾರೆ.

ಇದನ್ನೂ ಓದಿ: Adipurush: ರಾಮ-ಸೀತೆ ಗೆಟಪ್​ನಲ್ಲಿ ಯಶ್​-ರಾಧಿಕಾ ಪಂಡಿತ್​; ವೈರಲ್​ ಆಗಿದೆ ಫೋಟೋ

ಒಂದು ಕಾಲದಲ್ಲಿ ರಾಧಿಕಾ ಪಂಡಿತ್​ ಅವರು ಬ್ಯಾಕ್​ ಟು ಬ್ಯಾಕ್​ ಸಿನಿಮಾ ಒಪ್ಪಿಕೊಳ್ಳುತ್ತಿದ್ದರು. ಮದುವೆ ಆದ ಬಳಿಕ ಅವರು ಸಿನಿಮಾ ಮಾಡುವುದು ಕಡಿಮೆ ಆಯಿತು. ಇಬ್ಬರು ಮಕ್ಕಳ ಆರೈಕೆಯಲ್ಲಿ ಅವರು ತೊಡಗಿಕೊಂಡಿದ್ದಾರೆ. ಮತ್ತೆ ರಾಧಿಕಾ ಪಂಡಿತ್​ ಅವರು ಸಿನಿಮಾಗಳಲ್ಲಿ ನಟಿಸಬೇಕು ಎಂಬುದು ಅಭಿಮಾನಿಗಳ ಬಯಕೆ. ಸೂಕ್ತವಾದ ಕಥೆ ಮತ್ತು ಪಾತ್ರದೊಂದಿಗೆ ಅವರು ಕಂಬ್ಯಾಕ್​ ಮಾಡಲಿ ಎಂದು ಫ್ಯಾನ್ಸ್​ ಆಸೆ ಪಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us