ತುಳುನಾಡಿನ ಸಂಸ್ಕೃತಿ ಸಾರುವ ‘ವೀರ ಕಂಬಳ’ ಸಿನಿಮಾಗೆ ರಾಜೇಂದ್ರ ಸಿಂಗ್​ ಬಾಬು ನಿರ್ದೇಶನ

Veera Kambala movie: ‘ವೀರ ಕಂಬಳ’ ಸಿನಿಮಾವನ್ನು ಅರುಣ್ ರೈ ತೋಡಾರ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ರಾಜೇಂದ್ರ ಸಿಂಗ್​ ಬಾಬು ನಿರ್ದೇಶನ ಮಾಡುತ್ತಿದ್ದು, ಕನ್ನಡ ಮತ್ತು ತುಳು ಭಾಷೆಯಲ್ಲಿ ಮೂಡಿಬರುತ್ತಿದೆ.

ತುಳುನಾಡಿನ ಸಂಸ್ಕೃತಿ ಸಾರುವ ‘ವೀರ ಕಂಬಳ’ ಸಿನಿಮಾಗೆ ರಾಜೇಂದ್ರ ಸಿಂಗ್​ ಬಾಬು ನಿರ್ದೇಶನ
‘ವೀರ ಕಂಬಳ’ ಚಿತ್ರದ ಸುದ್ದಿಗೋಷ್ಠಿ
Edited By:

Updated on: May 29, 2022 | 7:30 AM

ಕನ್ನಡ ಚಿತ್ರರಂಗಕ್ಕೆ ಅನೇಕ ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ ಖ್ಯಾತ ನಿರ್ದೇಶಕ ಎಸ್​.ವಿ. ರಾಜೇಂದ್ರ ಸಿಂಗ್​ ಬಾಬು (Rajendra Singh Babu) ಅವರು ಈಗ ‘ವೀರ ಕಂಬಳ’ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಹಲವು ಕಾರಣಗಳಿಂದಾಗಿ ಈ ಸಿನಿಮಾ ವಿಶೇಷ ಎನಿಸಿಕೊಂಡಿದೆ. ಇತ್ತೀಚೆಗೆ ಈ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು. ಕಂಬಳದ ಕೋಣಗಳನ್ನು ಓಡಿಸುವುದರಲ್ಲಿ ಪ್ರಸಿದ್ಧರಾಗಿರುವ ಶ್ರೀನಿವಾಸ ಗೌಡ ಹಾಗೂ ರಂಗಭೂಮಿ ಕಲಾವಿದ ಸ್ವರಾಜ್ ಶೆಟ್ಟಿ ಕಂಬಳ (Kambala) ಓಡಿಸುವವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷ ಪಾತ್ರದಲ್ಲಿ ನಟ ಆದಿತ್ಯ ಅಭಿನಯಿಸಿದ್ದಾರೆ. ‌ರಾಧಿಕಾ ಚೇತನ್ ಪೊಲೀಸ್ ಕಮಿಷನರ್ ಆಗಿ ಕಾಣಿಸಿಕೊಂಡಿದ್ದಾರೆ. ನವೀನ್ ಪಡೀಲ್, ಗೋಪಿನಾಥ್ ಭಟ್, ಭೋಜರಾಜ್ ವಾಮಾಂಜುರು ಸೇರಿದಂತೆ ಪ್ರಸಿದ್ಧ ತುಳು ನಟರು ಈ ಚಿತ್ರದಲ್ಲಿದ್ದಾರೆ. ‘ವೀರ ಕಂಬಳ’ (Veera Kambala movie) ಚಿತ್ರಕ್ಕೆ ಬಹುತೇಕ ಶೂಟಿಂಗ್​ ಮುಗಿದಿದೆ. ಇನ್ನು ಕೆಲವೇ ದೃಶ್ಯಗಳ ಚಿತ್ರೀಕರಣ ಬಾಕಿ ಇದೆ.

ಖ್ಯಾತ ನಟ ಪ್ರಕಾಶ್ ರಾಜ್ ಅವರು ಕೂಡ ಈ ಸಿನಿಮಾದಲ್ಲಿ ನಟಿಸುವ ಸಾಧ್ಯತೆ ಇದೆ. ಕಥೆ ಕೇಳಿರುವ ಅವರು ಗ್ರೀನ್​ ಸಿಗ್ನಲ್​ ನೀಡಿದ್ದಾರೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್​ ವೇಳೆಗೆ ‘ವೀರ ಕಂಬಳ’ ಸಿನಿಮಾ ಬಿಡುಗಡೆ ಆಗುವ ನಿರೀಕ್ಷೆ ಇದೆ. ‘ಈ ಚಿತ್ರಕ್ಕೆ ದೇಸಿ ಸಂಗೀತ ಬೇಕಿತ್ತು. ಹಾಗಾಗಿ ಅಲ್ಲಿನ ಬಗ್ಗೆ ತಿಳಿದಿರುವ ಮಣಿಕಾಂತ್ ಕದ್ರಿ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ತುಳು ಹಾಗೂ ಕನ್ನಡದಲ್ಲಿ ಈ ಚಿತ್ರ ಮೂಡಿಬರುತ್ತಿದೆ. ತೆಲುಗು, ತಮಿಳು, ಹಿಂದಿ ಹಾಗೂ ಇಂಗ್ಲಿಷ್​ ಭಾಷೆಗಳಿಗೆ ಡಬ್ ಆಗಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆಗೆ ಸಿದ್ಧತೆ ನಡೆಯುತ್ತಿದೆ. ವಿದೇಶಗಳಲ್ಲಿ ಪ್ರೀಮಿಯರ್ ಶೋ ನಡೆಸುವ ಆಲೋಚನೆ ಇದೆ’ ಎಂದು ಮಾಹಿತಿ ಹಂಚಿಕೊಂಡಿದ್ದಾರೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು.

ಇದನ್ನೂ ಓದಿ: Kambala: ಕಂಬಳ ಕ್ರೀಡೆಗೆ ಮಹಿಳಾ ಸಾರಥಿಗಳು; ಐವರು ಯುವತಿಯರಿಗೆ ತರಬೇತಿ ನೀಡಲು ತಯಾರಿ

ಇದನ್ನೂ ಓದಿ
ಕಂಬಳಕ್ಕಿದೆ ಪಾರಂಪರಿಕ ಇತಿಹಾಸ, ಇಲ್ಲಿದೆ ಕಂಬಳದ ಬಗ್ಗೆ ಆಸಕ್ತಿದಾಯಕ ಮಾಹಿತಿ
ಕೋಟಿ ಚೆನ್ನಯ್ಯ ಕಂಬಳ; ದೇವರನ್ನು ಮೆಚ್ಚಿಸಲು ಆಡುವಂತಹ ಭಕ್ತಿಯಾಟಕ್ಕೆ ಮನಸೋತ ಸಾರ್ವಜನಿಕರು
ಕಂಬಳಕ್ಕೆ ಉತ್ತೇಜನ ನೀಡಿದ ಸರ್ಕಾರ – ದಕ್ಷಿಣ ಕನ್ನಡ, ಉಡುಪಿ ಡಿಸಿ ಖಾತೆಗಳಿಗೆ 1 ಕೋಟಿ ಬಿಡುಗಡೆ
ಕಂಬಳದಲ್ಲಿ ತನ್ನದೇ ದಾಖಲೆ ಮುರಿದು ಓಡಿದ ಮಿಜಾರು ಶ್ರೀನಿವಾಸ ಗೌಡ

ತುಳು ಚಿತ್ರದಲ್ಲಿ ನಟಿಸಬೇಕು ಎಂಬುದು ಆದಿತ್ಯ ಅವರ ಆಸೆ ಆಗಿತ್ತು. ಅದು ‘ವೀರ ಕಂಬಳ’ ಸಿನಿಮಾ ಮೂಲಕ ಈಡೇರಿದೆ. ‘ನನ್ನ ಅಜ್ಜಿ ಹಾಗೂ ಅಮ್ಮ ಇಬ್ಬರೂ ದಕ್ಷಿಣ ಕನ್ನಡದವರು. ನಾನು ಈ ಚಿತ್ರದಲ್ಲಿ ಅಭಿನಯಿಸುವ ವಿಷಯ ನನಗೆ ಗೊತ್ತಿರಲಿಲ್ಲ. ನಿರ್ಮಾಪಕರು ಈ ರೀತಿ ಪಾತ್ರವಿದೆ. ನೀವು ಮಾಡಬೇಕೆಂದರು. ವಿಭಿನ್ನ ಪಾತ್ರದಲ್ಲಿ ಅಭಿನಯಿಸಿದ್ದೇನೆ. ನಾನು ಮೊದಲ‌ ದಿನ‌ ಚಿತ್ರೀಕರಣಕ್ಕೆ ಬಂದಾಗ ಅಲ್ಲಿದ್ದವರೆಲ್ಲ ನನ್ನ ನೋಡಿ ಆಶ್ಚರ್ಯಪಟ್ಟರು’ ಎಂದಿದ್ದಾರೆ ನಟ ಆದಿತ್ಯ.

ಇದನ್ನೂ ಓದಿ: ಪ್ರವಾಸೋದ್ಯಮ ಇಲಾಖೆಯಿಂದ ಕಂಬಳಕ್ಕೆ ಉಡುಗೊರೆ; 1 ಕೋಟಿ ರೂ. ಸಹಾಯಧನ ಬಿಡುಗಡೆ

ಈ ಸಿನಿಮಾದಲ್ಲಿ ನಟಿಸಿರುವುದಕ್ಕೆ ರಾಧಿಕಾ ನಾರಾಯಣ್​ ಅವರಿಗೆ ಖುಷಿ ಇದೆ. ‘ನಾನು ತುಳುನಾಡಿನವಳು ಎಂಬುದು ಎಷ್ಟೋ ಜನಕ್ಕೆ ತಿಳಿದಿಲ್ಲ. ನನ್ನ ಮಾತೃ ಭಾಷೆ ಕೂಡ ತುಳು. ಈ ಚಿತ್ರದಲ್ಲಿ ಅಭಿನಯಿಸಲು ಅವಕಾಶ ಕೊಟ್ಟ ನಿರ್ದೇಶಕರಿಗೆ ಧನ್ಯವಾದಗಳು’ ಎಂಬುದು ರಾಧಿಕಾ ನಾರಾಯಣ್​ ಅವರ ಮಾತುಗಳು.

ಅರುಣ್ ರೈ ತೋಡಾರ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ವಿಜಯ್ ಕುಮಾರ್ ಕಿಡಿಯಾಲ್ ಬೈಲ್ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ‘ಮೂಡುಬಿದಿರೆ ಬಳಿ ದೊಡ್ಡ ಕಂಬಳದ ಮೈದಾನ ಸಿದ್ಧಮಾಡಿದ್ದೆವು. ಇಪ್ಪತ್ತು ಜೊತೆ ಕೋಣ. ಒಂದು ಕೋಣ ನೋಡಿಕೊಳ್ಳಲು ನಾಲ್ಕು ಜನ. ಸಹ ಕಲಾವಿದರು ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಜನ ಒಂದು ದಿನದ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದರು. ಕೋಣಗಳ ಮೂಡ್ ಒಂದೇ ರೀತಿ ಇರುವುದಿಲ್ಲ. ಅದನ್ನು ನೋಡಿಕೊಂಡು ಚಿತ್ರೀಕರಣ ಮಾಡಬೇಕಿತ್ತು. ಒಂದು ಸಲ ಓಟದ ಶಾಟ್ ತೆಗೆದರೆ, ಸುಮಾರು ಒಂದು ಗಂಟೆ ವಿಶ್ರಾಂತಿ ನೀಡಬೇಕು. ಈ ಚಿತ್ರಕ್ಕೆ ಕಥೆಯೇ ಹೀರೋ’ ಎಂದಿದ್ದಾರೆ ರಾಜೇಂದ್ರ ಸಿಂಗ್​ ಬಾಬು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.