ನವೆಂಬರ್ 21ಕ್ಕೆ ರಿಲೀಸ್ ಆಗಲಿದೆ ‘ದಿ ಟಾಸ್ಕ್’ ಸಿನಿಮಾ: ಟೀಸರ್ ಹೇಗಿದೆ ನೋಡಿ
‘ಲೋಕಪೂಜ್ಯ ಪಿಕ್ಚರ್ ಹೌಸ್’ ಮೂಲಕ ನಿರ್ಮಾಪಕ ವಿಜಯ್ ಕುಮಾರ್ ಮತ್ತು ರಾಮಣ್ಣ ‘ದಿ ಟಾಸ್ಕ್’ ಸಿನಿಮಾ ನಿರ್ಮಿಸಿದ್ದಾರೆ. ಜೂಡಾ ಸ್ಯಾಂಡಿ ಅವರ ಸಂಗೀತ ನಿರ್ದೇಶನ, ಪ್ರಕಾಶ್ ಕಾರಿಂಜ ಅವರ ಸಂಕಲನ ಈ ಸಿನಿಮಾಗಿದೆ. ಟೀಸರ್ ಗಮನ ಸೆಳೆದಿದೆ. ರಾಘು ಶಿವಮೊಗ್ಗ ನಿರ್ದೇಶನದ ಈ ಚಿತ್ರದಲ್ಲಿ ಸಾಗರ್ ರಾಮ್ ಮತ್ತು ಜಯಸೂರ್ಯ ಆಜಾದ್ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ.

ನಟ, ನಿರ್ದೇಶಕ ರಾಘು ಶಿವಮೊಗ್ಗ (Raghu Shivamogga) ಅವರು ಬೆಳ್ಳಿತೆರೆ, ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಅವರು ನಿರ್ದೇಶನ ಮಾಡಿರುವ 3ನೇ ಸಿನಿಮಾ ‘ದಿ ಟಾಸ್ಕ್’ (The Task) ಈಗ ಬಿಡುಗಡೆಯ ಹಂತದಲ್ಲಿದೆ. ನವೆಂಬರ್ 21ರಂದು ಈ ಸಿನಿಮಾ ರಿಲೀಸ್ ಆಗಲಿದೆ. ಅದಕ್ಕೂ ಮುನ್ನ ಟೀಸರ್ ಮೂಲಕ ಕೌತುಕ ಮೂಡಿಸಲಾಗಿದೆ. ಇತ್ತೀಚೆಗೆ ‘ದಿ ಟಾಸ್ಕ್’ ಸಿನಿಮಾದ ಟೀಸರ್ (The Task Movie Teaser) ರಿಲೀಸ್ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ADGP ಎಂ. ಚಂದ್ರಶೇಖರ್, ವಿಷ್ಣು ಸೇನೆಯ ವೀರಕಪುತ್ರ ಶ್ರೀನಿವಾಸ್, ಲಹರಿ ಸಂಸ್ಥೆಯ ಲಹರಿ ವೇಲು, ನಿರ್ದೇಶಕರಾದ ಪವನ್ ಒಡೆಯರ್, ಬಹದ್ದೂರ್ ಚೇತನ್ ಕುಮಾರ್, ಸಿಂಪಲ್ ಸುನಿ ಮುಂತಾದವರು ಭಾಗಿಯಾಗಿದ್ದರು.
ಎಂ. ಚಂದ್ರಶೇಖರ್ ಅವರು ಟೀಸರ್ ಬಿಡುಗಡೆ ಬಳಿಕ ಮಾತನಾಡಿದರು. ‘ಟಾಸ್ಕ್ ಅಂದರೆ ಆಪರೇಷನ್, ಮಿಷನ್. ಯುನಿಫಾರ್ಮ್ ಸರ್ವೀಸ್ನಲ್ಲಿ ಇದನ್ನು ಬಳಸುತ್ತಾರೆ. ಯಾವುದೇ ಸಿನಿಮಾದಲ್ಲಿ ಮೆಸೇಜ್ ಇರಬೇಕು. ಇದರಿಂದ ಸಮಾಜದಲ್ಲಿ ಪ್ರಭಾವ ಜಾಸ್ತಿ ಇರುತ್ತದೆ. ಕೇವಲ ಮನರಂಜನೆ ಅಲ್ಲದೇ ಒಂದು ಮೆಸೇಜ್ ಇರುವ ಸಿನಿಮಾ ದಿ ಟಾಸ್ಕ್. ಸಿನಿಮಾ ಮಾಡಲು ಬಹಳ ಕಷ್ಟ ಇರುತ್ತದೆ. ಇಬ್ಬರು ನಾಯಕರಿಗೆ ಒಳ್ಳೆಯದಾಗಲಿ. ಟೀಸರ್ ಚೆನ್ನಾಗಿದೆ, ಒಳ್ಳೆಯ ಪ್ರಯತ್ನ ಮಾಡಿದ್ದಾರೆ’ ಎಂದು ಅವರು ಹೇಳಿದರು.
ಟೀಸರ್ ಬಗ್ಗೆ ಪವನ್ ಒಡೆಯರ್ ಮಾತನಾಡಿದರು. ‘ಪ್ರಾಮಿಸಿಂಗ್ ಆಗಿದೆ. ಇಬ್ಬರು ನಾಯಕರು ಚೆನ್ನಾಗಿ ಕಾಣಿಸುತ್ತಾರೆ. ಬರವಣಿಗೆ, ಸಿನಿಮಾ ಮೇಕಿಂಗ್ ಬಗ್ಗೆ ರಾಘು ಅವರು ಒತ್ತು ನೀಡುತ್ತಾರೆ. ಚಿತ್ರರಂಗಕ್ಕೆ ಮಕ್ಕಳು ಹೋಗ್ತಾರೆ ಎಂದರು ತಂದೆ ತಾಯಿ ಬೇಡ ಎನ್ನುತ್ತಾರೆ. ಈ ವಿಚಾರದಲ್ಲಿ ರಾಜೇಶ್ ಸರ್ ಮಗ ಅದೃಷ್ಟ ಮಾಡಿದ್ದಾರೆ. ಅವರ ತಂದೆ ಮಗನ ಸಿನಿಮಾ ಕನಸಿಗೆ ಸಾಥ್ ಕೊಟ್ಟಿದ್ದಾರೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ’ ಎಂದು ಪವನ್ ಒಡೆಯರ್ ಹೇಳಿದರು.
‘ದಿ ಟಾಸ್ಕ್’ ಸಿನಿಮಾದ ಟೀಸರ್:
‘ಇಬ್ಬರು ಹೀರೋಗಳನ್ನು ನೋಡಿದರೆ 2 ಹುಲಿಗಳನ್ನು ನೋಡಿದ ರೀತಿ ಆಗುತ್ತದೆ. ರಾಘು ಶಿವಮೊಗ್ಗ ನಟನೆ ಎಷ್ಟೋ ನೈಜವಾಗಿ ಇರುತ್ತದೆಯೋ ಅವರು ಆಯ್ಕೆ ಮಾಡಿಕೊಳ್ಳುವ ಕಥೆ ಕೂಡ ನೈಜವಾಗಿ ಇರುತ್ತದೆ. ಕಥೆ ಮೇಲೆ ನಿರೀಕ್ಷೆ ಇದೆ’ ಎಂದು ಚೇತನ್ ಕುಮಾರ್ ಹೇಳಿದರು. ಸಿಂಪಲ್ ಸುನಿ ಮಾತನಾಡಿ, ‘ದಿ ಟಾಸ್ಕ್ ಚಿತ್ರಕ್ಕಾಗಿ ಕಾಯುತ್ತಿದ್ದೇವೆ’ ಎಂದರು.
ಇದನ್ನೂ ಓದಿ: ಉಪೇಂದ್ರ ಶಿಷ್ಯನ ‘ಐ ಆ್ಯಮ್ ಗಾಡ್’ ಟ್ರೇಲರ್; ನ.7ಕ್ಕೆ ಸಿನಿಮಾ ಬಿಡುಗಡೆ
ಹಲವು ನೈಜ ಘಟನೆ ಇಟ್ಟುಕೊಂಡು ಈ ಸಿನಿಮಾದ ಕಥೆ ಹೆಣೆದಿರುವುದಾಗಿ ನಿರ್ದೇಶಕ ರಾಘು ಶಿವಮೊಗ್ಗ ಹೇಳಿದರು. ಸಾಗರ್, ಜಯಸೂರ್ಯ ಅವರು ಈ ಸಿನಿಮಾದಲ್ಲಿ ನಾಯಕರಾಗಿ ನಟಿಸಿದ್ದಾರೆ. ಅಚ್ಯುತ್ ಕುಮಾರ್, ಶ್ರೀಲಕ್ಷ್ಮೀ, ಗೋಪಾಲಕೃಷ್ಣ ದೇಶಪಾಂಡೆ, ಅರವಿಂದ್ ಕುಪ್ಳಿಕರ್, ಹರಿಣಿ ಶ್ರೀಕಾಂತ್, ಸಂಪತ್ ಮೈತ್ರಿಯಾ, ಬಾಲಾಜಿ ಮನೋಹರ್, ಬಿ.ಎಂ. ಗಿರಿರಾಜ್, ರಾಘು ಶಿವಮೊಗ್ಗ ಮುಂತಾದವರು ಈ ಚಿತ್ರದ ಪಾತ್ರವರ್ಗದಲ್ಲಿ ಇದ್ದಾರೆ. ನವೆಂಬರ್ 21ಕ್ಕೆ ಈ ಸಿನಿಮಾ ಬಿಡುಗಡೆ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




